ಕಾರ್ಖಾನೆ'ಸಕ್ಕರೆ' ಕಾಯಿಲೆಗೆ ಸರ್ಕಾರದ ಮದ್ದು
ಬೆಂಗಳೂರು, ನ.26 : ಕಬ್ಬು ಬೆಳೆಗಾರರಿಗೆ ಪಾವತಿಸಬೇಕಾದ ಬಾಕಿ ಹಣದ ಪೈಕಿ ನ್ಯಾಯ ಯುತವಾದ ಎಫ್ಆರ್ಪಿ ದರವನ್ನು ನ. 30ರೊಳಗೆ ಪಾವತಿ ಮಾಡಿ ಮತ್ತು ಕಬ್ಬು ಅರೆಯುವ ಕೆಲಸವನ್ನು ಆರಂಭಿಸಿ ಎಂದು ಸರ್ಕಾರ ಸಕ್ಕರೆ ಕಾರ್ಖಾನೆಗಳಿಗೆ ಆದೇಶ ನೀಡಿದೆ.
ಬುಧವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಹಕಾರ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ಅವರು, ಪ್ರತಿ ಟನ್ ಕಬ್ಬಿಗೆ ಸರ್ಕಾರ ನಿಗದಿಪಡಿಸಿರುವ 2,500 ರೂ.ಗಳನ್ನು ಪಾವತಿಸಲು ಸಾಧ್ಯವಾಗದಿದ್ದಲ್ಲಿ ಎಫ್ಆರ್ಪಿ 2,100 ರೂ.ಗಳನ್ನು ಕಾರ್ಖಾನೆಗಳ ಆರಂಭಕ್ಕೆ ಮುನ್ನವೇ ನೀಡಬೇಕು ಎಂದು ಆದೇಶಿಸಲಾಗಿದೆ ಎಂದರು. [ಸಕ್ಕರೆ ಕಾಯಿಲೆ ಶಮನಗೊಳಿಸಿದ ಸಿದ್ದರಾಮಯ್ಯ]

ಬಾಕಿ ಉಳಿದ ಹಣವನ್ನು ಎರಡು ಹಂಗಾಮುಗಳಲ್ಲಿ ಪಾವತಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಎಲ್ಲಾ ಸಕ್ಕರೆ ಕಾರ್ಖನೆಗಳು ನ. 30 ರೊಳಗೆ ಕಬ್ಬು ಅರೆಯವ ಕೆಲಸವನ್ನು ಪ್ರಾರಂಭಿಸಬೇಕು ಮತ್ತು ಬಾಕಿ ಪಾವತಿ ಮಾಡಬೇಕು ಎಂದು ಸಚಿವರು ಹೇಳಿದರು.
ಸರ್ಕಾರ ಕಳೆದ ವರ್ಷ ಪ್ರತಿ ಟನ್ ಕಬ್ಬು ಖರೀದಿಗೆ 2,500 ರೂ. ದರ ನಿಗದಿ ಮಾಡಿತ್ತು. ಈ ಹಣವನ್ನು ಕೊಡಲು ಕಾರ್ಖಾನೆ ಮಾಲೀಕರು ಹಿಂದೇಟು ಹಾಕಿದ್ದರಿಂದ ರೈತರಿಗೆ ತೊಂದರೆಯಾಗಿತ್ತು. ಆದ್ದರಿಂದ ರೈತರಿಗೆ ಅನುಕೂಲವಾಗಲಿ ಎಂದು ಇಂತಹ ವ್ಯವಸ್ಥೆ ಮಾಡಲಾಗಿದೆ. ಸಕ್ಕರೆ ಕಾರ್ಖನೆಗಳ ಲಾಬಿಗೆ ಮಣಿದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. [ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ]
ಸರ್ಕಾರ ನೀಡಿರುವ ಆದೇಶವನ್ನು ಪಾಲಿಸದೇ ಹಠಮಾರಿ ಧೋರಣೆ ತೋರುವ ಕಾರ್ಖಾನೆಗಳ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು. ರಾಜ್ಯದ 63 ಸಕ್ಕರೆ ಕಾರ್ಖಾನೆಗಳ ಪೈಕಿ ಈಗಾಗಲೇ 30 ಕಾರ್ಖಾನೆಗಳು ಕಬ್ಬು ಅರೆಯುವ ಕೆಲಸವನ್ನು ಪ್ರಾರಂಭಿಸಿವೆ ಎಂದು ಅವರು ತಿಳಿಸಿದರು.
ಅಂದಹಾಗೆ ಕಳೆದ ಬಾರಿ ಬೆಳಗಾವಿಯಲ್ಲಿ ಅಧಿವೇಶನ ನಡೆದಾಗ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಭಾರೀ ಚರ್ಚೆಯಾಗಿತ್ತು. ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಪ್ರತಿಭಟನೆ ನಡೆಸುತ್ತಿದ್ದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಬಾರಿ ಡಿ.10ರಿಂದ ಬೆಳಗಾವಿ ಅಧಿವೇಶನ ಆರಂಭವಾಗುತ್ತಿದ್ದು, ಸಮಸ್ಯೆ ಬಗೆಹರಿಸಿ ಅಧಿವೇಶನದಲ್ಲಿ ಪ್ರತಿಪಕ್ಷಗಳನ್ನು ಎದುರಿಸಲು ಸರ್ಕಾರ ವೇದಿಕೆ ಸಿದ್ಧಗೊಳಿಸಿಕೊಳ್ಳುತ್ತಿದೆ.












Click it and Unblock the Notifications