ಬಿಸಿಲಿನ ಝಳಕ್ಕೆ ಅರಳಿದ ಮಲ್ಲಿಗೆ: ಅಧಿಕ ಇಳುವರಿ, ಪಾತಾಳಕ್ಕೆ ಕುಸಿದ ದರ, ಬೇಡಿಕೆ
ಮಂಗಳೂರು, ಆಗಸ್ಟ್ 28: ಈ ಬಾರಿ ರಾಜ್ಯದಲ್ಲಿ ವರುಣ ಕಣ್ಣಮುಚ್ಚಾಲೆ ಆಡುತ್ತಿದ್ದಾನೆ. ತೀರಾ ವಿಳಂಬವಾಗಿ ಆರಂಭವಾದ ಮುಂಗಾರು ಮಳೆ ರಾಜ್ಯದ ಕೆಲವು ಜಿಲ್ಲೆಗಷ್ಟೇ ಸೀಮಿತವಾಯಿತು. ಕೆಲವು ಭಾಗಗಳಲ್ಲಿ ಮಳೆ ಬಾರದೇ ಬರದ ಛಾಯೆ ಆವರಿಸಿದರೆ, ಮತ್ತು ಕೆಲವು ಭಾಗಗಳಲ್ಲಿ ಅತೀವೃಷ್ಠಿಯಾಗಿ ಪ್ರವಾಹ ಉಂಟಾಗಿತ್ತು. ಇದು ಜೂನ್ ಜುಲೈ ತಿಂಗಳ ದೃಶ್ಯವಾದರೆ, ಆಗಸ್ಟ್ನಲ್ಲಿ ರಾಜ್ಯದ ಬಹುತೇಕ ಭಾಗಗಳಲ್ಲಿ ಬಿರುಬಿಸಿಲು.
ಮಳೆಯನ್ನು ನಂಬಿಕೊಂಡು ಕೃಷಿ ಚಟುವಟಿಕೆ ಆರಂಭಿಸಿದ್ದ ರೈತರು ಇದೀಗ ಮಳೆ ಬಾರದೆ ಕಂಗಾಲಾಗಿದ್ದಾರೆ. ಭತ್ತ ಬೆಳೆಯವವರು ಗದ್ದೆಗಳಲ್ಲಿ ನೀರು ಇಲ್ಲದೇ, ಬೆಳೆ ನಾಶವಾಗುವ ಆತಂಕದಲ್ಲಿದ್ದಾರೆ. ಬಿರುಬಿಸಿಲಿಗೆ ಎಲ್ಲಾ ಬೆಳೆಗಳು ಒಣಗುತ್ತಿದ್ದರೆ, ಇದೊಂದು ಕೃಷಿ ಮಾತ್ರ ಅಧಿಕ ಇಳುವರಿ ನೀಡುತ್ತಿದೆ. ಹೆಚ್ಚಿನ ಇಳುವರಿ ಬಂದರೂ ಕೂಡ ಇದು ಬೆಳೆಗಾರರಿಗೆ ಬರೆಯಾಗಿದೆ.

ಹೌದು ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಯಲ್ಲಿ ಸಮಾರಂಭಗಳಲ್ಲಿ ಯತೇಚ್ಛವಾಗಿ ಬಳಸುವ ಮಲ್ಲಿಗೆ ಹೂವಿಗೆ ಬಿಸಿಲು ವರವಾಗಿದ್ದರೆ, ಬೆಳೆಗಾರರಿಗೆ ಬಿಸಿಲು ಶಾಪವಾಗಿದೆ. ಶ್ರಾವಣ ಮಾಸ ಆರಂಭವಾಗಿದ್ದು, ಸಾಲು ಸಾಲು ಹಬ್ಬಗಳು ಕೂಡ ಆರಂಭವಾಗಿದೆ. ಈಗಾಗಲೇ ನಾಗರ ಪಂಚಮಿ ಹಾಗೂ ವರಮಹಾಲಕ್ಷ್ಮೀ ಹಬ್ಬ ಮುಗಿದಿದ್ದು, ಇನ್ನೂ ಹತ್ತಾರು ಹಬ್ಬಗಳು ಸಾಲಿನಲ್ಲಿವೆ. ಹೀಗಿದ್ದರೂ ಕೂಡ ಮಲ್ಲಿಗೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸಾಮಾನ್ಯವಾಗಿ ಆಗಸ್ಟ್ ತಿಂಗಳಲ್ಲಿ ಮಳೆ ಇರುವ ಕಾರಣ ಈ ಹಿಂದಿನ ವರ್ಷಗಳಲ್ಲಿ ಮಲ್ಲಿಗೆ ಇಳುವರಿ ಕಮ್ಮಿ ಇರುತ್ತಿತ್ತು. ಹೀಗಾಗಿ ಬೇಡಿಕೆ ಜೊತೆಗೆ ದರವೂ ಹೆಚ್ಚುತ್ತಿತ್ತು. ಆದರೆ ಈ ಬಾರಿ ಬಿಸಿಲಿರುವ ಕಾರಣ ಮಲ್ಲಿಗೆ ಹೂವು ಯತ್ತೇಚ್ಛವಾಗಿ ಬೆಳೆಯುತ್ತಿದೆ.
ಹೀಗಾಗಿ ಬೇಡಿಕೆ ಜೊತೆಗೆ ದರವೂ ಪಾತಾಳಕ್ಕಿಳಿದಿದೆ. ಸರಿಸುಮಾರು ಎರಡು ದಿನ ಅರಳಿರುವ ಈ ಮಲ್ಲಿಗೆ ಮೂರನೇ ದಿನ ಗಿಡದಿಂದ ಬಿದ್ದು, ಅಥವಾ ಕಪ್ಪಾಗಿ ಹಾಳುತ್ತದೆ. ಹೀಗಾಗಿ ಮಲ್ಲಿಗೆ ಬೆಳೆಗಾರರು ಸಿಕ್ಕ ದರಕ್ಕೆ ಹೂವುಗಳನ್ನು ಮಾರುತ್ತಿದ್ದಾರೆ.

ಸದ್ಯ ಶಂಕರಪುರ ಮಲ್ಲಿಗೆ ಅಟ್ಟಿಗೆ 160 ರೂಪಾಯಿ, ಚಿಲ್ಲರೆ ಮಾರುಕಟ್ಟೆಯಲ್ಲಿ 200 ರೂಪಾಯಿ, ಭಟ್ಕಳ ಮಲ್ಲಿಗೆ ಅಟ್ಟಿಗೆ 180 ರೂಪಾಯಿ, ಹಾಗೂ ಜಾಜಿ ಮಲ್ಲಿಗೆ ಅಟ್ಟಿಗೆ 140 ರೂನಂತೆ ಮಾರಾಟ ಮಾಡಲಾಗುತ್ತಿದೆ.
ಒಂದು ವಾರದ ಹಿಂದೆ ನಾಗರ ಪಂಚಮಿ ಹಾಗೂ ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಶಂಕರಪುರ ಮಲ್ಲಿಗೆ ಅಟ್ಟಿಗೆ 1,100 ರೂ, ಭಟ್ಕಳ ಮಲ್ಲಿಗೆ ಅಟ್ಟಿಗೆ 900 ರೂ, ಜಾಜಿ ಮಲ್ಲಿಗೆ ಅಟ್ಟಿಗೆ 400 ರೂನಂತೆ ಮಾರಾಟವಾಗಿತ್ತು. ಈ ಸಮಯದಲ್ಲಿ ಬೇಡಿಕೆ ಕೂಡ ಹೆಚ್ಚಿತ್ತು. ಆದರೆ ಮಾರಾಟವಾಗದೇ ಉಳಿದ ಕಾರಣ, ಸದ್ಯ ಹೂವಿನ ವ್ಯಾಪಾರಿಗಳು ಮಲ್ಲಿಗೆಯನ್ನು ಕೈಬಿಟ್ಟಿದ್ದಾರೆ.
ಮಳೆ ಜೊತೆಗೆ ಬಿಸಿಲು ಎರಡೂ ಇದ್ದರೆ ಮಲ್ಲಿಗೆ ಕೃಷಿ ಇಳುವರಿ ಸಮಪ್ರಮಾಣದಲ್ಲಿರುತ್ತಿದೆ. ಜುಲೈನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಿಟ್ಟು ಬಿಡದೇ ಮಳೆಯಾದ ಕಾರಣ ಮಲ್ಲಿಗೆ ಇಳುವರಿ ಕಮ್ಮಿ ಆಗಿತ್ತು. ಈ ವೇಳೆ ದರ ಗಗನಕ್ಕೇರಿದ್ದು, ಶಂಕರಪುರ ಮಲ್ಲಿಗೆ ಅಟ್ಟಿಗೆ 2,200 ರೂಪಾಯಿ, ಭಟ್ಕಳ ಮಲ್ಲಿಗೆ ಅಟ್ಟಿಗೆ 1,200 ರೂಪಾಯಿ, ಹಾಗೂ ಜಾಜಿ ಮಲ್ಲಿಗೆ ಅಟ್ಟಿಗೆ 800 ರೂನಂತೆ ಮಾರಾಟವಾಗಿತ್ತು.
ಆದರೆ ಸದ್ಯ ಬಿಸಿಲಿನಿಂದ ಇಳುವರಿ ಹೆಚ್ಚಾಗಿದ್ದು, ಬೇಡಿಕೆ ಹಾಗೂ ದರ ಎರಡೂ ಕುಸಿದ್ದಿದ್ದು, ಮಲ್ಲಿಗೆ ಕೃಷಿಯನ್ನೇ ನಂಬಿಕೊಂಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೂವು ಗಿಡದಲ್ಲೇ ಹಾಳಾಗುತ್ತಿದ್ದು, ಇನ್ನು ಕೆಲವು ಅಟ್ಟಿಗೆಯಲ್ಲೇ ಬಾಡಿ ಹೋಗುತ್ತಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications