ಗುಂಡ್ಲುಪೇಟೆ: ಕಾಡಾನೆ ದಾಳಿಗೆ ಫಸಲು, ಕೃಷಿ ಉಪಕರಣ ಧ್ವಂಸ; ರೈತರ ಆಕ್ರೋಶ
ಚಾಮರಾಜನಗರ, ಸೆಪ್ಟೆಂಬರ್, 1: ಕಾಡಾನೆಗಳ ಹಿಂಡು ರೈತರ ಜಮೀನುಗಳಿಗೆ ಲಗ್ಗೆಯಿಟ್ಟು ಫಸಲು ಮತ್ತು ಕೃಷಿ ಉಪಕರಣಗಳನ್ನು ತುಳಿದು ನಾಶ ಪಡಿಸಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ವಲಯ ವ್ಯಾಪ್ತಿಯ ಕೋಟೆಕೆರೆ ಗ್ರಾಮದಲ್ಲಿ ನಡೆದಿದೆ.
ಕೋಟೆಕೆರೆ ಗ್ರಾಮದ ಮಹಾದೇವಸ್ವಾಮಿ ಎಂಬುವವರ 3 ಹೆಕ್ಟೇರ್ ಜಮೀನಿನಲ್ಲಿ ಬೆಳೆದಿದ್ದ ಜೋಳ, 5 ತೆಂಗಿನ ಸಸಿಗಳು ಮತ್ತು ಪೈಪ್ ಲೈನ್ ತುಳಿದು ಹಾಕಿವೆ. ವೆಂಕಟರಾಮಯ್ಯ ಎಂಬ ರೈತನ ಜಮೀನಿನಲ್ಲಿ ಟೊಮೆಟೊ ಹಾಗೂ ಚೆನ್ನನಾಯಕ ಎಂಬುವವರ ಜಮೀನಿನಲ್ಲಿದ್ದ ಬೋರ್ ವೆಲ್ ಮತ್ತು ಇತರೆ ಕೃಷಿ ಉಪಕರಣಗಳನ್ನು ತುಳಿದು ನಾಶಪಡಿಸಿದೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

ಸೂಕ್ತ ಪರಿಹಾರಕ್ಕೆ ಒತ್ತಾಯ: ಕೋಟೆಕೆರೆ ಗ್ರಾಮದ ಮೂವರು ರೈತರ ಜಮೀನುಗಳ ಮೇಲೆ ಕಾಡಾನೆಗಳು ಲಗ್ಗೆಯಿಟ್ಟು ಫಸಲು ಮತ್ತು ಕೃಷಿ ಉಪಕರಣಗಳನ್ನು ನಾಶ ಪಡಿಸಿರುವ ಹಿನ್ನೆಲೆ ರೈತರಿಗೆ ಅಪಾರ ನಷ್ಟ ಸಂಭವಿಸಿದೆ. ಆದ್ದರಿಂದ ಸಂಬಂಧಪಟ್ಟ ಓಂಕಾರ್ ವಲಯದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿ ಶೀಘ್ರವಾಗಿ ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ಮಾಲೀಕರು ಒತ್ತಾಯಿಸಿದ್ದಾರೆ.
ಆನೆಗಳ ಹಾವಳಿಗೆ ಕಡಿವಾಣ ಹಾಕಿ: ಓಂಕಾರ್ ವಲಯ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ರೈತರು ಬೆಳೆದ ಫಸಲುಗಳ ಮೇಲೆ ಕಾಡಾನೆಗಳ ಹಿಂಡು ನಿರಂತರವಾಗಿ ದಾಳಿ ನಡೆಸಿ ತುಳಿದು ತಿಂದು ನಾಶ ಪಡಿಸುತ್ತಿದೆ. ಇದರ ಮಾಹಿತಿ ಇದ್ದರೂ ಕೂಡ ಅರಣ್ಯಾಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ. ಆದ್ದರಿಂದ ಕೂಡಲೇ ಎಚ್ಛೆತ್ತುಕೊಂಡು ಆನೆಗಳ ಹಾವಳಿಗೆ ಕಡಿವಾಣ ಹಾಕದಿದ್ದರೆ, ಅರಣ್ಯ ಕಚೇರಿಗೆ ಮುತ್ತಿಗೆ ಹಾಕುವುದಾಗಿ ರೈತ ಸಂಘಟನೆ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆ ಸಾವು: ಈಗಾಗಲೇ ನಿನ್ನೆಯಷ್ಟೇ ಚಾಮರಾಜನಗರ ಜಿಲ್ಲೆಯ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ 2 ಆನೆಗಳ ಕಳೆಬರಗಳು ಪತ್ತೆಯಾಗಿದ್ದವು. ಇದೀಗ ಮತ್ತೆ ಇಂದು (ಆಗಸ್ಟ್ 31) ಬಿಳಿಗಿರಿ ರಂಗಸ್ವಾಮಿ ದೇವಾಲಯದ ಪ್ರದೇಶದಲ್ಲಿ ಮತ್ತೊಂದು ಆನೆಯ ಕಳೇಬರ ಪತ್ತೆ ಆಗಿದೆ ಎಂದು ಅರಣ್ಯ ಇಲಾಖೆ ಶನಿವಾರ (ಆಗಸ್ಟ್ 31) ಸಂಜೆ ಮಾಹಿತಿ ನೀಡಿದೆ.
ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವಲಯದ ಮಾವತ್ತೂರು ಬಿ ಗಸ್ತಿನಲ್ಲಿ ಹೆಣ್ಣಾನೆ ಮೃತ ದೇಹ ಪತ್ತೆಯಾಗಿದ್ದು, ಇದಕ್ಕೆ 60-65 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜು ಮಾಡಲಾಗಿದೆ. ಇನ್ನು ಪಶು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ಆನೆಯು ಸ್ವಾಭಾವಿಕವಾಗಿ 7-8 ದಿನಗಳ ಹಿಂದೆ ಮೃತಪಟ್ಟಿದೆ ಎಂದು ದೃಢಪಡಿಸಿದ್ದಾರೆ.
ಯಳಂದೂರು ಮತ್ತು ಬೈಲೂರು ವಲಯದಲ್ಲಿ 2 ಆನೆಗಳು ಮೃತಪಟ್ಟಿದ್ದ ಬಗ್ಗೆ ಶುಕ್ರವಾರ(ಆಗಸ್ಟ್ 30) ಅರಣ್ಯ ಇಲಾಖೆ ಮಾಹಿತಿ ಹಂಚಿಕೊಂಡಿತ್ತು. ಇಂದು ಮತ್ತೊಂದು ಆನೆ ಅಸುನೀಗಿರುವ ಮಾಹಿತಿ ಪರಿಸರ ಪ್ರೇಮಿಗಳಲ್ಲಿ ಆತಂಕ ತರಿಸಿದೆ.
ಎರಡು ಆನೆಗಳ ಕಳೆಬರಹ ಪತ್ತೆ: ಬೈಲೂರು ವಲಯದ ಆಳದ ಕೆರೆ ಬಳಿ 45-50 ವರ್ಷದ ಗಂಡಾನೆ ಕಳೇಬರ ಪತ್ತೆಯಾಗಿದ್ದು, 7-8 ತಿಂಗಳ ಹಿಂದೆ ಸ್ವಾಭಾವಿಕವಾಗಿ ಮೃತಪಟ್ಟಿದೆ ಎಂದು ಮಾಹಿತಿ ಕೊಟ್ಟಿದ್ದಾರೆ. ಇನ್ನು ಯಳಂದೂರು ವಲಯದ ಬೇತಾಳಕಟ್ಟೆ ಎಂಬಲ್ಲಿ ಗಂಡಾನೆ ಕಳೇಬರ ಪತ್ತೆಯಾಗಿದ್ದು, ಇದು 20 ದಿನಗಳ ಹಿಂದೆ ಮೃತಪಟ್ಟಿದ್ದು, 40 ವರ್ಷದ್ದು ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ. ಈ ಎರಡು ಆನೆಗಳ ದಂತಗಳು ಸುರಕ್ಷಿತವಾಗಿದ್ದು, ಅರಣ್ಯ ಇಲಾಖೆ ಈ ಬಗ್ಗೆ ಮುಂದಿನ ಕ್ರಮ ಕೈಗೊಂಡಿದೆ.
ಇನ್ನು ಆನೆ ಕಳೇಬರ ಪತ್ತೆ ಬಹಳ ತಡವಾಗಿ ಪತ್ತೆಯಾಗಿರುವ ಬಗ್ಗೆ ಪರಿಸರ ಹೋರಾಟಗಾರ ಜೋಸೆಫ್ ಹೂವರ್ ಕಿಡಿಕಾರಿದ್ದು, ಒಂದಾನೆ ಮೃತಪಟ್ಟು 7-8 ತಿಂಗಳು, ಮತ್ತೊಂದು ಆನೆ ಸತ್ತು 20 ದಿನಗಳಾಗಿವೆ. ಇದು ಅರಣ್ಯ ಇಲಾಖೆಯ ಗಸ್ತಿನ ವೈಖರಿ ಎಂದು ಆಕ್ರೊಶ ಹೊರಹಾಕಿದರು.












Click it and Unblock the Notifications