ಕೊಡಗಿನಲ್ಲಿ ಜೇನು ಕೃಷಿಯಲ್ಲಿ ಆಸಕ್ತಿ ಹೊಂದಿದವರಿಗೆ ತರಬೇತಿ: ಇಲ್ಲಿದೆ ವಿವರ
ಮಡಿಕೇರಿ, ಅಕ್ಟೋಬರ್ 22: ಕೊಡಗಿನಲ್ಲಿ ಜೇನು ಕೃಷಿ ನೇಪಥ್ಯಕ್ಕೆ ಸರಿಯುತ್ತಿರುವ ಬೆನ್ನಲ್ಲೇ ಅದನ್ನು ಪ್ರೋತ್ಸಾಹಿಸಲು ಜಿಲ್ಲೆಯಲ್ಲಿ ಹಲವು ಕಾರ್ಯಕ್ರಮಗಳು ಆರಂಭವಾಗಿದೆ. ಈಗಾಗಲೇ ಹಲವು ಬೆಳೆಗಾರರು ಕೃಷಿಯತ್ತ ಒಲವು ತೋರುತ್ತಿದ್ದು, ಜೇನುಪೆಟ್ಟಿಗಳನ್ನಿಟ್ಟು ಕೃಷಿ ಮಾಡುತ್ತಿದ್ದಾರೆ. ಆ ಮೂಲಕ ಈ ಹಿಂದೆ ಜೇನು ಕೃಷಿಯತ್ತ ನಿರಾಸಕ್ತಿ ತೋರಿದವರು ಕೂಡ ಮತ್ತೆ ಒಲವು ತೋರುತ್ತಿದ್ದು ಶುದ್ಧ ಜೇನು ಸಂಗ್ರಹಣೆಗೆ ಆದ್ಯತೆ ನೀಡುತ್ತಿದ್ದಾರೆ.
ಯುವಕ, ಯುವತಿಯರಿಗೆ ಜೇನು ಕೃಷಿ ಬಗ್ಗೆ ಆಸಕ್ತಿಯಿದ್ದರೂ ಸೂಕ್ತ ತರಬೇತಿ ಇಲ್ಲದ ಕಾರಣದಿಂದಾಗಿ ಹಿಂದೇಟು ಹಾಕುವಂತಾಗಿದೆ. ಆದರೆ ಪ್ರವಾಸೋದ್ಯಮ ಅಭಿವೃದ್ಧಿಯಾಗಿದ್ದು, ಹೊರಗಿನಿಂದ ಬರುವ ಪ್ರವಾಸಿಗರು ಶುದ್ಧ ಜೇನಿಗೆ ಬೇಡಿಕೆ ಇಡುತ್ತಿರುವುದರಿಂದ ಅದರಲ್ಲೂ ಮನೆಯಲ್ಲಿಯೇ ಉತ್ಪಾದಿಸಿದ ಜೇನುಗಳಿಗೆ ಉತ್ತಮ ದರವೂ ದೊರೆಯುತ್ತಿರುವ ಕಾರಣ ಬಹಳಷ್ಟು ಮಂದಿ ಜೇನು ಕೃಷಿ ಮಾಡಬೇಕೆಂದು ಬಯಸುತ್ತಿದ್ದಾರೆ.

ಹಾಗೆನೋಡಿದರೆ ಒಂದೆರಡು ದಶಕಗಳ ಹಿಂದೆ ಕೊಡಗಿನ ಮನೆಗಳಲ್ಲಿ ಜೇನುಪೆಟ್ಟಿಗೆಗಳು ಬೇಕಾದಷ್ಟಿದ್ದವು. ತಾವು ಸಂಗ್ರಹಿಸಿದ ಜೇನನ್ನು ತಮ್ಮ ಅಗತ್ಯಕ್ಕೆ ಬೇಕಾದಷ್ಟನ್ನು ಉಳಿಸಿಕೊಂಡು ಉಳಿದಿದ್ದನ್ನು ಜೇನು ಸೊಸೈಟಿಗೆ ಮಾರಾಟ ಮಾಡುತ್ತಿದ್ದರು. ಇದರಿಂದ ಒಂದಷ್ಟು ಆದಾಯವೂ ಬರುತ್ತಿತ್ತು. ತದ ನಂತರದಲ್ಲಿ ಹಲವು ಕಾರಣಗಳಿಂದಾಗಿ ಜೇನು ಸಾಕಣೆ ನೆಲಕಚ್ಚಿತ್ತು. ಇದೀಗ ಮತ್ತೆ ಚೇತರಿಕೆ ಕಂಡಿದೆ. ಆದುದರಿಂದ ತರಬೇತಿ ಪಡೆದು ಜೇನು ಕೃಷಿ ಆರಂಭಿಸಿದರೆ ಉತ್ತಮ ಆದಾಯ ಪಡೆಯಲು ಸಹಕಾರಿ ಆಗಲಿದೆ.
ಮೂರು ತಿಂಗಳ ಜೇನು ಕೃಷಿ ತರಬೇತಿ
ಇದೆಲ್ಲದರ ನಡುವೆ ತಮ್ಮ ಮನೆಯ ಸುತ್ತಮುತ್ತ, ತೋಟದ ನಡುವೆ ಜೇನು ಸಾಕಣೆ ಮಾಡುವುದರಿಂದ ಕೆಲವು ಬೆಳೆಗಳ ಹೂಗಳಿಗೆ ಪರಾಗಸ್ಪರ್ಶಕ್ಕೆ ಅನಾನುಕೂಲವಾಗಲಿದೆ. ಸಾಮಾನ್ಯವಾಗಿ ಕಾಫಿ ಹೂ ಅರಳಿದಾಗ ಅದರ ಪರಾಗಕ್ಕೆ ಬರುವ ಜೇನು ಹುಳುಗಳು ಪರಾಗಸ್ಪರ್ಶಕ್ಕೆ ಕಾರಣವಾಗುತ್ತಿವೆ. ಹೀಗೆಯೇ ಹಲವು ಫಸಲಿಗೆ ಜೇನುಹುಳುಗಳ ಅಗತ್ಯತೆ ಇದೆ. ಹೀಗಾಗಿ ಜೇನು ಕೃಷಿಗೆ ಒತ್ತು ನೀಡಬೇಕಿದೆ.
ಇದೀಗ ಭಾಗಮಂಡಲ ಜೇನುಗಾರಿಕೆ ತರಬೇತಿ ಕೇಂದ್ರವು ಜೇನು ಕೃಷಿಯಲ್ಲಿ ಆಸಕ್ತಿ ಇರುವ ರೈತರ ಮಕ್ಕಳಿಗೆ 2024-25ನೇ ಸಾಲಿನಲ್ಲಿ 3 ತಿಂಗಳ ಜೇನುಗಾರಿಕೆ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ತರಬೇತಿ 2024ರ ನವೆಂಬರ್, 05 ರಿಂದ 2025 ರ ಫೆಬ್ರವರಿ, 04 ರವರೆಗೆ (ಪುರುಷ ಅಭ್ಯರ್ಥಿಗಳು ಮಾತ್ರ) ನಡೆಯಲಿದೆ. ಈ ಸಂಬಂಧ ಕೊಡಗು ಜಿಲ್ಲೆಯಿಂದ 18 ರಿಂದ 35 ವರ್ಷ ವಯಸ್ಸಿನೊಳಗಿನ ಒಂದು ಅಭ್ಯರ್ಥಿಯನ್ನು ಆಯ್ಕೆ ಮಾಡಲು ಅವಕಾಶವಿದ್ದು (ಇತರೆ-1) ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವುದು ಎಲ್ಲಿಗೆ ಮತ್ತು ಹೇಗೆ?
ಆಸಕ್ತರು ಅರ್ಜಿಯನ್ನು ಅಕ್ಟೋಬರ್ 25 ರವರೆಗೆ ಭಾಗಮಂಡಲ ಜೇನುಗಾರಿಕೆ ತರಬೇತಿ ಕೇಂದ್ರ ಕಚೇರಿಯಲ್ಲಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ (ರಾಜ್ಯ ವಲಯ), ಮಡಿಕೇರಿ, ಭಾಗಮಂಡಲ ಜೇನುಗಾರಿಕೆ ತರಬೇತಿ ಕೇಂದ್ರ/ಇಲಾಖಾ ವೆಚ್ಸೈಟ್: https://horticulturedir.karnataka.gov.in ನಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅಕ್ಟೋಬರ್, 28 ರೊಳಗೆ ಮೂಲ ಅಗತ್ಯ ದಾಖಲಾತಿಗಳೊಡನೆ ಎಸ್ಎಸ್ಎಲ್ಸಿ ಅಂಕಪಟ್ಟಿ, ತಂದೆ, ತಾಯಿ, ಪೋಷಕರ ಹೆಸರಿನಲ್ಲಿರುವ ಜಮೀನಿನ ಆರ್ಟಿಸಿ, ತಂದೆ, ತಾಯಿಯವರ ಒಪ್ಪಿಗೆ ಪತ್ರ ಅಗತ್ಯವಾಗಿದೆ.
ಅರ್ಹ ಅಭ್ಯರ್ಥಿಗಳು ನಿಗದಿತ ಸಮಯದೊಳಗೆ ಅರ್ಜಿಯನ್ನು ತೋಟಗಾರಿಕೆ ಉಪ ನಿರ್ದೇಶಕರ ಕಚೇರಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ (ರಾಜ್ಯ ವಲಯ), ಮಡಿಕೇರಿ, ಇಲ್ಲಿಗೆ ಖುದ್ದು ಸಲ್ಲಿಸಬಹುದಾಗಿದೆ ಎಂದು ತೋಟಗಾರಿಕೆ ಉಪ ನಿರ್ದೇಶಕರಾದ ಯೋಗೇಶ್ ತಿಳಿಸಿದ್ದಾರೆ.












Click it and Unblock the Notifications