ದುರಹಂಕಾರಕ್ಕೆ ಮಿತಿ ಇರಬೇಕು: ಎಚ್ಡಿಕೆ ವಿರುದ್ಧ ಯಡಿಯೂರಪ್ಪ ಗರಂ
Recommended Video

ಬೆಂಗಳೂರು, ನವೆಂಬರ್ 19: ರೈತ ಮಹಿಳೆಯ ಬಗ್ಗೆ ತುಚ್ಛವಾಗಿ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಗರಂ ಆಗಿದ್ದಾರೆ.
37 ಶಾಸಕರನ್ನು ಇಟ್ಟುಕೊಂಡು ಸೊಕ್ಕಿನಿಂದ ಮೆರೆಯುತ್ತಿದ್ದಾರೆ. ದುರಹಂಕಾರಕ್ಕೆ ಒಂದು ಮಿತಿ ಇರಬೇಕು? ಎಂದು ಯಡಿಯೂರಪ್ಪ ಅವರು ಕುಮಾರಸ್ವಾಮಿ ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತ ಮಹಿಳೆ ಬಗ್ಗೆ ಮಿತಿ ಮೀರಿದ ಮಾತನ್ನಾಡಿದ್ದಾರೆ. ಇವರಿಗೆ ಕುರ್ಚಿ ಬೇಕು ಅಷ್ಟೆ ಹೊರತು, ರೈತರ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಬದ್ಧತೆಯೇ ಇಲ್ಲ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ.
ಪ್ರತಿ ತಿಂಗಳು ರೈತರೊಂದಿಗೆ ಸಭೆ ನಡೆಸುತ್ತೇನೆ ಎಂದು ಹೇಳಿದ ನೀವು ಏಕೆ ಸಭೆ ಮಾಡಿಲ್ಲ? ಎಂದು ಪ್ರಶ್ನಿಸಿದ ಯಡಿಯೂರಪ್ಪ ಅವರು 'ನಿಮ್ಮ ಸೊಕ್ಕಿನ ಮಾತುಗಳು ಕೇಳಿ ಸಾಕಾಗಿದೆ, ಇದನ್ನೆಲ್ಲಾ ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನೆ ಮಾಡುತ್ತೇವೆ' ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಸಿಎಂ ಕುರ್ಚಿ ಬಿಟ್ಟು ಇಳಿಯಿರಿ: ಬಿಎಸ್ವೈ
ಕುಮಾರಸ್ವಾಮಿ ಅವರು ಜನರ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಈಗಾಗಲೇ ಆರು ತಿಂಗಳು ಸಮಯ ಕೊಟ್ಟಾಗಿದೆ ಇನ್ನೆಷ್ಟು ವರ್ಷ ಸಮಯಕೊಡಬೇಕು ಅವರಿಗೆ. ಅವರಿಗೆ ಕಿಂಚಿತ್ತಾದರೂ ಆತ್ಮಸಾಕ್ಷಿ ಇದ್ದರೆ ಈ ಕೂಡಲೇ ಅವರು ಕುರ್ಚಿ ಬಿಟ್ಟು ಕೆಳಗೆ ಇಳಿಯಬೇಕು ಎಂದು ಕುಮಾರಸ್ವಾಮಿ ಹೇಳಿದರು.

'ರೈತ ಮಹಿಳೆಗೆ ಕ್ಷಮೆ ಕೇಳಲೇಬೇಕು'
ಬೆಳಗಾವಿ ಅಧಿವೇಶನ ನಡೆಯಬೇಕು ಎನ್ನುವುದಾದರೆ. ಸಿಎಂ ಅವರು ಮೊದಲು ಆ ರೈತ ಮಹಿಳೆಗೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಸಾಲಮನ್ನಾ ಕೂಡಲೇ ಜಾರಿಗೊಳಿಸಬೇಕು ಮತ್ತು ಬೆಂಬಲ ಬೆಲೆ ಘೋಷಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಯಡಿಯೂರಪ್ಪ ಹೇಳಿದರು.

ರೈತ ಮಹಿಳೆ ಬಗ್ಗೆ ಎಚ್ಡಿಕೆ ಬೇಜವಾಬ್ದಾರಿ ಮಾತು
ಕುಮಾರಸ್ವಾಮಿ ಅವರು ಕಬ್ಬಿನ ಬೆಂಬಲ ಬೆಲೆಗಾಗಿ ಹೋರಾಟ ಮಾಡುತ್ತಿರುವ ರೈತ ಮಹಿಳೆ ಜಯಶ್ರೀ ಗುರ್ರಣ್ಣವರ್ ಅವರ ಬಗ್ಗೆ ಆಕ್ರೋಶದಿಂದ ಮಾತನಾಡುತ್ತಾ 'ನಾಲ್ಕು ವರ್ಷ ಎಲ್ಲಿ ಮಲಗಿದ್ದರಂತೆ' ಎಂದು ಹೇಳಿದ್ದರು. ಇದು ರೈತರನ್ನು ಕೆರಳಿಸಿತ್ತು.

ಕಬ್ಬಿನ ಬೆಂಬಲ ಬೆಲೆಗಾಗಿ ಪ್ರತಿಭಟನೆ
ಕಬ್ಬಿಗೆ ಬೆಂಬಲ ಘೋಷಿಸಬೇಕು ಹಾಗೂ ಸಕ್ಕರೆ ಕಾರ್ಖಾನೆಗಳು ರೈತರ ಬಾಕಿ ಪಾವತಿ ಮಾಡಬೇಕು ಎಂದು ಕೆಲವು ದಿನದಿಂದ ರೈತರು ಪ್ರತಿಭಟನೆ ಮಾಡುತ್ತಿದ್ದರು. ಇದೀಗ ಸಿಎಂ ಅವರ ಬೇಜವಾಬ್ದಾರಿ ಹೇಳಿಕೆಯಿಂದ ರೈತರು ಕೆರಳಿದ್ದು, ಹೋರಾಟ ತೀವ್ರವಾಗಿದೆ. ಬೆಂಗಳೂರಲ್ಲಿ ವಿಧಾನಸಭೆಗೆ ರೈತರು ಮುತ್ತಿಗೆ ಹಾಕುತ್ತಿದ್ದಾರೆ.












Click it and Unblock the Notifications