ರಾಹುಲ್ ಗಾಂಧಿ 'ಗೋ ಬ್ಯಾಕ್' ಪ್ರತಿಭಟನೆಗೆ ರೈತರು ಸಜ್ಜು
ಮಂಡ್ಯ, ಅ.07: ರೈತರು ಆತ್ಮಹತ್ಯೆ ಮಾಡಿಕೊಂಡು ನಾಲ್ಕೈದು ತಿಂಗಳು ಕಳೆದ ನಂತರ ಎಐಸಿಸಿ ಉಪಾಧ್ಯಕ್ಷ ರಾಹುಲ್ಗಾಂಧಿ ಜಿಲ್ಲೆಗೆ ಭೇಟಿ ನೀಡುತ್ತಿರುವುದನ್ನು ಖಂಡಿಸಿ, 'ರಾಹುಲ್ಗಾಂಧಿ ಗೋಬ್ಯಾಕ್' ಎಂಬ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಬಿ.ಎನ್. ರವೀಂದ್ರ ಹೇಳಿದ್ದಾರೆ.
ರಾಹುಲ್ ಓಡಿಸಿ ರೈತರನ್ನು ಉಳಿಸಿ ಚಳವಳಿ ಮಾಡಲಾಗುವುದು. ಜಿಲ್ಲೆಯಲ್ಲಿ 56ಕ್ಕೂ ಹೆಚ್ಚು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟು ದಿನ ಕಳೆದ ನಂತರ ರಾಹುಲ್ಗಾಂಧಿ ಆವರ ಕುಟುಂಬಕ್ಕೆ ಸಾಂತ್ವನ ಹೇಳಲು ಬರುತ್ತಿದ್ದಾರೆ. ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ರವೀಂದ್ರ ಆರೋಪಿಸಿದರು. ರೈತ ಹೋರಾಟ ಸಮಿತಿ, ಕರ್ನಾಟಕ ಜನಶಕ್ತಿ ಸೇರಿದಂತೆ ಅನೇಕ ಸಂಘಟನೆಗಳು ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ. [ರಾಹುಲ್ ಗಾಂಧಿ ರಾಜ್ಯ ಪ್ರವಾಸ]

ಅಕ್ಟೋಬರ್ 9 ಮತ್ತು 10 ರಂದು ಮಂಡ್ಯ ಜಿಲ್ಲೆಗೆ ರಾಹುಲ್ಗಾಂಧಿ ಬರುತ್ತಿದ್ದಾರೆ. ರಾಹುಲ್ ಅವರ ಭೇಟಿಯನ್ನು ಖಂಡಿಸಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಲಾಗುವುದು. ರಾಹುಲ್ಗಾಂಧಿ ಅವರು ಮೊದಲು ಮೈ ಶುಗರ್ ಕಾರ್ಖಾನೆ ಪ್ರಾರಂಭಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಹೇಳಿದರು. [ಎಷ್ಟೆಷ್ಟು ರೈತರು ಆತ್ಮಹತ್ಯೆಗೆ ಶರಣು?]
ಕಬ್ಬು ಮಾತ್ರವಲ್ಲದೇ, ಭತ್ತ, ತರಕಾರಿ, ಬಾಳೆ, ರೇಷ್ಮೆ ಮತ್ತು ಹಾಲಿನ ಬೆಲೆ ಕುಸಿತ, ಬರಗಾಲ, ಬೆಳೆ ನಷ್ಟ, ಒಣಗಿದ ಕಬ್ಬು, ಹಿಂದಿನ ವರ್ಷದ ಪೇಮೆಂಟ್ ಬಾಕಿ, ಹೆಚ್ಚುತ್ತಿರುವ ಶಿಕ್ಷಣ ಹಾಗೂ ಆರೋಗ್ಯದ ಮೇಲಿನ ವೆಚ್ಚ ಮುಂತಾದ ಕಾರಣದಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಸುಮಾರು 8 ದಶಕಗಳಿಗೂ ಅಧಿಕ ಇತಿಹಾಸ ಹೊಂದಿರುವ ಮೈಷುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸುವ ಬಗ್ಗೆ ಸರ್ಕಾರ ಘೋಷಿಸಿದೆ. ವಿ.ಸಿ ಫಾರಂನಲ್ಲಿ ನಡೆಯುವ ಸಂವಾದದಲ್ಲಿ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ರಾಹುಲ್ ಗಾಂಧಿ ಭೇಟಿಯ ಸಂದರ್ಭದಲ್ಲಿ ಅಸಲೀ ಸಂವಾದ ಮತ್ತು ಕಪ್ಪು ಬಾವುಟ ಮಾಡಲು ತೀರ್ಮಾನಿಸಿದೆ ಎಂದು ಕರ್ನಾಟಕ ಜನಶಕ್ತಿ, ಅಶೋಕನಗರ, ಮಂಡ್ಯ ಪ್ರಕಟಿಸಿದೆ.











Click it and Unblock the Notifications