ದಕ್ಷಿಣ ಕನ್ನಡ, ಮಾರ್ಚ್ 25: ಕೊರೊನಾ ವೈರಸ್ ಹರಡದಂತೆ ಎಷ್ಟೇ ಮಾಹಿತಿ ನೀಡಿದರೂ, ಜನರು ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ. ಆದರೆ, ತಾವೇ ಅದನ್ನು ಪಾಲಿಸುವ ಮೂಲಕ ಜನರಿಗೆ ಬೆಳ್ತಂಗಡಿ ತಹಶೀಲ್ದಾರ್ ತಿಳಿ ಹೇಳಿದ್ದಾರೆ.
ಬೆಳ್ತಂಗಡಿ ತಹಶೀಲ್ದಾರರಾದ ಗಣಪತಿ ಶಾಸ್ತ್ರಿಯವರು ಜನರಿಗೆ ಕೊರೊನಾ ಬಗ್ಗೆ ಅರಿವು ಮೂಡಿಸಿದ್ದಾರೆ. ದಿನಸಿ ಅಂಗಡಿಯಲ್ಲಿ ವಸ್ತುಗಳ ಖರೀದಿ ಸಮಯದಲ್ಲಿ ಸಾಮಾಜಿಕ ಅಂತರ ಬಗ್ಗೆ ಹೇಳಿ, ಜನರು ಸಾಲಿನಲ್ಲಿ, ಒಂದು ಮೀಟರ್ ಅಂತರ ಬಿಟ್ಟು ನಿಲ್ಲುವಂತೆ ತಿಳಿಸಿದ್ದಾರೆ. ತಾವು ಕೂಡ ಎಲ್ಲರಂತೆ ಸಾಲಿನಲ್ಲಿ ನಿಂತಿದ್ದಾರೆ.
ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಪರಿಣಾಮವಾಗಿ ಕೇಂದ್ರ ಸರ್ಕಾರವು ಏಪ್ರಿಲ್ 14 ರವರೆಗೆ 'ಭಾರತ ಲಾಕ್ ಡೌನ್'ಗೆ ಕರೆ ನೀಡಿದೆ. ಬೆಳ್ತಂಗಡಿಯಲ್ಲಿ ಬೆಳಿಗ್ಗೆ 12.00 ಗಂಟೆಯವರೆಗೆ ಜನರಿಗೆ ಅತ್ಯವಶ್ಯಕ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಈ ಸಮಯದಲ್ಲಿ ವಸ್ತುಗಳು ಸಿಗುವುದಿಲ್ಲವೆನೋ ಎನ್ನುವ ಆತಂಕದಲ್ಲಿ ನಾ ಮುಂದೊ, ನೀ ಮುಂದೊ ಎಂದು ಹೊರಟ ಜನಕ್ಕೆ ಗಣಪತಿ ಶಾಸ್ತ್ರಿ ಬುದ್ದಿವಾದ ಹೇಳಿದ್ದಾರೆ.