ಧಾರವಾಡ ಕೃಷಿ ಇಲಾಖೆಯಿಂದ ರೈತರಿಗೆ ಉಪಯುಕ್ತ ತರಬೇತಿ; ವಿವರ ತಿಳಿಯಿರಿ
ಧಾರವಾಡ, ಮೇ 22: ಕೃಷಿ ಇಲಾಖೆ, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ 2024-2025ನೇ ಸಾಲಿಗಾಗಿ ಕೃಷಿ ಪರಿಕರ ಮಾರಟಗಾರರ ತರಬೇತಿ ಕಾರ್ಯಕ್ರಮ ಹಾಗೂ ಸಭೆಯನ್ನು ಜಿಲ್ಲಾ ಕೃಷಿ ತರಬೇತಿ ಕೇಂದ್ರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಕಿರಣ್ ಕುಮಾರ್.ಎಂ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬೀಜ ಮತ್ತು ರಸಗೊಬ್ಬರಗಳನ್ನು ನಿಗದಿತ ದರಗಳ ಪ್ರಕಾರ ಮಾರಾಟ ಮಾಡುವಂತೆ ಸೂಚಿಸಿದರು. ಹಾಗೂ ಕಳಪೆ ಗುಣಮಟ್ಟದ ಬೀಜ, ಗೊಬ್ಬರ ಮತ್ತು ಕೀಟನಾಶಕಗಳ ಮಾರಾಟ ಕಂಡುಬಂದಲ್ಲಿ ಕಠಿಣ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದ ರಸಗೊಬ್ಬರ ದಾಸ್ತಾನು ಲಭ್ಯವಿದ್ದು, ಯಾವುದೇ ಕೊರತೆ ಇರುವುದಿಲ್ಲ. ಪರಿಕರ ಮಾರಾಟಗಾರರು ರಸಗೊಬ್ಬರಗಳನ್ನು ಸಂಗ್ರಹಸಿಟ್ಟುಕೊಂಡು, ತಾತ್ಕಾಲಿಕ ಅಥವಾ ಕೃತಕ ಅಭಾವ ಸೃಷ್ಟಿ ಮಾಡದಂತೆ ಎಚ್ಚರಿಸಿದರು.
ಕೃಷಿ ಇಲಾಖೆ ಉಪ ನಿರ್ದೇಶಕಿ ಜಯಶ್ರೀ ಹಿರೇಮಠ ಮಾತನಾಡಿ, ರೈತರಿಗೆ ಸಕಾಲಕ್ಕೆ ಬೀಜ, ಗೊಬ್ಬರಗಳನ್ನು ಪೂರೈಕೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಹಾಗೂ ಪರ್ಯಾಯ ರಸಗೊಬ್ಬರಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು. ನ್ಯಾನೋ ಯೂರಿಯಾ ಗೊಬ್ಬರ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿ, ಅದರ ಉಪಯುಕ್ತತೆ ಬಗ್ಗೆ ಕೃಷಿ ಉತ್ಪನ್ನ ಮಾರಾಟಗಾರರಲ್ಲಿ ಆಸಕ್ತಿ ಮೂಡಿಸಬೇಕು ಎಂದರು.
ಜಾರಿದಳ ಸಹಾಯಕ ಕೃಷಿ ನಿರ್ದೇಶಕ ವಿಠಲರಾವ್ ಮಾತನಾಡಿ, ರಸಗೊಬ್ಬರ ಕಾಯ್ದೆ, ಕೀಟನಾಶಕಿಗಳ ಕಾಯ್ದೆ, ಬೀಜ ನಿಯಂತ್ರಣ ಹಾಗೂ ಅಧಿನಿಯಮಗಳು ಕುರಿತು ಮಾಹಿತಿ ನೀಡಿದರು.
ಧಾರವಾಡ ತಾಲೂಕು ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅಣಗೌಡರ ಮಾತನಾಡಿ, ಮಾರಾಟ ಪರವಾನಿಗೆ ಇಲ್ಲದಿರುವುದು ಅಥವಾ ಪರವಾನಿಗೆ ನವೀಕರಸದೆ ಇರುವುದು, ರಸಗೊಬ್ಬರಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹಾಗೂ ನಿಯಮಿತವಾಗಿ ದಾಸ್ತಾನಿನಲ್ಲಿ ಇರುವ ರಸಗೊಬ್ಬರಗಳು ಫಾಸ್ ಮಿಶಿನ್ಗೆ ಹೊಂದಾಣಿಕೆ ಇರುವಂತೆ ನೋಡಿಕೊಳ್ಳಲು ತಿಳಿಸಿದರು.
ರೈತರಿಗೆ ಶಿಫಾರಸ್ಸಿನ ಆಧಾರದಲ್ಲಿ ರಸಗೊಬ್ಬರಗಳನ್ನು ಮಾರಾಟ ಮಾಡುವುದು, ನ್ಯಾನೋ ಯೂರಿಯಾದ ಕುರಿತು ಹೆಚ್ಚಿನ ಅರಿವು ಮೂಡಿಸಿ ಮಾರಾಟ ಮಾಡಲು ತಿಳಿಸಿದರು.
ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ಗಂಗಾಧರ ಕುಲಕರ್ಣಿ, ಹಂಪಣ್ಣವರ ಸೇರಿದಂತೆ ಅನೇಕ ರೈತರು, ಕೃಷಿ ಪರಿಕರಗಳ ಮಾರಾಟಗಾರರು, ಹಾಗೂ ಕೃಷಿ ಅಧಿಕಾರಿಗಳಾದ ಗುರುಪ್ರಸಾದ್, ರೇಖಾ ಬೆಳ್ಳಟ್ಟಿ ಹಾಗೂ ಮೋಹನ್ ದಂಡಗಿ ಉಪಸ್ಥಿತರಿದ್ದರು.












Click it and Unblock the Notifications