ವೃಶ್ಚಿಕ ರಾಶಿಗೆ ಕೈ ಕೊಟ್ಟ ಗುರುಬಲ, ಮುಂದೇನು?
ಸಾಮಾನ್ಯವಾಗಿ ವೃಶ್ಚಿಕ ರಾಶಿಯವರು ಬಹಳಷ್ಟು ಜನರಿಂದ ಚಾಪ್ಟರ್ ಅನ್ನಿಸಿಕೊಂಡಿರುತ್ತಾರೆ. ಏಕೆಂದರೆ ಅಷ್ಟೊಂದು ಧೈರ್ಯವಂತರು ಮತ್ತು ಬುದ್ಧಿವಂತರಿವರು. ಆದರೆ ಕೆಲವೊಮ್ಮೆ ಬುದ್ಧಿಗೇಡಿಗಳಾಗುವುದು ಇವರ ವೀಕ್ನೆಸ್. ಇಷ್ಟು ದಿನ ಗುರುಬಲದಿಂದ ಸ್ವಲ್ಪ ಲೈಫ್ ಸೆಟ್ಲ್ ಮಾಡಿಕೊಂಡಿದ್ದರು. ಈಗ ಗುರುಬಲ ಕೈ ಕೊಡುತ್ತಿರುವುದರಿಂದ ಲೈಫೇ ಡಿಸ್ಟರ್ಬ್ ಆಗ್ತಿದೆಯಲ್ಲಾ ಅನ್ನಿಸಲಾರಂಭಿಸುತ್ತದೆ.
ಇಷ್ಟು ದಿನ ಏನೇ ಕೇಳಿದರೂ "ನಾನೇಯಾ, ಇಲ್ಲಿ" ಎಂದವರು ಈಗ ನಾನ್ಯಾರು ಅಂದುಕೊಳ್ಳುವಂತಾಗುತ್ತದೆ. ಹೌದು, ಗುರುವಿನ ಪ್ರಭಾವವೇ ಅಂಥಹದ್ದು. ಸಾಡೇಸಾತಿಯ ಶನಿಕಾಟದಲ್ಲಿದ್ದರೂ ಸ್ವಲ್ಪ ಗುರುವಿನ ಕೃಪಾಕಟಾಕ್ಷ ಪಡೆದುಕೊಂಡಿದ್ದ ಇವರು ಈಗ ಗುರುವಿನ ಮಹತ್ವ ಅರಿತುಕೊಳ್ಳುವ ಸುಸಮಯ.
ಕಳೆದ ವರ್ಷದಿಂದ ನವಮ ಸ್ಥಾನದಲ್ಲಿದ್ದ ಗುರು ತನ್ನ ಉಚ್ಚ ಕ್ಷೇತ್ರದಿಂದ ವೃಶ್ಚಿಕ ರಾಶಿಯವರಿಗೆ ಬಹಳಷ್ಟು ಅನುಕೂಲ ಮಾಡಿಕೊಟ್ಟಿದ್ದಾನೆ. ಈಗ ಅವನು ಸಿಂಹ ರಾಶಿಗೆ ಪ್ರವೇಶ ಮಾಡಿ ದಶಮನಾಗಿದ್ದಾನೆ. ಈ ಕ್ಷೇತ್ರದಲ್ಲಿ ಗುರುವು ವೃಶ್ಚಿಕ ರಾಶಿಯವರಿಗೆ ಅನುಕೂಲಕ್ಕಿಂತ ಅನಾನುಕೂಲವನ್ನೇ ಹೆಚ್ಚಿಸುತ್ತಾನೆ. ಮೇಲಾಗಿ ವೃಶ್ಚಿಕದವರಿಗೆ ಸಾಡೇಸಾತಿಯ ಶನಿಕಾಟ ಜೊತೆಗೆ ಗುರುಬಲವಿಲ್ಲದೇ ಒದ್ದಾಟದ ಪರಿಸ್ಥಿತಿ ಅನುಭವಿಸುವ ಸಮಯ. [ಗುರುಬಲ : ತುಲಾ ರಾಶಿಗೆ ಸೂಪರ್]
ಮುಂಬರುವ ಒಂದು ವರ್ಷ ಪರ್ಯಂತ ಹಾಕಿಕೊಂಡ ಯೋಜನೆಗಳು ನಿಧಾನವಾಗಲಾರಂಭಿಸುತ್ತವೆ. ಕಾರಣ ಹುಡುಕಿದರೂ ಗೊತ್ತಾಗುವುದಿಲ್ಲ. ಎಲ್ಲಿ ತೊಂದರೆಯಾಗಿತ್ತು ಎಂಬುದು ತಿಳಿಯುವುದಿಲ್ಲ. ಕುಟುಂಬದವರಂತೂ ಹಳೆಯ ತಪ್ಪುಗಳನ್ನು ಹುಡುಕಿಕೊಂಡು ಬಂದು ಕೆದಕಲಾರಂಭಿಸುತ್ತಾರೆ. ದೇಹಾರೋಗ್ಯದಲ್ಲೂ ಸ್ವಲ್ಪ ವ್ಯತ್ಯಾಸವಾಗಲಾರಂಭಿಸುತ್ತದೆ.
ಕೆಲವರಿಗೆ ಕೆಲಸದ ನಿಮಿತ್ತ ಪರಸ್ಥಳಗಳಲ್ಲಿ ವಾಸ ಮಾಡುವ ಸಂದರ್ಭ ಒದಗಿ ಬರುತ್ತದೆ. ಜೊತೆಗಿದ್ದವರೇ ಕಣ್ಣಿಡುವುದರಿಂದ ಯಾರನ್ನು ನಂಬುವುದು ಯಾರನ್ನು ಬಿಡುವುದು ಎಂಬುದರಲ್ಲೇ ಕಾಲಹರಣ ಮಾಡಬೇಕಾಗುತ್ತದೆ. ಯಾವುದರಲ್ಲೂ ಏಕಾಗ್ರತೆ ಸಾಧಿಸಲು ಆಗುವುದಿಲ್ಲ. ಹೀಗಾಗಿ ಮನಸ್ಸಿನ ಹತೋಟಿ ತಪ್ಪುತ್ತದೆ. [ರಾಶಿಗಳಿಗನುಗುಣವಾಗಿ ಗುರುಬಲ ಹೀಗಿದೆ]
ಜೊತೆ ಜೊತೆಗೆ ಶನಿಯು ಏಳರಾಟದಲ್ಲಿ ಮುನ್ನುಗ್ಗುತ್ತಿರುವುದರಿಂದ ಅದೂ ಜನ್ಮರಾಶಿಯಲ್ಲೇ. ಹೀಗಾಗಿ ಇತ್ತ ಶನಿಕಾಟವು ಹೆಚ್ಚುವುದು ಅತ್ತ ಗುರುಬಲವೂ ಹೋಗುತ್ತಿರುವುದು ಒಂಥರಾ ಬೇಸರಕರ ಸಂಗತಿಗಳೇ. ಆದರೆ, ಸ್ವಲ್ಪ ಆಲಸ್ಯತನ ಮತ್ತು ಸೋಮಾರಿತನವನ್ನು ಬಿಡುವುದು ಈ ರಾಶಿಯವರಿಗೆ ಸ್ವಲ್ಪ ನೆಮ್ಮದಿಯನ್ನು ತರಬಹುದು.
ಪರಿಹಾರವೇನು? : ಕೆಲ ರಾಶಿಯವರಿಗೆ ಶನಿಕಾಟವಿದ್ದರೂ ಗುರುಬಲವಿದೆ, ಕೆಲವರಿಗೆ ಗುರುಬಲ ಇಲ್ಲದಂತಾಗಿದೆ. ಇಂಥವರು ಏನು ಮಾಡಬೇಕು? ಈ ತೊಂದರೆಗಳಿಗೆಲ್ಲ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು? ಈ ಕುರಿತು ಈ ಸರಣಿ ಮುಗಿದ ನಂತರ ಒಂದು ಲೇಖನ ಪ್ರಕಟವಾಗಲಿದೆ. ನಿರೀಕ್ಷಿಸಿ.