ತುಂಗಭದ್ರಾದಲ್ಲಿ ನೀರಿನ ಕೊರತೆ, ಭತ್ತ ಬೆಳೆಯುವ ರೈತರಿಗೆ ಸಂಕಷ್ಟ
ಕೊಪ್ಪಳ, ಆಗಸ್ಟ್ 29 : ತುಂಗಭದ್ರಾ ಜಲಾಶಯದಲ್ಲಿ ಈ ಬಾರಿ ನೀರಿನ ಸಂಗ್ರಹಣೆ ಕಡಿಮೆ ಇದ್ದು, ಭತ್ತದ ಬೆಳೆ ಬೆಳೆಯುವುದಕ್ಕೆ ಸಂಕಷ್ಟ ಎದುರಾಗಿದೆ. ರೈತರು ಭತ್ತದ ಬದಲು ಪರ್ಯಾಯವಾದ ಮಿತ ನೀರಾವರಿ ಬೆಳೆಗಳನ್ನು ಬೆಳೆಯಬೇಕು ಎಂದು ಜಿಲ್ಲಾಡಳಿತ ಈಗಾಗಲೇ ಸಲಹೆ ಕೊಟ್ಟಿದೆ.
'ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಮಿತ ನೀರಾವರಿ ಬೆಳೆಗಳನ್ನು ಬೆಳೆಯುವ ಕುರಿತು ಹಾಗೂ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ರೈತರ ಅಭಿಪ್ರಾಯ ಸಂಗ್ರಹಣೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ' ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಹೇಳಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ, 'ತುಂಗಭದ್ರಾ ಜಲಾಶಯದಲ್ಲಿ ಈ ವರ್ಷ ನೀರಿನ ಸಂಗ್ರಹ ಕಡಿಮೆ ಇದ್ದು, ಮಿತ ನೀರಾವರಿ ಬೆಳೆ ಬೆಳೆಯುವ ಕುರಿತಂತೆ ರೈತರೊಂದಿಗೆ ಸಮಾಲೋಚನೆ ನಡೆಸುವಂತೆ' ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟಿದ್ದಾರೆ.
ಸದ್ಯ, ಜಲಾಶಯದಲ್ಲಿ 56 ಟಿಎಂಸಿ ನೀರಿನ ಸಂಗ್ರಹವಿದೆ. ಕಳೆದ ವರ್ಷಕ್ಕೂ ಈ ವರ್ಷಕ್ಕೂ 17 ಟಿಎಂಸಿ ಯಷ್ಟು ನೀರಿನ ಕೊರತೆ ಇದೆ. ಒಳ ಹರಿವಿನ ಪ್ರಮಾಣದ ಆಧಾರದಲ್ಲಿ ಇನ್ನೂ 9 ಟಿಎಂಸಿ ನೀರು ಸಂಗ್ರಹವಾಗುವ ನಿರೀಕ್ಷೆ ಇದೆ. ಒಟ್ಟು 65 ಟಿಎಂಸಿ ನೀರು ಮಾತ್ರ ಲಭ್ಯವಾಗುವ ಸಾಧ್ಯತೆಗಳಿವೆ.
ನ್ಯಾಯಾಧೀಕರಣದ ನಿರ್ಧಾರದಂತೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಈ ನೀರನ್ನು ಹಂಚಿಕೊಳ್ಳಲಿವೆ. ಜೊತೆಗೆ ಕುಡಿಯುವ ನೀರಿನ ಬಳಕೆಗಾಗಿಯೂ ನೀರು ಮೀಸಲಿಡಬೇಕು. ಕೊಪ್ಪಳ ಜಿಲ್ಲೆಯಲ್ಲಿ 40 ಸಾವಿರ ಹೆಕ್ಟೆರ್, ಬಳ್ಳಾರಿ ಜಿಲ್ಲೆಯಲ್ಲಿ 90 ಸಾವಿರ, ರಾಯಚೂರು ಜಿಲ್ಲೆಯಲ್ಲಿ ಸುಮಾರು 1.20 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ.
ಕೃಷಿ ಇಲಾಖೆ ಅಧಿಕಾರಿಗಳ ಪ್ರಕಾರ ಭತ್ತದ ಸಸಿ ಮಡಿಗಳಲ್ಲಿ ಈಗ ಲಭ್ಯವಿರುವ ಸಸಿಗಳು ನಾಟಿ ಮಾಡಲು ಯೋಗ್ಯವಲ್ಲ. ಅಲ್ಲದೆ, ಸದ್ಯಕ್ಕೆ ಭತ್ತ ನಾಟಿ ಮಾಡಲು ಇದು ಸೂಕ್ತ ಕಾಲವಲ್ಲ. ಒಂದು ವೇಳೆ ಈ ತಿಂಗಳು ಭತ್ತ ನಾಟಿ ಮಾಡಿದಲ್ಲಿ, ಕಾಳು ಕಟ್ಟುವ ಕಾಲಕ್ಕೆ ನೀರಿನ ಕೊರತೆ ಉಂಟಾಗಿ ನೀರು ಲಭ್ಯವಾಗದಿದ್ದಲ್ಲಿ, ಇಡೀ ಭತ್ತದ ಬೆಳೆ ಹಾಳಾಗಿ, ರೈತರು ನಷ್ಟ ಅನುಭವಿಸಲಿದ್ದಾರೆ.
ಆದ್ದರಿಂದ, ರೈತರು ಭತ್ತದ ಬದಲು ಮೆಕ್ಕೆಜೋಳ, ಕಡಲೆ, ಹಿಂಗಾರಿ ಜೋಳ, ನವಣೆ, ಸೇರಿದಂತೆ ಪರ್ಯಾಯ ಬೆಳೆಯನ್ನು ಬೆಳೆಯಲು ಜಿಲ್ಲಾಡಳಿತ ಸಲಹೆ ನೀಡಿದೆ.












Click it and Unblock the Notifications