ಮುಂದಿನ ಪೀಳಿಗೆಗಾಗಿಯಾದರೂ ನಾವು ಹೋರಾಟ ಮಾಡಲೇಬೇಕು; ನಾಗರಾಜ್ ಕಲ್ಕುಟಗಾರ್

(ದಿಲ್ಲಿ ರೈತ ಚಳವಳಿಯ ಬೆಂಬಲಕ್ಕೆ ಕರ್ನಾಟಕದಿಂದ ಕಾಲ್ನಡಿಗೆಯಲ್ಲಿ ಹೋಗುತ್ತಿರುವ ಜನಪರ ಕಾಳಜಿಯ ಕನ್ನಡಿಗ)
ದೆಹಲಿಯ ರೈತ ಚಳವಳಿಗೆ ಬೆಂಬಲವಾಗಿ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಿಂದ ಫೆಬ್ರವರಿ 11ರಂದು ದಿಲ್ಲಿಗೆ ಪಾದಯಾತ್ರೆ ಆರಂಭಿಸಿದ ನಾಗರಾಜ್. ಎಸ್. ಕಲ್ಕುಟಗಾರ್ ಇಂದು ಇಂದೋರ್ ತಲುಪಿದ್ದಾರೆ. ನವೆಂಬರ್ 26ಕ್ಕೆ ದಿಲ್ಲಿಯ ಚಳವಳಿಗೆ ಒಂದು ವರ್ಷ ತುಂಬುವ ಸಂದರ್ಭಕ್ಕೆ ದಿಲ್ಲಿ ಚಳವಳಿ ಸೇರಲಿದ್ದಾರೆ.

ಅಷ್ಟೊತ್ತಿಗೆ ಅವರು ಸುದೀರ್ಘ ಏಳು ತಿಂಗಳುಗಳ ಕಾಲ ಏಳು ಸಾವಿರ ಕಿಲೋಮೀಟರ್ ಕಾಲ್ನೆಡಿಗೆಯಲ್ಲಿ ಕ್ರಮಿಸಿದಂತಾಗುತ್ತದೆ. 40ರ ಹರೆಯದ ನಾಗರಾಜ್ ಸಾಹಸಕ್ಕೆ ಭಾಜಪ ದುರಾಡಳಿತವೇ ಕಾರಣ ಎಂಬುದು ಇಂದು ಅವರನ್ನು ಸಂಪರ್ಕಿಸಿದ ಒನ್ಇಂಡಿಯಾ ಕನ್ನಡಕ್ಕೆ ಸ್ಪಷ್ಟವಾಗಿ ಮಾತನಾಡಿದ್ದಾರೆ.

ನಾಗರಾಜ್ ಮಾತು
"ಇಲ್ನೋಡಿ ಅವರು (ಭಾಜಪ) ರಾಜಕೀಯ ಪಕ್ಷವಾಗಿ ಆಡಳಿತದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಹಿಂದೂ ಧರ್ಮವನ್ನು, ಹಿಂದುತ್ವವನ್ನು ರಾಜಕೀಯಕ್ಕಾಗಿ ಅತಿಯಾಗಿ ಬಳಸಿಕೊಳ್ಳುವುದು ಒಂದು ಮತ್ತೆ ಎರಡನೆಯದು ಪ್ರಜಾಪ್ರಭುತ್ವದಲ್ಲಿ ಯಾವುದೇ ನೀತಿಯನ್ನು ಯಾರಾದರೂ ವಿರೋಧಿಸಿದಾಗ ಅದನ್ನು ಗೌರವಿಸಬೇಕು. ಆದರೆ ಅದರ ಬದಲಾಗಿ ಅಂಥವರ ಬಗ್ಗೆ ದ್ವೇಷವನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ."

We Must Fight Against Farm Laws For The Next Generation; Nagaraj Kalkutagar

"ನರೇಂದ್ರ ಮೋದಿ ವಿರುದ್ಧ ಅಥವಾ ಅವರ ಸರ್ಕಾರದ ವಿರುದ್ಧ ಮಾತನಾಡುವರನ್ನು ದೇಶದ್ರೋಹಿಗಳೆಂಬಂತೆ ಬಿಂಬಿಸುತ್ತಾರೆ. ಮೊನ್ನೆ ಸುಪ್ರೀಂಕೋರ್ಟ್ ಹೇಳಿತ್ತು. ಹೋರಾಟ ಮಾಡುವುದು ಅವರ ಹಕ್ಕು ಅವರು ಮಾಡಲಿ, ನೀವು ಬ್ಯಾರಿಕೇಡ್ ತೆಗೆಯಿರಿ ಅವರು ಬಂದು ಎಲ್ಲೋ ಓಪನ್ ಸ್ಪೇಸ್‌ನಲ್ಲಿ ಕೂತು ಹೋರಾಟ ಮಾಡುತ್ತಾರೆ ಎಂದು. ಆದರೂ ಹೋರಾಟನಿರತ ರೈತರ ಬಗ್ಗೆಯೂ ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ."

"ನಾನು ದಾರಿಲಿ ಹೋಗುತ್ತಿರುವಾಗ ತುಂಬಾ ಅಸಂಬದ್ಧ ಪ್ರಶ್ನೆಗಳು ಎದುರಾಗುತ್ತಿವೆ. ನೀವೇನು ರೈತರಾ ಅಂತಾ ಕೇಳುತ್ತಾರೆ, ಅಲ್ಲಿ ಕುಂತಿರೋವ್ರೆಲ್ಲಾ ಬಿರಿಯಾನಿ ತಿಂದ್ಕೊಂಡು ಕುಂತಿದಾರೆ ಅಂತಾರೆ, ಅವರ ರೈತರೇ ಅಲ್ಲಾ ಅಂತಾರೆ. ಪ್ರಜಾಪ್ರಭುತ್ವ ಅಂದ್ರೇನು, ಅಲ್ಲಿ ಪ್ರತಿಭಟನೆಗೂ ಹಕ್ಕಿದೆ ಅಲ್ವಾ, ಆದ್ರೂ ಅವ್ರು ದ್ವೇಷ ಬಿತ್ತೋದ್ರಲ್ಲೇ ತೊಡಗಿದ್ದಾರೆ. ಯುವಶಕ್ತಿ ಇವರ ಕೈಗೆ ಸಿಕ್ಕು ನಾಶ ಆಗ್ತಿದೆ."

"ಎಲ್ಲಾ ಕಡೆ ಹೆಂಗಾಗ್ತಿದೆ ನೋಡಿ ಈಗ ದೇಶದಲ್ಲೆಲ್ಲಾ! ಮೊನ್ನೆ ಕರ್ನಾಟಕದ ಮುಖ್ಯಮಂತ್ರಿಗಳು "ಒಂದು ಕ್ರಿಯೆಗೆ ಪ್ರತಿಕ್ರಿಯೆ ಇದೆ ಎಂಬ ಹೇಳಿಕೆ ಕೊಟ್ಟ ನಂತರ ಕರ್ನಾಟಕದಲ್ಲಿ ಗುಂಪು ಕಟ್ಟಿಕೊಂಡು ಎಲ್ಲೂ ಹೇಳಿಕೆ ಕೊಡ್ತಿದ್ದಾರೆ. ಮೊನ್ನೆ ಒಬ್ರು ಯಾರೋ ಹೇಳ್ತಿದ್ರು, ನಾವು ಮನೆ ಹೊಕ್ಕು ಹೊಡೀತೀವಿ ನಿಮ್ಗೆಲ್ಲಾ ಅಂತಿದ್ರು. ಏನ್ ಇದು? ಹಿಂಗೆಲ್ಲಾ ಮಾತಡ್ಬೋದ!? ನಮ್ಮಲ್ಲಿ ಪೊಲೀಸ್ ಇದೆ, ಪ್ಯಾರಾ ಮಿಲಿಟಿರಿ ಇದೆ, ಮಿಲಿಟರಿ ಇದೆ, ಕಾನೂನು ಬದ್ಧವಾಗಿ ಆ್ಯಕ್ಷನ್ ತಗೊಳ್ಳಿಕ್ಕೆ ವ್ಯವಸ್ಥೆ ಇದೆ. ಅಗತ್ಯ ಇದ್ರೆ ಅವ್ರು ಅವ್ರ ಕೆಲ್ಸ ಮಾಡ್ತಾರೆ. ಇವ್ರೇನು ಹಿಂಗೆಲ್ಲಾ ಮಾತಾಡೋದು."

We Must Fight Against Farm Laws For The Next Generation; Nagaraj Kalkutagar

"I call it a state sponsored terrorism" ಸರ್ಕಾರವೇ ಸಮಾಜದಲ್ಲಿ ಭಯೋತ್ಪಾದನೆ ಬಿತ್ತುತ್ತಿದೆ. ಇದು ಬಾರೀ ಡೇಂಜರ್, ಭ್ರಷ್ಟಾಚಾರಕ್ಕಿಂತಲೂ ಇದು ದೊಡ್ಡ ಅಪಾಯಕಾರಿ ಬೆಳವಣಿಗೆ ಇದು. ಇದನ್ನು ಯಾರಾದ್ರೂ ವಿರೋಧಿಸಿದ್ರೆ ಕೊಲೆನೇ ಮಾಡ್ಬಿಡ್ತಾರೆ. ಅವ್ರು ಹೇಸಲ್ಲ. ಮೊನ್ನೆ ಮಹಾರಾಷ್ಟ್ರದಲ್ಲಿ ಇದೇ ರೀತಿ ಹೋರಾಟ ಮಾಡುವ ಬರಹಗಾರನನ್ನು ಕೊಂದ್ರು. ಅವ್ರ ಕಡೆಯವ್ರು ನನ್ನ ಬಳಿ ಬಂದು ಹುಷಾರು ಸಾರ್ ಅಂತಾ ಕಾಳಜಿಯಿಂದ ಎಚ್ಚರಿಸಿ ಹೋದ್ರು. ನೋಡಿ ಆ ಮಟ್ಟಕ್ಕೆ ಹೋಗಿದಾರೆ. ಹಾಗಾಗಿ ಭಾಜಪದ ಆಡಳಿತ ವೈಖರಿ ನನಗೆ ಇಷ್ಟವಾಗ್ತಿಲ್ಲ.

"ಜನ ಉತ್ತರ ಕೊಡ್ತಾರೆ. 1947ರಿಂದ ಜನರು ಸ್ವಾತಂತ್ರ್ಯವನ್ನು ಅನುಭವಿಸಿದ್ದಾರೆ. ಅದಕ್ಕೆ ಧಕ್ಕೆ ಬಂದಾಗ ಜನ ಅದಕ್ಕೆ ತಕ್ಕ ಉತ್ತರ ಕೊಡ್ತಾರೆ. ಹಿಂದೆ ಇಂಡಿಯಾ ಅಂದರೆ ಇಂದಿರಾ, ಇಂದಿರಾ ಅಂದರೆ ಇಂಡಿಯಾ ಅನ್ನೋ ಕಾಲದಲ್ಲೂ ಜನ ಉತ್ತರ ಕೊಟ್ರು. ಈಗಲೂ ಕೊಡ್ತಾರೆ. ಆ ನಿಟ್ಟಿನಲ್ಲಿ ಒಂದಿಷ್ಟು ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಹಾಕ್ಕೋತೀನಿ. ನೋಡೋಣ ಏನಾಗುತ್ತೆ ಅಂತಾ..!"

"ಭಾಜಪ ಆಡಳಿತದ ಕಡೆ ಗಮನಹರಿಸಬೇಕೇ ಹೊರತು, ಸಮಾಜದಲ್ಲಿ ಜಾತಿ, ಧರ್ಮ, ಭಾಷೆ ಹೆಸರಿನಲ್ಲಿ ಆತಂಕ ಭಯ ಹುಟ್ಟಿಸೋ ಕೆಲ್ಸಾ ಮಾಡಬಾರ್ದು."

We Must Fight Against Farm Laws For The Next Generation; Nagaraj Kalkutagar

ಊಟ..ಬಟ್ಟೆ.. ವಾಸ್ತವ್ಯ:
"ಸದ್ಯಕ್ಕೆ ನನ್ನ ಬಳಿ ಇರೋದು ಎರಡು ಪ್ಯಾಂಟು, ಮೂರು ಶರ್ಟು, ಒಂದು ಜೊತೆ ನೈಟ್ ಡ್ರೆಸ್ ಮಾತ್ರ. ಸಮಯ ಸಿಕ್ಕಾಗ ತೊಳೆದಾಕ್ಕೋತ್ತೀನಿ. ಅನಾನುಕೂಲ ಆದಾಗ ಹೋಟೆಲ್ ರೂಂ ಮಾಡ್ಕೋತೀನಿ, ಅಲ್ಲಿ ಬಟ್ಟೆ ತೋಳ್ಕೋತೀನಿ. ಬಟ್ಟೆ ಹಾಳಾದಾಗ ಎಸೆದು ಹೊಸಾದು ತಗೋತೀನಿ. ಕರ್ನಾಟಕದಲ್ಲಿ ಎರಡು ಬ್ಯಾಗ್ ಇತ್ತು. ಬಸ್ಸಿನಲ್ಲಿ ತರಿಸ್ಕೊಂತಿದ್ದೆ. ಈಗ ಒಂದೇ ಬ್ಯಾಗ್. ಊಟ ಯಾರಾದ್ರೂ ವ್ಯವಸ್ಥೆ ಮಾಡಿದ್ರೆ ತಗೊಳ್ತೀನಿ, ಇಲ್ದೆ ಇದ್ರೆ ನಂದೇ ವ್ಯವಸ್ಥೆ ಮಾಡ್ಕೋತೀನಿ. ನಾನು ನಿಲ್ಲಲ್ಲ."

ಮನೆಯ ಆತಂಕ
"ಮನೇಲಿ ಆರಂಭದಲ್ಲಿ ಹೆದರಿಕೆ ಇತ್ತು. ಯಾರೇ ಇವ್ರನ್ನು (ಭಾಜಪ) ಪ್ರಶ್ನೆ ಮಾಡಿದ್ರೂ ಹೊಡ್ದಾಕ್ತಾರೆ ಅನ್ನೋ ಭಯ. ಆಮೇಲೆ ನಾನೇ ಧೈರ್ಯ ತುಂಬಿದೆ. ಎಷ್ಟು ದಿನಾ ಅಂತಾ ಹೆದರಿಕೊಂಡು ಮನೇಲೆ ಕೂರೋದು. ನಾಳೆ ನಮ್ಮ ಮಕ್ಕಳ ಕಾಲಕ್ಕೆ ಇದ್ಕಿಂತಾ ಭಯಾನಕ ವಾತಾವರಣ ಸೃಷ್ಟಿಯಾಗ್ಬೋದು. ಬೇಡ. ಅದು ಆಗೋದು ಬೇಡ. ಮುಂದಿನ ನಮ್ಮ ಜನರೇಷನ್‌ಗೋಸ್ಕರ ನಾವು ಹೋರಾಟ ಮಾಡ್ಲೇಬೇಕಿದೆ."

"ದಿನಾಲೂ ಮನೆಗೆ ವಿಡಿಯೋ ಕಾಲ್ ಮಾಡಿ ಮಾತಾಡ್ತೀನಿ. ಅಮ್ಮಂದೂ ಅದೇ ಭಯ. ಅವ್ರಿಗೂ ಹೇಳಿ ಸಮಾಧಾನ ಮಾಡಿದ್ದೀನಿ. ರೈತ ಹೋರಾಟಗಾರರಾದ ವೀರಸಂಗಯ್ಯ ಆಗಾಗ ಫೋನ್ ಮಾಡಿ ಮಾತನಾಡ್ತಿರ್ತಾರೆ. ಬೇರೆ ಬೇರೆ ಜಿಲ್ಲೆಯವರು ಮಾತಾಡ್ತಿರ್ತಾರೆ. ಹಣ ಏನಾದ್ರೂ ಬೇಕಾ ಅಂತಾ ಕೇಳ್ತಾರೆ. ಹೀಗೆ ನಡೆದಿದೆ ನಡಿಗೆ..."

"ನವೆಂಬರ್ 20ನೇ ತಾರೀಖಿಗೆ ಗಾಜೀಪುರ್ ಬಾರ್ಡರ್ ತಲುಪಿ ರಾಕೇಶ್ ಟಿಕಾಯತ್ ಅವ್ರನ್ನು ಸೇರ್ಕೊಳ್ತೀನಿ. ಅಲ್ಲಿಂದ 26ಕ್ಕೆ ಸಿಂಘು ಬಾರ್ಡರ್ ತಲುಪ್ತೀನಿ. ಅವತ್ತು ಸಭೆ ಇರುತ್ತೆ. ಅಲ್ಲಿ ಸೇರ್ಕೋಬೇಕು ನಾನು. ಕರ್ನಾಟಕದಿಂದ ಸುಮಾರು ಜನ ದಿಲ್ಲಿಗೆ ಬರುವವರಿದ್ದಾರೆ, ಹೋರಾಟ ಮುಂದುವರೆಸುತ್ತೇನೆ."

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+