ಕಾಫಿ ಬೆಳೆಗಾರರಿಗೆ ಸಂಕಟ ತಂದಿಟ್ಟ ಅಕಾಲಿಕ ಮಳೆ
ಬೆಂಗಳೂರು, ಜನವರಿ 08: ಕರ್ನಾಟಕದಲ್ಲಿ ಅಕಾಲಿಕ ಮಳೆಯಿಂದಾಗಿ ಪ್ರಗತಿಯಲ್ಲಿದ್ದ ಕಾಫಿ ಕುಯಿಲಿಗೆ ತೊಂದರೆ ಉಂಟಾಗಿದೆ. ಮಳೆಯಿಂದ ಕಾಫಿ ಹಣ್ಣುಗಳು ಸೀಳುತ್ತಿರುವುದಲ್ಲದೆ ಕುಯಿಲೆಗೆ ಬಂದಿದ್ದ ಹಣ್ಣುಗಳು ಉದುರಿ ಹಾಳಾಗುತ್ತಿವೆ. ಇದರೊಂದಿಗೆ ಅಕಾಲಿಕವಾಗಿ ಹೂ ಕಚ್ಚಿ ಕಾಯಿಕಟ್ಟದೆ ಹಾಳಾಗುವುದರಿಂದ ಮುಂದಿನ ವರ್ಷದ ಬೆಳೆಯ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.
ಈ ಅಕಾಲಿಕ ಮಳೆಯಿಂದ ಮತ್ತು ಕೃಷಿ ಕೂಲಿಗಳ ಕೊರತೆಯಿಂದ ಮೂರನೆಯ ಒಂದು ಭಾಗದಷ್ಟು ಬೆಳೆ ಕೈತಪ್ಪಿ ಹೋಗುತ್ತದೆ ಎಂಬುದು ಕಾಫಿ ಬೆಳೆಗಾರರು ಹೇಳುತ್ತಿದ್ದಾರೆ. ಕೂಲಿಗಳ ಸಮಸ್ಯೆಯಿಂದ ಸಮಯಕ್ಕೆ ಸರಿಯಾಗಿ ಕುಯಿಲು ಮಾಡದಿರುವುದರಿಂದ ಅರೇಬಿಕಾ ಕಾಫಿಯಲ್ಲಿ ಶೇಕಡಾ 35 ರಷ್ಟು ನಷ್ಟವಾಗುತ್ತದೆ ಮತ್ತು ರೊಬೋಸ್ಟಾದಲ್ಲಿ ಶೇಕಡಾ 30 ರಷ್ಟು ನಷ್ಟ ಉಂಟಾಗುತ್ತದೆ ಎಂದೂ ಅವರು ಲೆಕ್ಕ ಹಾಕತೊಡಗಿದ್ದಾರೆ.
ಮಳೆಯಿಂದ ಕಾಫಿ ಹಣ್ಣು ಸೀಳುವುದು, ಬಿದ್ದು ಹೋಗುವುದೂ ಸೇರಿದಂತೆ ಹಣ್ಣುಗಳನ್ನು ಒಣಗಿಸುವ ಕೆಲಸವೂ ಆಗುವುದಿಲ್ಲ. ಒಂದು ವಾರದಲ್ಲಿ ಆಗುವ ಕೆಲಸಕ್ಕೆ ಹದಿನೈದು ದಿನಗಳು ಬೇಕಾಗಬಹುದು ಎಂದೂ ಅವರು ಅಳಲು ತೋಡಿಕೊಳ್ಳುತ್ತಿದ್ದಾರೆ. ಬಿದ್ದ ಹಣ್ಣುಗಳನ್ನು ಆಯುವುದು ಬಹಳ ಪ್ರಯಾಸದ ಕೆಲಸ. ತಡವಾದರೆ ಅಲ್ಲಿಯೇ ಮೊಳಕೆ ಬರುತ್ತವೆ. ಆಯ್ದ ಹಣ್ಣುಗಳಿಗೆ ಉತ್ತಮ ಬೆಲೆಯೂ ಸಿಗುವುದಿಲ್ಲ. ಹೀಗೆ ಸಮಸ್ಯೆಗಳ ಸರಮಾಲೆ ಮುಂದುವರೆಯುತ್ತದೆ.

ಮೊದಲೇ ಕೃಷಿ ಕೂಲಿಗಳ ಕೊರತೆ ಎದುರಿಸುತ್ತಿರುವ ಕಾಫಿ ಬೆಳೆಗಾರರಿಗೆ ಮಳೆಯಿಂದಾಗಿ ಇನ್ನೂ ಹೆಚ್ಚಿನ ಕೂಲಿಗಳು ಬಾರದೆ ದಿನವೊಂದಕ್ಕೆ 5000 ಕೆಜಿ ಕುಯಿಲು ಮಾಡುತ್ತಿದ್ದವರು ಇದೀಗ 1,500 ಯಿಂದ 2000 ಕೆಜಿಯಷ್ಟೇ ಕುಯಿಲು ಮಾಡಬಹುದಾಗಿದೆ ಎಂದೂ ಬೆಳೆಗಾರರು ತಮ್ಮ ಸಮಸ್ಯೆ ತೋಡಿಕೊಳ್ಳುತ್ತಿದ್ದಾರೆ.
ಮಳೆ ಬಂದ್ರೆ ಕೇಡೇ ? ಮಕ್ಕಳಾದ್ರೆ ಕೇಡೇ ? ಎಂಬುದು ಜನಪದರ ಮಾತು. ಇದಕ್ಕೆ ನಿರೀಕ್ಷಿತ ಉತ್ತರ ಇಲ್ಲವೆಂದಿರಬೇಕು. ಆದರೀಗ ಕಾಫಿ ಬೆಳೆವ ಜಿಲ್ಲೆಗಳಾದ ಕೊಡಗು ಚಿಕ್ಕಮಗಳೂರು, ಹಾಸನದ ಬೆಳೆಗಾರರ ಬಳಿ ಹೋಗಿ ಮಳೆ ಬಂದರೆ ಕೇಡೇ ಎಂದು ಕೇಳಿದರೆ " ಹೌದು ಸ್ವಾಮಿ ಕೇಡಲ್ಲದೆ ಮತ್ತೇನು" ಎಂಬ ಉತ್ತಮ ನಿಮಗೆ ಸಿಗಬಹುದು.












Click it and Unblock the Notifications