ಗಣರಾಜ್ಯ ದಿನದ ಹಿಂಸಾಚಾರ: ಮಧ್ಯಪ್ರವೇಶಿಸಲು 'ಸುಪ್ರೀಂ' ನಕಾರ
ನವದೆಹಲಿ, ಫೆಬ್ರವರಿ 3: ಗಣರಾಜ್ಯೋತ್ಸವ ದಿನದಂದು ರಾಜಧಾನಿ ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ಮೆರವಣಿಗೆ ವೇಳೆ ನಡೆದ ಹಿಂಸಾಚಾರದಲ್ಲಿ ತನಿಖೆಗೆ ಒತ್ತಾಯಿಸಿ ಸಲ್ಲಿಸಲಾಗಿದ್ದ ವಿವಿಧ ಅರ್ಜಿಗಳನ್ನು ಪರಿಗಣಿಸಲು ಸುಪ್ರೀಂಕೋರ್ಟ್ ಬುಧವಾರ ನಿರಾಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯನ್ ಅವರನ್ನು ಒಳಗೊಂಡ ನ್ಯಾಯಪೀಠ, ಸರ್ಕಾರದ ಮುಂದೆ ಪ್ರಾತಿನಿಧ್ಯವನ್ನು ಸಲ್ಲಿಸಲು ಅರ್ಜಿದಾರರಿಗೆ ಅನುಮತಿ ನೀಡಿತು.
'ದೇಶದ್ರೋಹ' ಪ್ರಕರಣ: ಸುಪ್ರೀಂಕೋರ್ಟ್ ಮೊರೆ ಹೋದ ಶಶಿ ತರೂರ್, ಪತ್ರಕರ್ತ ಸರ್ದೇಸಾಯಿ
'ಸರ್ಕಾರವು ಅದರ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ನಮಗೆ ಖಾತರಿಯಿದೆ. ಕಾನೂನು ತನ್ನದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂಬ ಪ್ರಧಾನಿಯ ಹೇಳಿಕೆಯನ್ನು ನಾವು ಓದಿದ್ದೇವೆ. ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಾವು ಬಯಸುವುದಿಲ್ಲ. ನೀವು ಸರ್ಕಾರದ ಮುಂದೆ ಪ್ರಾತಿನಿಧ್ಯ ಸಲ್ಲಿಸಿ' ಎಂದು ಸಿಜೆಐ ಬೊಬ್ಡೆ ಸಲಹೆ ನೀಡಿದರು.
ಯಾವುದೇ ಪುರಾವೆಗಳಿಲ್ಲದೆ ರೈತರನ್ನು ಭಯೋತ್ಪಾದಕರು ಎಂದು ಘೋಷಿಸದಂತೆ ತಡೆಯಲು ಮಾಧ್ಯಮಗಳು ಸೂಚಿಸಬೇಕೆಂದು ಕೋರಿ ವಕೀಲ ಮನೋಹರ್ ಲಾಲ್ ಶರ್ಮಾ ಸಲ್ಲಿಸಿದ್ದ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೂಡ ಸುಪ್ರೀಂಕೋರ್ಟ್ ತಿರಸ್ಕರಿಸಿತು. ರೈತರು ನಡೆಸುತ್ತಿರುವ ಪ್ರತಿಭಟನೆಯ ದಿಕ್ಕುತಪ್ಪಿಸಲು ಯೋಜಿತ ಸಂಚು ನಡೆದಿದೆ ಎಂದು ಶರ್ಮಾ ಆರೋಪಿಸಿದ್ದರು.
ರೈತರಿಗೆ ಪಾಪ್ ಗಾಯಕಿ ಬೆಂಬಲ; ಗರಂ ಆದ ವಿದೇಶಾಂಗ ವ್ಯವಹಾರ ಸಚಿವಾಲಯ
ವಕೀಲ ವಿಶಾಲ್ ತಿವಾರಿ ಸಲ್ಲಿಸಿದ್ದ ಮತ್ತೊಂದು ಅರ್ಜಿಯಲ್ಲಿ, ಸೂಕ್ತ ಸಮಯದ ಮಿತಿಯೊಳಗೆ ಪುರಾವೆಗಳನ್ನು ಸಂಗ್ರಹಿಸಲು ಮತ್ತು ದಾಖಲಿಸಲು ಹಾಗೂ ಸುಪ್ರೀಂಕೋರ್ಟ್ಗೆ ಹಿಂಸಾಚಾರದ ಕುರಿತು ವರದಿ ಸಲ್ಲಿಸಲು ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಹೈಕೋರ್ಟ್ನ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳನ್ನು ಒಳಗೊಂಡ ಮೂವರು ಸದಸ್ಯರ ತನಿಖಾ ಆಯೋಗವನ್ನು ರಚಿಸಬೇಕು ಎಂದು ಕೋರಲಾಗಿತ್ತು.