ಅಕಾಲಿಕ ಮಳೆ; ಮಾವು ಬೆಳೆಗಾರರಿಗೆ ಉಪಯುಕ್ತ ಸಲಹೆಗಳು
ಬೆಂಗಳೂರು, ಏಪ್ರಿಲ್ 10 : ಒಂದು ಕಡೆ ಕೊರೊನಾ ಲಾಕ್ ಡೌನ್ನಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೊಂದು ಕಡೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಕಾಲಿಕ ಮಳೆ ಸುರಿಯುತ್ತಿದೆ. ಇದರಿಂದಾಗಿ ಮಾವು ಬೆಳೆಗಾರರು ಆತಂಕಕ್ಕೆ ಸಿಲುಕಿದ್ದಾರೆ.
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಈಗ ಮಾವು ಬೆಳೆ ಹೀಚು, ಕಾಯಿಯ ಹಂತದಲ್ಲಿದೆ. ಹವಾಮಾನದ ವೈಪರೀತ್ಯದಿಂದಾಗಿ ತಡವಾಗಿ ಹೂ ಬಿಟ್ಟಿದೆ. ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಕೀಟ ರೋಗಗಳ ಹಾವಳಿ ಜಾಸ್ತಿಯಾಗುವ ಸಂಭವವಿದೆ.
ಈಗ ಕಾಯಿ ಹಂತದಲ್ಲಿರುವ ಮಾವಿಗೆ ರೋಗ , ಕೀಟಗಳ ನಿರ್ವಹಣೆ ಅವಶ್ಯವಾಗಿದೆ. ತೋಟಗಾರಿಕೆ ಇಲಾಖೆಯಿಂದ ಮಾವು ಬೆಳೆಗಾರರಿಗೆ ಹಲವು ಸಲಹೆಗಳನ್ನು ನೀಡಲಾಗಿದೆ. ಮಾವಿನ ತೋಪಿನಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಸೂಚನೆ ನೀಡಲಾಗಿದೆ.
ತೋಟದಲ್ಲಿ ಕಸ, ಕಡ್ಡಿ ಇರದಂತೆ ಸ್ವಚ್ಛ ಮಾಡಬೇಕು. ಅದರಲ್ಲೂ ಗಿಡಗಳ ಬುಡದಲ್ಲಿ ನೆಲ ಸ್ವಚ್ಛವಾಗಿಡಬೇಕು. ಕೆಳಗೆ ಬೀಳುವ ಕಾಯಿ, ಹೀಚು ಹಣ್ಣುಗಳನ್ನು ಆಯ್ದು ಗುಂಡಿಯಲ್ಲಿ ಹೂತು ಹಾಕಬೇಕು ಎಂದು ರೈತರಿಗೆ ಸೂಚಿಸಲಾಗಿದೆ.

ಕಾಯಿಗಳ ಮೇಲೆ ಮೊಟ್ಟೆ ಇಡುತ್ತವೆ
ಮಳೆ ಆಗುತ್ತಿರುವುದರಿದ ಕೋಶಾವಸ್ಥೆಯಲ್ಲಿರುವ ಹಣ್ಣಿನ ನೊಣದ ಫ್ರೌಡ ಕೀಟಗಳು ಕೋಶದಿಂದ ಹೊರಬಂದು ಮಾವಿನ ಹಣ್ಣುಗಳ ಮೇಲೆ ಮೊಟ್ಟೆ ಇಡುತ್ತವೆ. ಇಂತಹ ಮೊಟ್ಟೆಗಳಿಂದ ಹೊರ ಬರುವ ಕೀಟಗಳು ಹಣ್ಣಿನ ರಸ ಹೀರುವುದರಿಂದ ಹಣ್ಣಿನ ಗುಣಮಟ್ಟ ಸಂಪೂರ್ಣ ಹಾಳಾಗಿ ಹಣ್ಣುಗಳು ಕೊಳೆತು, ಕೆಳಗೆ ಉದುರಿ ಬೀಳುತ್ತವೆ. ಒಂದು ಅಂದಾಜಿನ ಪ್ರಕಾರ ಈ ಹಣ್ಣಿನ ನೊಣದ ಕಾಟದಿಂದಾಗಿ ಶೇ. 40-60 ರಷ್ಟು ನಷ್ಟ ಸಂಭವಿಸುತ್ತದೆ.

ವಿವಿಧ ಹಣ್ಣಿನ ಮೇಲೆಯೂ ದಾಳಿ
ಈ ಹಣ್ಣಿನ ನೊಣ ಜೇನು ನೊಣದಂತೆ ಇದ್ದು, ಮಾವು ಬೆಳೆಗೆ ಮಾತ್ರ ಕಾಡುವುದಿಲ್ಲ. ಪೇರಲ, ಲಿಂಬೆ ಜಾತಿ ಹಣ್ಣುಗಳು ಹಾಗೂ ಕಲ್ಲಂಗಡಿಯಂತಹ ಎಲ್ಲ ಕುಂಬಳ ಜಾತಿಯ ಬಳ್ಳಿಗಳ ಕಾಯಿಗಳ ಮೇಲೆ ದಾಳಿ ಮಾಡುತ್ತದೆ. ಹಣ್ಣಿನ ನೊಣ ಮೊಟ್ಟೆಯಿಂದ ಪ್ರೌಢ ಕೀಟದ ಆಯಸ್ಸು 40-50 ದಿನಗಳವರೆಗೂ ಇದ್ದು ಒಂದು ಪ್ರೌಢ ಕೀಟ 400-500 ಮೊಟ್ಟೆಗಳನ್ನು ಹಲವಾರು ಬಾರಿ ಇಡುತ್ತದೆ. ಆದ್ದರಿಂದ, ಈ ಕೀಟ ಆರ್ಥಿಕ ನಷ್ಟವನ್ನುಂಟು ಮಾಡುವ ಪ್ರಮುಖ ಕೀಟವಾಗಿದೆ.

ಕೀಟದ ಹತೋಟಿ ಕ್ರಮಗಳು
ಕೀಟನಾಶಕದಿಂದ ಕೀಟವನ್ನು ನಿಯಂತ್ರಿಸುವುದು ದುಬಾರಿ ಮತ್ತು ಕಷ್ಟಸಾಧ್ಯ. ಆದರೂ ಮೆಲಾಥಯಾನ್ 50 ಇ.ಸಿ. ಎಂಬ ಕೀಟನಾಶಕವನ್ನು 16 ಲೀ. ನೀರಿನೊಂದಿಗೆ 80-100 ಗ್ರಾಂ. ಬೆಲ್ಲವನ್ನು ಬೆರೆಸಿ ಸಿಂಪಡಿಸುವುದು. ಇನ್ನೊಂದು ವಿಧಾನ 100 ಗ್ರಾಂ. ಬೆಲ್ಲ 4-5 ಮಿ.ಲೀ. ಮಿಥೈಲ್ ಪ್ಯಾರಾಥಿಯಾನ್ 50 ಇ.ಸಿ. ಎನ್ನುವ ಕೀಟನಾಶಕವನ್ನು 20 ಲೀ. ನೀರಿಗೆ ಬೆರೆಸಿ ಈ ದ್ರಾವಣವನ್ನು ಗಿಡದ ಬಡ್ಡೆಗೆ ಬುಡದಿಂದ 2-3 ಅಡಿ ಸುರಿಯಬೇಕು.
ಅತ್ಯಂತ ಪರಿಣಾಮಕಾರಿ ವಿಧಾನವೆಂದರೆ ಮೋಹಕ ಬಲೆಗಳ ಬಳಕೆ. ರೈತರೇ ಇದನ್ನು ಮನೆಯಲ್ಲಿ ತಯಾರಿಸಬಹುದು. ಒಂದು 200 ಮಿ.ಲೀ. ಬಾಟಲಿ ತೆಗೆದುಕೊಂಡು ಸುಮಾರು 2 ಸೆ.ಮೀ. ವ್ಯಾಸವಿರುವ ರಂಧ್ರಗಳನ್ನು (2 ಅಥವಾ 3) ವಿರುದ್ಧ ದಿಕ್ಕಿನಲ್ಲಿ ಕೊರೆದು 100 ಮಿ.ಲೀ. ನೀರಿಗೆ 4-5 ಮಿ.ಲೀ. ಮಿಥೈಲ್ ದ್ರಾವಣವನ್ನು ಅದ್ದಿದ ಹತ್ತಿ ತುಂಡುಗಳನ್ನು ಸಣ್ಣ ದಾರದಿಂದ ಕಟ್ಟಿ ಇಂತಹ ಬಾಟಲಿಗಳನ್ನು ಪ್ರತಿ ಎಕರೆಗೆ 4-6 ರಂತೆ 5 ಅಡಿ ಎತ್ತರದಲ್ಲಿ ಗಿಡಗಳ ರೆಂಬೆಗಳಿಗೆ ನೇರ ಬಿಸಿಲು ಬೀಳದಂತೆ ಕಟ್ಟಬೇಕು.
ಈ ಬಾಟಲಿಗಳಲ್ಲಿ 2 ಹನಿ ಡಿ.ಡಿ.ವಿ.ಪಿ. ಶೇ.76 ಇ.ಸಿ. ಯನ್ನು ಬೆರೆಸಬೇಕು. ಪ್ರತಿ 3 ವಾರಗಳಿಗೊಮ್ಮೆ ದ್ರಾವಣದಲ್ಲಿ ಅದ್ದಿದ ಹತ್ತಿಯ ತುಂಡುಗಳನ್ನು ಬದಲಾಯಿಸುತ್ತಿರಬೇಕು. ಬಳಸಿದ ನೀರನ್ನು ವಾರಕ್ಕೊಮ್ಮೆ ಬದಲಾಯಿಸಿ ಅದಕ್ಕೆ 2 ಮಿ.ಲೀ. ನೂವಾನ್ ಬೆರೆಸಿ ನೇತು ಹಾಕಬೇಕು.

ರೈತರಿಗೆ ವಿಶೇಷ ಸೂಚನೆ
ಬೇರೆ-ಬೇರೆ ಬೆಳೆಗಳಿಗೆ ಬೇರೆ ರಾಸಾಯನಿಕಗಳನ್ನು ಬಳಸಬೇಕು. ಹಣ್ಣಿನ ನೊಣ ಬೆಳಗಿನ ಹೊತ್ತು ಚಟುವಟಿಕೆಯಲ್ಲಿರುತ್ತದೆ. ಆದರೆ ಅಂಟು ಕಾರ್ಡುಗಳಿಗೆ ಸಿಕ್ಕಿ ಬೀಳುವುದಿಲ್ಲ ಮತ್ತು ರಾತ್ರಿ ದೀಪಾಕರ್ಷಕ ಬಲೆಗೂ ಈ ಕೀಟ ಹತೋಟಿಗೆ ಬರುವುದಿಲ್ಲ. ಮಾರುಕಟ್ಟೆಯಲ್ಲಿ ಸಿದ್ದಪಡಿಸಿದ ಮೋಹಕ ಬಲೆಗಳು ಲಭ್ಯ. ಇದಲ್ಲದೇ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹೆಸರಘಟ್ಟ, ಬೆಂಗಳೂರುನಲ್ಲಿಯೂ ಲಭ್ಯವಿದೆ.
ಈಗ ನೀರಿನ ಅವಶ್ಯಕತೆ ಜಾಸ್ತಿ ಇದ್ದು, ಹನಿ ನೀರಾವರಿ ವಿಧಾನದಲ್ಲಿ 4-5 ಗಂಟೆ ನೀರು ಹರಿಸಬೇಕು. ಹಿಟ್ಟು ತಿಗಣೆ ನಿಯಂತ್ರಣಕ್ಕೆ ಇರುವೆಗಳನ್ನು ನಿಯಂತ್ರಿಸಬೇಕು. ಚಿಬ್ಬು ರೋಗ ಹತೋಟಿಗೆ ಥಯೋಫಿನೈಟ್ ಮಿಥೈಲ್ 1 ಗ್ರಾಂ. 1 ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.
ರೈತರು ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರ ಕಛೇರಿ ಕೊಪ್ಪಳ 08539-231530 ಅಥವ ಆಯಾ ತಾಲ್ಲೂಕಾ ತೋಟಗಾರಿಕೆ ಕಛೇರಿಗಳನ್ನು ಸಂಪರ್ಕಿಸಬಹುದು.












Click it and Unblock the Notifications