ಅಧಿಕ ಗೋಧಿ ಬಿತ್ತನೆಯಿಂದ ರಾಬಿ ಬೆಳೆ ಬಿತ್ತನೆಯಲ್ಲಿ ಶೇ.4.4 ಏರಿಕೆ
ಬೆಂಗಳೂರು, ಡಿಸೆಂಬರ್ 25: ಭಾರತದಲ್ಲಿ ಈ ವರ್ಷದ ಹಿಂಗಾರಿನ (ರಾಬಿ) ಋತುವಿನ ರೈತರು ಶೇ.4.4 ರಷ್ಟು ಹೆಚ್ಚು ಬಿತ್ತನೆ ಮಾಡಿದ್ದಾರೆ. ಅದರಲ್ಲಿ ಪ್ರಮುಖ ಬೆಳೆ ಗೋಧಿ ಅಗ್ರಸ್ಥಾನದಲ್ಲಿದೆ.
ಇದೇ ಡಿಸೆಂಬರ್ 23 ಶುಕ್ರವಾರದವರೆಗೆ ಗೋಧಿ, ಬಾರ್ಲಿ, ಬೇಳೆ, ಸಾಸಿವೆ ಸೂರ್ಯಕಾಂತಿ ಸೇರಿದಂತೆ ದೇಶದಲ್ಲಿ ಒಟ್ಟು 620.62 ಲಕ್ಷ ಹೆಕ್ಟೇರ್ಗಳಲ್ಲಿ ರಾಬಿ ಬೆಳೆಗಳನ್ನು ಬಿತ್ತನೆ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಟ್ಟು 594.62 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆ ಮಾಡಲಾಗಿತ್ತು. ಈ ಅಂಕಿ ಅಂಶಗಳಿಂದ ಪ್ರಸಕ್ತ ವರ್ಷದಲ್ಲಿ ಶೇ.4.4 ರಷ್ಟು ಹೆಚ್ಚು ಬಿತ್ತನೆ ಆಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ.
ಭಾರತದಲ್ಲಿ ತೀವ್ರ ಉಷ್ಣಾಂಶವಿಲ್ಲ: ಅಧಿಕ ಗೋಧಿ ಇಳುವರಿ ನಿರೀಕ್ಷೆ
ಒಟ್ಟು ಹಿಂಗಾರು ಹಂಗಾಮಿ ಬೆಳೆ ಪೈಕಿ ಅತ್ಯಧಿಕ ಪ್ರದೇಶದಲ್ಲಿ ಗೋಧಿ ಬೆಳೆಯಾಗಿದೆ. ಎಲ್ಲಾ ರಾಬಿ ಬೆಳೆಗಳ ಪೈಕಿ ಗೋಧಿಯ ಬಿತ್ತನೆ ಶೇ.9.65 ಲಕ್ಷ ಹೆಕ್ಟೇರ್ನಷ್ಟು ಹೆಚ್ಚಾಗಿದೆ. ಈ ಬಾರಿ ಗೋಧಿ 302.61ಲಕ್ಷ ಹೆಕ್ಟೇರ್ನಿಂದ 312.26 ಲಕ್ಷ ಹೆಕ್ಟೇರ್ ನಷ್ಟಕ್ಕೆ ಬಿತ್ತನೆ ಏರಿಕೆ ಕಂಡಿದೆ.
ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಗೋಧಿ ಲಭ್ಯತೆ ಮೇಲೆ ಆತಂಕ ಮೂಡಿತ್ತು. ಇತ್ತ ಭಾರತವು ಸ್ವಂತ ಆಹಾರ ಭದ್ರತೆಗಾಗಿ ಗೋಧಿ ರಫ್ತು ನಿಷೇಧ ಜಾರಿ ಮಾಡಿತು. ಇದರಿಂದ ಜಗತ್ತು ಆಹಾರ ಅದರಲ್ಲೂ ಗೋಧಿ ಬಿಕ್ಕಟ್ಟು ಎದುರಾಗಲಿದೆ ಎಂದು ಹೇಳಲಾಗಿತ್ತಿ. ಎಲ್ಲ ಆತಂಕಗಳಿಗೆ ಗೋಧಿ ಬಿತ್ತನೆಯಲ್ಲಿನ ಏರಿಕೆ ಸಾಕಷ್ಟು ಭರವಸೆ ನೀಡಿದೆ. ದಾಖಲೆಯ ಮಟ್ಟದಲ್ಲಿ ಗೋಧಿ ಇಳುವರಿ ನಿರೀಕ್ಷಿಸಲಾಗುತ್ತಿದೆ ಎಂದು ಕೃಷಿ ಸಚಿವಾಲಯ ಹೇಳಿದೆ.
ರೇಪ್ಸೀಡ್-ಸಾಸಿವೆ ಅತ್ಯಧಿಕ ಬಿತ್ತನೆ
ಎಣ್ಣೆ ಬೀಜಗಳ ಬಿತ್ತಿನೆ ಪ್ರಮಾಣದಲ್ಲಿ ಪ್ರಸಕ್ತ ರಾಬಿ ಹಂಗಾಮಿನಲ್ಲಿ ರೇಪ್ಸೀಡ್ ಮತ್ತು ಸಾಸಿವೆಗಳು ಬೀಜಗಳನ್ನ ಗರಿಷ್ಠ ಪ್ರದೇಶಗಳಲ್ಲಿ ಬಿತ್ತಲಾಗಿದೆ. ಸಾಸಿವೆ ಪ್ರದೇಶವು 2021-22 ರಲ್ಲಿ 85.35 ಲಕ್ಷ ಹೆಕ್ಟೇರ್ ಇತ್ತು, ಅದು ಈ ಬಾರಿ 2022-23 ರಲ್ಲಿ 92.67 ಲಕ್ಷ ಹೆಕ್ಟೇರ್ಗಳಿಗೆ ಅಂದರೆ 7.32 ಲಕ್ಷ ಹೆಕ್ಟೇರ್ಗಳಷ್ಟು ಹೆಚ್ಚಾಗಿದೆ. ಇನ್ನು ಎಣ್ಣೆಕಾಳು ಬೆಳೆಯುವ 8.20 ಲಕ್ಷ ಹೆಕ್ಟೇರ್ಗಳಲ್ಲಿ ರೇಪ್ಸೀಡ್ ಮತ್ತು ಸಾಸಿವೆ ಮಾತ್ರ 7.32 ಲಕ್ಷ ಹೆಕ್ಟೇರ್ ಪ್ರದೇಶ ಆವರಿಸಿವೆ.
ಕಳೆದ 2 ವರ್ಷಗಳಿಂದ ವಿಶೇಷವಾಗಿ ಸಾಸಿವೆ ಕೃಷಿಯಲ್ಲಿ ರೈತರ ಹೆಚ್ಚೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇದರಿಂದಲೇ ಈ ಬಾರಿ ಸಾಸಿವೆಯನ್ನು ಹೇರಳವಾಗಿ ಬಿತ್ತಲಾಗಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ.
ಗುಣಮಟ್ಟದ ಬೀಜಗಳನ್ನು ಸಮಯೋಚಿತವಾಗಿ ಸರಬರಾಜು ಮಾಡುವುದು, ಕೃಷಿ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ತೆಗೆದುಕೊಳ್ಳಲಾದ ಕೆಲವು ಮಧ್ಯಸ್ಥಿಕೆಗಳ ಕಾರಣದಿಂದ ಈ ವರ್ಷ ದೇಶದಲ್ಲಿ ದೊಡ್ಡಮಟ್ಟದಲ್ಲಿ ಬಿತ್ತನೆ ಆಗಿದೆ ಎಂದು ಕೇಂದ್ರ ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.