ಬಿಪಿನ್ ರಾವತ್ ದುರ್ಮರಣ: 13 ತಿಂಗಳ ಹಿಂದೆಯೇ ನುಡಿಯಲಾಗಿದ್ದ ಸ್ಪೋಟಕ ಭವಿಷ್ಯ
ತಮಿಳುನಾಡಿನ ಕುನೂರು ಸಮೀಪ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ದೇಶದ ಮೊದಲ ಸಿಡಿಎಸ್ (ಚೀಫ್ ಆಫ್ ಡಿಫೆನ್ಸ್ ಸ್ಟಾಫ್) ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ಅವರ ಅಂತಿಮ ಸಂಸ್ಕಾರ ಶುಕ್ರವಾರ (ಡಿ 10) ನೆರವೇರಿದೆ. ಒಟ್ಟು ಹದಿಮೂರು ಜನ ಈ ದುರ್ಘಟನೆಯಲ್ಲಿ ಮೃತ ಪಟ್ಟಿದ್ದರು.
ರಾವತ್ ದಂಪತಿಗಳ ಅಂತ್ಯ ಸಂಸ್ಕಾರ ಸಕಲ ಸೇನಾ ಗೌರವಗಳೊಂದಿಗೆ ದೆಹಲಿಯ ಕಂಟೋನ್ಮೆಂಟ್ ಪ್ರದೇಶದ ಚಿತಾಗಾರದಲ್ಲಿ ನಡೆದಿದೆ. ಸುಮಾರು ಹತ್ತು ಕಿಲೋಮೀಟರ್ ಸಾಗಿದ ಅಂತಿಮಯಾತ್ರೆಯ ಮೆರವಣಿಗೆಯುದ್ದಕ್ಕೂ ಸಾವಿರಾರು ಜನ ಪಾರ್ಥಿವ ಶರೀರವನ್ನು ಹಿಂಬಾಲಿಸಿದ್ದರು.
ದೇಶ ವಿದೇಶದ ಕೋಟ್ಯಂತರ ಜನರು ಅಂತಿಮ ಸಂಸ್ಕಾರವನ್ನು ವೀಕ್ಷಿಸಿದ್ದರು. ಇವೆಲ್ಲದರ ನಡುವೆ, ಜನವರಿಯಲ್ಲಿ ಪ್ರಕಟಗೊಂಡಿದ್ದ ಮ್ಯಾಗಜೀನ್ ಒಂದರಲ್ಲಿ ಸೇನಾ ಮುಖ್ಯಸ್ಥರ ಸಾವಿನ ಬಗ್ಗೆ ಉಲ್ಲೇಖ ಮಾಡಿರುವುದು ಭಾರೀ ಸಂಚಲನ ಮೂಡಿಸುತ್ತಿದೆ.
ಈ ಹಿಂದೆ ಕೋಡಿಮಠದ ಶ್ರೀಗಳು ಮತ್ತು ಮೈಲಾರ ಭವಿಷ್ಯದಲ್ಲೂ ಗಣ್ಯವ್ಯಕ್ತಿಗಳ ಸಾವು ಎನ್ನುವ ಭವಿಷ್ಯವನ್ನು ನುಡಿಯಲಾಗಿತ್ತು. ಆದರೆ, ಜ್ಯೋತಿಷ್ಯ ಮಾಸಿಕದಲ್ಲಿ ಸೇನಾ ಮುಖ್ಯಸ್ಥರೆಂದೇ ಉಲ್ಲೇಖಿಸಲಾಗಿದೆ. ಜೊತೆಗೆ, ಡಿಸೆಂಬರ್ ತಿಂಗಳ ಒಂದು ದಿನ ಭಾರೀ ಗಂಡಾತರ ಎದುರಾಗಲಿದೆ ಎಂದೂ ಉಲ್ಲೇಖಿಸಲಾಗಿದೆ. ಮುಂದೆ ಓದಿ..

ಮಾಡರ್ನ್ ಅಸ್ಟ್ರಾಲಜಿ ಜ್ಯೋತಿಷ್ಯ ಮಾಸ ಪತ್ರಿಕೆ
ಮಾಡರ್ನ್ ಅಸ್ಟ್ರಾಲಜಿ ಜ್ಯೋತಿಷ್ಯ ಮಾಸ ಪತ್ರಿಕೆಯ ಜನವರಿ 2021ರ ಆವೃತ್ತಿಯಲ್ಲಿ ಅವಘಡದ ಬಗ್ಗೆ ಉಲ್ಲೇಖವಾಗಿದೆ. ಪ್ರಸಿದ್ದ ಜ್ಯೋತಿಷಿ ದಿವಂಗತ ಬಿ.ವಿ.ರಾಮನ್ ಆರಂಭಿಸಿದ್ದ ಮ್ಯಾಗಜೀನ್ ಇದಾಗಿದೆ. ಜೊತೆಗೆ, ಮೇ 26ರಿಂದ ಡಿಸೆಂಬರ್ 4ರ ಅವಧಿಯಲ್ಲಿ ಜನರು ಎಚ್ಚರಿಕೆಯಿಂದ ಇರಬೇಕು ಎನ್ನುವ ಅಂಶವೂ ಆ ಮ್ಯಾಗಜೀನ್ ನಲ್ಲಿ ಉಲ್ಲೇಖವಾಗಿದೆ. ಜೊತೆಗೆ, ಡಿಸೆಂಬರ್ ಹದಿನಾಲ್ಕರಂದು ದುಷ್ಟ ಶಕ್ತಿಗಳು ಕ್ರಿಯಾಶೀಲವಾಗುವ ಸಾಧ್ಯತೆಯಿಂದಾಗಿ ಆ ದಿನ ಅತ್ಯಂತ ಜಾಗರೂಕರಾಗಿರಬೇಕು ಎಂದು ಮ್ಯಾಗಜೀನ್ ನಲ್ಲಿ ಹೇಳಲಾಗಿದೆ. (ಚಿತ್ರದಲ್ಲಿ: ಡಾ. ರಾಮನ್)

ನವೆಂಬರ್ 2020ರಲ್ಲಿ ಬರೆಯಲಾಗಿದ್ದ ಅಂಶ
ನವೆಂಬರ್ 2020ರಲ್ಲಿ ಬರೆಯಲಾಗಿದ್ದ ಅಂಶವನ್ನು ಜನವರಿ 2021ರ ಆವೃತ್ತಿಯಲ್ಲಿ ಪ್ರಕಟಿಸಲಾಗಿದೆ. ಬೆಂಗಳೂರಿನಿಂದ ಪ್ರಕಾಶನಗೊಳ್ಳುವ ಈ ಮ್ಯಾಗಜೀನ್ ಅನ್ನು ದಿ.ರಾಮನ್ ಅವರ ಪುತ್ರಿ ಗಾಯತ್ರಿ ದೇವಿ ವಾಸುದೇವ್ ಅವರು ಮುನ್ನಡೆಸುತ್ತಿದ್ದಾರೆ. ಮೂರು ದಶಕಗಳ ಅಗಾಧ ಅನುಭವವನ್ನು ಹೊಂದಿರುವ ದಿ. ರಾಮನ್ ಅವರು ಯಾರಿಗೂ ವೈಯಕ್ತಿಕವಾಗಿ ಜ್ಯೋತಿಷ್ಯ ಹೇಳುವ ಪರಿಪಾಠವನ್ನು ಇಟ್ಟುಕೊಂಡಿರಲಿಲ್ಲ ಎಂದು ಅವರ ಪುತ್ರಿ ಹೇಳಿದ್ದಾರೆ.

ಸೇನ ಮುಖ್ಯಸ್ಥರೂ ಆಗಿರಬಹುದು
ಕ್ರೈಂ ಮತ್ತು ಹಿಂಸಾಚಾರಗಳು ದೇಶದಲ್ಲಿ ಕಮ್ಮಿಯಾಗಲಿವೆ. ಆದರೆ, ಇನ್ನೊಂದೆಡೆ ಪ್ರಧಾನಮಂತ್ರಿ ಮತ್ತು ಇತರ ಸಂಪುಟ ಸಹದ್ಯೋಗಿಗಳ ಭದ್ರತೆ ಹೆಚ್ಚಿಸುವ ಅನಿವಾರ್ಯತೆ ಎದುರಾಗಲಿದೆ. ದೇಶದ ಕನಿಷ್ಠ ಇಬ್ಬರು ಉಚ್ಚ ನಾಯಕರ ಮೇಲೆ ದಾಳಿ ನಡೆಯಬಹುದು/ದುರ್ಮರಣಕ್ಕೆ ಒಳಗಾಗಬಹುದು. ಆ ಇಬ್ಬರು ನಾಯಕರಲ್ಲಿ ಸೇನಾ ಮುಖ್ಯಸ್ಥರೂ ಆಗಿರಬಹುದು ಎಂದು ಅತ್ಯಂತ ಸ್ಪಷ್ಟವಾಗಿ ಈ ನಿಯತಕಾಲಿಕದಲ್ಲಿ ಬರೆಯಲಾಗಿದೆ.

ಕೇತು ಗ್ರಹದ ಪಥಸಂಚಲನದಿಂದಾಗಿ, ಅಂದರೆ ಜುಲೈ 25ರ ನಂತರ ಈ ಘಟನೆ
ಕೇತು ಗ್ರಹದ ಪಥಸಂಚಲನದಿಂದಾಗಿ, ಅಂದರೆ ಜುಲೈ 25ರ ನಂತರ ಈ ಘಟನೆ ನಡೆಯಬಹುದು. ಹಾಗಾಗಿ, ಡಿಸೆಂಬರ್ ಹದಿನಾಲ್ಕು ಎನ್ನುವುದು ಗಡುವು ಎಂದು ಆ ನಿಯತಕಾಲಿಕದಲ್ಲಿ ಉಲ್ಲೇಖವಾಗಿದೆ. ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರ ಸೇನಾ ಸಿಬ್ಬಂದಿ ಮೃತ ಪಟ್ಟಿರುವುದಕ್ಕೂ, ಈ ಜ್ಯೋತಿಷ್ಯಕ್ಕೂ ತಾಳೆಯಾಗುತ್ತಿದೆ. ಹಾಗಾಗಿ, ಜ್ಯೋತಿಷ್ಯ, ಭವಿಷ್ಯ, ಪಂಚಾಂಗದ ಬಗ್ಗೆ ಯಾರೂ ಕೀಳಾಗಿ ಮಾತನಾಡಬೇಡಿ ಎನ್ನುವ ಚರ್ಚೆಯೂ ಸಾಮಾಜಿಕ ತಾಣದಲ್ಲಿ ಜೋರಾಗಿ ನಡೆಯುತ್ತಿದೆ. (ಚಿತ್ರದಲ್ಲಿ: ಗಾಯತ್ರಿ ದೇವಿ ವಾಸುದೇವ್ )












Click it and Unblock the Notifications