ಮೇಷ ಮತ್ತು ಕನ್ಯಾ ರಾಶಿಯವರ ದಾಂಪತ್ಯ
ಇತ್ತೀಚಿನ ದಿನಗಳಲ್ಲಿ ಭಾರತೀಯ ಸಮಾಜದಲ್ಲಿ ಆಗುತ್ತಿರುವ ಬದಲಾವಣೆಯ ಬಗ್ಗೆ ಎಲ್ಲ ಉತ್ತಮ ನಾಗರೀಕರ ಮನದಲ್ಲಿ ಇರುವ ಕಾಳಜಿ ಶಾಮ್ ಅವರ ಮನದಲ್ಲಿ ಇದೆ. ಬದಲಾವಣೆ ಬೇಕು ಆದರೆ ಅದು ವಿಪರೀತಕ್ಕೆ ಹೋಗ ಬಾರದು ಎನ್ನುವ ಸದುದ್ದೇಶ ಅವರದು. ಈ ಕಾರಣದಿಂದ ಈ ವಿಷಯಕ್ಕೆ ಚಾಲನೆ ಸಿಕ್ಕಿತು. ನಾವಂತೂ ಬಂದು ನಿಮ್ಮ ಸಂಸಾರ ಸರಿ ಮಾಡುವುದಕ್ಕೆ ಸಾಧ್ಯವಿಲ್ಲ. ಆದರೆ ಅಕ್ಷರಗಳ ಮೂಲಕ ವ್ಯಕ್ತವಾಗಿರುವ ಕಳಕಳಿಯು ನಿಮ್ಮ ಮನವನ್ನು ತಲುಪಿ ನಿಮ್ಮ ಬದುಕು ಬಂಗಾರವಾದರೆ ಸಾಕು ಎನ್ನುವ ಪ್ರಾಮಾಣಿಕ ಪ್ರಯತ್ನ ದಟ್ಸ್ ಕನ್ನಡದ್ದು. ಸ್ವೀಕರಿಸಿ ಜೀವನವನ್ನು ಸುಂದರವಾಗಿಟ್ಟು ಕೊಳ್ಳಿ ಎನ್ನುವ ಸದಾಶಯ ನಮ್ಮದಾಗಿದೆ - ಸಂಪಾದಕ.
ಮೇಷರಾಶಿ ಸ್ತ್ರೀ - ಕನ್ಯಾರಾಶಿ ಪುರುಷ
ಮೇಷ ರಾಶಿ ಸ್ತ್ರೀಯರು ಭಾವುಕರು, ಕಷ್ಟವನ್ನು ಧೈರ್ಯದಿಂದ ಎದುರಿಸುತ್ತಾರೆ. ಅಧಿಕಾರ ಚಲಾಯಿಸುವವರು ಎಂದು ಎಲ್ಲರೂ ಬಲ್ಲರು, ಆದರೆ ತಮಾಷೆ ಅಂದ್ರೆ ಈ ಗುಣಗಳು ಕನ್ಯಾರಾಶಿಯ ಪತಿಯನ್ನು ಪಡೆದರೆ ಸಂಪೂರ್ಣ ವಿರುದ್ಧವಾಗಿ ಬಿಡುತ್ತದೆ. ಈ ರಾಶಿಯ ಸ್ತ್ರೀಯರು ಪ್ರಾಂಜಲಮನದಿಂದ ಪ್ರೀತಿಸುವ ಸಂಗಾತಿಯನ್ನು ಬಯಸುತ್ತಾರೆ. ಆತ ಹೃತ್ಪೂರ್ವಕವಾಗಿ ಪ್ರೀತಿಸಿದರೆ ಪತಿಯ ತಪ್ಪನ್ನು ಕ್ಷಮಿಸಿ ಬಿಡುವಂತಹ ಉದಾರ ಮನದವಳು ಈಕೆ. ಇವರಿಬ್ಬರ ನಡುವೆ ಜಗಳ ಕದನ ಶುರು ಆದರೆ ಹೆಣ್ಣು ಕಣ್ಣೀರ ಧಾರೆಯಲ್ಲಿ ನೆಂದು ಒದ್ದೆ ಮುದ್ದೆಯಾಗಿ ಬಿಡ್ತಾಳೆ. ನಾನು ಒಬ್ಬೊಂಟಿ, ನನಗ್ಯಾರಿದ್ದಾರೆ ಈ ಜಗತ್ತಿನಲ್ಲಿ ಎಲ್ಲರನ್ನು ಬಿಟ್ಟು ಈ ಮಹನೀಯನ ಕೈ ಹಿಡಿದೆ, ಇವನು ನೋಡಿದ್ರೆ ಹಿಂಗೆ, ದೇವ್ರೇ ನನಗೆ ಇನ್ನು ಯಾರಪ್ಪ ಗತಿ ಎಂದು ತನ್ನ ಪರಿಸ್ಥಿತಿಯನ್ನು ಹೇಗೇಗೋ ಕಲ್ಪಿಸಿಕೊಂಡು ಪರಮ ದುಃಖಿತಳಾಗಿ ಬಿಕ್ಕಳಿಸಿ ಅಳುವ ದಡ್ಡಿ ಈಕೆ! ಈ ಕಾರಣದಿಂದ ಇವರಿಬ್ಬರ ನಡುವೆ ಅಂತರ ಹೆಚ್ಚಾಗುತ್ತದೆ. ಚಿಕ್ಕಚಿಕ್ಕ ಗಲಾಟೆಯಿಂದ ಬದುಕೆಂದಿಗೂ ಹಾಳಾಗದು. ಆದರೆ ಈ ಜೋಡಿಗಳು ಭಾವುಕತೆಯನ್ನು ಮೂಟೆ ಕಟ್ಟಿ ಪಕ್ಕಕ್ಕೆ ಇಟ್ಟು ವಾಸ್ತವತೆಯ ಬಗ್ಗೆ ಯೋಚಿಸಿ, ನಿಜವಾದ ಅಂಶವನ್ನು ಒಪ್ಪಿಕೊಂಡು ಬದುಕು ನಡೆಸಬೇಕು. ಎಲ್ಲವೂ ಇವರ ಕೈಲೆ ಇದೆ.
ಮೇಷರಾಶಿ ಪುರುಷ - ಕನ್ಯಾರಾಶಿ ಸ್ತ್ರೀ
ತಾನು ಸಿಕ್ಕಾಪಟ್ಟೆ ಎಮೋಷನಲ್ ನಿಜ ಆದರೆ ಅದರ ಜೊತೆ ಪಕ್ಕಾ ಆಲೋಚನಪರ. ಯಾವುದೇ ಸಂಗತಿಯನ್ನಾಗಲಿ ಯೋಚಿಸಿ ಮುಂದಡಿ ಇಡ್ತೀನಿ. ತಾನು ಬಾಂಧವ್ಯಗಳ, ಕೊಟ್ಟ ಮಾತಿನ ವಿಷಯದಲ್ಲಿ ನೂರಕ್ಕೆ ನೂರರಷ್ಟು ಪ್ರಾಮಾಣಿಕ ಎಂದು ನಿರೂಪಿಸುವುದಕ್ಕೆ ಆತ ಪ್ರಯತ್ನಿಸುತ್ತಲೇ ಇರುತ್ತಾನೆ. ಕೆಲಸದ ವಿಷಯದಲ್ಲಿ ಸಿಕ್ಕಾಪಟ್ಟೆ ಶ್ರದ್ಧೆ ಈತನಿಗೆ. ಎಷ್ಟೇ ಕೆಲಸ ಇರಲಿ ಬೊಂಬಾಟಾಗಿ ನೀಟಾಗಿ ಪೂರ್ಣ ಮಾಡುವ ವಿಶೇಷ ವ್ಯಕ್ತಿತ್ವ ಈತನದು. ಒಟ್ಟಾರೆ ನಂಬಿದವರ ಕೈ ಬಿಡದ ಒಳ್ಳೆಯ ಮನಸ್ಥಿತಿ. ಮನುಷ್ಯ ಅಂದಮೇಲೆ ತಪ್ಪು-ನೆಪ್ಪುಗಳಾಗುವುದು ಸಹಜ ಅಲ್ವ? ಆದರೆ ಇದನ್ನು ಮಾತ್ರ ಅವರು ಒಪ್ಪಿಕೊಳ್ಳುವುದಿಲ್ಲ. ಇದು ದಾಂಪತ್ಯದ ಬದುಕಲ್ಲಿ ಸಿಕ್ಕಾಪಟ್ಟೆ ಪ್ರಭಾವ ಬೀರುತ್ತದೆ. (ಕನ್ಯಾರಾಶಿಯ ಸ್ತ್ರೀಯ ಬಗ್ಗೆ ಹೆಚ್ಚು ತಿಳಿಯಲು ಆ ರಾಶಿ ಟರ್ಮ್ ಬರುವ ತನಕ ನೀವು ಕಾಯಲೇಬೇಕು). ಒಮ್ಮೆ ಈ ಜೋಡಿಯಲ್ಲಿ ಜಗಳ ಆರಂಭಗೊಂಡರೆ ಸಿಡಿದು ಸಿಡಿದು ಬೀಳ್ತಾರೆ ಒಬ್ಬರನ್ನು ಕಂಡ್ರೆ ಮತ್ತೊಬ್ಬರು. ಆದರೆ ಸಹನೆ ಎನ್ನುವ ಮಂತ್ರವನ್ನು ಪ್ರತಿ ಗಳಿಗೆ ಜಪಿಸಿದರೆ ಅನಗತ್ಯ ಗಲಾಟೆಗೆ ಆಸ್ಪದವೇ ಇರುವುದಿಲ್ಲ.