ಉಪ್ಪಿನಂಗಡಿ ಮುಸುಕುಧಾರಿಗಳಿಂದ ರೈತನ ಕಗ್ಗೊಲೆ
ಉಪ್ಪಿನಂಗಡಿ, ಏ.21: ಮೂವರು ಮುಸುಕುಧಾರಿಗಳು ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಕೊಕ್ಕಡ ಸಮೀಪದ ಕಳೆಂಜ ಗ್ರಾಮದ ರೈತನೊಬ್ಬನ ಮನೆಗೆ ನುಗ್ಗಿ ಬರ್ಬರವಾಗಿ ಹತ್ಯೆಗೈದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರೈತ ಅಣ್ಣಯ್ಯ ಗೌಡ ಕೊಲೆಗೆ
ಪತ್ನಿ ಹಾಗೂ ಮಗು ಸಾಕ್ಷಿಯಾಗಿದ್ದರು.
ಕಳೆಂಜ ಗ್ರಾಮದ ಶಾಲೆತಡ್ಕ ಬಳಿ ಶಾಲೆ ಮನೆ ದಿ.ಕೆಂಚಪ್ಪಗೌಡರ ಪುತ್ರ ಅಣ್ಣಯ್ಯ ಗೌಡ (48) ಅವರ ಮೇಲೆ ಭಾನುವಾರ ಮುಂಜಾನೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಅಣ್ಣಯ್ಯ ಅವರಿಗೆ ಚಾಕುವಿನಿಂದ ಇರಿದು ಗಂಭೀರ ಗಾಯಗೊಳಿಸಿ ಪರಾರಿಯಾಗಿದ್ದರು. ಇರಿತದಿಂದ ತೀವ್ರ ರಕ್ತಸ್ತಾವಕ್ಕೊಳಗಾದ ಅಣ್ಣಯ್ಯ ಗೌಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಕೃಷಿಕರಾಗಿರುವ ಅಣ್ಣಯ್ಯ ಗೌಡ ಪತ್ನಿ, ಮೂವರು ಮಕ್ಕಳೊಂದಿಗೆ ಶಾಲೆತಡ್ಕದಲ್ಲಿ ವಾಸಿಸುತ್ತಿದ್ದರು. ಅಣ್ಣಯ್ಯಗೌಡರಿಗೆ ಸಮಾಜದಲ್ಲಿ ಒಳ್ಳೆ ಹೆಸರು ಕೂಡಾ ಇದೆ. ಯಾರೂ ವಿರೋಧಿಗಳಿರಲಿಲ್ಲ. ಶಾಲೆಗೆ ರಜೆಯಿದ್ದ ಕಾರಣ ಹೆಣ್ಮಕ್ಕಳಿಬ್ಬರು ಸಂಬಂಧಿಕರ ಮನೆಗೆ ತೆರಳಿದ್ದರು. ಶನಿವಾರ ರಾತ್ರಿ ಅಣ್ಣಯ್ಯ ಗೌಡ, ಪತ್ನಿ ಅಮಿತಾ ಹಾಗೂ ಕಿರಿಯ ಮಗ ಅನುಷ್ ಊಟ ಮಾಡಿ ಮಲಗಿದ್ದರು. ಮಧ್ಯರಾತ್ರಿ ಸುಮಾರಿಗೆ ಯಾರೋ ಮನೆಯ ಹಂಚು ತೆಗೆಯುತ್ತಿದ್ದ ಶಬ್ದ ಕೇಳಿಸಿದೆ. ಸದ್ದು ಕೇಳಿ ಎಚ್ಚೆತ್ತ ಅಣ್ಣಯ್ಯ ಗೌಡ ಮನೆ ಹಿಂಬಾಗಿಲು ತೆರೆಯುತ್ತಿದ್ದಂತೆ ಒಳನುಗ್ಗಿದ ಮೂವರು ಮುಸುಕುಧಾರಿಗಳು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದರಿಂದ ಗಂಭೀರ ಗಾಯಗೊಂಡ ಅಣ್ಣಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಎಲ್ಲರೊಂ ದಿಗೂ ಬೆರೆಯುತ್ತಿದ್ದ ಅಣ್ಣಯ್ಯರ ಕೊಲೆ ಯಾವ ಉದ್ದೇಶಕ್ಕೆ ನಡೆದಿದೆ ಎಂಬುದು ನಿಗೂಢವಾಗಿದೆ.
ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ಕುಮಾರ್, ಎಸ್ಸೈ ಶಿವಪ್ರಸಾದ್ ಹಾಗೂ ಸಿಬ್ಬಂದಿ ರಾತ್ರಿಯೇ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಸ್ಥಳಕ್ಕೆ ಇಂದು ಬೆಳಗ್ಗೆ ಶ್ವಾನದಳವನ್ನು ಕರೆಸಲಾಗಿದೆ.ಅಣ್ಣಯ್ಯ ಗೌಡರ ಪತ್ನಿ ಅಮಿತಾ ನೀಡಿರುವ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications