ಉದ್ಯೋಗ ಬದಲಾವಣೆಗೆ ಸೂಕ್ತ ಕಾಲವೆ?: ಇಲ್ಲಿದೆ ಜ್ಯೋತಿಷ್ಯ ಸಲಹೆ
ಉದ್ಯೋಗ ಬದಲಾವಣೆ ಮಾಡಬೇಕು ಅಂತಿದೀನಿ. ಯಾವಾಗ ಪ್ರಯತ್ನ ಪಡಬಹುದು? ನಾನು ಅಂದುಕೊಂಡಂತೆ ಸಂಬಳ- ಸವಲತ್ತು ಸಿಗುತ್ತದಾ? ಈಗ ಸೇರುವ ಹೊಸ ಕೆಲಸದಲ್ಲಿ ಅಭಿವೃದ್ಧಿ ಕಾಣಬಹುದಾ? ಹೀಗೆ ಪ್ರಶ್ನೆಗಳನ್ನು ಕೇಳಿ ಸಾಕಷ್ಟು ಮಂದಿ ನನಗೆ ಕರೆ ಮಾಡುತ್ತಾರೆ. ಕೆಲವರು ಇ ಮೇಲ್ ಕಳಿಸುತ್ತಾರೆ.
ಅಶ್ವಿನಿಯಿಂದ ಚಿತ್ತಾ ನಕ್ಷತ್ರದವರೆಗೆ ಜ್ಯೋತಿಷ್ಯ ರೀತ್ಯಾ ಗುಣ- ಸ್ವಭಾವ
ನಾನಾ ರಾಶಿಗಳು, ನಕ್ಷತ್ರದವರಿಗೆ ಈ ಪ್ರಶ್ನೆಗಳಿಗೇ ನಾನು ಪದೇಪದೇ ಉತ್ತರ ಸಹ ಹೇಳ್ತೀನಿ. ಇದೇ ವಿಚಾರವಾಗಿ ಒಂದು ಲೇಖನವೇ ಮಾಡಿದರೆ ಹೇಗೆ ಎಂದು ಅನ್ನಿಸಿದ್ದರಿಂದ ಉದ್ಯೋಗ ಬದಲಾವಣೆಗೆ ಇದು ಸೂಕ್ತ ಕಾಲವೇ? ಎಂಬ ವಿಚಾರವಾಗಿ ಲೇಖನ ಬರೆಯುತ್ತಿದ್ದೇನೆ. ಅದರಲ್ಲಿ ಹನ್ನೆರಡು ರಾಶಿಯವರಿಗೂ ಅನುಕೂಲ ಆಗುವಂಥ ಮಾಹಿತಿ ಇಲ್ಲಿದೆ.
ಜ್ಯೋತಿಷ್ಯ: ಸ್ವಾತಿಯಿಂದ ರೇವತಿ ನಕ್ಷತ್ರದವರೆಗೆ ಗುಣ- ಸ್ವಭಾವ
ನಾವು ಅದೇನೇ ಗೋಚಾರ ನೋಡಿ ಹೇಳಿದರೂ ನಿಮ್ಮ ಪ್ರಯತ್ನಕ್ಕೆ ಮುಂಚೆ ಒಮ್ಮೆ ಜಾತಕ ಪರಿಶೀಲನೆ ಮಾಡಿಸಿಕೊಳ್ಳುವುದು ಉತ್ತಮ. ಕೆಲವು ಯೋಗ-ಬಾಧೆಗಳು ಅಥವಾ ದಶಾ ಸಂಧಿಕಾಲಗಳನ್ನು ಪರಿಶೀಲಿಸ ಬೇಕಾಗುತ್ತದೆ. ಜ್ಞಾನವಂತರಾದ ಜ್ಯೋತಿಷಿಗಳನ್ನು ಒಮ್ಮೆ ಭೇಟಿಯಾಗಿ. ಉಳಿದಂತೆ ಅಂಥ ಗಂಭೀರವಾದ ನಿರ್ಧಾರಕ್ಕೆ ಈ ಭವಿಷ್ಯ ಖಂಡಿತಾ ಸಹಾಯಕ್ಕೆ ಬರುತ್ತದೆ.
ಮೇಷ
ಮೇಷ ರಾಶಿಯವರಿಗೆ ಏಳನೇ ಮನೆ ಯಲ್ಲಿ ಗುರು ಇದೆ. ಆದರೂ ಉದ್ಯೋಗ ಬದಲಾವಣೆ ಚಿಂತಿಸಿದ್ದರೆ ಇನ್ನೂ ಒಂದೆರಡು ತಿಂಗಳು. ಅಂದರೆ ಮಾರ್ಚ್ ವರೆಗೆ ಕಾಯುವುದು ಉತ್ತಮ. ಏಕೆಂದರೆ ಜನವರಿ ಕೊನೆಯಲ್ಲಿ ಇರುವ ಖಂಡಗ್ರಾಸ ಚಂದ್ರ ಗ್ರಹಣ ನಿಮಗೆ ಶುಭವಾಗಿಲ್ಲ. ಆದ್ದರಿಂದ ಸ್ವಲ್ಪ ತಾಳ್ಮೆಯಿಂದ ಕಾಯಿರಿ. ಶಿಕ್ಷಕರು, ಉಪನ್ಯಾಸಕರು, ವಕೀಲರು ಉದ್ಯೋಗ ಬದಲಾವಣೆ ಮಾಡಬೇಕೆಂದು ಇರುವವರು ಸ್ವಲ್ಪ ಕಾಯಬೇಕು.
ವೃಷಭ
ನೀವಂತೂ ಕೆಲಸ ಬದಲಾಯಿಸುವ ಬಗ್ಗೆ ಯೋಚನೆ ಕೂಡ ಮಾಡಬೇಡಿ. ನಿಮಗೆ ಬೇಕಾದ ಕಡೆ ಭರವಸೆ ಕೊಟ್ಟಿದ್ದಾರೆ ಅಂತಾದರೆ, ನಿಮ್ಮ ಕೈಗೆ ಆಫರ್ ಲೆಟರ್ ಸಿಕ್ಕು, ಎಲ್ಲವೂ ಅಂತಿಮ ಆಗುವವರೆಗೆ ಇರುವ ಕೆಲಸವನ್ನು ಬಿಡುವ ಯೋಚನೆ ಕೂಡ ಮಾಡಬೇಡಿ. ಹಾಗೂ ಬದಲಾವಣೆ ಮಾಡ್ತೀನಿ ಅಂತಾದರೆ ಫೆಬ್ರವರಿ ಹದಿನೈದರೊಳಗೆ ಮಾಡಿ.
ಮಿಥುನ
ನಿಮಗೆ ಕೆಲಸ ಬದಲಾವಣೆ ವಿಚಾರದಲ್ಲಿ ತುಂಬ ತೊಂದರೆ ಆಗಲಿಕ್ಕಿಲ್ಲ. ಆದರೆ ನೀವು ಯಾವ ಕ್ಷೇತ್ರದಲ್ಲಿದ್ದೀರಿ ಎಂಬುದರ ಮೇಲೆ ಇದು ಆಧಾರ ಪಟ್ಟಿರುತ್ತದೆ. ಸಾಫ್ಟ್ ವೇರ್ ಕ್ಷೇತ್ರದಲ್ಲಿ ಇರುವವರು ಕೆಲಸ ಬದಲಾಯಿಸುವುದಿದ್ದರೆ ಎಚ್ಚರ. ಏಕೆಂದರೆ ದ್ವಂದ್ವ- ಗೊಂದಲಗಳಾಗುತ್ತವೆ.
ಕರ್ಕಾಟಕ
ಟ್ರಾನ್ಸ್ ಪೋರ್ಟ್ ವ್ಯವಹಾರದಲ್ಲಿ ಇರುವವರು, ಟ್ರಾವೆಲ್ಸ್ ನಲ್ಲಿ ಕೆಲಸ ಮಾಡುತ್ತಿರುವವರು, ಆ ಇಲಾಖೆಯಲ್ಲಿ ಇರುವವರಿಗೆ ತೊಂದರೆ ಇಲ್ಲ. ಇನ್ನು ಈ ಬಾರಿಯ ಗ್ರಹಣ ನಿಮ್ಮ ಪಾಲಿಗೆ ಅಷ್ಟು ಚೆನ್ನಾಗಿಲ್ಲ. ಆದ್ದರಿಂದ ಇನ್ನೂ ಒಂದೆರಡು ತಿಂಗಳು (ಮಾರ್ಚ್ ವರೆಗೆ) ಹೊಸ ಕೆಲಸಕ್ಕೆ ಪ್ರಯತ್ನ ಮಾಡಬೇಡಿ.
ಸಿಂಹ
ನೀವು ಯಾರೇನೇ ಹೇಳಿದರೂ ಇರುವ ಕೆಲಸ ಮಾತ್ರ ಬಿಡಬೇಡಿ. ಇನ್ನು ಉದ್ಯೋಗ ಸ್ಥಳದಲ್ಲಿ ಎಷ್ಟು ಸಾಧ್ಯವೋ ಅಷ್ಟು ಮೌನವಾಗಿರಿ. ಇನ್ನೊಬ್ಬರ ಸಹಾಯಕ್ಕೆ ಹೋಗ್ತೀನಿ, ಮತ್ತೊಬ್ಬರ ಪರವಾಗಿ ಮಾತನಾಡ್ತೀನಿ ಅನ್ನೋದೆಲ್ಲ ಬೇಡವೇ ಬೇಡ. ಒಟ್ಟಾರೆಯಾಗಿ ಇದ್ದೂ ಇಲ್ಲದಂತೆ ಕೆಲಸ ಮಾಡಿಕೊಂಡು ಹೋಗಿ.
ಕನ್ಯಾ
ಉದ್ಯೋಗ ಬದಲಾವಣೆಗೆ ಇದು ಸೂಕ್ತ ಸಮಯ. ಸರಕಾರಿ ನೌಕರಿಯಲ್ಲಿದ್ದು, ಬಡ್ತಿಗೆ ಪ್ರಯತ್ನಿಸುತ್ತಿದ್ದರೆ ಹಾಗೂ ವರ್ಗಾವಣೆ ಪಡೆದುಕೊಳ್ಳುವುದಕ್ಕೆ ಇದು ಸರಿಯಾದ ಸಮಯ. ಇನ್ನು ಸರಕಾರಿ ನೌಕರಿಗೆ ಪ್ರಯತ್ನ ಪಡುವವರಿದ್ದರೆ ಕೂಡ ಒಂದಿಷ್ಟು ಹೆಚ್ಚು ಶ್ರಮ ಹಾಕಿದರೆ ಅಂದುಕೊಂಡ ಕಾರ್ಯದಲ್ಲಿ ಜಯ ಪಡೆಯುತ್ತೀರಿ.
ತುಲಾ
ನೀವು ಸಾಫ್ಟ್ ವೇರ್ ಗೆ ಸಂಬಂಧಿಸಿದ ಅಥವಾ ಎಲೆಕ್ಟ್ರಿಕಲ್- ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರು, ಹೋಟೆಲ್ ಉದ್ಯಮದಲ್ಲಿ ಕೆಲಸ ಮಾಡುತ್ತಿರುವವರು ಇನ್ನೆರಡು ತಿಂಗಳಲ್ಲಿ ಉದ್ಯೋಗ ಬದಲಾವಣೆ ಮಾಡುವುದಿದ್ದರೆ ಮಾಡಿಕೊಂಡು ಬಿಡಿ. ಆ ನಂತರ ಸ್ವಲ್ಪ ಕಷ್ಟವಾಗುತ್ತದೆ.
ವೃಶ್ಚಿಕ
ಇನ್ನು ಎರಡು ತಿಂಗಳು ಉದ್ಯೋಗ ಬದಲಾವಣೆ ಮಾಡಲೇಬೇಡಿ. ವ್ಯವಹಾರ ಮಾಡುತ್ತಿರುವವರು ಒಂದನ್ನು ಬಿಟ್ಟು ಮತ್ತೊಂದನ್ನು ಮಾಡುವುದಾದರೆ ಅಡ್ಡಿಯಿಲ್ಲ. ಆದರೆ ಉದ್ಯೋಗದಲ್ಲಿ ಇರುವವರು ಯಾವ ಕಾರಣಕ್ಕೂ ಬದಲಾವಣೆ ಮಾಡಲು ಹೋಗಬೇಡಿ. ಏಕೆಂದರೆ ರವಿಯ ಬಲ ನಿಮಗಿಲ್ಲ.
ಧನುಸ್ಸು
ಧನುಸ್ಸು ರಾಶಿಯವರು ಕೆಲಸ ಹುಡುಕುತ್ತಿರುವುದು ಹೌದಾದರೆ ಈಗಿರುವ ಕೆಲಸಕ್ಕಿಂತ ದೂರದ ಸ್ಥಳದಲ್ಲಿ ಆದರೆ ಯಾವ ಕಾರಣಕ್ಕೆ ಹೋಗದಿರುವುದು ಉತ್ತಮ. ಸ್ವಲ್ಪ ಹೆಚ್ಚೇ ಸಂಬಳ ಸಿಗುತ್ತದೆ ಎಂಬ ಆಸೆಗೆ ಬಿದ್ದು, ದೂರ ಪ್ರಯಾಣ ಮಾಡುವ ಕೆಲಸಕ್ಕೆ ಹೋಗದಿರುವುದು ಉತ್ತಮ. ಇನ್ನೊಂದು ವಿಚಾರ ಏನೆಂದರೆ ಹತ್ತಿರದಲ್ಲೇ ಉದ್ಯೋಗ ಸಿಗುವ ಅವಕಾಶ ಇದೆ. ಒಂದಿಷ್ಟು ಶಿಫಾರಸು ಬೇಕಾಗುತ್ತದೆ, ಅದು ಸಿಗುತ್ತದೆ.
ಮಕರ
ಈ ರಾಶಿಯವರು ಸರಕಾರಿ ನೌಕರಿ ಮಾಡುತ್ತಿರುವವರಾದರೆ ಬದಲಾವಣೆಗೆ ಪ್ರಯತ್ನಿಸಬೇಡಿ. ಖಾಸಗಿ ನೌಕರಿ ಮಾಡುತ್ತಿದ್ದರೆ, ಅದರಲ್ಲೂ ಅಕೌಂಟ್ಸ್ ಅಥವಾ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಲ್ಲಿ ಬದಲಾವಣೆಗೆ ಪ್ರಯತ್ನ ಮಾಡಬಹುದು. ಉಳಿದ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರು ಯಾವ ಬದಲಾವಣೆಗೂ ಪ್ರಯತ್ನಿಸಬೇಡಿ.
ಕುಂಭ
ನೀವು ಇನ್ನೂ ಎರಡು ತಿಂಗಳು ಕಾಯ್ದರೆ ಉದ್ಯೋಗದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಕನ್ ಸ್ಟ್ರಕ್ಷನ್ ಎಂಜಿನಿಯರ್ ಗಳು ಕೆಲಸ ಬದಲಿಸುವುದಾದರೆ ಬದಲಿಸಬಹುದು. ಆದರೆ ಎಲ್ಲದರಲ್ಲೂ ನಿಧಾನವಾಗುತ್ತದೆ. ಉಳಿದ ವಿಭಾಗದವರಿಗೆ ಸಾಧ್ಯವಾಗಲಿಕ್ಕಿಲ್ಲ ಎಂದು ಕಾಣಿಸುತ್ತದೆ.
ಮೀನ
ಲಾಯರ್ಸ್, ವಾರ್ತಾ ವಾಚಕರು, ಮಾತು ಪ್ರಧಾನವಾಗಿರುವ ಕ್ಷೇತ್ರದಲ್ಲಿ ಇರುವವರಿಗೆ ಸ್ವಲ್ಪ ಹಿನ್ನಡೆ ಆಗುತ್ತದೆ. ಗ್ರಹಣ ಕಳೆದ ಹದಿನೈದು ದಿನಗಳ ನಂತರ ಉದ್ಯೋಗ ಅವಕಾಶ ಸಿಗಬಹುದು. ಆದರೆ ನಿಮಗೆ ಉದ್ಯೋಗ ಬದಲಾವಣೆ ಮಾಡಲು ಈಗ ಸಮಯ ಸೂಕ್ತವಲ್ಲ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.