ಮೈಸೂರು, ಚಾಮರಾಜನಗರ ರೈತರಿಗೆ ಸಂಕಷ್ಟ ತಂದ ಕೊರೊನಾ
ಮೈಸೂರು, ಏಪ್ರಿಲ್ 12 : ಲಾಕ್ ಡೌನ್ನಿಂದ ಕೃಷಿ ಚಟುವಟಿಕೆಗೆ ಯಾವುದೇ ತೊಂದರೆ ಇಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ, ರೈತರು ಬೆಳೆದಿರುವ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ತೊಂದರೆ ಆಗುತ್ತಿದೆ. ತರಕಾರಿ, ಹಣ್ಣು ಹೊಲದಲ್ಲಿ ಕೊಳೆಯಲು ಆರಂಭವಾಗಿದೆ.
ಮೈಸೂರು ಭಾಗದಲ್ಲಿ ತರಕಾರಿ, ಹಣ್ಣು, ಹೂವು ಕೊಳ್ಳಲು ತಮಿಳುನಾಡು, ಕೇರಳ ಭಾಗದಿಂದ ಹೆಚ್ಚಿನ ಜನರು ಬರುತ್ತಿದ್ದರು. ಈಗ ಲಾಕ್ ಡೌನ್ ಪರಿಣಾಮ ಅಂತರರಾಜ್ಯ ಗಡಿ ಮುಚ್ಚಿದೆ. ಅಲ್ಲಿಂದ ಯಾವುದೇ ಜನರು ಇತ್ತ ಬರುತ್ತಿಲ್ಲ.
ಚಾಮರಾಜನಗರದಲ್ಲಿ ಬಾಳೆ ಕಾಯಿ ಸಾಗಿಸಲು ರೈತರು ಪರದಾಡುತ್ತಿದ್ದಾರೆ. ಹೂವಿನ ಬೆಳೆಯನ್ನು ಕೊಳ್ಳುವವರು ಇಲ್ಲ. ಮಂಡ್ಯ ಜಿಲ್ಲೆಯ ಕೆ. ಆರ್.ಪೇಟೆ, ನಾಗಮಂಗಲ ಮುಂತಾದ ಕಡೆ ಕಲ್ಲಂಗಡಿ ಮಾರಲಾಗುತ್ತಿಲ್ಲ.

ಹಾಸನದಿಂದ ದಕ್ಷಿಣ ಕನ್ನಡ ಮತ್ತು ಉಡುಪಿಗೆ ತರಕಾರಿ ಸರಬರಾಜು ಆಗುತ್ತಿತ್ತು. ಆದರೆ, ಈಗ ಲಾರಿ ಮಾಲೀಕರು ಉತ್ಪನ್ನ ಸಾಗಣೆಗೆ ಒಪ್ಪುತ್ತಿಲ್ಲ. ಕೊಡಗಿನಲ್ಲಿ ಶುಂಠಿ, ಕಾಳುಮೆಣಸು ಖರೀದಿಗೆ ಉತ್ಸಾಹವನ್ನು ಯಾರೂ ತೋರಿಸುತ್ತಿಲ್ಲ.
ಮೈಸೂರು ಜಿಲ್ಲಾ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ರುದ್ರೇಶ್ ಈ ಕುರಿತು ಮಾತನಾಡಿದ್ದು, "ಕೇರಳ, ತಮಿಳುನಾಡು ಕಡೆಗೆ ನಿತ್ಯ 100ಕ್ಕೂ ಹೆಚ್ಚು ತರಕಾರಿ, ಹಣ್ಣು ಲಾರಿಗಳು ಹೋಗುತ್ತಿದ್ದವು. ಈಗ 10 ರಿಂದ 15 ಲಾರಿ ಸಂಚಾರ ನಡೆಸುತ್ತಿದೆ" ಎಂದು ಹೇಳಿದ್ದಾರೆ.
ಬೀದರ್, ಕೊಪ್ಪಳ, ರಾಯಚೂರು ಮುಂತಾದ ಜಿಲ್ಲೆಗಳಲ್ಲಿ ರೈತರು ಎಪಿಎಂಸಿಗೆ ತರಕಾರಿ ಸಾಗಣೆ ಮಾಡಲು ಜಿಲ್ಲಾಡಳಿತ ವಾಹನದ ವ್ಯವಸ್ಥೆ ಮಾಡಿದೆ. ಆದರೆ, ಎಲ್ಲಾ ಜಿಲ್ಲೆಗಳಲ್ಲಿ ಈ ರೀತಿಯ ವ್ಯವಸ್ಥೆಗಳು ಆಗಿಲ್ಲ ಎಂದು ರೈತರು ದೂರುತ್ತಿದ್ದಾರೆ.
ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಹಣ್ಣು, ತರಕಾರಿಯನ್ನು ಸಾಗಣೆ ಮಾಡಲು ಯಾವುದೇ ಸಮಸ್ಯೆ ಇಲ್ಲ. ಆದರೆ, ಬೆಲೆ ಸಿಗುತ್ತಿಲ್ಲ ಎಂದು ರೈತರು ಆರೋಪ ಮಾಡುತ್ತಿದ್ದಾರೆ.











Click it and Unblock the Notifications