ಆತ್ಮ ಅತೃಪ್ತಿಗೊಂಡು ಭಂಗ, ಸಾವು ಹೆಚ್ಚು: ಕೋಡಿ ಶ್ರೀಗಳ ಭವಿಷ್ಯ
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭವಿಷ್ಯವನ್ನು ನುಡಿದಿದ್ದಾರೆ. ಗಣೇಶ ಹಬ್ಬದ ಸಂದರ್ಭದಲ್ಲಿ ಕೋಡಿಶ್ರೀಗಳು ಸಾಮಾನ್ಯವಾಗಿ ಭವಿಷ್ಯವನ್ನು ನುಡಿಯುತ್ತಾರೆ.
ಕೆಲವು ದಿನಗಳ ಹಿಂದೆ, ಶಿವಮೊಗ್ಗ ಜಿಲ್ಲೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕೋಡಿಶ್ರೀಗಳು ಅಲ್ಲೂ ಭವಿಷ್ಯ ನುಡಿದಿದ್ದರು. ಒಂದು ದೇಶವು ಜಗತ್ತಿನ ಭೂಪಟದಿಂದ ಅಳಿಸಿ ಹೋಗಲಿದೆ ಎಂದು ಹೇಳಿದ್ದೆ, ಅದು ನಿಜವಾಗಿದೆ ಎಂದು ಹೇಳಿದ್ದರು.
ಈಗ ಮತ್ತೆ ಭವಿಷ್ಯ ನುಡಿದಿರುವ ಕೋಡಿಶ್ರೀಗಳು, "ಆತ್ಮ ಅತೃಪ್ತಿಗೊಂಡು ಭಂಗವಾಗಿ ಕಾಡುತ್ತವೆ, ಸಾವು ಹೆಚ್ಚಾಗಲಿದೆ"ಎನ್ನುವ ಭವಿಷ್ಯವನ್ನು ನುಡಿದಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಕೋಡಿಶ್ರೀಗಳು ನುಡಿದ ಮೂರನೇ ಭವಿಷ್ಯ ಇದಾಗಿದೆ.
ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ್ದಕ್ಕೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎನ್ನುವ ಭವಿಷ್ಯವನ್ನೂ ಕೋಡಿಶ್ರೀಗಳು ನುಡಿದಿದ್ದಾರೆ. ಶ್ರೀಗಳ ಭವಿಷ್ಯಕ್ಕೆ ಬಿಜೆಪಿಯ ಮುಖಂಡರು ಯಾವರೀತಿ ಪ್ರತ್ರಿಕ್ರಿಯಿಸಲಿದ್ದಾರೆ ಎನ್ನುವುದು ಗೊತ್ತಾಗಬೇಕಿದೆ.

ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳ ಭವಿಷ್ಯ
ಆಗಸ್ಟ್ ಮೊದಲ ವಾರದಲ್ಲಿ ಕೋಲಾರದ ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೋಡಿಮಠದ ಶ್ರೀಗಳು ಕೊರೊನಾ, ರಾಜ್ಯ ರಾಜಕೀಯ, ನೈಸರ್ಗಿಕ ಪ್ರಕೋಪ, ದೇಶದ ಆಗುಹೋಗಿನ ಬಗ್ಗೆ ಭವಿಷ್ಯವನ್ನು ನುಡಿದಿದ್ದರು. ಜೊತೆಗೆ, ನೂತನ ಸಿಎಂ ಬಸವರಾಜ ಬೊಮ್ಮಾಯಿಯವರ ಬಗ್ಗೆ "ರಾಜ್ಯ ರಾಜಕೀಯದ ಬಗ್ಗೆ ಪೂರ್ಣ ಮಂತ್ರಿ ಮಂಡಲ ರಚನೆಯಾದ ನಂತರ ಹೇಳುತ್ತೇನೆ. ದೈವಕೃಪೆ ಇದ್ದರೆ ಬೊಮ್ಮಾಯಿಯವರಿಗೆ ಒಳ್ಳೆಯದಾಗುತ್ತದೆ. ಈಗತಾನೇ ಅವರು ಮುಖ್ಯಮಂತ್ರಿಯಾಗಿದ್ದಾರೆ, ಹಾಗಾಗಿ ಈಗಲೇ ಅಶುಭವನ್ನು ನುಡಿಯಲಾರೆ"ಎಂದು ಹೇಳಿದ್ದರು.
"ರೋಗ ಕಾಯಿಲೆಗಳು ಹೆಚ್ಚಾಗಲಿದೆ, ಕಾರ್ತಿಕದವರೆಗೆ ಮಳೆ ಇರುತ್ತದೆ. ರಾಜ್ಯ ರಾಜಕಾರಣದ ಬಗ್ಗೆ ನಿಧಾನವಾಗಿ ಉತ್ತರಿಸುತ್ತೇನೆ, ಒಂದೇ ಬಾರಿ ಎಲ್ಲವನ್ನೂ ಹೇಳುವುದು ಬೇಡ. ಕೊರೊನಾ ಹಾವಳಿ ಮುಂದಿನ ದಿನಗಳಲ್ಲಿ ಹೆಚ್ಚಾಗಲಿದೆ" ಎಂದೂ ಕೋಡಿಶ್ರೀಗಳು ಹೇಳಿದ್ದರು.

ಜಗತ್ತಿನಲ್ಲಿ ಒಂದು ದೇಶ ಭೂಪಟದಿಂದ ಅಳಿಸಿಹೋಗಲಿದೆ
ಇದಾದ ನಂತರ, ಶಿವಮೊಗ್ಗ ಜಿಲ್ಲೆಯ ಜಡೆ ಸಂಸ್ಥಾನದ ಮಠದ ಜಗದ್ಗುರು ಕೆಂಪಿನ ಸಿದ್ದವೃಷಭೇಂದ್ರ ಸ್ವಾಮೀಜಿ ಕರ್ತೃ ಗದ್ದುಗೆಗೆ ಭೇಟಿ ನೀಡಿದ ನಂತರ, ''ಜಗತ್ತಿನಲ್ಲಿ ಒಂದು ದೇಶ ಭೂಪಟದಿಂದ ಅಳಿಸಿಹೋಗಲಿದೆ ಎಂದು 2 ವರ್ಷಗಳ ಹಿಂದೆ ಭವಿಷ್ಯ ನುಡಿದಿದ್ದೆ. ಅದರಂತೆ ಇಂದು ಅಫ್ಘಾನಿಸ್ತಾನ, ತಾಲಿಬಾನ್ ವಶವಾಗುತ್ತಿದೆ. ಮುಂದಿನ 5 ವರ್ಷಗಳವರೆಗೂ ಕೊರೊನಾ ಸಂಪೂರ್ಣ ನಾಶವಾಗುವುದಿಲ್ಲ, ಆದರೆ, ಜಗತ್ತನ್ನು ತೀವ್ರವಾಗಿ ಕಾಡುತ್ತಿರುವ ಕೊರೊನಾ ವ್ಯಾಧಿಯಿಂದ ಭಾರತಕ್ಕೆ ಯಾವುದೇ ಧಕ್ಕೆ ಇಲ್ಲ".
"ಕುಂಭ ರಾಶಿಯಲ್ಲಿ ಗುರು ಪ್ರವೇಶಿಸುವುದರಿಂದ ಮಳೆ ಹೆಚ್ಚು ಬೀಳಲಿದೆ. ಕಾರ್ತಿಕ ಮಾಸದವರೆಗೂ ನೆರೆ, ಮತ್ತಿತರ ವಿಕೋಪಗಳಿಂದ ಜನ ತತ್ತರಿಸಲಿದ್ದಾರೆ. ಅಕಾಲಿಕ ಮಳೆ, ನೆರೆ, ಬರದಿಂದ ಜನ ತತ್ತರಿಸಲಿದ್ದು, ಪ್ರಕೃತಿ ವಿಕೋಪಕ್ಕೆ ಸಿದ್ಧರಾಗಬೇಕಿದೆ" ಎಂದು ಕೋಡಿ ಶ್ರೀಗಳು ಹೇಳಿದ್ದರು.

ಕೊರೊನಾ ರೂಪಾಂತರಗೊಂಡು ಇನ್ನೂ ಕೆಲವು ವರ್ಷ ಮನುಕುಲವನ್ನು ಕಾಡಲಿದೆ
ಈಗ, ಅರಸೀಕೆರೆಯ ಮೂಡಾಳು ಗೌರಮ್ಮ ಕ್ಷೇತ್ರದಲ್ಲಿ ಮಾತನಾಡುತ್ತಿದ್ದ ಕೋಡಿಶ್ರೀಗಳು, "ಆತ್ಮ ಅತೃಪ್ತಿಗೊಂಡು ಭಂಗವಾಗಿ ಕಾಡುತ್ತಿದೆ. ಹೀಗಾಗಿ, ಸಾವು ಹೆಚ್ಚಾಗಲಿದೆ. ಕೊರೊನಾ ರೂಪಾಂತರಗೊಂಡು ಇನ್ನೂ ಮೂರ್ನಾಲ್ಕು ವರ್ಷ ಮನುಕುಲವನ್ನು ಕಾಡಲಿದೆ. ಅಫ್ಘಾನಿಸ್ತಾನ ಭೂಪಟದಿಂದ ಕಾಣೆಯಾಗುತ್ತದೆ ಎಂದು ಹೇಳಿದ್ದೆ. ಭಯ ಎನ್ನುವುದು ವಿಶ್ವದಲ್ಲಿ ದಿನ ಹೋದಂತೆ ಹೆಚ್ಚಾಗಲಿದೆ"ಎಂದು ಕೋಡಿ ಶ್ರೀಗಳು ಹೇಳಿದ್ದಾರೆ.

ಕೊರೊನಾದ ಸಮಯದಲ್ಲಿ ಯಡಿಯೂರಪ್ಪನವರನ್ನು ಕೆಳಗಿಳಿಸಬೇಡಿ
"ಕೊರೊನಾದ ಸಮಯದಲ್ಲಿ ಯಡಿಯೂರಪ್ಪನವರನ್ನು ಕೆಳಗಿಳಿಸಬೇಡಿ ಎಂದು ಸ್ವಾಮೀಜಿಗಳು ಒತ್ತಾಯಿಸಿದ್ದರು. ಅವರ ಮಾತಿಗೆ ಬೆಲೆಕೊಡದೇ ಧಿಕ್ಕರಿಸಲಾಯಿತು, ಅದರ ಫಲ ಸದ್ಯದಲ್ಲೇ ಸಿಗಲಿದೆ. ಅದು ಹೇಗೆ ಎಂದು ಈಗ ನಾನು ಹೇಳುವುದಿಲ್ಲ, ಕಾದು ನೋಡಿ"ಎಂದು ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭವಿಷ್ಯವನ್ನು ನುಡಿದಿದ್ದಾರೆ.












Click it and Unblock the Notifications