ವಿಜಯ್ ಮಲ್ಯ ಜಾತಕ: ಜ್ಯೋತಿಷಿ ವಿಠ್ಠಲ ಭಟ್ ರಿಂದ ಅಚ್ಚರಿಯ ಭವಿಷ್ಯ
Recommended Video
ವಿಜಯ್ ಮಲ್ಯ ಯಶಸ್ವಿ ಉದ್ಯಮಿ ಆಗಿ ಜಗತ್ತಿನ ಕಣ್ಣಿಗೆ ಕಂಡಂಥವರು. ಅವರ ಜೀವನ ಶೈಲಿಯನ್ನು ನೆನಪಿಸಿಕೊಂಡಾಗ ವಿಲಾಸಿ ಜೀವನ ಎಂಬ ಪದ ಬಹಳ ಅಗ್ಗ ಅನ್ನಿಸಿಬಿಡುತ್ತದೆ. ಸದ್ಯಕ್ಕೆ ಇಡೀ ದೇಶದ ಜನರ ಕಣ್ಣಿಗೆ ಖಳನಾಯಕನಂತೆ ಕಾಣುತ್ತಿರುವ ವಿಜಯ್ ಮಲ್ಯ ಅವರ ಭವಿಷ್ಯ ಹೇಗಿದೆ ಎಂಬ ವಿಶ್ಲೇಷಣೆ ಮಾಡಲಾಗಿದೆ.
ವಿಜಯ್ ಮಲ್ಯ ಅವರದು ಶ್ರವಣ ನಕ್ಷತ್ರ, ಎರಡನೇ ಪಾದ, ಮಕರ ರಾಶಿ. ಸದ್ಯಕ್ಕೆ ಸಾಡೇ ಸಾತ್ ಶನಿಯ ಪ್ರಭಾವ ಇದೆ. ಅದರಲ್ಲೂ ಹನ್ನೆರಡನೇ ಸ್ಥಾನದಲ್ಲಿ ಶನಿ ಇದೆ. ಇನ್ನು ಈ ವರ್ಷದ ಅಕ್ಟೋಬರ್ ನಲ್ಲಿ ಗುರು ಹನ್ನೊಂದನೇ ಸ್ಥಾನಕ್ಕೆ ಬರುತ್ತದೆ. ಅದು ಬಹಳ ಅನುಕೂಲಕರವಾದ ಸಮಯ.
ಕಿಂಗ್ ಫಿಷರ್ To ಲಂಡನ್: ಮಲ್ಯ ಪ್ರಕರಣ ನಡೆದು ಬಂದ ಹಾದಿ
ಮನುಷ್ಯನ ಬದುಕನ್ನು ಗಡಿಯಾರಕ್ಕೆ ಹೋಲಿಸ್ತೀವಿ. ಅಂದರೆ ಮೇಲಿರುವ ವ್ಯಕ್ತಿ ಕೆಳಗೂ, ಅದೇ ರೀತಿ ಕೆಳಗಿರುವ ವ್ಯಕ್ತಿ ಮೇಲ್ಮುಖವಾಗಿ ಸಾಗುವುದು ಆ ದೇವರ ನಿಯಮ. ಎಲ್ಲೋ ಕೆಲವರ ಬದುಕಲ್ಲಿ ಗಡಿಯಾರ ಕೆಟ್ಟು ನಿಂತು ಹೋಗುವುದು ಉಂಟು. ಆದರೆ ವಿಜಯ್ ಮಲ್ಯರ ಜಾತಕ ಬೇರೆ ರೀತಿಯಿದೆ. ಅವರಿಗೆ ಈಗ ಶನಿ ಮಹಾದಶೆ ನಡೆಯುತ್ತಿದೆ. ಆ ದಶಾ ಕಾರಕ ದಯಪಾಲಿಸಿರುವ ಸ್ಥಿತಿ ಇಂದಿನದು.
ವಿಜಯ್ ಮಲ್ಯ ಜಾತಕದಲ್ಲಿ ಶನಿ-ರಾಹು ಚೆನ್ನಾಗಿದೆ
ಸದ್ಯಕ್ಕೆ ಶನಿ ದಶೆ ಕುಜ ಭುಕ್ತಿ ಮುಗಿದು, ರಾಹು ಭುಕ್ತಿ ಆರಂಭವಾಗಿದೆ. ರಾಹು ವಿದೇಶಿ ನೆಲವನ್ನು ಸೂಚಿಸಿರುವುದರಿಂದ ತಾಯ್ನಾಡಿನಿಂದ ದೂರ ಇರುವಂತೆ ಆಗಿದೆ. ಶನಿ ಹಾಗೂ ರಾಹು ಪರಸ್ಪರ ಮಿತ್ರರು. ಶನಿಯ ಗುಣವನ್ನೇ ರಾಹು ತೋರಿಸುತ್ತಾನೆ. ಇವರ ಜನ್ಮ ಜಾತಕದಲ್ಲಿ ರಾಶಿಯಿಂದ ಹನ್ನೊಂದನೇ ಸ್ಥಾನದಲ್ಲಿ (ಲಾಭ ಸ್ಥಾನ), ಲಗ್ನದಿಂದ ಕರ್ಮ ಸ್ಥಾನದಲ್ಲಿ ಶನಿಯು ಉತ್ತಮ ಸ್ಥಿತಿಯಲ್ಲಿ ಇದೆ.
ಈ ವರ್ಷದ ಆಗಸ್ಟ್ ನಂತರ ನಿರ್ಣಾಯಕ ಹಂತ
ಶನಿ ಅನುಕೂಲ ಕೊಡ್ತಾನೆ, ಜತೆಗೆ ರಾಹು ಕೂಡ ಅನುಕೂಲ ಮಾಡಿಕೊಡುತ್ತದೆ. ಇವರ ಸ್ಥಿತಿ ನಿರ್ಣಾಯಕ ಹಂತಕ್ಕೆ ಬರುತ್ತದೆ. ಈ ವರ್ಷದ ಅಕ್ಟೋಬರ್ ನಲ್ಲಿ ಗುರು ಬಲ ಬರುತ್ತದೆ. ಜತೆಗೆ ಶನಿ ದಶೆಯಲ್ಲಿ ರಾಹು ಭುಕ್ತಿ ಮುಂದಿನ ವರ್ಷದ ಆಗಸ್ಟ್ ತನಕ ಇರುತ್ತದೆ. ಈ ಸಂದರ್ಭದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವಕಾಶವಿದೆ.
ವಿಜಯ್ ಮಲ್ಯ 2019ರ ಆಗಸ್ಟ್ ವೇಳಗೆ ಭಾರತಕ್ಕೆ ವಾಪಸಾಗಬೇಕು
ಅವರ ಜಾತಕದ ಪ್ರಕಾರ 2019ರ ಆಗಸ್ಟ್ ವೇಳಗೆ ಭಾರತಕ್ಕೆ ವಾಪಸಾಗಬೇಕು. ಮತ್ತು ಎಲ್ಲ ಸಾಲ ತೀರಿಸಬೇಕು. ಆ ಸಾಧ್ಯತೆ ಬಹಳ ಇದೆ. ಇಲ್ಲದಿದ್ದರೆ ಆ ನಂತರ ಶನಿ ದಶೆ ಗುರು ಭಕ್ತಿ ಆರಂಭವಾಗುತ್ತದೆ. ಜತೆಗೆ 2020ರ ಜನವರಿಯಲ್ಲಿ ಜನ್ಮ ರಾಶಿಗೆ ಶನಿ ಪ್ರವೇಶ ಆಗುತ್ತದೆ. ಇದರಿಂದ ಆರೋಗ್ಯದಲ್ಲಿ ಗಂಭೀರವಾದ ಸಮಸ್ಯೆಗಳು ಎದುರಾಗುತ್ತವೆ.
ಭಾರತಕ್ಕೆ ವಾಪಸ್ ಬಂದು ಸಾಲ ತೀರಿಸುತ್ತಾರೆ ಮಲ್ಯ
ಮೊದಲು ಇದ್ದಂತೆ ಇರಲು ಸಾಧ್ಯವಿಲ್ಲ. ಆದರೆ ಈ ವೇಳೆಯಲ್ಲಿ ತಮ್ಮ ಸಾಲ ತೀರಿಸಿಕೊಳ್ಳಲು ಸಕಾಲ. ಇನ್ನು 2022ನೇ ಇಸವಿ ನಂತರ ಬುಧ ದಶೆ ಆರಂಭವಾಗುತ್ತದೆ. ಬುಧನು ಲಗ್ನದಿಂದ ಹನ್ನೊಂದನೇ ಮನೆಯಲ್ಲಿದ್ದು, ಶುಕ್ರ ಗ್ರಹ ಅನುಕೂಲವೂ ಇದೆ. ಆದ್ದರಿಂದ ವಿಜಯ್ ಮಲ್ಯ ಭಾರತಕ್ಕೆ ವಾಪಸ್ ಬರುತ್ತಾರೆ ಹಾಗೂ ತಮ್ಮ ಎಲ್ಲ ಸಾಲವನ್ನು ತೀರಿಸುತ್ತಾರೆ.
2019ರ ಕೊನೆಗೆ ತೀವ್ರತರವಾದ ಆರೋಗ್ಯ ಸಮಸ್ಯೆ
ಆದರೆ, 2019ರ ಕೊನೆಗೆ ಜನ್ಮದಲ್ಲಿ ಶನಿ ಹಾಗೂ ರಾಹು- ಬೃಹಸ್ಪತಿ ಭುಕ್ತಿ ಸಂಧಿ ಕಾಲ ಅಂತಹ ಒಳ್ಳೆಯ ಕಾಲವಲ್ಲ. ಮುಖ್ಯವಾಗಿ ಗಂಭೀರವಾದ ಆರೋಗ್ಯ ಸಮಸ್ಯೆ ಆಗುವ ಸಾಧ್ಯತೆಗಳಿವೆ. ಈಗ ಉತ್ತಮ ಸಮಯ ಇದ್ದು, ಇದರ ಸದ್ಬಳಕೆ ಮಾಡಿಕೊಂಡು, ಸಾಲ ತೀರಿಸಿಕೊಂಡು ಬಿಟ್ಟರೆ ಇನ್ನು ಮೂರ್ನಾಲ್ಕು ವರ್ಷ ಕಳೆದ ಮೇಲೆ ಬುಧ ದಶೆಯಲ್ಲಿ ಬಹಳ ಒಳ್ಳೆ ಕಾಲ ಮತ್ತೆ ಕಾಣಬಹುದು.
ದೈವ ಅನುಕೂಲ ಇದ್ದು, ನೆರವು ಸಿಗುತ್ತದೆ
ವಿಜಯ್ ಮಲ್ಯ ಅವರ ಜಾತಕದಲ್ಲಿ ಲಗ್ನಕ್ಕೆ ಗುರುವಿನ ದೃಷ್ಟಿಯಿದೆ. ಆದ್ದರಿಂದ ಅವರು ದೊಡ್ಡ ಕಷ್ಟಗಳಿಂದ ಹೊರಗೆ ಬರುತ್ತಾರೆ. ವಿಜಯ್ ಮಲ್ಯರಿಂದ ಯಾರೆಲ್ಲ ಅನಧಿಕೃತ ದಾರಿಯಲ್ಲಿ ಉಪಕೃತರಾಗಿರುತ್ತಾರೋ ಎಲ್ಲರನ್ನೂ ಜತೆಗೆ ಸೇರಿಸಿಕೊಂಡೇ ಕಷ್ಟಕ್ಕೆ ಸಿಲುಕಿಸಲಿದ್ದಾರೆ ಎಂಬುದು ಸತ್ಯ. ಸರಿ-ತಪ್ಪುಗಳ ವಿಚಾರ ಕಾನೂನಿಗೆ ಬಿಟ್ಟದ್ದು. ಆದರೆ ಈ ಜಾತಕಕ್ಕೆ ದೈವಬಲ ಇದ್ದು, ಕಷ್ಟದ ಸಮಯದಲ್ಲಿ ಕೈ ಹಿಡಿಯುವ ಸಾಧ್ಯತೆ ಇರುತ್ತದೆ.
ಈಶ್ವರನ ಅನುಗ್ರಹಕ್ಕಾಗಿ ಪೂಜೆ ಮಾಡಿಸಿಕೊಂಡರೆ ಒಳ್ಳೆಯದು
ವಿಜಯ್ ಮಲ್ಯ ಅವರ ಜನ್ಮ ಜಾತಕದ ಪ್ರಕಾರ ಕುಂಭ ಲಗ್ನಕ್ಕೆ ಭಾಗ್ಯಾಧಿಪತಿ ಶುಕ್ರ ಲಾಭ ಸ್ಥಾನದಲ್ಲಿದ್ದು, ಪಂಚಮ ಸ್ಥಾನ ದೃಷ್ಟಿಯಿದೆ. ಶುಕ್ರನ ಜತೆಗೆ ದಶಾಕಾರಕ ಬುಧ ಇದೆ. ಆದ್ದರಿಂದ ಉತ್ತಮವಾದ ಸ್ಥಿತಿ. ಬುಧ ದಶೆ ಬಂದ ಮೇಲೆ ಬಹಳ ಲಾಭ ತರುತ್ತದೆ. ಆದರೆ ಇಲ್ಲಿ ರವಿಯೊಂದಿಗೆ ಬುಧ- ಶುಕ್ರರು ಅಸ್ತ ಆಗಿರುವುದರಿಂದ ಸಹಾಯ ಮಾಡಬೇಕು ಅಂದುಕೊಳ್ಳುವ ಸ್ನೇಹಿತರ ಸಹಾಯ ದೊರೆಯುತ್ತಿಲ್ಲ. ಮಲ್ಯ ಅವರಿಗೆ ಈಶ್ವರನ ಅನುಗ್ರಹ ಕಾಣುತ್ತಿದೆ. ಆ ದೇವಾಲಯದಲ್ಲಿ ಅವರಿಗೆ ಬೇಕಾದವರ ಮೂಲಕ ಆದರೂ ವಿಶೇಷ ಪೂಜೆ ಸಲ್ಲಿಸಿದರೆ ಬಹುತೇಕ ಕಷ್ಟಗಳಿಗೆ ಪರಿಹಾರ ದೊರೆಯುತ್ತದೆ.