ಉ.ಪ್ರದೇಶ ಚುನಾವಣೆಯಲ್ಲಿ ಯಾರಿಗೆ ಕಿರೀಟ: ಖ್ಯಾತ 4 ಜ್ಯೋತಿಷಿಗಳ ಭವಿಷ್ಯ!
ದೇಶವೆಲ್ಲಾ ಕುತೂಹಲದಿಂದ ನೋಡುತ್ತಿರುವ ಉತ್ತರ ಪ್ರದೇಶದ ಅಸೆಂಬ್ಲಿ ಚುನಾವಣೆಯ ಫಲಿತಾಂಶ ಇನ್ನೇನು ಸ್ವಲ್ಪಹೊತ್ತಿನಲ್ಲಿ ಹೊರಬೀಳಲಿದೆ. ಯೋಗಿ ಆದಿತ್ಯನಾಥ್ ಗೆಲ್ಲುತ್ತಾರೋ ಅಥವಾ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರ ಕೈಮೇಲಾಗುತ್ತದೋ ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ.
403 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಬಹುಮತಕ್ಕೆ 202 ಸ್ಥಾನಗಳು ಬೇಕಾಗುತ್ತದೆ. ಇದುವರೆಗೆ ಹೊರಬಿದ್ದಿರುವ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿಯು ಉತ್ತರ ಪ್ರದೇಶವನ್ನು ಉಳಿಸಿಕೊಳ್ಳಲಿದೆ ಎನ್ನುವ ಫಲಿತಾಂಶವನ್ನು ನೀಡಿದೆ.
ಫೆಬ್ರವರಿ ಹತ್ತರಂದು ಮೊದಲ ಹಂತದ ಚುನಾವಣೆ ಉತ್ತರ ಪ್ರದೇಶದಲ್ಲಿ ನಡೆದಿತ್ತು. ಒಟ್ಟು ಏಳು ಹಂತದಲ್ಲಿ ನಡೆದ ಚುನಾವಣೆ ಮಾರ್ಚ್ ಏಳರಂದು ಮುಕ್ತಾಯಗೊಂಡಿತ್ತು. ಇದರ ಬೆನ್ನಲ್ಲೇ ವಿವಿಧ ವಾಹಿನಿಗಳು ಎಕ್ಸಿಟ್ ಪೋಲ್ ನಡೆಸಿದ್ದವು.
ಉತ್ತರ ಪ್ರದೇಶದಲ್ಲಿ ಯಾರಿಗೆ ಗೆಲುವು ಎನ್ನುವ ವಿಚಾರದಲ್ಲಿ ಜ್ಯೋತಿಷಿಗಳೂ ಹಿಂದೆ ಬಿದ್ದಿಲ್ಲ. ಹಲವರು ಈಗಾಗಲೇ ಭವಿಷ್ಯವನ್ನು ನುಡಿದಿದ್ದಾಗಿದೆ. ಈ ಕ್ಷೇತ್ರದಲ್ಲಿ ಹೆಸರು ಮಾಡಿರುವ ನಾಲ್ವರು ಮಹಿಳೆಯರು ಬಹು ನಿರೀಕ್ಷಿತ ಚುನಾವಣೆಯ ಫಲಿತಾಂಶದ ಬಗ್ಗೆ ಏನು ಜ್ಯೋತಿಷ್ಯ ನುಡಿದಿದ್ದಾರೆ? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

ಯೋಗಿ ಅವರ ನೇತೃತ್ವದ ಬಿಜೆಪಿ ಉತ್ತರ ಪ್ರದೇಶದಲ್ಲಿ ಅಧಿಕಾರ ಉಳಿಸಿಕೊಳ್ಳಲಿದೆ
ದೆಹಲಿ ಮೂಲದ ಖ್ಯಾತ ಜ್ಯೋತಿಷಿ ಶೃತಿ ದ್ವಿವೇದಿ ಉತ್ತರ ಪ್ರದೇಶ ಚುನಾವಣೆಯ ಫಲಿತಾಂಶದ ಬಗ್ಗೆ ಮಾತನಾಡುತ್ತಾ, "ಮಾಯವತಿಯವರು ಆನೆಗೆ ಕೊಟ್ಟ ಪ್ರಾಶಸ್ತ್ಯವನ್ನು ದೇವಾಲಯ ನಿರ್ಮಾಣ ಕಾರ್ಯಕ್ಕೆ ಕೊಡಲಿಲ್ಲ. ಪಂಡಿತರಿಗೆ ಮಾಯಾವತಿ ಗೌರವವನ್ನು ಕೊಡಲಿಲ್ಲ. ಆನೆಯು ಸ್ವಭಾವ ನಿಧಾನ, ಈ ಚುನಾವಣೆಯಲ್ಲಿ ಅವರ ಪಕ್ಷದ ಸಾಧನೆಯೂ ಅದೇ ರೀತಿ ಇರಲಿದೆ. ಫಲಿತಾಂಶ ಹೊರಬರುವ ದಿನ ಹತ್ತನೇ ತಾರೀಕು. ಹತ್ತು ಎನ್ನುವುದು ಬದಲಾವಣೆಯ ಸಂಕೇತ, ಯೋಗಿ ಆದಿತ್ಯನಾಥ್ ಅವರ ನೇತೃತ್ವದ ಬಿಜೆಪಿ, ಉತ್ತರ ಪ್ರದೇಶದಲ್ಲಿ ಅಧಿಕಾರ ಉಳಿಸಿಕೊಳ್ಳಲಿದೆ"ಎಂದು ಶೃತಿ ಭವಿಷ್ಯವನ್ನು ನುಡಿದಿದ್ದಾರೆ.

ಮಾಯಾವತಿ ಬುಧರಾಶಿಯಲ್ಲಿ ಮಂಗಳನ ಪ್ರಭಾವ ಹೆಚ್ಚು
ದೆಹಲಿ ಮೂಲದ ಇನ್ನೋರ್ವ ಖ್ಯಾತ ಜ್ಯೋತಿಷಿ ಡಾ. ಪೂಜಾ ಭಾಟಿಯಾ ಪ್ರಕಾರ, "ಮಾಯಾವತಿಯವರ ಜಾತಕಫಲದ ಪ್ರಕಾರ, ಬುಧರಾಶಿಯಲ್ಲಿ ಮಂಗಳನ ಪ್ರಭಾವ ಹೆಚ್ಚಾಗಿದೆ. ಸ್ವತಂತ್ರವಾಗಿ ಮಾಯಾವತಿ ಅಧಿಕಾರಕ್ಕೇರಲು ಸಾಧ್ಯವಿಲ್ಲ. ಆದರೆ, ಮೈತ್ರಿಯ ಮೂಲಕ ಬಿಎಸ್ಪಿ ಅಸ್ತಿತ್ವವನ್ನು ಉಳಿಸಿಕೊಳ್ಳಬಹುದು. ಫಲಿತಾಂಶವು ಗುರುವಾರದಂದು ಹೊರಬೀಳಲಿದೆ, ಚಂದ್ರನ ಮೇಲೆ ಮಂಗಳ ರಾಶಿಯಲ್ಲಿ, ಸೂರ್ಯನು ಗುರು ರಾಶಿಯಲ್ಲಿ ಇರುತ್ತಾನೆ. ಹಾಗಾಗಿ, ಬಿಜೆಪಿಯು ಇಲ್ಲಿ ಮತ್ತೆ ಜಯಗಳಿಸಲಿದೆ"ಎಂದು ಪೂಜಾ ಭವಿಷ್ಯವನ್ನು ನುಡಿದಿದ್ದಾರೆ.

ದುನಿಯಾ ಏಕ್ ನಂಬರಿ, ಮೇ ದಸ್ ನಂಬರಿ
ಮತ್ತೋರ್ವ ಜ್ಯೋತಿಷಿ ಡಾ. ವೈ.ರಾಖಿಯ ಪ್ರಕಾರ,"ಮಾಯಾವತಿಯವರ ಜಾತಕ ಸದ್ಯಕ್ಕೆ ಸರಿಯಿಲ್ಲ, ಆದರೆ ಆಕೆ ಸುಮ್ಮನೆ ಕುಳಿತುಕೊಳ್ಳುವ ರಾಜಕಾರಣಿಯಲ್ಲ. ಮುಂದಿನ ಏಪ್ರಿಲ್ ನಂತರದ ಒಂದು ವರ್ಷದ ಅವಧಿಯಲ್ಲಿ ಅವರು ರಾಜಕೀಯ ಮುನ್ನಲೆಗೆ ಬರಬಹುದು. ದುನಿಯಾ ಏಕ್ ನಂಬರಿ, ಮೇ ದಸ್ ನಂಬರಿ ಎನ್ನುವ ಹಾಡು ನೆನಪಿಗೆ ಬರುತ್ತದೆ. ಹತ್ತನೇ ನಂಬರ್ ದೇಶದ ರಾಜಕೀಯ ಸಮೀಕರಣವನ್ನೇ ಬದಲಿಸಲಿದೆ. 2024ರ ಚುನಾವಣೆಗೂ ಈ ಫಲಿತಾಂಶ ಮುನ್ನಡೆಯನ್ನು ಬರೆಯಲಿದೆ. ಎರಡು ಪಕ್ಷಗಳ ನಡುವೆ ಪೈಪೋಟಿ ಇರಲಿದ್ದು, ಫಲಿತಾಂಶ ಯಾವ ರೀತಿಯಾದರೂ ಬರಬಹುದು"ಎಂದು ರಾಖಿ ಅಭಿಪ್ರಾಯ ಪಟ್ಟಿದ್ದಾರೆ.

ಉತ್ತರ ಪ್ರದೇಶ ಚುನಾವಣೆ ಯಾರಿಗೆ ಕಿರೀಟ
ಜೈಪುರ ಮೂಲದ ಖ್ಯಾತ ಜ್ಯೋತಿಷಿ ರಿಧಿ ಬೆಹಲ್ ಜ್ಯೋತಿಷ್ಯ ಚುನಾವಣೆಯ ಬಗ್ಗೆ ವಿವರಣೆಯನ್ನು ನೀಡುತ್ತಾ, "ಅಖಿಲೇಶ್ ಯಾದವ್ ಅವರಿಗೆ ಗುರುದೆಶೆ ನಡೆಯುತ್ತಿದೆ. ಶುಕ್ರನು ಹನ್ನೊಂದನೇ ಮನೆಯಲ್ಲಿದ್ದಾನೆ, ಇದರ ಆಧಾರದ ಮೇಲೆ ಹೇಳುವುದಾದರೆ ಕಳೆದ ಚುನಾವಣೆಗಿಂತ ಅವರ ಪಕ್ಷದ ಸಾಧನೆ ಉತ್ತಮವಾಗಿರಲಿದೆ, ಆದರೆ ಅಧಿಕಾರಕ್ಕೆ ಏರುವ ಮಟ್ಟಿಗೆ ಅಲ್ಲ. ಬಿಜೆಪಿಗೆ ಮುನ್ನೂರರ ಮೇಲೆ ಸೀಟು ಸಿಗುವುದು ಕಷ್ಟ. 250-270ಸ್ಥಾನದ ವರೆಗೆ ಬಿಜೆಪಿ ಗೆಲ್ಲಬಹುದು" ಎಂದು ನಿಧಿ ಬೆಹಲ್ ಜ್ಯೋತಿಷ್ಯ ನುಡಿದಿದ್ದಾರೆ.












Click it and Unblock the Notifications