ಕೈ ಕೊಟ್ಟ ಮುಂಗಾರು ಮಳೆ: ಹುಬ್ಬಳ್ಳಿಯ ಹಲವೆಡೆ ಸೂರ್ಯನ ಶಾಖಕ್ಕೆ ನೆಲಕಚ್ಚಿದ ಹೆಸರು ಬೆಳೆ
ಹುಬ್ಬಳ್ಳಿ, ಆಗಸ್ಟ್, 30: ಮುಂಗಾರು ಮಳೆ ವೈಫಲ್ಯದಿಂದಾಗಿ ಈ ಬಾರಿ ಶೇಕಡಾ 20ರಷ್ಟು ಹೆಸರು ಬೆಳೆ ಫಸಲು ಬರುವುದು ಕಷ್ಟವಾಗಿದೆ. ಹೆಸರು ಹೆಚ್ಚು ಬೆಳೆಯುವ ಉತ್ತರ ಕರ್ನಾಟಕ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿಯೂ ಮುಂಗಾರು ಹಂಗಾಮಿಗೆ ಬಿತ್ತನೆ ಪ್ರಮಾಣ ಸಾಕಷ್ಟು ಕುಸಿತವಾಗಿದೆ. ಇನ್ನು ಮುಂದೆ ಹೆಸರು ಬಿತ್ತನೆ ಮಾಡಿದರೂ ಬೆಳೆ ಬರುವುದು ಕಷ್ಟ , ಆದ್ದರಿಂದ ಈಗ ಹೆಸರು ಕಾಳಿಗೆ ಭಾರೀ ಬೇಡಿಕೆ ಬಂದಿದೆ.
ಬೇಳೆ ಕಾಳುಗಳಲ್ಲಿ ಹೆಸರು ತನ್ನದೇ ಮಹತ್ವದ ಸ್ಥಾನ ಪಡೆದುಕೊಂಡಿದೆ. ಈ ಕಾಳು ಆಂಧ್ರಪ್ರದೇಶ, ಥೈಲ್ಯಾಂಡ್, ಸಿಂಗಾಪೂರ್, ಅಮೇರಿಕ ಮುಂತಾದ ದೇಶಗಳಿಗೆ ರಪ್ತು ಮಾಡಲಾಗುತ್ತಿದೆ. ಆದರೆ ಮುಂಗಾರು ಹಂಗಾಮಿಗೆ ಕೆಲ ಜಿಲ್ಲೆಗಳಲ್ಲಿ ಹೆಚ್ಚಾಗಿ ಹೆಸರು ಪ್ರಮುಖ ಬೆಳೆ. ಆದರೆ ಮಳೆ ಅಭಾವದಿಂದ ಬೆಳೆ ಬೆಳೆಲಾಗಲಿಲ್ಲ.

ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಹೆಸರು ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡಲಾಗುತ್ತದೆ. ಇದು ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಧಾರಿತ ಪ್ರದೇಶದಲ್ಲಿ ಬಿತ್ತನೆ ಮಾಡಲಾಗುತಿತ್ತು. ಆದರೆ ಈ ಬಾರಿ ಮಳೆ ಇಲ್ಲದ ಹಿನ್ನೆಲೆ ಅಲ್ಪ ಪ್ರಮಾಣದಲ್ಲಿ ಬೆಳೆದ ಬೆಳೆಗೆ ಬೆಲೆ ಸಿಗಬಹುದೇ ಎನ್ನಲಾಗಿದೆ.
ಮತ್ತೊಂದೆಡೆ ಬಿತ್ತನೆಯಾದ ಕಡೆಯೂ ಮಳೆ ಕೊರತೆಯಿಂದ ನಿರೀಕ್ಷಿತ ರೀತಿಯಲ್ಲಿ ಬೆಳೆ ಇಲ್ಲವಾಗಿದೆ. ರಾಜಸ್ಥಾನ ಹೊರತುಪಡಿಸಿದರೆ ದೇಶದಲ್ಲಿಯೇ ಕರ್ನಾಟಕ ಅತೀ ಹೆಚ್ಚು ಹೆಸರು ಬೆಳೆ ಬೆಳೆಯುವ ಪ್ರದೇಶ ಹೊಂದಿದ ರಾಜ್ಯ ಎಂಬ ಹೆಗ್ಗಳಿಕೆ ಹೊಂದಿದೆ. ಶೇಕಡಾ 20-25ರಷ್ಟು ಪಾಲು ನೀಡುತ್ತಿದೆ.
ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್, ತಮಿಳುನಾಡು ರಾಜ್ಯಗಳಲ್ಲಿಯೂ ಹೆಸರು ಬೆಳೆಯಲಾಗುತ್ತದೆ. ಈ ಬಾರಿಯ ಮುಂಗಾರು ಉತ್ತರ ಭಾರತದಲ್ಲಿ ಕಂಡರಿಯದ ಪ್ರವಾಹ ಆಗಿದ್ದರೆ, ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಮಳೆ ತೀವ್ರ ಕೊರತೆಯಿಂದ ಬರದ ಸ್ಥಿತಿ ನಿರ್ಮಾಣ ಮಾಡಿದೆ. ಇದರಿಂದ ಹೆಸರು ಬೆಳೆ ಕುಂಠಿತವಾಗಿದೆ.
ಇನ್ನೇನಿದ್ದರೂ ರಬಿ ಹಂಗಾಮಿಗೆ ಹೆಸರು ಬೆಳೆ ನಿರೀಕ್ಷಿಸಬೇಕಾಗಿದೆಯಾದರೂ, ಖಾರೀಫ್ಗೆ ಹೋಲಿಸಿದರೆ ರಬಿನಲ್ಲಿ ಹೆಸರು ಬಿತ್ತನೆ ಕಡಿಮೆ ಎನ್ನಬಹುದಾಗಿದೆ.
ಬಿತ್ತನೆ ಪ್ರಮಾಣ ಕುಸಿತ
ಈ ಬಾರಿಯ ಮುಂಗಾರು ಹಂಗಾಮಿಗೆ ರಾಜ್ಯ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿ ಹೆಸರು ಬೆಳೆ ಶೇಕಡಾ 30-40ರಷ್ಟಕ್ಕಿಂತ ಕಡಿಮೆ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಆದರೆ ಮಳೆಯ ಕೊರತೆಯಿಂದ ಬೆಳೆ ಕಮರುವ ಸ್ಥಿತಿಗೆ ತಲುಪಿದೆ. ರಾಜ್ಯದಲ್ಲಿ ಮುಂಗಾರು ಹಂಗಾಮಿಗೆ ಸುಮಾರು ನಾಲ್ಕು ಲಕ್ಷ ಹೆಕ್ಟೇರ್ ಪೈಕಿ ಜುಲೈ ಮೊದಲ ವಾರಕ್ಕೆ ಕೇವಲ 67 ಸಾವಿರ ಹೆಕ್ಟೇರ್ನಲ್ಲಿ ಮಾತ್ರ ಹೆಸರು ಬಿತ್ತನೆಯಾಗಿದೆ. ಕಳೆದ ವರ್ಷ ಈ ವೇಳೆಗೆ ಸುಮಾರು 2.53 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು.
ರಾಜ್ಯದಲ್ಲಿ ಗದಗ, ಧಾರವಾಡ, ಬೆಳಗಾವಿ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಹೆಸರು ಬೆಳೆಯಲಾಗುತ್ತಿದೆ. ಆದರೂ, ಗದಗ ಜಿಲ್ಲೆ ರಾಜ್ಯದಲ್ಲಿಯೇ ಅತಿ ಹೆಚ್ಚು ಹೆಸರು ಬೆಳೆಯುವ ಪ್ರದೇಶವಾಗಿದೆ. ಧಾರವಾಡ ಜಿಲ್ಲೆಯಲ್ಲಿಯೂ ಹೆಸರು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಆದರೆ ಮಳೆ ಕೊರತೆಯಿಂದ ಎರಡು ಜಿಲ್ಲೆಗಳಲ್ಲಿಯೂ ಇದೀಗ ಬಿತ್ತನೆ ಪ್ರಮಾಣ ಕುಂಠಿತವಾಗಿದೆ.
ಮುಂಗಾರು ಹಂಗಾಮಿಗೆ ಮೇ ಮಧ್ಯ ಭಾಗದಿಂದ ಜುಲೈ ಮೊದಲ ವಾರದವರೆಗೆ ಹೆಸರು ಬಿತ್ತನೆ ಮಾಡಲಾಗುತ್ತದೆ. ಪೂರ್ವ ಮುಂಗಾರು ಮಳೆ ಉತ್ತಮವಾಗಿ ಬಿದ್ದಲ್ಲಿ ರೈತರು ಮೇ ಮಧ್ಯ ಭಾಗದಿಂದಲೇ ಹೆಸರು ಬಿತ್ತನೆ ಆರಂಭಿಸುತ್ತಾರೆ. ಇಲ್ಲವಾದರೆ ಮುಂಗಾರು ಆರಂಭಕ್ಕೆ ಜೂನ್ನಲ್ಲಿ ಬಿತ್ತನೆ ಕಾರ್ಯ ಕೈಗೊಳ್ಳುತ್ತಾರೆ. ಈ ಬಾರಿ ಮುಂಗಾರು ಮಳೆ ಜುಲೈ ಮೊದಲ ವಾರದವರೆಗೂ ಸಮರ್ಪಕ ರೀತಿಯಲ್ಲಿ ಇಲ್ಲವಾದ್ದರಿಂದ ಹೆಸರು ಬೆಳೆ ಬಿತ್ತನೆ ಹೆಚ್ಚಿನ ಪ್ರದೇಶದಲ್ಲಿ ಸಾಧ್ಯವಾಗಿಲ್ಲ.
ಧಾರವಾಡ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಒಂದು ಗ್ರಾಮದಲ್ಲಿ 5-6 ಸಾವಿರ ಹೆಕ್ಟೇರ್ನಷ್ಟು ಮುಂಗಾರು ಹಂಗಾಮಿಗೆ ಬಿತ್ತನೆ ಆಗುತ್ತಿತ್ತು. ಈ ಬಾರಿ ಕನಿಷ್ಟ 20 ಹೆಕ್ಟೇರ್ನಷ್ಟು ಬಿತ್ತನೆ ಆಗಿಲ್ಲ. ಮಹಾರಾಷ್ಟ್ರದಲ್ಲಿ ಹೆಸರು ಬೆಳೆಯುವ ಜಿಲ್ಲೆಗಳ ಸ್ಥಿತಿಯೂ ಭಿನ್ನವಾಗಿಲ್ಲ. ಅಲ್ಲಿಯೂ ಮುಂಗಾರು ಮಳೆ ವೈಫಲ್ಯದಿಂದ ನಿರೀಕ್ಷಿತ ಮಟ್ಟದಲ್ಲಿ ಹೆಸರು ಬಿತ್ತನೆ ಆಗಿಲ್ಲ. ಈ ಬಾರಿ ಶೇ.25-30 ಪ್ರಮಾಣದ ಹೆಸರು ಫಸಲು ಬರಬಹುದು ಎಂದು ಅಂದಾಜಿಸಲಾಗಿದೆ.
ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆ ಕೊರತೆಯಿಂದ ಮುಂಗಾರು ಹಂಗಾಮಿಗೆ ಹೆಸರು ಬೆಳೆ ಬಿತ್ತನೆ ಕುಂಠಿತ ವಾಗಿದ್ದರೆ, ರಾಜಸ್ಥಾನ, ಉತ್ತರ ಪ್ರದೇಶ ಸೇರಿದಂತೆ ಉತ್ತರದ ಹೆಸರು ಬೆಳೆಯುವ ರಾಜ್ಯಗಳಲ್ಲಿ ಅತಿವೃಷ್ಟಿ- ಪ್ರವಾಹ ಸ್ಥಿತಿಯಿಂದ ಹೆಸರು ಬೆಳೆ ಇಲ್ಲದಂತಾಗಿದೆ. ಸಹಜವಾಗಿಯೇ ಈ ಬಾರಿ ಹೆಸರು ಬೇಳೆ ಬೆಲೆ ಗಗನಮುಖಿಯಾಗುವುದು ಖಚಿತ ಎಂದೇ ಭಾವಿಸಲಾಗಿದೆ. ಮತ್ತೊಂದೆಡೆ ಉತ್ತಮ ದರ ಸಿಗುವ ಸಂದರ್ಭದಲ್ಲಿ ಹೊಲದಲ್ಲಿ ಬೆಳೆ ಇಲ್ಲವಾಯಿತಲ್ಲ ಎಂಬ ಕೊರಗು ರೈತರದ್ದಾಗಿದೆ.












Click it and Unblock the Notifications