ಸಹಾಯ ಮಾಡಿದವರಿಗೆ ಶನಿ ಎಂದೂ ಕೆಡಕು ಮಾಡಲಾರ
ಏಕೆಂದರೆ ಕುಟುಂಬದ ಸದಸ್ಯರಲ್ಲಿ ಒಬ್ಬರಿಗಾದರೂ ಸಾಡೇಸಾತಿಯ ಸಮಯ ಬಂದರೆ ಉಳಿದವರು ಅವರ ಸಹಾಯಕ್ಕೆ ಬೆಂಬಲವಾಗಿ ನಿಲ್ಲಬಹುದು. ಆದರೆ ಎಷ್ಟೋ ಜನ ಸಾಡೇಸಾತಿಯ ಬಗ್ಗೆ ಗೊತ್ತಿಲ್ಲದೆ, ತಮ್ಮೆದುರಿಗೇ ತಮ್ಮ ಕುಟುಂಬ ಸದಸ್ಯರು ಅನುಭವಿಸುತ್ತಿರುವ ಸಂಕಷ್ಟಗಳನ್ನು ನೋಡಿಯೂ ನೋಡದಂತೆ ಇದ್ದು ಬಿಡುತ್ತಾರೆ. ಇದು ತಪ್ಪು. ಕುಟುಂಬದ ಇತರ ಸದಸ್ಯರ ಕಷ್ಟಗಳ ಸಮಯದಲ್ಲಿ ಸಹಾಯ, ಸಹಕಾರ ನೀಡುವುದು ನಮ್ಮ ಕರ್ತವ್ಯ. ಏಕೆಂದರೆ ನಮಗೂ ಸಾಡೇಸಾತಿ ಬಂದೇ ಬರುತ್ತದೆ. ನಾವ್ಯಾರಿಗಾದರೂ ಸಹಾಯ, ಸಹಕಾರ ಮಾಡಿದ್ದರೆ ಮಾತ್ರ ನಮ್ಮ ಕಷ್ಟದ ಸಮಯದಲ್ಲಿ ಮತ್ತೊಬ್ಬರು ಸಹಾಯ ಮಾಡುತ್ತಾರೆ. ಇಲ್ಲವಾದರೆ ಯಾರ ಸಹಾಯ, ಸಹಕಾರವೂ ದೊರೆಯುವುದಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಅದಕ್ಕೆಂದೇ ಸಂಪೂರ್ಣ ಜಾತಕದಿಂದ ನಮ್ಮ ಉತ್ತಮ ಸಮಯವನ್ನು ಮತ್ತು ಕುಟುಂಬದ ಇತರ ಸದಸ್ಯರ ಉತ್ತಮ ಸಮಯವನ್ನು ಮತ್ತು ಸಾಡೇಸಾತಿಯ ಸಮಯವನ್ನು ಮೊದಲೇ ಗುರ್ತಿಸಿಟ್ಟುಕೊಳ್ಳುವುದು ಒಳ್ಳೆಯದು ಎನ್ನುವುದು. ಆದರೆ ಎಷ್ಟೋ ಜನ ಯಾವುದರ ಪರಿವೆ ಇಲ್ಲದೇ, ಎಲ್ಲಿಯ ದೇವರು, ಯಾವ ಸಾಡೇಸಾತಿ? ಎನ್ನುತ್ತ ನಿತ್ಯ ಜಗಳದಿಂದಾಗಿ ಸಂಸಾರದಲ್ಲಿನ ನೆಮ್ಮದಿ ಹಾಳು ಮಾಡಿಕೊಂಡಿರುತ್ತಾರೆ. ಹೊರಗಡೆಗೂ ನೆಮ್ಮದಿ ಇಲ್ಲ. ಮನೆಯಲ್ಲೂ ನೆಮ್ಮದಿ ಇಲ್ಲದಂತಾಗಿ, ದೇವರು, ಹಿರಿಯರನ್ನು ನಿಂದಿಸುತ್ತ, ದೈವಭಕ್ತಿಯ ಪ್ರಭಾವ ಅರಿಯದೇ ತಾವೇ ದೊಡ್ಡವರು ತಮಗೇನೆ ಎಲ್ಲವೂ ತಿಳಿದಿದೆ ಎನ್ನುತ್ತ, ದಡ್ಡತನ ಮಾಡುತ್ತ ಜೀವನದ ಅರ್ಥ ಮನಗಾಣದೇ ದುಶ್ಚಟಗಳ ದಾಸರಾಗುತ್ತಾರೆ.
ಇನ್ನು ಉತ್ತಮ ಸಮಯ ಹೊಂದಿರುವವರು ತಮಗಿಂತಲೂ ಕಡಿಮೆ ಆರ್ಥಿಕ ಸಾಮರ್ಥ್ಯ ಹೊಂದಿರುವವರನ್ನು ಎಂದಿಗೂ ಕೀಳಾಗಿ ಕಾಣಬಾರದು. ಹಾಗೇನಾದರೂ ಮಾಡಿದ್ದರೆ, ನಿಮ್ಮ ಸಾಡೇಸಾತಿಯ ಸಮಯದಲ್ಲಿ ನಿಮ್ಮೆಲ್ಲ ಆರ್ಥಿಕ ಬಲ ಏನೂ ಇಲ್ಲದಂತಾಗುತ್ತದೆ ಎಂಬುದು ನೆನಪಿರಲಿ. ಅಧಿಕಾರವಿದ್ದಾಗ ದರ್ಪದಿಂದ ಮೆರೆಯುತ್ತ ತಮ್ಮ ಕೈಕೆಳಗಿನ ಕೆಲಸಗಾರರನ್ನು ಗೋಳು ಹೊಯ್ದುಕೊಳ್ಳುತ್ತ ಮತ್ತೊಬ್ಬರ ಜೀವನ ಹಾಳು ಮಾಡುವಂತಹ ಕೆಲಸ ಮಾಡುವುದು ಶ್ರೇಯಸ್ಕರವಲ್ಲ. ಮತ್ತೊಬ್ಬರ ವ್ಯಕ್ತಿತ್ವದ ಬಗ್ಗೆ ಕೀಳಾಗಿ ಮಾತನಾಡಿ, ಕಿತಾಪತಿ ಬುದ್ಧಿ ತೋರಿಸುವುದು, ಗುಂಪುಗಾರಿಕೆಗೆ ಪ್ರೋತ್ಸಾಹ ಮಾಡುವುದು, ಭ್ರಷ್ಟತನದಿಂದ ಹಣ ಗಳಿಸಲು ಹಲವಾರು ದಾರಿ ಅನುಸರಿಸುತ್ತಿವವರನ್ನು ಶನಿದೇವ ತನ್ನ ಸಾಡೇಸಾತಿಯಲ್ಲಿ ಬಿಡುವುದೇ ಇಲ್ಲ.
ಅದಕ್ಕೆಂದೇ ಎಷ್ಟೋ ಜನ ತಾವು ಮಾಡಿದ್ದ ತಪ್ಪಿಗೆ ಸಾಡೇಸಾತಿಯ ಸಮಯದಲ್ಲಿ ಸಂಕಷ್ಟಗಳ ಸರಮಾಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಆದರೆ ನಾವೇನೂ ತಪ್ಪೇ ಮಾಡದಿದ್ದರೆ ಶನಿದೇವ ನಮಗೇನೂ ಮಾಡುವುದಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಂಡರೆ ಸಾಕು. ಇಲ್ಲವಾದರೆ ಬುದ್ಧಿ ಕಲಿಸಲು ಶನಿದೇವ ಬಂದೇ ಬರುತ್ತಾನೆ. ಆಗ ಗೊತ್ತಾಗುತ್ತದೆ ಅಧಿಕಾರ ದರ್ಪ, ಸೊಕ್ಕು ಮಾಡಿದ್ದರ ಫಲ! ಅದಕ್ಕೆಂದೇ "ಉರಿದವನು ಮೆರೀಲೇ ಬೇಕು" ಎಂಬ ಗಾದೆ ಮಾತು ಹುಟ್ಟಿಕೊಂಡಿದ್ದು.
ಹೀಗಾಗಿಯೇ ಶನಿದೇವ ಮಾನವಕುಲ ಉದ್ಧಾರಕನೆಂದು ಹಿಂದಿನಿಂದಲೂ ಪ್ರಚಲಿತದಲ್ಲಿರುವುದು. ಇಲ್ಲವಾದರೆ ಬರೀ ಕೆಟ್ಟ ಗುಣಗಳ ಜನರೇ ಸಮಾಜದಲ್ಲಿ ರಾರಾಜಿಸುತ್ತಿದ್ದರು. ಆದರೆ ಇಂದಿಗೂ ಸತ್ಯವಂತರು, ಪ್ರಾಮಾಣಿಕರಿಗೆ ಬೆಲೆ ಇದ್ದೇ ಇದೆ. ಕೆಟ್ಟಜನರಿಗೆ ಬುದ್ಧಿ ಕಲಿಸಿ, ಮಾಡಿರುವ ಕರ್ಮಫಲ ಉಣ್ಣಿಸಲು ಶನಿದೇವ ಇದ್ದೇ ಇದ್ದಾನೆ. ಆದರೆ ನಾವು ಒಳ್ಳೆಯ ಗುಣಗಳಿಂದ ಶನಿದೇವನ ಕೃಪಾಕಟಾಕ್ಷವನ್ನು ಮೊದಲೇ ಸಂಪಾದಿಸಿಕೊಳ್ಳುವವರೋ ಅಥವಾ ಕೆಟ್ಟಗುಣಗಳಿಂದ ಶನಿದೇವನ ಕುದೃಷ್ಟಿಗೆ ಬಿದ್ದು ನರಳುವಂತಾಗುವವರೋ ಎಂಬುದನ್ನು ನಾವೇ ನಿರ್ಧರಿಸಿಕೊಳ್ಳಬೇಕು.
ಶನಿಕೃಪೆಗೆ:
"ಕೋಣಸ್ಥ
ಪಿಂಗಳೋ
ಬಭ್ರುಃ
ಕೃಷ್ಣೋಕಾದ್ರೋಂತಕೋಯಮಃ
ಸೌರಶ್ಯನೇಶ್ವರೋ
ಮಂದಃ
ಪಿಪ್ಪವಾದೇನ
ಸಂಸ್ತುಃ
ಏತಾನಿ
ದಶನಾಮಾನಿ
ಪ್ರಾತರುತ್ಥಾಯಯಃ
ಪಠೇತ್
ಶನೈಶ್ಚರ
ಕೃತಾಪೀಡಾ
ನ
ಕದಾಚಿದ್ಭವಿಷ್ಯತಿ
ಇದು ಶನಿನಾಮದ ಸ್ತೋತ್ರ. ಪ್ರತಿನಿತ್ಯ ಬೆಳಗಿನ ಸಮಯದಲ್ಲಿ ಪಠಿಸುವುದು ಒಳ್ಳೆಯದು. ನವಗ್ರಹಗಳಿಗೆ ಒಂಬತ್ತು ಬಾರಿ ಪ್ರದಕ್ಷಿಣೆ ಹಾಕಬೇಕು. ಪ್ರದಕ್ಷಿಣೆ ಹಾಕುವಾಗ ಕೈಮುಗಿದುಕೊಂಡೇ ಇರಬೇಕು.
ಜನ್ಮನಕ್ಷತ್ರ ವಿಚಾರ : ಅಶ್ವಿನಿ ನಕ್ಷತ್ರದ ಇತರ ಹೆಸರುಗಳು: ಅಶ್ವಿ, ದಶ್ರ, ತುರಂಗಮ, ಹಯ, ಆದ್ಯ. ಅಶ್ವಿನಿ ದೇವತೆ ನಕ್ಷತ್ರದ ದೇವತೆ. ನಕ್ಷತ್ರದ ನಾಲ್ಕು ಪಾದಗಳು ಮೇಷರಾಶಿಯಲ್ಲಿ. ಜನ್ಮನಾಮ ಚೂ, ಚೆ, ಚೋ, ಲಾ.
ವಾಸ್ತು ಟಿಪ್ಸ್: ನಿಮ್ಮ ಜಾತಕದಲ್ಲಿ ನಿಮ್ಮ ಅದೃಷ್ಟದ ಬಣ್ಣ, ಅದೃಷ್ಟದ ದಿಕ್ಕು ಇರುತ್ತದೆ. ಅದನ್ನು ನಿಮ್ಮ ನಿಮ್ಮ ಜೀವನದಲ್ಲಿ ಪಾಲಿಸಿದರೆ ಅಂದುಕೊಂಡ ಎಲ್ಲ ಸಾಧನೆಗಳ ಸಫಲತೆಗೆ ದಾರಿ ಸುಗಮವಾಗುತ್ತದೆ. [ಲೇಖಕರ ಮೊಬೈಲ್ : 9481522011]