ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯರಿಂದ ನರೇಂದ್ರ ಮೋದಿ ಪ್ರಮಾಣ ವಚನದ ಮುಹೂರ್ತ ವಿಶ್ಲೇಷಣೆ
Recommended Video
ಎರಡನೇ ಅವಧಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಮೇ 30ನೇ ತಾರೀಕು, ಗುರುವಾರ ರಾತ್ರಿ 7 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಿಗದಿ ಆಗಿದೆ. ಮುಂದಿನ ಐದು ವರ್ಷಗಳು ಹೇಗಿರಲಿದೆ ಎಂಬುದನ್ನು ಸೂಚಿಸುವಂಥ ದಿಕ್ಸೂಚಿ ಕ್ಷಣ ಇದು. ಆ ದಿನದ ಜ್ಯೋತಿಷ್ಯ ವಿಶ್ಲೇಷಣೆ ಬಗ್ಗೆ ನಿಮಗೆ ಒಂದಿಷ್ಟು ಮಾಹಿತಿ ಇರಲಿ ಎಂಬುದು ನನ್ನ ಉದ್ದೇಶ.
ಆ ಸಮಯಕ್ಕೆ ವೃಶ್ಚಿಕ ಲಗ್ನ. ಅಂದರೆ ಅನೂರಾಧ ನಕ್ಷತ್ರ ಮೂರನೇ ಪಾದದಲ್ಲೇ ಲಗ್ನ. ಅದೇ ರಾಶಿಯಲ್ಲಿ ಗುರು ಇದ್ದಾನೆ. ರೇವತಿ ನಕ್ಷತ್ರ ನಾಲ್ಕನೇ ಪಾದದಲ್ಲಿ ಚಂದ್ರ ಇದ್ದಾನೆ. ಲಗ್ನಕ್ಕೆ ಸಪ್ತಮದಲ್ಲಿ ರವಿ, ಬುಧ. ಆರನೇ ಮನೆಯಲ್ಲಿ ಶುಕ್ರ. ಎಂಟರಲ್ಲಿ ರಾಹುವಿನ ಜತೆಗೆ ಕುಜ. ಇನ್ನು ದ್ವಿತೀಯ ಸ್ಥಾನದಲ್ಲಿ ಶನಿಯ ಜತೆಗೆ ಕೇತು ಇದ್ದಾನೆ.
ಈ ಮುಹೂರ್ತಕ್ಕೆ ಶುಭಾಶುಭ ಫಲಗಳೆರಡೂ ಇವೆ. ಲಗ್ನದಲ್ಲಿ ಗುರುವಿದ್ದಾನೆ. ಅದು ಬಲ. ಆದರೆ ಲಗ್ನಕ್ಕೆ ಅಷ್ಟಮ ಸ್ಥಾನದಲ್ಲಿ ಕುಜ ಇರುವುದರಿಂದ ಇದು ಯುದ್ಧ ಸ್ಥಿತಿಯನ್ನು ಸೂಚಿಸುತ್ತದೆ. ಅದು ಸಾಮಾನ್ಯವಾದ ಯುದ್ಧವಲ್ಲ, ನಿರೀಕ್ಷೆಗೆ ಮೀರಿದ ಯುದ್ಧ. ಸ್ವತಃ ನರೇಂದ್ರ ಮೋದಿ ಅವರೇ ಬಲ ಪ್ರದರ್ಶನಕ್ಕೆ ಇಳಿಯಬೇಕಾಗುತ್ತದೆ. ದೇಶದ ಒಳಗಿನ ಹಾಗೂ ಹೊರಗಿನ ಶತ್ರುಪಡೆ ಮೇಲಿಂದ ಮೇಲೆ ಮುಗಿ ಬೀಳುತ್ತವೆ.

ಶತ್ರು ದೇಶಗಳಿಂದ ಯುದ್ಧ ಸನ್ನಿವೇಶ ಸೃಷ್ಟಿ ಆಗುತ್ತದೆ
ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ದಾಳಿಗಳಾಗುವ ಸಾಧ್ಯತೆ ಹೆಚ್ಚಿದೆ. ಸ್ವತಃ ಪ್ರಧಾನಿಗಳ ಜಾತಕದಲ್ಲಿ ಆಯುಷ್ಯ ಸ್ಥಾನ ತುಂಬ ಬಲವಾಗಿದೆ. ಆ ಕಾರಣಕ್ಕೆ ಹೆಚ್ಚು ಆತಂಕ ಪಡುವ ಅಗತ್ಯ ಇಲ್ಲ. ಆದರೆ ಜನ ಸಾಮಾನ್ಯರ ಮಧ್ಯೆ ಭೀತಿ ಉಂಟಾಗಬಹುದು. ನೆರೆಯ ಶತ್ರು ದೇಶಗಳು ಯುದ್ಧ ಸನ್ನಿವೇಶ ಸೃಷ್ಟಿಸಲು ಯತ್ನಿಸುತ್ತವೆ. ಇದು ಹೊರಗಿನ ಸಂಗತಿಯಾದರೆ, ದೇಶದ ಒಳಗೆ ಹತಾಶರಾಗಿರುವ ಕೆಲ ವಿರೋಧಿಗಳು ಪಿತೂರಿ ನಡೆಸುವ ಸಾಧ್ಯತೆಗಳಿವೆ.

ಪ್ರಮುಖವಾದ ತೀರ್ಮಾನ ತಪ್ಪಾಗುವ ಸಾಧ್ಯತೆ
ಇನ್ನು ಪ್ರಮುಖವಾದ ತೀರ್ಮಾನವೊಂದನ್ನು ನರೇಂದ್ರ ಮೋದಿ ಅವರು ತಪ್ಪಾಗಿ ತೆಗೆದುಕೊಳ್ಳುವ ಸಾಧ್ಯತೆಗಳಿದ್ದು, ಅದನ್ನು ಅವರಾಗಿಯೇ ಸರಿಪಡಿಸಿಕೊಳ್ಳುವ ಮೊದಲು ಭಾರೀ ಮಟ್ಟದಲ್ಲಿ ನಕಾರಾತ್ಮಕ ಪ್ರಚಾರಗಳನ್ನು ವಿರೋಧಿಗಳು ಕೈಗೊಳ್ಳುತ್ತಾರೆ. ದೇಶದ ಆರ್ಥಿಕ ಸ್ಥಿತಿಯು ಬಹಳ ಸಂಕಷ್ಟದಲ್ಲಿದೆ ಎಂಬಂತೆ ಬಿಂಬಿಸಲಾಗುತ್ತದೆ. ಈ ಹಂತದಲ್ಲಿ ಯಾವುದೇ ಖಾತೆಯ ಹೊಣೆ ಹೊತ್ತವರ ತಪ್ಪಾದರೂ ಪ್ರಧಾನಿಯಾಗಿ ಮೋದಿ ಅವರೇ ಮುಂದಾಗಿ ಸಮಸ್ಯೆ ಸರಿಪಡಿಸಬೇಕಾಗುತ್ತದೆ.

ಮುಖ್ಯ ವ್ಯಕ್ತಿಗಳ ಬಂಧನದಿಂದ ಅರಾಜಕತೆ ಸೃಷ್ಟಿ
ದೇಶದಲ್ಲಿ ಪ್ರಮುಖ ವ್ಯಕ್ತಿಗಳ ಬಂಧನ ಸಾಧ್ಯತೆ ಹೆಚ್ಚಾಗಲಿದೆ. ಅರಾಜಕತೆ ಸೃಷ್ಟಿಸಲು ಯತ್ನಿಸುವ ಕೆಲವು ಹತಾಶ ನಾಯಕ- ನಾಯಕಿಯರ ಬಂಧನ ಆಗುವ ಸಾಧ್ಯತೆಗಳಿವೆ. ಇಂಥ ಬೆಳವಣಿಗೆಗಳಿಗೆ ಸ್ವತಃ ಪ್ರಧಾನಿ ಮೋದಿ ಅವರೇ ಆದೇಶ ನೀಡುವಂತೆ ಅಗುತ್ತದೆ. ಕೆಲವು ಕಾನೂನು ಜಾರಿಗೆ ತರುವುದು, ಕಾನೂನು ಕ್ರಮ ತೀವ್ರಗೊಳಿಸುವುದು ಅನಿವಾರ್ಯ ಆಗುತ್ತದೆ. ಒಟ್ಟಾರೆ ಪ್ರಧಾನಿಯಾಗಿ ಮೋದಿ ಆಕ್ರಮಣಕಾರಿ ಆಗುತ್ತಾರೆ.

ಅಧಿಕಾರಾವಧಿಯ ಕೊನೆ ಮೂರು ವರ್ಷ ಅತ್ಯುತ್ತಮ ಸಾಧನೆ
ಪ್ರಮಾಣ ವಚನ ಸ್ವೀಕರಿಸುವ ವೇಳೆ ಲಗ್ನದಲ್ಲೇ ಗುರು ಇದ್ದಾನೆ. ಆದ್ದರಿಂದ ಯಾವುದೇ ಸವಾಲನ್ನು ಮೆಟ್ಟಿ ನಿಲ್ಲುವ ಚಾಣಾಕ್ಷತೆಯನ್ನು ನೀಡುತ್ತಾನೆ. ಶನಿ, ಕೇತು ಗ್ರಹಗಳು ದೇಶಕ್ಕೆ ಹಣಕಾಸಿನ ಸಮಸ್ಯೆ ತಂದರೂ ಮಳೆ-ಬೆಳೆಗೆ ತೊಂದರೆ ಆದರೂ ಮೊದಲ ಎರಡು ವರ್ಷದ ನಂತರ ಭಾರತವು ಅತ್ಯುತ್ತಮವಾದ ಸಾಧನೆ ಮಾಡಲಿದೆ. ಈ ಬಾರಿಯ ಅಧಿಕಾರಾವಧಿಯ ಕೊನೆ ಮೂರು ವರ್ಷ ಭಾರತದ ಹೆಸರು ವಿಶ್ವ ಮಟ್ಟದಲ್ಲಿ ರಾರಾಜಿಸಲಿದೆ.

ಜರಾಸಂಧನ ವಧೆಯಾದಂತೆ ದುಷ್ಟ ಸಂಹಾರ ಆಗುತ್ತದೆ
ಇತರ ಮೂಲಗಳ ಪ್ರಕಾರ ಸಂಜೆ 6ಕ್ಕೆ ಪ್ರಮಾಣ ವಚನ ಅಂತ ಸುದ್ದಿ ಇದೆ. ಹಾಗೇ ಆದರೂ ಲಗ್ನ ವೃಶ್ವಿಕವೇ. ಲಗ್ನದ ಅಧಿಪತಿ ಕುಜನೇ ಅಷ್ಟಮದಲ್ಲಿ ಇರುತ್ತಾನೆ. ಇನ್ನು ಲಗ್ನ ದ್ವಿತೀಯ, ಸಪ್ತಮ, ಅಷ್ಟಮವು ಪಾಪಗ್ರಹ ಸಂಯುಕ್ತ ಉತ್ತಮ ಅಲ್ಲದಿದ್ದರೂ ಜರಾಸಂಧ ವಧೆಯಲ್ಲಿ ಅಕಾಲ, ಹಿಂಬಾಗಿಲಿನ ಪ್ರವೇಶ ಘೋರ ಕದನ ಸೂಚಿಸಿದರೂ, ದುಷ್ಟ ಪೀಡೆ ತೊಲಗಿದಂತೆ ಇದು ಕೂಡಾ ಆಗಿದೆ. ಏಕಾದಶ ಸ್ಥಾನ ಪಾಪಗ್ರಹರಿಲ್ಲ. ಅದರ ಅಧಿಪತಿ ಬುಧನು ನಿಪುಣ ಯೋಗದಲ್ಲಿ ಗುರು ವೀಕ್ಷಣೆಯಲ್ಲಿ ಇರುವುದರಿಂದ ಇದು ಶುಭವೂ ಆಗುತ್ತದೆ.












Click it and Unblock the Notifications