ನವದೆಹಲಿ, ಏಪ್ರಿಲ್ 17: ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ಜಾಥಾ ವೇಳೆ ನಡೆದ ಗಲಭೆ ಪ್ರಕರಣದ ಆರೋಪಿ ನಟ ದೀಪ್ ಸಿಧುಗೆ ಜಾಮೀನು ದೊರೆತ ಕೆಲವೇ ಗಂಟೆಗಳಲ್ಲಿ ದೆಹಲಿ ಅಪರಾಧ ದಳದ ಪೊಲೀಸರು ಶನಿವಾರ ಮತ್ತೆ ಬಂಧಿಸಿದ್ದಾರೆ.
ಶನಿವಾರ ಬೆಳಿಗ್ಗೆ ದೆಹಲಿ ನ್ಯಾಯಾಲಯ ದೀಪ್ ಸಿಧುಗೆ ಜಾಮೀನು ನೀಡಿತ್ತು. ಜನವರಿ 26ರಂದು ಕೆಂಪುಕೋಟೆಯಲ್ಲಿ ನಡೆದ ಗಲಭೆ ಸಂಬಂಧ ದೀಪ್ ಸಿಧು ಅವರನ್ನು ಪ್ರಮುಖ ಆರೋಪಿ ಎಂದು ಗುರುತಿಸಲಾಗಿತ್ತು. ಆದರೆ ಕೆಂಪುಕೋಟೆಗೆ ತೆರಳುವಂತೆ ಪ್ರತಿಭಟನಾ ನಿರತ ರೈತರಿಗೆ ತಾವು ಯಾವುದೇ ಕರೆ ನೀಡಿರಲಿಲ್ಲ ಎಂದು ಕಳೆದ ವಿಚಾರಣೆ ವೇಳೆ ದೀಪ್ ಸಿಧು ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದರು. ತಾವು ಯಾವುದೇ ರೈತ ಸಂಘಟನೆಯ ಸದಸ್ಯರಲ್ಲ ಎಂದು ಹೇಳಿದ್ದರು.
ಶನಿವಾರ ಬೆಳಿಗ್ಗೆ ಜಾಮೀನು ದೊರೆತಿದ್ದು, ಭಾರತೀಯ ಪುರಾತತ್ವ ಇಲಾಖೆ ದಾಖಲಿಸಿದ್ದ ಪ್ರಕರಣದ ಆಧಾರದಲ್ಲಿ ದೀಪ್ ಸಿಧು ಅವರನ್ನು ಮತ್ತೆ ಬಂಧಿಸಲಾಗಿದೆ.
Advertisement
Advertisement
ದೆಹಲಿಯ ಕೆಂಪು ಕೋಟೆಯ ಉಸ್ತುವಾರಿಯನ್ನು ಭಾರತೀಯ ಪುರಾತತ್ವ ಇಲಾಖೆ ವಹಿಸಿಕೊಂಡಿದ್ದು, ಗಣರಾಜ್ಯೋತ್ಸವದಂದು ನಡೆದ ಗಲಭೆಯಲ್ಲಿ ಕೆಂಪುಕೋಟೆಗೆ ಹಾನಿಯಾಗಿದೆ. ಕೆಂಪು ಕೋಟೆ ಗೋಡೆಗಳು ಹಾಗೂ ಅದರಲ್ಲಿನ ಕಚೇರಿಗಳಿಗೆ ಹಾನಿಯಾಗಿದೆ ಎಂದು ಪ್ರತ್ಯೇಕ ಪ್ರಕರಣ ದಾಖಲಿಸಿತ್ತು.
ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಗಳಲ್ಲಿ ನವೆಂಬರ್ 26ರಿಂದಲೂ ರೈತರು ಪ್ರತಿಭಟನೆ ನಡೆಸುತ್ತಿದ್ದರು. ದೀಪ್ ಸಿಧು ರೈತರನ್ನು ಪ್ರಚೋದಿಸಿ ಕೆಂಪು ಕೋಟೆಗೆ ತೆರಳಲು ಪ್ರಚೋದನೆ ನೀಡಿದ್ದರು ಎಂಬ ಆರೋಪ ಕೇಳಿಬಂದಿತ್ತು.
'ನಾನು ವಿಡಿಯೋವನ್ನು ಪೋಸ್ಟ್ ಮಾಡಿದ್ದೆ ಅಷ್ಟೇ, ಅದು ನನ್ನ ತಪ್ಪು. ಎಲ್ಲ ತಪ್ಪುಗಳೂ ಅಪರಾಧವಲ್ಲ. ನಾನು ವಿಡಿಯೋ ಹಂಚಿಕೊಂಡಿದ್ದೇನೆ ಎಂಬ ಕಾರಣಕ್ಕಾಗಿಯೇ ಮಾಧ್ಯಮಗಳು ನನ್ನನ್ನು ಮುಖ್ಯ ಆರೋಪಿ ಎಂದು ಬಿಂಬಿಸಿವೆ. ಮುಖ್ಯ ಸಂಚುಕೋರ ಎಂದು ನನ್ನನ್ನು ತೋರಿಸಿವೆ. ಇದು ಯಾಕೆಂದು ನನಗೆ ಗೊತ್ತಿಲ್ಲ' ಎಂದು ಜಾಮೀನು ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಅವರು ಹೇಳಿದ್ದರು.