ವಿಶೇಷ ವರದಿ: ಮೈಸೂರು ರೈತರ ನಿದ್ದೆಗೆಡಿಸಿದ ಹಳದಿ ಮಚ್ಚೆರೋಗ!
ಮೈಸೂರು, ಜೂನ್ 23: ಈಗಾಗಲೇ ಕೊರೊನಾ, ಯೆಲ್ಲೋ ಫಂಗಸ್, ಬ್ಲಾಕ್ ಫಂಗಸ್ ರೋಗಗಳಿಂದ ಕಂಗೆಟ್ಟು ಹೋಗಿರುವ ರೈತರು ಲಾಕ್ಡೌನ್ ಸಂಕಷ್ಟದ ನಡುವೆ ಕೃಷಿ ಅಗತ್ಯವಿರುವ ವಸ್ತುಗಳು ದೊರೆಯದಿದ್ದರೂ ಹೇಗೋ ಕಷ್ಟಪಟ್ಟು ಕೃಷಿ ಮಾಡಿ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದರಿಗೆ ಹಳದಿ ಮಚ್ಚೆ ರೋಗ ಶಾಕ್ ನೀಡಿದೆ.
ಈ ಬಾರಿಯ ಬೇಸಿಗೆಯಲ್ಲಿ ಒಂದಷ್ಟು ಮಳೆಯಾಗಿತ್ತು. ಅದರಲ್ಲೂ ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆಯಾಗಿತ್ತು. ಹೀಗಾಗಿ ಮೈಸೂರು ತಾಲ್ಲೂಕಿನಾದ್ಯಂತ ರೈತರು ಖುಷಿಯಾಗಿಯೇ ತಮ್ಮ ಜಮೀನಿನಲ್ಲಿ ಉದ್ದು, ಹೆಸರು ಹಾಗೂ ಅಲಸಂದೆ ಬೆಳೆಗಳನ್ನು ಬಿತ್ತಿದ್ದರು. ಅದಕ್ಕೆ ಗೊಬ್ಬರ ನೀರು ಹಾಕಿ ಜತನದಿಂದಲೇ ಕಾಪಾಡಿದ್ದರು. ಹುಲುಸಾಗಿ ಬೆಳೆದ ಬೆಳೆ ಈಗ ಹೂಬಿಟ್ಟು ಕಾಳುಕಟ್ಟುವ ಹಂತದಲ್ಲಿದ್ದು, ಇದೇ ವೇಳೆಗೆ ಈ ಬೆಳೆಗಳಲ್ಲಿ ಹಳದಿ ಮಚ್ಚೆರೋಗ (Yellow mosaic Virus) ಕಾಣಿಸಿಕೊಂಡಿರುವುದು ಕಷ್ಟಪಟ್ಟು ಕೃಷಿ ಮಾಡಿದ ರೈತರ ನಿದ್ದೆಗೆಡಿಸುವಂತೆ ಮಾಡಿದೆ. ಈ ಸಮಯದಲ್ಲಿ ರೈತರು ಸ್ವಲ್ಪ ಎಚ್ಚರ ತಪ್ಪಿದರೂ ಕಷ್ಟಪಟ್ಟು ಬೆಳೆದ ವೈರಸ್ಗೆ ತುತ್ತಾಗಿ ಫಸಲನ್ನು ಕಳೆದುಕೊಂಡು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಹ ಪರಿಸ್ಥಿತಿ ಬಂದರೂ ಅಚ್ಚರಿ ಪಡಬೇಕಾಗಿಲ್ಲ.
ಮಳೆ ಅಬ್ಬರಕ್ಕೆ ತ್ರಿವೇಣಿ ಸಂಗಮ ಜಲಾವೃತ: ಭತ್ತದ ಕೃಷಿ ಚಟುವಟಿಕೆ ಶುರು
ಬಿಳಿ ನೊಣಗಳಿಂದ ರೋಗ ಪ್ರಸಾರ
ಏಕೆಂದರೆ ಹಳದಿ ಮಚ್ಚೆರೋಗ ತಗುಲಿತೆಂದರೆ ಬೆಳೆಗಳ ಕಾಳುಗಳು ಸಂಪೂರ್ಣ ಹಳದಿ ಬಣ್ಣಕ್ಕೆ ತಿರುಗಿರುವುದರಿಂದ ಕಾಳುಗಳ ಉತ್ಪತ್ತಿ ಹಾಗೂ ಗುಣಮಟ್ಟದ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತದೆ. ಹೆಸರು ಮತ್ತು ಉದ್ದು ಬೆಳೆಯಲ್ಲಿ ಈ ಹಳದಿ ಮಚ್ಚೆರೋಗವು ಮೊದಲು ಒಂದೇ ಗಿಡ ಅಥವಾ ಬಳ್ಳಿಗಳಲ್ಲಿ ಕಾಣಿಸಿಕೊಂಡರೂ ನಂತರ ಗಿಡದಿಂದ ಗಿಡಕ್ಕೆ ಬಿಳಿನೊಣಗಳ ಮೂಲಕ ಅತಿ ಹೆಚ್ಚು ವೇಗವಾಗಿ ಪ್ರಸಾರವಾಗುತ್ತದೆ.
ಮಚ್ಚೆರೋಗದಿಂದ ಫಸಲನ್ನು ಉಳಿಸಿಕೊಳ್ಳಬೇಕಾದ ಅಗತ್ಯವಿದೆ
ಈ ಬಾರಿ ರೋಗವು ಅಲಸಂದೆ ಕಾಳುಗಳಲ್ಲಿ ಹೆಚ್ಚು ಕಂಡು ಬಂದಿದ್ದು, ಎಫಿಡ್ ಎಂಬ ಹೇನಿನ ಮೂಲಕ ಹರಡುತ್ತಿದೆ. ವಾತಾವರಣದಲ್ಲಿ ಹೆಚ್ಚು ಉಷ್ಣಾಂಶ ಹಾಗೂ ತೇವಾಂಶಗಳಿದ್ದು, ಈ ಕೀಟವು ತ್ವರಿತಗತಿಯಲ್ಲಿ ಸಂತಾನಾವೃದ್ಧಿ ಮಾಡಿ ಮರಿ ಹಾಗೂ ರೆಕ್ಕೆ ಬಂದಂತಹ ಹೇನುಗಳ ಮೂಲಕ ಹಾರಿ ಬಂದು ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ರಸ ಹೀರುವ ಮೂಲಕ ರೋಗವನ್ನು ಪ್ರಸಾರ ಮಾಡುತ್ತಿದೆ. ಹೀಗಾಗಿ ರೈತರು ಸಕಾಲದಲ್ಲಿ ಕೀಟನಾಶಕಗಳನ್ನು ಸಿಂಪಡಣೆ ಮಾಡುವ ಮೂಲಕ ಹಳದಿ ಮಚ್ಚೆರೋಗದಿಂದ ಫಸಲನ್ನು ಉಳಿಸಿಕೊಳ್ಳಬೇಕಾದ ಅಗತ್ಯವಿದೆ.
ಕೃಷಿ ನಿರ್ದೇಶಕರು ನೀಡಿದ ಸಲಹೆಗಳೇನು?
ಈ ರೋಗದಿಂದ ಫಸಲನ್ನು ಕಾಪಾಡಲು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೀರಣ್ಣ ಕೆ.ಪಿ ಅವರು ಸಲಹೆ ನೀಡಿದ್ದು, ಬೆಳೆಗಳಿಗೆ ರೋಗ ಹರಡದಂತೆ ತಡೆಯಲು ಕೀಟನಾಶಕಗಳಾದ ರೋಗರ್ 1.75 ಮಿ.ಲೀ. ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿ ಅಥವಾ ಇಮಿಡಾ ಕ್ಲೋಪ್ರಿಡ್ 0.50 ಮಿ.ಲೀ. ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಸಿಂಪಡಣೆ ಆದ ನಂತರ ರೋಗಗ್ರಸ್ತ ಗದ್ದೆ ಅಥವಾ ಹೊಲಗಳಲ್ಲಿರುವ ಹಳದಿ ಮಿಶ್ರಿತ ಗಿಡಗಳನ್ನು ಕಿತ್ತು ನಾಶ ಪಡಿಸಬೇಕು ಎಂದು ಹೇಳಿದ್ದಾರೆ.
ರಾಗಿ ಸಸಿ ಮಡಿಯನ್ನು ಬಿಡದ ಕೀಟಗಳು
ಇನ್ನೊಂದೆಡೆ ರಾಗಿ ಒಣ ಸಸಿಮಡಿಯಲ್ಲಿಯೂ ಎಲೆ ತಿನ್ನುವ ಕೀಟಬಾಧೆ ಕಾಣಿಸಿದ್ದು, ಇದರ ನಿವಾರಣೆಗಾಗಿ ರೈತರು ಕ್ಲೋರೋಪೈರಿಫಾಸ್ 2.0 ಮಿ.ಲೀ. ಕೀಟನಾಶಕವನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವಂತೆ ಹೇಳಿದ್ದಾರೆ. ರೈತರು ಸಕಾಲದಲ್ಲಿ ಹಳದಿ ಮಚ್ಚೆರೋಗ ಕಾಣಿಸಿಕೊಂಡ ಕೂಡಲೇ ಕೀಟನಾಶಕ ಸಿಂಪಡಿಸಿ ಬೆಳೆಯನ್ನು ರಕ್ಷಿಸಿಕೊಳ್ಳುವುದು ಅಗತ್ಯವಾಗಿದೆ. ಈಗಾಗಲೇ ಮನುಷ್ಯರು ಕೊರೊನಾ ರೋಗದ ಭೀತಿಯಲ್ಲಿದ್ದು, ಸಾಲ ಮಾಡಿ ಕೃಷಿ ಮಾಡಿದ್ದಾರೆ. ಆದರೆ ಅದಕ್ಕೂ ಈಗ ರೋಗ ತಗುಲುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.