'ರೈತರ ಮನೆ ಬಾಗಿಲಿಗೆ ಸೇವೆ ನೀಡುವ ವೆಬ್ ಸೈಟ್'
ಬೆಂಗಳೂರು, ಮಾ. 4: ಕೃಷಿ ಇಲಾಖೆಯು ರೈತರ ಮನೆ ಬಾಗಿಲಿಗೆ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಆಧುನಿಕ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದಿಂದ ಕೂಡಿರುವ 'ರೈತ ಮಿತ್ರ' ವೆಬ್ ಸೈಟ್ ಅನ್ನು ಲೋಕಾರ್ಪಣೆ ಮಾಡಲಾಗಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ಕೃಷಿ ಇಲಾಖೆಯ ನವೀಕೃತ ರೈತ ಸ್ನೇಹಿ ವೆಬ್ ಸೈಟ್ (http://raitamitra.kar.nic.in/KAN/index.asp)ಅನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಕೃಷ್ಣ ಭೈರೇಗೌಡ, ಮುಂದಿನ ದಿನಗಳಲ್ಲಿ ರೈತರೇ ತಮ್ಮ ಯಶೋಗಾಥೆಗಳನ್ನು ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಬಹುದು. ರೈತ ಸ್ನೇಹಿ- ಪ್ರಶ್ನೋತ್ತರಗಳಿಗೆ ಇ-ವೇದಿಕೆ, ರೈತರು ಎದುರಿಸುವ ತಾಂತ್ರಿಕ ಸಮಸ್ಯೆಗಳಿಗೆ ಪ್ರಗತಿಪರ ರೈತರಲ್ಲೇ ಲಭ್ಯವಿರುವ ಪರಿಹಾರಗಳನ್ನು ವೆಬ್ ಸೈಟ್ ನಲ್ಲಿ ಹಂಚಿಕೊಳ್ಳಲು ಅವಕಾಶ ಕಲ್ಪಿಸುವಂತೆ ಸೂಚಿಸಿದರು.
ರಾಜ್ಯದಲ್ಲಿ ಪ್ರಗತಿಪರ ರೈತರು ಅನೇಕ ನೂತನ ಪದ್ಧತಿಗಳನ್ನು ಆವಿಷ್ಕರಿಸಿ ಅನುಸರಿಸುತ್ತಿದ್ದಾರೆ. ಇವುಗಳ ಲಾಭದಾಯಕತೆ ಯನ್ನು ಇತರ ರೈತರಿಗೂ ವಿಸ್ತರಿಸಲು ಈ ವೆಬ್ ಸೈಟ್ ಅತ್ಯಂತ ಸೂಕ್ತ ಸಾಧನ ಎಂದು ಕೃಷ್ಣಭೈರೇಗೌಡ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

ರೈತ ಮಿತ್ರ ವೆಬ್ ಸೈಟ್ ನಲ್ಲಿ ಮಾರುಕಟ್ಟೆ ಮಾಹಿತಿ, ತಾಂತ್ರಿಕತೆ, ಹವಾಮಾನ ಮುನ್ಸೂಚನೆ, ಪೀಡೆ ಸರ್ವೇಕ್ಷಣೆ, ಕುಂದುಕೊರತೆಗಳ ನಿರ್ವಹಣೆ, ಟೆಂಡರ್ ಅಧಿಸೂಚನೆ ಇತ್ಯಾದಿಗಳ ಮಾಹಿತಿಯನ್ನು ಅತ್ಯಂತ ವೇಗದಲ್ಲಿ, ಸಕಾಲದಲ್ಲಿ ರೈತ ಸಮುದಾಯಕ್ಕೆ ದೊರೆಯಲಿದೆ.ರೈತಸ್ನೇಹಿ ಪ್ರಶ್ನೋತ್ತರ ಮಾಲಿಕೆ ಮೂಲಕ ತಮ್ಮ ಸಮಸ್ಯೆಗಳನ್ನು ಪ್ರಶ್ನೆಗಳನ್ನು ಕೇಳಬಹುದಾಗಿದೆ. ಜತೆಗೆ ರೈತರ ಸಹಾಯವಾಣಿ ಕೇಂದ್ರ ದೂರವಾಣಿ ಸಂಖ್ಯೆ: 1800 425 3553 ಸಹಕಾರಿಯಾಗಿದೆ.
ಕೃಷಿ ಸಂಬಂಧಿತ ಪ್ರಶ್ನೆಗಳಿಗೆ ಇ- ವೇದಿಕೆಯನ್ನು ಕಲ್ಪಿಸಲಾಗಿದೆ. ಈ ವೇದಿಕೆಯಲ್ಲಿ ಕನ್ನಡ-ಆಂಗ್ಲ ಭಾಷೆಯಲ್ಲಿ, ರೈತರು, ಸಾರ್ವಜನಿಕರು ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಕೇಳಲು ಹಾಗೂ ಸೂಕ್ತ ಉತ್ತರಗಳನ್ನು ಸಂಚಾರಿ ದೂರವಾಣಿ ಮತ್ತು ಇ-ಮೇಲ್ ಮುಖಾಂತರ ಪಡೆಯಲು ವೇದಿಕೆ ರೂಪಿಸಲಾಗಿದೆ.












Click it and Unblock the Notifications