ಮಂಡ್ಯ ರೈತರ ಕಡೆಗೆ ಜೆಡಿಎಸ್ ಶಾಸಕರ, ಸಚಿವರ ನಿರ್ಲಕ್ಷ್ಯವೇಕೆ?
Recommended Video
ಮಂಡ್ಯ, ಜೂನ್ 27: ಚುನಾವಣೆ ಸಂದರ್ಭದಲ್ಲೆಲ್ಲ ರೈತರ ಪಕ್ಷ ಎನ್ನುತ್ತಾ ಮತ ಕೇಳುವ ಜೆಡಿಎಸ್ ಇದೀಗ ರೈತರು ನೀರು ಬಿಡುವಂತೆ ಏಳು ದಿನಗಳಿಂದ ಧರಣಿ ನಡೆಸುತ್ತಿದ್ದರೂ ಜೆಡಿಎಸ್ ನಿಂದ ಆಯ್ಕೆಯಾದ ಉಸ್ತುವಾರಿ ಸಚಿವರಾದ ಸಿ.ಎಸ್.ಪುಟ್ಟರಾಜು ಹಾಗೂ ಶಾಸಕರು ಸ್ಥಳಕ್ಕೆ ಆಗಮಿಸದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ರೈತರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಶಾಸಕರಾಗಲೀ, ಸಚಿವರಾಗಲೀ ಇತ್ತ ಬಾರದಿರುವುದೇಕೆ ಎಂಬುದಕ್ಕೆ ಕಾರಣವೂ ಇದೆ. ಈ ಧರಣಿ ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಮೊದಲಿನಿಂದಲೂ ದರ್ಶನ್ ಮತ್ತು ಪುಟ್ಟರಾಜು ಅವರದು ಎಣ್ಣೆಸೀಗೆಕಾಯಿ ಸಂಬಂಧ. ಹೀಗಾಗಿ ನಾನೇಕೆ ಅಲ್ಲಿಗೆ ಹೋಗಬೇಕು ಎಂಬ ಆಲೋಚನೆ ಪುಟ್ಟರಾಜು ಅವರದ್ದಾಗಿರಬಹುದು. ಆದರೆ ಇದು ರಾಜಕೀಯವಾಗಿ ಬೇರೆಯದ್ದೇ ಅರ್ಥ ನೀಡುತ್ತಿದ್ದು, ರೈತರು ಆಕ್ರೋಶಗೊಳ್ಳುವಂತಾಗಿದೆ.
ಸದ್ಯ ಕೃಷ್ಣರಾಜಸಾಗರ ಮತ್ತು ಹೇಮಾವತಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬೆಳೆದು ನಿಂತ ಬೆಳೆಗೆ ನೀರೊದಗಿಸುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಒಣಗುತ್ತಿರುವ ಬೆಳೆಗಳಿಗೆ ಹಾಗೂ ಜನ ಜಾನುವಾರುಗಳಿಗೆ ಕುಡಿಯಲು ನೀರು ಹರಿಸಬೇಕು ಎಂಬುದು ಪ್ರತಿಭಟನಾ ನಿರತರ ಕೂಗಾಗಿದೆ. ಒಂದು ವೇಳೆ ಪ್ರತಿಭಟನೆಗೆ ಮಣಿದು ನೀರು ಹರಿಸಿದ್ದೇ ಆದರೆ ಕ್ರೆಡಿಟ್ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಲ್ಲುತ್ತದೆ. ಇದು ಮುಂದಿನ ದಿನಗಳಲ್ಲಿ ಜೆಡಿಎಸ್ ಮೇಲೆ ಪರಿಣಾಮ ಬೀರಬಹುದು ಎಂಬ ಲೆಕ್ಕಾಚಾರವೂ ಇಲ್ಲದಿಲ್ಲ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ಣಯ ರೈತರ ಆತಂಕವನ್ನು ದೂರ ಮಾಡಿದ್ದರೂ ಜಿಲ್ಲೆಯಲ್ಲಿ ಬೆಳೆದು ನಿಂತ ಬೆಳೆ ರಕ್ಷಣೆಗೆ ನಾಲೆಗಳಲ್ಲಿ ನೀರು ಹರಿಸುವ ಕುರಿತಂತೆ ಯಾವುದೇ ಆದೇಶ ನೀಡದೆ ರೈತರನ್ನು ಕತ್ತಲಲ್ಲಿ ಇಡಲಾಗಿದೆ ಎಂಬುದು ರೈತರ ಆರೋಪ.
ರೈತರೊಂದಿಗೆ ರೈತ ಸಂಘ, ಬಿಜೆಪಿ ನಾಯಕರು ಸೇರಿಕೊಂಡಿರುವುದು ಜೆಡಿಎಸ್ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಉಸ್ತುವಾರಿ ಸಚಿವರಲ್ಲದೇ ಶಾಸಕರು ಕೂಡ ತಿರುಗಿ ನೋಡುತ್ತಿಲ್ಲ. ಸದ್ಯಕ್ಕೆ ಎಲ್ಲರೂ ಸಂಸದೆ ಸುಮಲತಾ ಅವರ ಕಡೆಗೆ ಬೊಟ್ಟು ಮಾಡಿ ತಾವು ನುಣುಚಿಕೊಳ್ಳುತ್ತಿದ್ದಾರೆ.
ನಾಪತ್ತೆಯಾದ ಶಾಸಕರು ಎಂಬ ಒಕ್ಕಣೆಯೊಂದಿಗೆ ಎಲ್ಲ ಶಾಸಕರ ಭಾವಚಿತ್ರಗಳುಳ್ಳ ಬ್ಯಾನರನ್ನು ಧರಣಿ ಸ್ಥಳದಲ್ಲಿ ಅಳವಡಿಸುವ ಮೂಲಕ ಶಾಸಕರ ವಿರುದ್ಧ ತಮ್ಮ ಸಿಟ್ಟನ್ನು ರೈತರು ಹೊರಹಾಕಿದ್ದಾರೆ. ಜೆಡಿಎಸ್ ನ ಭದ್ರಕೋಟೆಯಾಗಿರುವ ಮಂಡ್ಯದಲ್ಲಿ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ಮತ ನೀಡದೆ ಸುಮಲತಾ ಅವರನ್ನು ಜನತೆ ಗೆಲ್ಲಿಸಿರುವುದು ಕೂಡ ಜೆಡಿಎಸ್ ಸಚಿವರು, ಶಾಸಕರು ರೈತರತ್ತ ತಿರುಗಿ ನೋಡದಿರಲು ಕಾರಣವಿರಬಹುದಾ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.











Click it and Unblock the Notifications