ನೈಸರ್ಗಿಕ ಕೃಷಿ ಮೂಲಕ ಟೊಮೆಟೋ ಬೆಳೆ, ಹೊಲ ವೀಕ್ಷಿಸಿದ ರೈತರು
ಧಾರವಾಡ, ಡಿಸೆಂಬರ್ 26: ನೈಸರ್ಗಿಕ ಕೃಷಿ ಮತ್ತು ಸಾವಯವ ಕೃಷಿಯಲ್ಲಿ ಬೆಳೆದ ಟೊಮೆಟೋ ಬೆಳೆಯ ಕ್ಷೇತ್ರವನ್ನು ರೈತರು ವೀಕ್ಷಣೆ ಮಾಡಿ ಹರ್ಷ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳ ನೈಸರ್ಗಿಕ ಕೃಷಿ ಯೋಜನೆ ಅಡಿಯಲ್ಲಿ ರೈತರಿಗೆ ಟೊಮೆಟೋ ಬೆಳೆ ಕ್ಷೇತ್ರೋತ್ಸವ ಮತ್ತು ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು.
ಧಾರವಾಡದ ಕುಂಬಾಪುರದ ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಲ್ಲಿ ಟೊಮೆಟೋ ಬೆಳೆಯ ಕ್ಷೇತ್ರೋತ್ಸವ ಮತ್ತು ಪ್ರಾತ್ಯಕ್ಷಿಕೆಯನ್ನು ಆಯೋಜಿಸಲಾಗಿತ್ತು. ಟೊಮೆಟೋ ಬೆಳೆಯ ಪೂಜೆ ನೆರವೇರಿಸುವ ಮೂಲಕ ಪ್ರಾತ್ಯಕ್ಷಿಕೆ ಆರಂಭಿಸಲಾಯಿತು.
ನೈಸರ್ಗಿಕ ಕೃಷಿ ಮತ್ತು ಸಾವಯವ ಕೃಷಿಯಲ್ಲಿ ಶಿಫಾರಸು ಮಾಡಿದ ಪದ್ದತಿ ಮತ್ತು ರೈತರ ಪದ್ದತಿಯಿಂದ ಬೆಳೆದ ಟೊಮೆಟೋ ಬೆಳೆಯನ್ನು ವೈಜ್ಞಾನಿಕವಾಗಿ ಮೌಲೀಕರಣ ಮಾಡಲಾಗುತ್ತಿದೆ. ನೈಸರ್ಗಿಕ ಕೃಷಿ ಮತ್ತು ಸಾವಯವ ಕೃಷಿಯಲ್ಲಿ ಬೆಳೆದ ಟೊಮೆಟೋ ಬೆಳೆಯನ್ನು ರೈತರು ವೀಕ್ಷಣೆ ಮಾಡಿದರು.

ಈ ಪ್ರಾತ್ಯಕ್ಷಿಕೆಯನ್ನು ಹಿರೇಗುಂಜಾಳದ ಪ್ರಗತಿಪರ ನೈಸರ್ಗಿಕ ಕೃಷಿಕ ಮಲ್ಲೇಶಪ್ಪ ಗೂಳಪ್ಪ ಬಿಸಿರೊಟ್ಟಿ ಉದ್ಘಾಟಿಸಿದರು. ಮುಖ್ಯಮಂತ್ರಿಗಳ ನೈಸರ್ಗಿಕ ಕೃಷಿ ಯೋಜನೆ ಮುಖ್ಯಸ್ಥ ಡಾ. ಆನಂದ ಬ. ಮಾಸ್ತಿಹೊಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಾತ್ಯಕ್ಷಿಕೆಯಲ್ಲಿ ನೈಸರ್ಗಿಕ ಕೃಷಿ ಯೋಜನೆ ಅಳವಡಿಕೆ ಮತ್ತು ರೈತರು ಅವಶ್ಯಕವಾಗಿ ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸಲಾಯಿತು. ಮಣ್ಣಿನ ಫಲವತ್ತತೆ ಮತ್ತು ಸೂಕ್ಷ್ಮಜೀವಿಗಳ ಮಹತ್ವವನ್ನು ರೈತರಿಗೆ ತಿಳಿಸಲಾಯಿತು. ನೈಸರ್ಗಿಕ ಯೋಜನೆಯ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಲಾಯಿತು.
ಪ್ರಾತ್ಯಕ್ಷಿಕೆ ಯನ್ನು ಉದ್ಘಾಟಿಸಿದ ಪ್ರಗತಿಪರ ನೈಸರ್ಗಿಕ ಕೃಷಿಕ ಮಲ್ಲೇಶಪ್ಪ ಗೂಳಪ್ಪ ಬಿಸಿರೊಟ್ಟಿ ನೈಸರ್ಗಿಕ ಕೃಷಿಯ ಒಂದು ಭಾಗವಾದ ಘನಜೀವಾಮೃತ ಬಗ್ಗೆ ಸವಿಸ್ತಾರವಾಗಿ ಮತ್ತು ರೈತರಿಗೆ ಪ್ರಾತ್ಯಕ್ಷಿಕೆಯನ್ನು ಮಾಡಿ ತೋರಿಸಿದರು ಹಾಗೂ ರೈತರು ಯಾವದೇ ಕೃಷಿ ಪರಿಕರಗಳನ್ನು ಕೊಂಡ ತರದೇ ತಮ್ಮ ಕ್ಷೇತ್ರದಲ್ಲಿ ಎಲ್ಲಾ ಪರಿಕರಗಳನ್ನು ತಯಾರಿಸಿಕೊಂಡು ಬಳಸಬೇಕೆಂದು ಹಾಗೂ ಎಲ್ಲದಕ್ಕೂ ಪರಾವಲಂಬಿಯಾಗದೆ ಸ್ವಾವಲಂಬಿಯಾಗಬೇಕೆಂದು ಎಂದರು.

ಪ್ರಗತಿಪರ ಸಾವಯವ ಮತ್ತು ಅರಣ್ಯ ಕೃಷಿಕ ಆರ್. ಜಿ. ತಿಮ್ಮಪೂರ ಅವರು ಸಾವಯವ ಹಾಗೂ ಅರಣ್ಯದ ಮಹತ್ವ ಮತ್ತು ನೈಸರ್ಗಿಕ ಕೃಷಿಯ ಮೂಲಕ ವಿಷಮುಕ್ತ ಆಹಾರ ಉತ್ಪಾದನೆಯಲ್ಲಿ ತಮ್ಮ ಅನಭವಗಳನ್ನು ಇತರ ರೈತರೊಂದಿಗೆ ಹಂಚಿಕೊಂಡರು ಮತ್ತು ಅರಣ್ಯದಲ್ಲಿರುವ ಹಕ್ಕಿ-ಪಕ್ಷಿಗಳು ಮತ್ತು ಪ್ರಾಣಿಗಳ ಬಗ್ಗೆ ಚರ್ಚಿಸಿದರು.
ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಪ್ರಾಧ್ಯಾಪಕ ಡಾ. ಜೆ. ಬಿ. ಗೋಪಾಲಿ ಅವರು ನೈಸರ್ಗಿಕ ಕೃಷಿಯಲ್ಲಿ ಸಸ್ಯ ಸಂರಕ್ಷಣಾ ಕ್ರಮಗಳು ಬಗ್ಗೆ ರೈತರೊಂದಿಗೆ ಸಮಾಲೋಚಿಸಿದರು.
ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಸಹ ಸಂಶೋಧಕ ಡಾ. ಶಾಂತಪ್ಪ ತಿರಕಣ್ಣನವರ ಅವರು ಮಾತನಾಡಿ, ರೈತರು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡು ಮತ್ತು ಅದರಿಂದಾಗುವ ಮಾನವನ ಆರೋಗ್ಯದ ಮಹತ್ವವನ್ನು ತಿಳಿಸಿದರು.
ಕೃಷಿಕರ ಜೊತೆ ಸಮಾಲೋಚನೆ; ನೈಸರ್ಗಿಕ ಕೃಷಿಯಲ್ಲಿ ಬಳಸಲಾಗುವ ಪರಿಕರಗಳಾದ ಬೀಜಾಮೃತ, ಜೀವಾಮೃತ, ಘನಜೀವಾಮೃತ, ನೀಮಾಸ್ತ್ರ, ಬ್ರಹ್ಮಾಸ್ತ್ರ, ಅಗ್ನಿಅಸ್ತ್ರ, ದಶಪರಣಿ ಮುಂತಾದವುಗಳ ತಯಾರಿಕೆ ಬಗ್ಗೆ ರೈತರಿಗೆ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು. ರೈತರೊಂದಿಗೆ ನೈಸರ್ಗಿಕ ಮತ್ತು ಸಾವಯವ ಕೃಷಿ ಬಗ್ಗೆ ವಿಜ್ಞಾನಿಗಳ ಜೊತೆ ಸಮಾಲೋಚಿಸಿದರು.
ಈ ಪ್ರಾತ್ಯಕ್ಷಿಕೆಯಲ್ಲಿ ಸುಮಾರು 100 ಜನ ರೈತರು ಪಾಲ್ಗೊಂಡಿದ್ದು, ಟೊಮೆಟೋ ಬೆಳೆಯನ್ನು ವೀಕ್ಷಣೆ ಮಾಡಿ, ವಿಜ್ಞಾನಿಗಳ ಜೊತೆ ಚರ್ಚೆಯನ್ನು ನಡೆಸಿ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.
ಈ ಕಾರ್ಯಕ್ರಮದಲ್ಲಿ ಸಹಾಯಕ ಸಂಶೋಧಕಿ ಡಾ. ಶೃತಿ ಗೊಂಡಿ, ಪ್ರಾಧ್ಯಾಪಕರಾದ ಡಾ. ಲಕ್ಷ್ಮಣ ಕುಕನೂರ, ಸಹಾಯಕ ಪ್ರಾಧ್ಯಾಪಕ ಡಾ. ಅರುಣ ಭಾವಿದೊಡ್ಡಿ ಮುಂತಾದವರು ಪಾಲ್ಗೊಂಡಿದ್ದರು.












Click it and Unblock the Notifications