ಹಿರಿಯೂರು: ಗಾಯಿತ್ರಿ ಡ್ಯಾಂ ಸೇರಿದಂತೆ ಈ ಕೆರೆಗಳಿಗೆ ನೀರು ಹರಿಸದಿದ್ರೆ ಮುಂದಾಗುವ ಕಥೆನೇ ಬೇರೆ.!-ಸಚಿವರಿಗೆ ರೈತರ ಎಚ್ಚರಿಕೆ
ಹಿರಿಯೂರು, ಆಗಸ್ಟ್, 22: ತಾಲ್ಲೂಕಿನ ಜೆಜಿ ಹಳ್ಳಿ ಹೋಬಳಿಯ ಕೆರೆಗಳಿಗೆ ನೀರು ಹರಿಸಿ ಎಂದು ರೈತ ಸಂಘದಿಂದ ನಡೆಸುತ್ತಿರುವ ಧರಣಿ ಗುರುವಾರ (ಆಗಸ್ಟ್ 22) 65ನೇ ದಿನಕ್ಕೆ ಕಾಲಿಟ್ಟಿದ್ದು, ಇದುವರೆಗೂ ಕ್ಷೇತ್ರದ ಸಚಿವರು ಸ್ಥಳಕ್ಕೆ ಆಗಮಿಸದೇ ರೈತರಿಗೆ ಅವಮಾನ ಮಾಡಿದ್ದಾರೆ ಎಂದು ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಆರೋಪಿಸಿದರು.
ಧರಣಿ ನಿರತ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು ನೀರಿಗಾಗಿ ಆಗ್ರಹಿಸಿ ರೈತರು ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಸಚಿವರು ಭೇಟಿ ನೀಡದೇ ಇರುವುದು ನಿಜಕ್ಕೂ ಖಂಡನೀಯವಾಗಿದೆ ಎಂದರು.

ಸಚಿವರಿಗೆ ರೈತರ ಬಗ್ಗೆ ಕಾಳಜಿ ಇದ್ದಿದ್ದೇ ಆಗಿದ್ದಲ್ಲಿ ಅವರು ಧರಣಿ ಸ್ಥಳಕ್ಕೆ ಆಗಮಿಸಬೇಕು. ರೈತರ ಅಹವಾಲುಗಳನ್ನು ಸ್ವೀಕರಿಸಿ ಸರ್ಕಾರಕ್ಕೆ ತಲುಪಿಸಬೇಕು ಎಂದು ಒತ್ತಾಯಿಸಿದರು. ಧರಣಿ ಹಮ್ಮಿಕೊಂಡು ಎರಡು ತಿಂಗಳು ಕಳೆದರೂ ಇದುವರೆಗೂ ರೈತರನ್ನು ಭೇಟಿ ಮಾಡದೇ ಇರುವುದು ಆಶ್ಚರ್ಯ ತಂದಿದೆ.
ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಸಚಿವರು ಧರಣಿ ಸ್ಥಳಕ್ಕೆ ಭೇಟಿ ನೀಡದಿದ್ದಲ್ಲಿ ಸಚಿವರ ಕಚೇರಿ ಮುಂದೆ ರೈತರು ಧರಣಿ ಕೂರಲಾಗುವುದು. ಜೊತೆಗೆ ಸಚಿವರಿಗೆ ಘೇರಾವ್ ಹಾಕಲಾಗುವುದು. ಅಲ್ಲದೆ, ಸಚಿವರು ಕ್ಷೇತ್ರದಲ್ಲಿ ಭೇಟಿ ನೀಡಿದ ಎಲ್ಲಾ ಕಡೆಗಳಲ್ಲಿ ಧಿಕ್ಕಾರ ಕೂಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈಗಾಗಲೇ ಮಳೆಗಾಲ ಮುಗಿಯುತ್ತಾ ಬಂದಿದ್ದು, ಕೆರೆಗಳಿಗೆ ನೀರು ಬಾರದೆ ಇರುವುದು ರೈತರಲ್ಲಿ ಆತಂಕ ಉಂಟಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ತೋಟಗಳು ಮತ್ತು ಜಾನುವಾರುಗಳನ್ನು ಉಳಿಸಿಕೊಳ್ಳಲು ತುಂಬಾ ಕಷ್ಟವಾಗುತ್ತದೆ. ರೈತರು ದಂಗೆ ಹೇಳುವುದಕ್ಕಿಂತ ಮೊದಲು ಸರ್ಕಾರ ಎಚ್ಚೆತ್ತುಕೊಂಡು ರೈತರ ಬೇಡಿಕೆಗಳನ್ನು ಪೂರೈಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಗಾಯಿತ್ರಿ ಡ್ಯಾಂ ಸೇರಿದಂತೆ ಹೋಬಳಿಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತೆ ಧರಣಿಗೆ ಕೆ.ಆರ್.ಹಳ್ಳಿ, ಬೋರನಕುಂಟೆ ಹಾಗೂ ಗೊರ್ಲಡಕು ಗ್ರಾಮದ ರೈತರು ಭಜನೆ ಮಾಡುವ ಮೂಲಕ 65ನೇ ದಿನದ ಧರಣಿಗೆ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೆ.ಆರ್.ಹಳ್ಳಿ ರಾಜಪ್ಪ, ರಾಮಯ್ಯ, ಸುರೇಶ್, ರಾಜಕುಮಾರ್, ಜಯರಾಮಪ್ಪ, ಚಂದ್ರಪ್ಪ, ಹೆಚ್.ಆರ್.ತಿಪ್ಪೇಸ್ವಾಮಿ, ಎಂ.ಆರ್.ಈರಣ್ಣ, ನಾಗರಾಜ್, ಮೀಸೆ ರಾಜಪ್ಪ, ತಿಮ್ಮರಾಯಪ್ಪ, ಈರಣ್ಣ, ಕನ್ಯಪ್ಪ, ವಜೀರ್ ಸಾಬ್, ಸಣ್ಣಪ್ಪ, ರಾಮಕೃಷ್ಣ, ಸುರೇಶ್, ಅರಳಿಕೆರೆ ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ರೈತರ ಮನವಿ ಏನು?: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯದ ಪಕ್ಕದಲ್ಲಿರುವ ಭರಮಗಿರಿ, ಗೌನಳ್ಳಿ, ಭೂತನಹಟ್ಟಿ, ಬೀರೇನಹಳ್ಳಿ, ತವಂದಿ ಹಾಗೂ ಕೂನಿಕೆರೆ ಕರೆಗಳಿಗೆ ಡ್ಯಾಂನಿಂದ ನೀರು ಹರಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕರೆ ನೀಡಿದ್ದ ಬಂದ್ ಯಶಸ್ವಿಯಾಯಿತು.
ವಾಣಿ ವಿಲಾಸಪುರ ಗ್ರಾಮದ ಪ್ರಮುಖ ಬೀದಿಗಳಲ್ಲಿ ರೈತ ಸಂಘದ ಕಾರ್ಯಕರ್ತರು ಮೆರವಣಿಗೆ ನಡೆಸಿ, ವೇದಿಕೆ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸಿ.ರಾಜೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಅವರು ಮಾತನಾಡಿ, ಪ್ರತಿವರ್ಷ ಭದ್ರಾ ಜಲಾಶಯ ಹಾಗೂ ಎತ್ತಿನಹೊಳೆ ಯೋಜನೆಯಿಂದ 10 ಟಿಎಂಸಿ ನೀರನ್ನು ವಾಣಿ ವಿಲಾಸ ಸಾಗರ ಡ್ಯಾಂಗೆ ಮೀಸಲಿಡಬೇಕು. ಕೇಂದ್ರ ಸರ್ಕಾರ ಘೋಷಿಸಿರುವ 5,300 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ತಾಲ್ಲೂಕಿನಲ್ಲಿ ವಾಣಿ ವಿಲಾಸ ಜಲಾಶಯ ಇದ್ದು, ಜಲಾಶಯದ ಪಕ್ಕದಲ್ಲಿರುವ ಕೆರೆಗಳಿಗೆ ನೀರು ತುಂಬಿಸಲು ರಾಜ್ಯ ಸರ್ಕಾರ ಕೂಡಲ ತ್ವರಿತಗತಿಯಲ್ಲಿ ಕೆಲಸ ಆರಂಭಿಸಬೇಕು ಎಂದರು. ಇನ್ನು ಈ ಭಾಗದಲ್ಲಿ ಸಾವಿರಾರು ಅಡಿ ಬೋರ್ ವೆಲ್ ಕೊರೆಸಿದರೂ ನೀರು ಸಿಗುತ್ತಿಲ್ಲ. ಕುಡಿಯುವ ನೀರಿಗಾಗಿ ಟ್ಯಾಂಕರ್ ಮೂಲಕ ಗ್ರಾಮ ಪಂಚಾಯಿತಿಯಿಂದ ನೀರು ಪೂರೈಕೆ ಮಾಡಲಾಗುತ್ತದೆ.
ಹೀಗೆ ಆದರೆ ಮುಂದಿನ ದಿನಗಳಲ್ಲಿ ರೈತರು ಸಾಲಸೂಲ ಮಾಡಿ ಬೆಳೆಸಿರುವ ಅಡಿಕೆ, ತೆಂಗು ಬಾಳೆ ಮುಂತಾದ ತೋಟಗಾರಿಕೆ ಬೆಳೆಗಳು ಒಣಗಿ ಹೋಗಿ, ಸಾವಿರಾರು ರೈತರ ಬದುಕು ಬೀದಿಗೆ ಬೀಳುತ್ತದೆ. ಆದ್ದರಿಂದ ಕೂಡಲೇ ಈ ಭಾಗಕ್ಕೆ ನೀವು ಹರಿಸಬೇಕು. ಒಂದು ವಾರದೊಳಗೆ ಆದೇಶ ಆಗಬೇಕು. ಇಲ್ಲದಿದ್ದರೆ ತಾಲ್ಲೂಕ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.












Click it and Unblock the Notifications