ಬೆಳಗಾವಿ: ಸಿಎಂ ಭರವಸೆ ನಂತರ ಕಬ್ಬು ಬೆಳೆಗಾರರ ಪ್ರತಿಭಟನೆ ವಾಪಸ್
ಬೆಳಗಾವಿ, ನವೆಂಬರ್ 16: ಕಬ್ಬು ಬೆಂಬಲ ಬೆಲೆಗೆ ಒತ್ತಾಯಿಸಿ ರೈತರು ನಿನ್ನೆಯಿಂದ ಮಾಡುತ್ತಿದ್ದ ಅಹೋರಾತ್ರಿ ಪ್ರತಿಭಟನೆ ಇಂದು ತಾತ್ಕಾಲಿಕವಾಗಿ ಅಂತ್ಯವಾಗಿದೆ.
ಪ್ರತಿಭಟನಾನಿರತ ರೈತ ಮುಖಂಡರೊಡನೆ ಸಿಎಂ ಅವರು ದೂರವಾಣಿ ಮೂಲಕ ಮಾತನಾಡಿ, ಸೋಮವಾರ ತಾವೇ ಬೆಳಗಾವಿಗೆ ಬಂದು ಸಮಸ್ಯೆ ಬಗ್ಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದ ಮೇಲೆ ಕಬ್ಬು ಬೆಳೆಗಾರರು ಪ್ರತಿಭಟನೆ ವಾಪಸ್ ಪಡೆದಿದ್ದಾರೆ.

ನಿನ್ನೆಯಿಂದಲೂ ರೈತರು ಅರೆಬೆತ್ತಲೆಯಾಗಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ಮಾಡುತ್ತಿದ್ದರು. ಇಂದು ಬೆಳಗ್ಗೆ ಸಹ ತಲೆ ಮೇಲೆ ಕಲ್ಲು ಹೊತ್ತು ರೈತ ಮಹಿಳೆಯರೂ ಸೇರಿದಂತೆ ರೈತರು ಉಗ್ರ ಪ್ರತಿಭಟನೆ ಮಾಡಿದರು. ಜಿಲ್ಲಾಧಿಕಾರಿಗಳ ಕಚೇರಿ ಎದುರು ಸ್ನಾನ ಮಾಡಿ ವಿನೂತನವಾಗಿ ಸರ್ಕಾರದ ವಿರುದ್ಧ ಪ್ರತಿಭಟಿಸಿದರು.
ರೈತರ ಪ್ರತಿಭಟನೆಯ ಬಗ್ಗೆ ಮಾಹಿತಿ ಪಡೆದ ಕುಮಾರಸ್ವಾಮಿ, ರೈತ ಮುಖಂಡರಿಗೆ ಕರೆ ಮಾಡಿ ಸೋಮವಾರ ಬೆಂಗಳೂರಿಗೆ ಬರಲು ಹೇಳಿದರು. ಆದರೆ ರೈತರು ಅದಕ್ಕೆ ಒಪ್ಪದ ಕಾರಣ ತಾವೇ ಸೋಮವಾರ ಬೆಳಗಾವಿಗೆ ಬಂದು ರೈತರೊಂದಿಗೆ ಮಾತನಾಡುವುದಾಗಿ ಹೇಳಿದರು. ಆ ನಂತರವಷ್ಟೆ ರೈತರು ಪ್ರತಿಭಟನೆ ಹಿಂಪಡೆದರು.
ಬೆಳಗಾವಿ ಮಾತ್ರವಲ್ಲದೆ ಬಾಗಲಕೋಟೆ, ಮುಧೋಳ, ವಿಜಯಪುರ ಮುಂತಾದ ಕಡೆ ರೈತರು ಹೆದ್ದಾರಿ ತಡೆದು ಕಬ್ಬಿಗೆ ಬೆಂಬಲ ನೀಡಬೇಕೆಂದು ಪ್ರತಿಭಟನೆ ಮಾಡಿದರು. ಮುಧೋಳ ತಾಲ್ಲೂಕು ಬಂದ್ಗೆ ಕೂಡ ಕರೆ ನೀಡಿದ್ದರು.











Click it and Unblock the Notifications