ನಿರಾಣಿ ವಿರುದ್ಧ ಎಫ್ಐಆರ್? ಬೆಂಗಳೂರು ಕ್ರೈಂ ಸುದ್ದಿ ರೌಂಡಪ್
ಬೆಂಗಳೂರು, ಆ. 19: ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿ ಸಂದೇಶ ರವಾನಿಸಿದ್ದ ಸಚಿವ ನಿರಾಣಿ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಜನ ಪ್ರತಿನಿಧಿಗಳ ನ್ಯಾಯಾಲಯ ಆದೇಶ, ಬಿಕಾಂ ಪದವೀಧರ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರೆ, ಆ ಮಗನನ್ನು ನೋಡುವ ತವಕದಲ್ಲಿ ಅಪಘಾತಕ್ಕೆ ಒಳಗಾಗಿ ತಾಯಿ ಸಾವನ್ನಪ್ಪಿದ್ದಾಳೆ. ಕೊರೊನಾ ಸಂಕಷ್ಟಕ್ಕೆ ಒಳಗಾದ ಕುಟುಂಬ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದೆ. ಬೆಂಗಳೂರಿನಲ್ಲಿ ಬೆಳಕಿಗೆ ಬಂದ ಪ್ರಮುಖ ಅಪರಾಧ ಪ್ರಕರಣ ಸುದ್ದಿಗಳ ವಿವರ ಮುಂದಿದೆ...
ಬಿಕಾಂ ಪದವೀಧರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದು ಆಸ್ಪತ್ರೆಗೆ ತೆರಳುತ್ತಿದ್ದ ಕಾರು ಅಪಘಾತದಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಕ್ಷುಲ್ಲಕ ವಿಚಾರಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದು, ಮಗನ ಜೀವ ರಕ್ಷಣೆ ಮಾಡಿಕೊಳ್ಳುವ ಆತುರದಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ತಾಯಿಗೆ ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾಳೆ. ಈ ಸಂಬಂಧ ವಿಜಯನಗರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಒಂದೇ ದಿನ ತಾಯಿ ಮಗ ದುರಂತ ಅಂತ್ಯ ಕಂಡಿದ್ದು ಸಾಮಾಜಿಕ ಜಾಲ ತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ತಾಯಿ ಅಪಘಾತದಲ್ಲಿ ಸಾವು
ವಿಜಯನಗರದ ಎಂ.ಸಿ. ಲೇಔಟ್ ನಿವಾಸಿ ಲೀಲಾವತಿ ಅವರ ಪುತ್ರ ಮೋಹನ್ ಗೌಡ ಬಿಕಾಂ ಪದವೀಧರನಾಗಿದ್ದು, ಪರೀಕ್ಷೆ ಮುಗಿಸಿ ಮಂಗಳವಾರ ಮನೆಗೆ ಬಂದಿದ್ದ. ಬೈಕ್ ವಿಚಾರವಾಗಿ ತನ್ನ ಆಪ್ತ ಸ್ನೇಹಿತರ ಜತೆ ಜಗಳ ಮಾಡಿಕೊಂಡಿದ್ದಾನೆ. ಸ್ನೇಹಿತರ ಜೊತೆ ಸೇರಿ ಜಗಳ ಮಾಡುವುದನ್ನು ಕಂಡ ಮೋಹನ್ ತಂದೆ ಸಮೀಪದಲ್ಲಿಯೇ ಕರ್ತವ್ಯದಲ್ಲಿದ್ದ ಹೊಯ್ಸಳ ಪೊಲೀಸರನ್ನು ಕರೆಸಿದ್ದಾರೆ. ಪೊಲೀಸರು ವಿಚಾರಣೆಗೆ ಬರುವಂತೆ ಹೇಳಿದ್ದಕ್ಕೆ ಹೆದರಿ ಮೋಹನ್ ಗೌಡ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಾಲಕರು ಎಷ್ಟೇ ಬಾಗಿಲು ಬಡಿದರೂ ತೆಗೆದಿಲ್ಲ. ಪೊಲೀಸರು ಬಾಗಿಲು ತೆಗೆದು ನೋಡಿದಾಗ ಫ್ಯಾನಿಗೆ ನೇಣು ಹಾಕಿಕೊಂಡಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಮಗ ಮೋಹನ್ ಗೌಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ವಿಷಯ ತಿಳಿದ ತಾಯಿ ಲೀಲಾವತಿ ಆಸ್ಪತ್ರೆಗೆ ತೆರಳಿದ್ದಾರೆ. ಈ ವೇಳೆ ಕಾರು ಡಿಕ್ಕಿ ಹೊಡೆದು ಲೀಲಾವತಿ ಕೂಡ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಧಾವಿಸಿದ ವಿಜಯನಗರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮಗನ ಸಾವಿನ ದಿನವೇ ತಾಯಿಯೂ ಅಪಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವ ಘಟನೆ ನೋಡಿ ಸ್ಥಳೀಯರು ಕಣ್ಣೀರು ಹಾಕಿದ್ದಾರೆ.

ಮಕ್ಕಳ ಸಮೇತ ಊರು ಬಿಟ್ಟ ಕುಟುಂಬ
ಕೊರೊನಾದಿಂದ ಮೈತುಂಬಾ ಸಾಲ ಮಾಡಿಕೊಂಡಿದ್ದ ದಂಪತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್ ನೋಟ್ ಬರೆದಿಟ್ಟು ಇಬ್ಬರು ಮಕ್ಕಳ ಸಮೇತ ಕಾಣೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಾಗಲಗುಂಟೆ ನಿವಾಸಿ ಗಾಂಧಿ, ಪತ್ನಿ ಶಾಲಿನಿ, ಪುತ್ರಿಯರಾದ ಹೇಮಶ್ರೀ, ಶಾನುಶ್ರೀ ನಾಪತ್ತೆಯಾದವರು. ಶಾನುಶ್ರೀ ಸಹೋದರ ಚಿರಂಜೀವಿ ತುಮಕೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಪ್ರತಿ ನಿತ್ಯ ಶಾಲಿನಿ ಜತೆ ಚಿರಂಜೀವಿ ಮಾತನಾಡುತ್ತಿದ್ದ. ಆ. 12 ರಂದು ಚಿರಂಜೀವಿ ಕರೆ ಮಾಡಿದಾಗ ಪೋನ್ ಸ್ವಿಚ್ ಆಫ್ ಆಗಿದೆ. ಚಿರಂಜೀವಿ ಪಕ್ಕದ ಮನೆಯವರಿಗೆ ಕರೆ ಮಾಡಿದ್ದು, ಮನೆ ಸಮೀಪ ಹೋಗಿ ನೋಡಿದಾಗ ಬಾಗಿಲು ಮುಚ್ಚಿರುವುದು ಬೆಳಕಿಗೆ ಬಂದಿದೆ. ಮನೆ ಮಾಲೀಕರನ್ನು ವಿಚಾರಿಸಿದಾಗ ಎಲ್ಲಾ ಬಟ್ಟೆ ಸಮೇತ ಹೋಗಿರುವುದಾಗಿ ತಿಳಿಸಿದ್ದಾರೆ. ಈ ವಿಷಯನ್ನು ಚಿರಂಜೀವಿಗೆ ಆತನ ಸ್ನೇಹಿತ ತಿಳಿಸಿದ್ದಾನೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಸಚಿವ ಮುರುಗೇಶ್ ನಿರಾಣಿ ವಿರುದ್ಧ ಎಫ್ಐಆರ್
ಹಿಂದೂ ದೇವತೆಗಳ ವಿರುದ್ಧ ಆಕ್ಷೆಪಾರ್ಯ ಸಂದೇಶವನ್ನು ಕಳಿಸಿದ ಆರೋಪ ಸಂಬಂಧ ಸಚಿವ ಮುರುಗೇಶ್ ನಿರಾಣಿ ವಿರುದ್ಧ ತನಿಖೆಗೆ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.ಹಿಂದೂ ದೇವತೆಗಳ ಬಗ್ಗೆ ಅಕ್ಷೇಪಾರ್ಹ ಬರಹವನ್ನು ವಾಟ್ಸಪ್ ಮೂಲಕ ಸಂದೇಶ ಕಳುಹಿಸಿದ್ದರು. ಇದು ವಾಟ್ಸಪ್ ಗ್ರೂಪ್ ಗಳಲ್ಲಿ ಹರಿದಾಡಿತ್ತು. ಸಚಿವ ಮುರುಗೇಶ್ ನಿರಾಣಿ ವಿರುದ್ಧ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಸಂಬಂಧ ತನಿಖೆ ನಡೆಸಿ ಸೆ. 23 ರೊಳಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದೆ. ಹಿಂದೂ ದೇವತೆಗಳ ಬಗ್ಗೆ ಅವಹೇಳನ ಸಂದೇಶ ರವಾನಿಸಿದ ಮುರುಗೇಶ್ ನಿರಾಣಿ ವಿರುದ್ಧ ಐಪಿಸಿ ಸೆ.153A, 295, 295-A. ಅಡಿ ಕ್ರಮ ಕೋರಿ ದೂರು ಸಲ್ಲಿಸಿದ್ದರು. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ನಿರಾಣಿ ವಿರುದ್ಧ ಎಫ್ಐಆರ್ ದಾಖಲಿಸಿ ಕೊಡುಗೇಹಳ್ಳಿ ಪೊಲೀಸರು ತನಿಖೆ ನಡೆಸಲಿದ್ದಾರೆ.

ಸಚಿವೆ ಶಶಿಕಲಾ ಜೊಲ್ಲೆಗೆ ನೋಟಿಸ್
ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಲು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಭವನದ ವರೆಗೂ ಝೀರೋ ಟ್ರಾಫಿಕ್ ಸೌಲಭ್ಯ ಪಡೆದ ಶಾಸಕ ಶಶಿಕಲಾ ಜೊಲ್ಲೆಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಶಾಸಕಿಯಾಗಿದ್ದ ಶಶಿಕಲಾ ಜೊಲ್ಲೆ ಸಚಿವರಾಗಿ ಸ್ವೀಕರಿಸಲು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಭವನದ ವರೆಗೂ ಝೀರೋ ಟ್ರಾಫಿಕ್ ಸೌಲಭ್ಯ ಪಡೆದಿದ್ದಾರೆ. ಇದು ನಿಯಮ ಬಾಹಿರ ಎಂದು ಸೌಲಭ್ಯ ನೀಡಿದ ಪೊಲೀಸರ ಕ್ರಮ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಶಶಿಕಲಾ ಜೊಲ್ಲೆ, ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ. ಒಬ್ಬ ಶಾಸಕಿ ತನ್ನ ಅಧಿಕಾರ ಬಳಸಿಕೊಂಡು ಝೀರೋ ಟ್ರಾಫಿಕ್ ಸೌಲಭ್ಯ ಪಡೆದ ಬಗ್ಗೆ ನ್ಯಾಯಾಲಯದ ಮುಂದೆ ಸಮರ್ಥನೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಝೀರೋ ಟ್ರಾಫಿಕ್ ನೀಡಿದ ಪೊಲೀಸ್ ಅಧಿಕಾರಿಗಳು ಕೂಡ ಇದೀಗ ಮುಜುಗರಕ್ಕೆ ಈಡಾಗುವಂತಾಗಿದೆ.












Click it and Unblock the Notifications