ಮೂರು ಮಹಾನಗರಪಾಲಿಕೆಯ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಈ ಚುನಾವಣೆ, ಸ್ಥಳೀಯ ಸಮಸ್ಯೆಗಳನ್ನು ಆಧರಿಸಿ ಬರುವ ಫಲಿತಾಂಶ ಎನ್ನುವುದು ಸತ್ಯವಾದರೂ, ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಇದು ಪ್ರತಿಷ್ಠೆಯ ಚುನಾವಣೆಯಾಗಿತ್ತು.
ಸ್ಥಳೀಯ ನಾಯಕರು ಮತ್ತು ರಾಜ್ಯದ ನಾಯಕರೂ ಆಗಿರುವಂತವರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಜವಾಬ್ದಾರಿಯನ್ನು ವಹಿಸಿತ್ತು. ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಇದೇ ಸಮಯದಲ್ಲಿ ಜಿಂದಾಲ್ ಪ್ರಕೃತಿ ಚಿಕಿತ್ಸೆಗೆ ಒಳಗಾಗಿದ್ದರು. ಇನ್ನು, ಮಾಜಿ ಸಿಎಂ ಯಡಿಯೂರಪ್ಪನವರ ಸಾರಥ್ಯವಿಲ್ಲದೇ ಬಿಜೆಪಿ ಚುನಾವಣೆ ಎದುರಿಸಿತ್ತು.
ಬಿಜೆಪಿ ತಮ್ಮ ಪಕ್ಷದ ಚಿಹ್ನೆಯೊಂದಿಗೆ ಬೆಳಗಾವಿ ಮಹಾನಗರಪಾಲಿಕೆ ಚುನಾವಣೆಯ ಕಣಕ್ಕೆ ಇಳಿದಿತ್ತು. ಒಟ್ಟು 58 ವಾರ್ಡ್ ಗಳ ಪೈಕಿ 35ರಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ, ಅಭೂತಪೂರ್ವ ಗೆಲುವನ್ನು ತನ್ನದಾಗಿಸಿಕೊಂಡಿದೆ. ಇದಕ್ಕೆ, ಬಿಜೆಪಿ ಗೆಲ್ಲಲು ರೂಪಿಸಿದ ತಂತ್ರಗಾರಿಕೆ ಪ್ರಮುಖ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಬಿಜೆಪಿಯ ಗೆಲುವಿಗೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ತೊಡಕಾಗಬಹುದು ಎನ್ನುವ ಲೆಕ್ಕಾಚಾರ ಉಲ್ಟಾ ಹೊಡಿದಿದೆ. ಸದಾ, ಕನ್ನಡ ಮತ್ತು ಕನ್ನಡಿಗರ ವಿರುದ್ದ ತಂಟೆಗೆ ಬರುವ ಎಂಇಎಸ್ ಪಕ್ಷಕ್ಕೆ ಬೆಳಗಾವಿ ಮತದಾರ ಮುಟ್ಟಿ ನೋಡುವಂತಹ ಉತ್ತರವನ್ನು ಕೊಟ್ಟಿದ್ದಾನೆ.
ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಆದಿಯಾಗಿ ಬೆಳಗಾವಿ ರಾಜಕೀಯದ ಪ್ರಭಾವೀ ನಾಯಕರು ಕಾಂಗ್ರೆಸ್ ಪರ ಪ್ರಚಾರ ನಡೆಸಿದ್ದರು. ಸುರೇಶ್ ಅಂಗಡಿಯವರ ಅಂತ್ಯಕ್ರಿಯೆಯನ್ನೂ ಬಿಜೆಪಿಯವರು ಸರಿಯಾಗಿ ನಡೆಸಿಲ್ಲ, ಅಂತಹ ಪಕ್ಷಕ್ಕೆ ಮತ ಹಾಕಬೇಕಾ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡಾ ಪ್ರಶ್ನಿಸಿದ್ದರು. ಆದರೆ, ಕಾಂಗ್ರೆಸ್ಸಿನ ಯಾವುದೇ ಆರೋಪಕ್ಕೆ ತಲೆಕೊಡದ ಮತದಾರ, ಬಿಜೆಪಿಗೆ ಸ್ಪಷ್ಟ ಬಹುಮತವನ್ನು ನೀಡಿದ್ದಾನೆ.
ಯಾವುದೇ ಪಕ್ಷಕ್ಕೆ ಬೆಳಗಾವಿಯಲ್ಲಿ ನಿರ್ಣಾಯಕವಾಗಿರುವುದು ಮರಾಠಿ ಮತದಾರ. ಈ ಮತಬ್ಯಾಂಕ್ ಅನ್ನು ತಮ್ಮ ಪಾಲಾಗುವಂತೆ ನೋಡಿಕೊಳ್ಳಲು ಬಿಜೆಪಿ ವಿಶಿಷ್ಟವಾದ ಯೋಜನೆಯನ್ನು ಹಾಕಿಕೊಂಡಿತ್ತು. ಮರಾಠಿ ಎಂದಾಗ ಎಂಇಎಸ್ ಪಕ್ಷದ ಅಭ್ಯರ್ಥಿ ಬಿಜೆಪಿ ಪಾಲಿಗೆ ಮುಳುವಾಗುವ ಸಾಧ್ಯತೆಯಿತ್ತು. ಇದರ ಮುನ್ಸೂಚನೆಯನ್ನು ಅರಿತ, ರಾಜ್ಯ ಬಿಜೆಪಿ ನಾಯಕರು ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಂಡ ಮರಾಠಿ ಭಾಷಿಗರ ವಿಚಾರವನ್ನೇ ಮುನ್ನಲೆಗೆ ತಂದಿತು.
Advertisementಮರಾಠಿಗರನ್ನು ಸೆಳೆಯುವ ಪ್ರಯತ್ನವನ್ನು ಎಂಇಎಸ್ ಮಾಡುತ್ತಿದ್ದರಿಂದ, ದೇವೇಂದ್ರ ಫಡ್ನವೀಸ್ ಅವರು ಮಹಾರಾಷ್ಟ್ರದಿಂದ ಆರು ಜನರ ತಂಡವನ್ನು ಬೆಳಗಾವಿಗೆ ಕಳುಹಿಸಿಕೊಟ್ಟರು. ಈ ತಂಡಗಳಿಗೆ, ಮರಾಠಿ ಮತಗಳು ಬಿಜೆಪಿ ಬಿಟ್ಟು ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ನೀಡಲಾಗಿತ್ತು. ಅತ್ಯಂತ ಶಿಸ್ತಿನಿಂದ ಈ ತಂಡ ಕೆಲಸವನ್ನು ಮಾಡಿ, ಎಂಇಎಸ್ ಪಾಲಾಗುವ ಸಾಧ್ಯತೆಯಿದ್ದ ಮತಗಳು ಬಿಜೆಪಿಗೇ ಬರುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಯಿತು ಎನ್ನುವುದು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ಇದೊಂದು ಕಡೆ..
ಇನ್ನೊಂದು ಕಡೆ ಎಲ್ಲೆಲ್ಲಿ ಎಂಇಎಸ್, ಮರಾಠಿ ಭಾಷಿಗರನ್ನೇ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತ್ತೋ, ಅಲ್ಲೆಲ್ಲಾ (ಬಹುತೇಕ) ಕಡೆ ಬಿಜೆಪಿ ಕೂಡಾ ಮರಾಠಿಗರನ್ನೇ ಕಣಕ್ಕಿಳಿಸಿತು. ಇದು, ಸ್ಪಷ್ಟವಾಗಿ ವೋಟ್ ಡಿವೈಡ್ ಆಗಲು ಕಾರಣವಾಯಿತು. ಬಿಜೆಪಿ ಗೆದ್ದ 36 ಕಾರ್ಪೋರೇಟರ್ ಗಳ ಪೈಕಿ 25ಕ್ಕೂ ಜನ ಮರಾಠಿಗರು ಎನ್ನುವುದು ಗಮನಿಸಬೇಕಾದ ವಿಚಾರ. ಹಾಗಾಗಿ, ಇವತ್ತಿನ ವರೆಗೂ ಮರಾಠಿ ವಿಷಯವನ್ನೇ ತನ್ನ ಅಸ್ತ್ರವನ್ನಾಗಿ ಹೂಡುತ್ತಾ ಬರುತ್ತಿದ್ದ ಎಂಇಎಸ್ ಗೆ, ಬಿಜೆಪಿ ಯೋಜನಾಬದ್ದವಾಗಿ ತಿರುಗೇಟನ್ನು ನೀಡಿದೆ.