Rain Shortage: ಕೊಡಗಿನ ಕೈಲ್ ಮುಹೂರ್ತ ಹಬ್ಬದ ಸಂಭ್ರಮಕ್ಕೆ ‘ಬರ’ದ ಕರಿನೆರಳು
ಕೊಡಗು, ಸೆಪ್ಟೆಂಬರ್, 03: ಕೊಡಗಿನಲ್ಲಿ ಕೈಲ್ ಮುಹೂರ್ತ (ಸೆಪ್ಟೆಂಬರ್ 3) ಹಬ್ಬದ ಸಂಭ್ರಮ ಮನೆ ಮಾಡಿದ್ದರೂ, ಈ ಬಾರಿ ಸಮರ್ಪಕವಾಗಿ ಸುರಿಯದ ಮಳೆಯ ಬಗ್ಗೆ ಆತಂಕ ಎಲ್ಲರಲ್ಲೂ ಇದ್ದೇ ಇದೆ. ಸುಮಾರು ಮೂರು ತಿಂಗಳ ಮಳೆ ಗಾಳಿಗೆ ಬಳಲಿ ಬೆಂಡಾದವರಿಗೆ ಸೆಪ್ಟಂಬರ್ ತಿಂಗಳಲ್ಲಿ ಮಳೆ ಸ್ವಲ್ಪ ಬಿಡುವು ನೀಡುತ್ತಿತ್ತು. ಆ ಸಂತೋಷದಲ್ಲಿ ಜನ ಹಬ್ಬಾಚರಣೆ ಮಾಡುತ್ತಿದ್ದರು. ಆದರೆ ಈ ವರ್ಷ ಅಂತಹ ಮಳೆ ಸುರಿಯಲೇ ಇಲ್ಲ. ಅದಕ್ಕಿಂತ ಹೆಚ್ಚಾಗಿ ಮಳೆಗಾಲ ಎಂಬುದು ಗೊತ್ತೇ ಆಗದಂತೆ ಕಳೆದು ಹೋಗಿದೆ.
ಇಂತಹ ಪರಿಸ್ಥಿತಿಯಲ್ಲಿ ಹಬ್ಬದ ಆಚರಣೆಯನ್ನು ಜನ ಮಾಡುತ್ತಿದ್ದರೂ ಎಲ್ಲರ ಬಾಯಲ್ಲೂ ಮಳೆಯದ್ದೇ ಮಾತಾಗಿದೆ. ಹೀಗೆ ಆದರೆ ಮುಂದೇನು? ಗತಿ ಎಂಬ ಭಯ ಎಲ್ಲರನ್ನು ಕಾಡತೊಡಗಿದೆ. ಕಳೆದ 5 ವರ್ಷಗಳ ಕಾಲ ಸುರಿಯುವ ಭಾರೀ ಮಳೆಗೆ ಭಯಭೀತರಾಗಿದ್ದರು. ಆದರೆ ಈ ಬಾರಿ ಮಳೆಯಿಲ್ಲದರಿಂದ ಭಯಗೊಂಡಿದ್ದಾರೆ. ಸಮರ್ಪಕವಾಗಿ ಮಳೆ ಸುರಿಯದ ಕಾರಣದಿಂದ ನೀರಿನ ಸೆಲೆಗಳು ಬತ್ತಿಹೋಗುವ ಸಾಧ್ಯತೆಯಿದ್ದು, ಬೇಸಿಗೆ ಮುನ್ನವೇ ನೀರಿನ ಸಮಸ್ಯೆ ಕಾಡುವ ಆತಂಕ ಎದುರಾಗಿದೆ.

ಇಂತಹ ಪರಿಸ್ಥಿತಿ ಇರುವಾಗ ಹಬ್ಬವನ್ನು ಖುಷಿಯಾಗಿ ಆಚರಣೆ ಮಾಡಲು ಸಾಧ್ಯನಾ? ಮುಂಗಾರು ಮಳೆಗೆ ಭತ್ತ ಕೃಷಿಯನ್ನು ಮಾಡುತ್ತಿದ್ದರು. ಅದನ್ನು ಮುಗಿಸಿ ಕೈಲ್ ಮುಹೂರ್ತ ಹಬ್ಬದ ಆಚರಣೆ ಮಾಡುತ್ತಿದ್ದರು. ಆದರೆ ಈ ಬಾರಿ ಬಹುತೇಕರು ನೀರಿನ ಸಮಸ್ಯೆಯಿಂದಾಗಿ ಭತ್ತದ ಕೃಷಿಯನ್ನೇ ಮಾಡಿಲ್ಲ. ಈಗಾಗಲೇ ನಾಟಿ ಮಾಡಿದ ಕೆಲವರಿಗೆ ನೀರಿನ ಸಮಸ್ಯೆ ಕಾಡುತ್ತಿದೆ.
ಹಬ್ಬಕ್ಕೆ ಭತ್ತದ ಕೃಷಿಯೇ ಮೂಲ
ಇವತ್ತು ಹಬ್ಬಗಳಲ್ಲಿ ಒಂದೆಡೆ ಸೇರಿ ತಿಂದುಂಡು, ಕುಡಿದು ಖುಷಿಯಾಗಿ ಕಾಲ ಕಳೆಯುವುದರೊಂದಿಗೆ ಕಳೆದು ಹೋಗುತ್ತದೆ. ಆದರೆ ಪ್ರತಿಹಬ್ಬದ ಹಿಂದೆಯೂ ಸಂಪ್ರದಾಯ, ಪೂಜಾ ಕೈಂಕರ್ಯಗಳು ಇದ್ದೇ ಇದೆ. ಕೊಡಗಿನ ಮಟ್ಟಿಗೆ ಆಚರಿಸುವ ಹಬ್ಬಗಳೆಲ್ಲವೂ ಭತ್ತದ ಕೃಷಿಯನ್ನು ಆದರಿಸಿ ಹಿಂದಿನವರು ಆಚರಣೆಗೆ ತಂದಿದ್ದಾರೆ. ಇದರಲ್ಲಿ ಇತ್ತೀಚೆಗೆ ಅದ್ಧೂರಿತನವಿದೆಯಾದರೂ ಅದರ ಹಿಂದೆ ಸಂಪ್ರದಾಯದ ಮೂಲವಿರುವುದಂತೂ ನಿಜ. ಜೊತೆಗೆ ಅದನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಹೋಗಲಾಗುತ್ತಿದೆ.
ಪ್ರತಿ ಹಬ್ಬದಲ್ಲಿಯೂ ಕುಟುಂಬದ ಹಿರಿಯರು ಕುಟುಂಬಕ್ಕೆ, ಊರು, ಜನಜಾನುವಾರಿಗೆ ಒಳಿತಾಗಲಿ, ಮಳೆ ಬೆಳೆ ಸಮೃದ್ಧಿಯಾಗಲೆಂದು ಕೊಡಗಿನ ಮಳೆ ದೇವ ಇಗ್ಗುತ್ತಪ್ಪ ಮತ್ತು ಕುಲದೇವಿ ಕಾವೇರಿಯಲ್ಲಿ ಬೇಡಿಕೊಳ್ಳುವುದು ನಡೆದುಕೊಂಡು ಬಂದಿದೆ. ಕೊಡಗಿನಲ್ಲಿ ಎಷ್ಟೇ ಮಳೆ ಸುರಿದರೂ ಅದನ್ನು ಸಹಿಸಿಕೊಂಡು ಅದಕ್ಕೆ ತಕ್ಕಂತೆ ಜೀವನ ನಡೆಸುತ್ತಾರೆ. ಆದರೆ ಮಳೆ ಕಡಿಮೆಯಾದರೆ ಆತಂಕ ಪಡುತ್ತಾರೆ.
ಜಲಮೂಲಗಳೇ ಹೆಚ್ಚಿನವರಿಗೆ ಜೀವಜಲ
ಇದಕ್ಕೆ ಕಾರಣವೂ ಇಲ್ಲದಿಲ್ಲ. ಕೊಡಗಿನಲ್ಲಿ ಮಳೆ ಸುರಿದು ಭೂಮಿ ತೇವಗೊಂಡು ಅಂತರ್ಜಲ ಹೆಚ್ಚಾಗಿ ಅದು ಜಲರೂಪತಾಳಿ ಹರಿದು ಬರಬೇಕು. ಇದು ಅಲ್ಲಲ್ಲಿ ತೊರೆಯಾಗಿ, ಹೊಳೆಯಾಗಿ ಹರಿದು ಜೀವಜಲ ನೀಡುತ್ತದೆ. ಇದನ್ನು ಬಳಸಿಕೊಂಡು ಭತ್ತದ ಕೃಷಿ ಮತ್ತು ಕುಡಿಯಲು ಬಳಸುತ್ತಾರೆ. ಇಂತಹ ಜಲಮೂಲಗಳು ಸೃಷ್ಟಿಯಾಗುವುದು ಮಳೆಯಿಂದ ಮಾತ್ರ. ಮಳೆ ಬಾರದೆ ಹೋದರೆ ಮನೆ ಮುಂದಿನ ಬಾವಿಯಲ್ಲಿ ನೀರು ಪಾತಾಳ ಸೇರುತ್ತದೆ. ಬೆಟ್ಟಗುಡ್ಡ, ತೊರೆಗಳಿಂದ ಹರಿದು ಬರುವ ನೀರು ಬತ್ತಿ ಹೋಗುತ್ತದೆ.
ಇಂತಹ ಪರಿಸ್ಥಿತಿ ನಿರ್ಮಾಣವಾಗದೆ ಇರಬೇಕಾದರೆ ಮಳೆ ಸರಿಯಲೇ ಬೇಕಾಗುತ್ತದೆ. ಈ ಮಳೆಗಾಗಿ ಜನ ಬೇಡಲೇ ಬೇಕಾಗಿದೆ. ಹಿಂದಿನ ಕಾಲದಲ್ಲಿ ವರ್ಷದ ಆರು ತಿಂಗಳ ಕಾಲ ಮಳೆಸುರಿಯುತ್ತಿತ್ತು. ಇಂತಹ ಮಳೆಯಲ್ಲಿಯೇ ರೈತರು ಭತ್ತದ ಕೃಷಿಯನ್ನು ಮಾಡಿ ಆಗಸ್ಟ್ ತಿಂಗಳ ಹೊತ್ತಿಗೆ ಮುಗಿಸಿ ಬಿಡುತ್ತಿದ್ದರು. ಸೆಪ್ಟೆಂಬರ್ ವೇಳೆಗೆ ಆ ಖುಷಿಯಲ್ಲಿ ಕೈಲ್ ಮುಹೂರ್ತ ಹಬ್ಬವನ್ನು ಆಚರಿಸಿ ಮತ್ತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ದಸರಾ ಹೊತ್ತಿಗೆ ಮೈಕೈ ಕೊಡವಿಕೊಂಡು ಮೇಲೇರುತ್ತಿದ್ದರು.
ಮಳೆಬಾರದಿದ್ದರೆ ಜೀವನ ನಡೆಯಲ್ಲ
ದಸರಾ ಮುಗಿಸಿ ಮತ್ತೆ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅವತ್ತಿನ ಕಾಲದಲ್ಲಿ ಕೃಷಿಯೇ ಬದುಕಿಗೆ ಪ್ರಧಾನವಾಗಿತ್ತು. ಆದರೀಗ ಎಲ್ಲವೂ ಬದಲಾಗಿದೆ. ಭತ್ತದ ಕೃಷಿಗೆ ನೀರಿನ ಕೊರತೆ, ಕಾರ್ಮಿಕರ ಅಭಾವ, ಖರ್ಚುವೆಚ್ಚ ಹೆಚ್ಚಳ, ಇಳುವರಿಯಲ್ಲಿ ಇಳಿಕೆ ಹೀಗೆ ಹತ್ತಾರು ಸಮಸ್ಯೆಗಳು ಭತ್ತದ ಕೃಷಿಕರನ್ನು ಕಾಡುತ್ತಿದ್ದು, ಪರಿಣಾಮ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದ್ದಾರೆ. ಆದರೆ ಹಬ್ಬದ ಆಚರಣೆ ಮತ್ತು ಸಂಭ್ರಮ ಹಾಗೆಯೇ ಉಳಿದುಬೆಳೆದು ಬಂದಿದೆ. ಈ ಬಾರಿ ಮಾತ್ರ ಎಲ್ಲೊ ಒಂದು ಕಡೆಯಲ್ಲಿ ಮಳೆ ಬಾರದ್ದರಿಂದ ಆತಂಕ ಕಾಡುವಂತೆ ಮಾಡಿದೆ.












Click it and Unblock the Notifications