Explained: 13 ರಾಜ್ಯಗಳ 29 ವಿಧಾನಸಭೆ, 3 ಲೋಕಸಭೆಗೆ ಉಪ ಚುನಾವಣೆ
ನವದೆಹಲಿ, ಅಕ್ಟೋಬರ್ 30: ಭಾರತದ 13 ರಾಜ್ಯಗಳು, ದಾದ್ರ ಮತ್ತು ನಗರ್ ಹವೇಲಿ ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಒಟ್ಟು 29 ವಿಧಾನಸಭೆ ಕ್ಷೇತ್ರ ಹಾಗೂ 3 ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆ ಶನಿವಾರ ಮತದಾನ ಪ್ರಕ್ರಿಯೆ ನಡೆಯಲಿದೆ.
ಬಹುತೇಕ ಕ್ಷೇತ್ರಗಳಲ್ಲಿ ಅಕ್ಟೋಬರ್ 30ರಂದು ನಡೆಯುತ್ತಿರುವ ಉಪ ಚುನಾವಣೆಗೆ ಶಾಸಕರ ಪಕ್ಷಾಂತರವೇ ಮುಖ್ಯ ಕಾರಣವಾಗಿದೆ. ಈ ಕ್ಷೇತ್ರಗಳ ಹಾಲಿ ಶಾಸಕರು ಭಾರತೀಯ ಜನತಾ ಪಕ್ಷಕ್ಕೆ ಸೇರಿರುವುದರ ಹಿನ್ನೆಲೆ ಉಪ ಚುನಾವಣೆ ನಡೆಸಲಾಗುತ್ತಿದೆ. ನವೆಂಬರ್ 2ರ ಮಂಗಳವಾರ ಅಂತಿಮ ಫಲಿತಾಂಶ ಹೊರ ಬೀಳಲಿದೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ಇಲ್ಲಿ ವರದಿ ಮಾಡಲಾಗಿದೆ.
Hanagal, Sindgi By-Polls Voting Live: ಹಾನಗಲ್, ಸಿಂದಗಿಯಲ್ಲಿ ಮತದಾನ ಆರಂಭ
3 ಲೋಕಸಭೆ, 29 ವಿಧಾನಸಭೆಗೆ ಉಪ ಚುನಾವಣೆ:
* ಹಿಮಾಚಲ ಪ್ರದೇಶದ ಮಂಡಿ, ಮಧ್ಯಪ್ರದೇಶದ ಖಾಂಡ್ವಾ ಮತ್ತು ದಾದ್ರಾ ಮತ್ತು ನಗರ ಹವೇಲಿಯಲ್ಲಿ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಸಂಸದರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲಾಗುತ್ತಿದೆ. ಮಂಡಿ ಸಂಸದ ರಾಮಸ್ವರೂಪ್ ಶರ್ಮಾ ಮತ್ತು ಖಾಂಡ್ವಾ ಸಂಸದ ನಂದಕುಮಾರ್ ಸಿಂಗ್ ಚೌಹಾಣ್ ಮಾರ್ಚ್ನಲ್ಲಿ ನಿಧನರಾಗಿದ್ದರು. ದಾದ್ರಾ ಸಂಸದ ಮೋಹನ್ ದೇಲ್ಕರ್ ಒಂದು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿಂದೆ ಮಂಡಿ ಮತ್ತು ಖಾಂಡ್ವಾ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದ್ದರೆ, ದಾದ್ರಾ ಕ್ಷೇತ್ರದ ಸಂಸದ ದೇಲ್ಕರ್ ಸ್ವತಂತ್ರವಾಗಿ ಸ್ಪರ್ಧಿಸಿ ಸಂಸದರಾಗಿ ಆಯ್ಕೆ ಆಗಿದ್ದರು.
* ಎಪ್ರಿಲ್-ಮೇನಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉದಯನ್ ಗುಹಾ ಅವರನ್ನು ಬಿಜೆಪಿ ಕೇವಲ 57 ಮತಗಳಿಂದ ಸೋಲಿಸಿದ ಕೂಚ್ ಬೆಹರ್ನ ದಿನಾಟಾ ಕ್ಷೇತ್ರ ಸೇರಿದಂತೆ ಪಶ್ಚಿಮ ಬಂಗಾಳದ ನಾಲ್ಕು ಕಡೆಗಳಲ್ಲಿ ಉಪ ಚುನಾವಣೆ ನಡೆಸಲಾಗುತ್ತಿದೆ. ಕಿರಿಯ ಗೃಹ ಸಚಿವ ಬಿಜೆಪಿಯ ನಿಸಿತ್ ಪ್ರಮಾಣಿಕ್ ಅವರಿಗೆ ಕ್ಷೇತ್ರ ಉಳಿಸಿಕೊಳ್ಳುವುದಕ್ಕೆ ಎರಡನೇ ಅವಕಾಶ ಸಿಕ್ಕಂತಾಗಿದೆ.
* ಪಶ್ಚಿಮ ಬಂಗಾಳ ನಾಡಿಯಾ ಜಿಲ್ಲೆಯ ಸಂತಿಪುರ್ ವಿಧಾನಸಭೆ, ದಕ್ಷಿಣದ 24 ಪರಗಣ ಜಿಲ್ಲೆಯ ಖರ್ದಹಾ ಮತ್ತು ಗೋಸಬಾ ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗುತ್ತಿದೆ. ಇತ್ತೀಚಿನ ಏಪ್ರಿಲ್-ಮೇ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ಖರ್ದಹಾ ಮತ್ತು ಗೋಸಬಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಗೆ ಈ ಉಪ ಚುನಾವಣೆಯುಪ್ರತಿಷ್ಠೆಯ ಕಣವಾಗಿದೆ.
* ಖರ್ದಾದಲ್ಲಿ ರಾಜ್ಯ ಸಚಿವ ಸೋವದೇಬ್ ಚಟ್ಟೋಪಾಧ್ಯಾಯ ಅವರನ್ನೇ ಕಣಕ್ಕಿಳಿಸಿರುವುದರಿಂದ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೂ ಈ ಕ್ಷೇತ್ರ ಮಹತ್ವದ್ದಾಗಿದೆ. ಅವರು ಭವಾನಿಪುರ ಕ್ಷೇತ್ರದಿಂದ ಗೆದ್ದಿದ್ದರು, ಆದರೆ ಮಮತಾ ಬ್ಯಾನರ್ಜಿ ತಮ್ಮ ಕ್ಷೇತ್ರದಲ್ಲಿ ಸೋಲು ಕಂಡ ಹಿನ್ನೆಲೆ ಆ ಕ್ಷೇತ್ರವನ್ನು ಬಿಟ್ಟು ಕೊಟ್ಟಿದ್ದರು. ಈ ಹಿಂದೆ ನಂದಿಗ್ರಾಮ್ನಿಂದ ಸ್ಪರ್ಧಿಸಿದ ಮಮತಾ ಬ್ಯಾನರ್ಜಿಯವರು ಬಿಜೆಪಿಯ ಪ್ರತಿಸ್ಪರ್ಧಿ ಸುವೇಂದು ಅಧಿಕಾರಿ ವಿರುದ್ಧ ಅಲ್ಪಮತಗಳಿಂದ ಸೋಲು ಕಂಡಿದ್ದರು. ಅವರು ಮುಖ್ಯಮಂತ್ರಿಯಾಗಿ ಉಳಿಯಲು ಆರು ತಿಂಗಳೊಳಗೆ ಉಪಚುನಾವಣೆ ಗೆಲ್ಲಬೇಕಾಗಿದ್ದು, ತದನಂತರ ಅವರು ಬಿಜೆಪಿಯ ಪ್ರಿಯಾಂಕಾ ತಿಬ್ರೆವಾಲ್ ವಿರುದ್ಧ 58,832 ಮತಗಳಿಂದ ಗೆಲುವು ಸಾಧಿಸಿದ್ದರು.
* ಅಸ್ಸಾಂನಲ್ಲಿ ಐದು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯತ್ತಿದೆ. ಕೊಕ್ರಜಾರ್ ಜಿಲ್ಲೆಯ ಗೊಸ್ಸೈಗಾಂವ್, ಬಕ್ಸಾ ಜಿಲ್ಲೆಯ ತಮುಲ್ಪುರ್, ಜೋರ್ಹತ್ ಜಿಲ್ಲೆಯ ಮರಿಯಾನಿ ಮತ್ತು ಥೌರಾ ಹಾಗೂ ಬಾರ್ಪೇಟಾ ಜಿಲ್ಲೆಯ ಭವಾನಿಪುರದಲ್ಲಿ ಉಪ ಚುನಾವಣೆಗೆ ಶನಿವಾರ ಮತದಾನ ನಡೆಯಲಿದೆ.
* ಹಾಲಿ ಶಾಸಕರ ಅಕಾಲಿಕ ನಿಧನದಿಂದಾಗಿ ಗೊಸ್ಸೈಗಾಂವ್ ಮತ್ತು ತಮುಲ್ಪುರ್ ಉಪ ಚುನಾವಣೆ ನಡೆಸಲಾಗುತ್ತಿದೆ. ಉಳಿದ ಮೂರು ಕ್ಷೇತ್ರಗಳಲ್ಲಿ ಶಾಸಕರು ಬಿಜೆಪಿ ಸೇರುವುದಕ್ಕಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ಶಾಸಕರಾಗಿದ್ದ ರೂಪಜ್ಯೋತಿ ಕುರ್ಮಿ ಮತ್ತು ಸುಶಾಂತ್ ಬೊರ್ಗೊಹೈನ್ ಪಕ್ಷವನ್ನು ತೊರೆದಿದ್ದು, ಇದೀಗ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿದ್ದಾರೆ. ಭವಾನಿಪುರದ ಎಐಯುಡಿಎಫ್ನ ಫಣಿಧರ್ ತಾಲೂಕ್ದಾರ್ ಕೂಡಾ ಈ ಹಿಂದೆ ರಾಜೀನಾಮೆ ಸಲ್ಲಿಸಿದ್ದು, ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
* ರಾಜಸ್ಥಾನದ ವಲ್ಲಭನಗರ ಮತ್ತು ಧರಿಯಾವಾಡ ಉಪಚುನಾವಣೆಯನ್ನು ಕಾಂಗ್ರೆಸ್ ತನ್ನ ಸರ್ಕಾರದ ಸ್ಥಿರತೆಯ ಪರೀಕ್ಷೆ ಎಂದು ಪರಿಗಣಿಸಿದೆ. ಇದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ಒತ್ತಡವನ್ನು ಹೆಚ್ಚಿಸಿದೆ. ಗೆಹ್ಲೋಟ್-ಪೈಲಟ್ ನಡುವಿನ ಜಗಳದಿಂದಾಗಿ ಕಳೆದ ವರ್ಷ ಕಾಂಗ್ರೆಸ್ ಬಹುತೇಕ ಕ್ಷೇತ್ರಗಳನ್ನು ಕಳೆದುಕೊಳ್ಳುವುದಕ್ಕೆ ಪ್ರಮುಖ ಕಾರಣ ಎನಿಸಿತ್ತು. ವಲ್ಲಭನಗರವನ್ನು ಕಾಂಗ್ರೆಸ್ ಮತ್ತು ಧರಿಯಾವಾಡ ಕ್ಷೇತ್ರದಲ್ಲಿ ಈ ಹಿಂದೆ ಬಿಜೆಪಿ ಗೆಲುವು ಸಾಧಿಸಿದ್ದವು.
* ಖಾಂಡ್ವಾ ಲೋಕಸಭಾ ಸ್ಥಾನದ ಹೊರತಾಗಿ, ಮಧ್ಯಪ್ರದೇಶದ ರಾಯಗಾಂವ್, ಜೋಬಾಟ್ ಮತ್ತು ಪೃಥ್ವಿಪುರ ಎಂಬ ಮೂರು ವಿಧಾನಸಭೆಗೆ ಉಪ ಚುನಾವಣೆ ನಡೆಯಲಿವೆ. ರಾಯಗಾಂವ್ ಈ ಮೊದಲು ಬಿಜೆಪಿ ಹಾಗೂ ಜೋಬಾಟ್, ಪೃಥ್ವಿಪುರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಉಪ ಚುನಾವಣೆ ಫಲಿತಾಂಶವು ಮುಖ್ಯಮಂತ್ರಿ ಶಿವರಾಜ್ ಚೌವ್ಹಾಣ್ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಕಳೆದ ಕೆಲವು ತಿಂಗಳಲ್ಲಿ ಬಿಜೆಪಿಯು ನಾಲ್ಕು ರಾಜ್ಯ ನಾಯಕರನ್ನು ಬದಲಾಯಿಸಿದೆ. ಈ ಹಿನ್ನೆಲೆ ತಮ್ಮ ಸ್ಥಾನವನ್ನು ಗಟ್ಟಿಯಾಗಿಸಿಕೊಳ್ಳಲು ಉಪ ಚುನಾವಣೆಯಲ್ಲಿನ ಪ್ರಬಲ ಗೆಲುವು ಅತ್ಯಗತ್ಯವಾಗುತ್ತದೆ.
* ತೆಲಂಗಾಣದ ಹುಜೂರಾಬಾದ್ ಮತ್ತು ಆಂಧ್ರಪ್ರದೇಶದ ಬದ್ವೇಲ್ನಲ್ಲಿಯೂ ಉಪ ಚುನಾವಣೆ ನಡೆಯಲಿದೆ. ಹುಜೂರಾಬಾದ್ ಅನ್ನು ಆಡಳಿತಾರೂಢ ಟಿಆರ್ಎಸ್ ಹಿಡಿತದಲ್ಲಿದ್ದು, ಬಿಜೆಪಿಯು ಈಟಾಲ ರಾಜೇಂದರ್ ರನ್ನು ಕಣಕ್ಕಿಳಿಸಿರುವುದು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಪಾಲಿಗೆ ಇದು ಪ್ರತಿಷ್ಠೆಯ ಕದನವಾಗಿದೆ. ಭೂಕಬಳಿಕೆ ಆರೋಪದ ಮೇಲೆ ಜೂನ್ನಲ್ಲಿ ಟಿಆರ್ಎಸ್ನ ಮಾಜಿ ನಾಯಕ ಮತ್ತು ಸಚಿವ ಪಕ್ಷವನ್ನು ತೊರೆದಿದ್ದು, ಇದೀಗ ಅದೇ ನಾಯಕರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
* ಇತರ ಉಪಚುನಾವಣೆಗಳಲ್ಲಿ ಕರ್ನಾಟಕದ ಹಾನಗಲ್ ಮತ್ತು ಸಿಂದಗಿ ವಿಧಾನಸಭೆ ಕ್ಷೇತ್ರಗಳು ಸೇರಿವೆ. ಜುಲೈನಲ್ಲಿ ಬಿಎಸ್ ಯಡಿಯೂರಪ್ಪ ಅವರನ್ನು ಬದಲಿಸಿದ ಬಿಜೆಪಿ, ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇದು ಮೊದಲ ಚುನಾವಣಾ ಪರೀಕ್ಷೆಯಾಗಿದೆ.
* ಮೇಘಾಲಯ ಮತ್ತು ಹಿಮಾಚಲ ಪ್ರದೇಶದಲ್ಲಿ ತಲಾ ಮೂರು, ಬಿಹಾರದಲ್ಲಿ ಎರಡು ಮತ್ತು ಮಹಾರಾಷ್ಟ್ರ ಮತ್ತು ಮಿಜೋರಾಂನಲ್ಲಿ ತಲಾ ಒಂದು ಸ್ಥಾನಗಳಿಗೆ ಶನಿವಾರ ಮತದಾನ ನಡೆಯುತ್ತಿದೆ. ಹರಿಯಾಣದ ಎಲೆನಾಬಾದ್ನಲ್ಲಿಯೂ ಮತದಾನ ನಡೆಯಲಿದ್ದು, ಅಲ್ಲಿ ಭಾರತೀಯ ರಾಷ್ಟ್ರೀಯ ಲೋಕದಳದ ಅಭಯ್ ಚೌತಾಲಾ (ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯನ್ನು ತೊರೆದವರು) ಸ್ಥಾನವನ್ನು ಮರಳಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.