ಬಳ್ಳಾರಿ: ಬಿತ್ತನೆ ಬೀಜಕ್ಕೆಂದು ಹೋದರೆ, ಲಾಠಿ ಏಟು ಕೊಟ್ಟರು
ಬಳ್ಳಾರಿ, ಜೂನ್ 14: ಸರ್ಕಾರದಿಂದ ವಿತರಿಸುವ ಬಿತ್ತನೆ ಬೀಜಕ್ಕಾಗಿ ಬೆಳಗ್ಗೆಯಿಂದ ಕಾದು ಕುಳಿತಿದ್ದ ನೂರಾರು ರೈತ ವರ್ಗದ ಮೇಲೆ ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತಲೂ ಅಧಿಕ ಮಳೆ ಶುರು ಆಗುತ್ತಿರುವುದರಿಂದ ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಬಿತ್ತನೆ ಕಾರ್ಯ ಚುರುಕಾಗಿದೆ.
ಹೀಗಾಗಿ ನಾನಾ ತಳಿಯ ಬಿತ್ತನೆ ಬೀಜ ಖರೀದಿಗಾಗಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ರೈತ ಸಂಪರ್ಕ ಕೇಂದ್ರಗಳ ಎದುರು ರೈತರು ಬೆಳಗ್ಗೆಯಿಂದಲೇ ಜಮಾಯಿಸಿದ್ದರು. ಮೆಣಸಿನಕಾಯಿ ಬಿತ್ತನೆಯ ಬೀಜ (Chilli seeds) ಖರೀದಿಸಲು ಹೆಂಗಸರು, ಮಕ್ಕಳು ಸೇರಿದಂತೆ ರೈತಾಪಿ ಜನ ಮುಗಿಬಿದ್ದಿದ್ದರು.

ಲಾಕ್ಡೌನ್ ಇನ್ನೂ ಪೂರ್ಣವಾಗಿ ತೆರವಾಗಿಲ್ಲ. ಕೃಷಿ ಕ್ಷೇತ್ರಕ್ಕೆ ಲಾಕ್ಡೌನ್ ನಿಯಮಗಳೇನೂ ಅನ್ವಯ ಆಗುವುದಿಲ್ಲವೆಂದು ಘನ ಸರ್ಕಾರದ ಮಾರ್ಗಸೂಚಿಯಲ್ಲಿದೆ. ಮತ್ತದನ್ನೇ ಮಾನ್ಯ ಕೃಷಿ ಸಚಿವರೂ ಅನೇಕ ಬಾರಿ ಪುನರುಚ್ಛರಿಸಿದ್ದರು. ಆದಾಗ್ಯೂ ರೈತರಿಗೆ ಮತ್ತು ಕೃಷಿ ಪರಿಕರಗಳ ವಿತರಕರಿಗೆ ಈ ಲಾಭ ಸಿಕ್ಕಿಲ್ಲ. ಎಲ್ಲರಂತೆ ಅವರು ತೊಂದರೆಗೊಳಗಾದವರೇ.
ಪೊಲೀಸರ ಲಾಠಿಚಾರ್ಜ್ ಕ್ರಮವನ್ನು ರೈತ ಮುಖಂಡ ಕೆ.ಟಿ. ಗಂಗಾಧರ್ ಖಂಡಿಸಿದ್ದು, ""ಇಂದಿನಿಂದ ಕೊಂಚ ಲಾಕ್ಡೌನ್ ಸಡಿಲವಾಗಿದೆ. ಈ ದಿನ ಬಳ್ಳಾರಿಯ ತಹಶೀಲ್ದಾರ ಕಚೇರಿಯ ಆವರಣದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಬಿತ್ತನೆ ಬೀಜ ಖರೀದಿಗಾಗಿ ಹೋಗಿದ್ದ ರೈತರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ಇದು ಅಕ್ಷಮ್ಯ, ಇದು ಖಂಡನೀಯ,'' ಹೀಗೆಂದು ರಾಜ್ಯದ ಹಿರಿಯ ರೈತ ಮುಖಂಡ ಕೆ.ಟಿ. ಗಂಗಾಧರ್ ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್ ಮತ್ತು ಬಳ್ಳಾರಿ ಜಿಲ್ಲಾಡಳಿತದ ವಿರುದ್ಧ ಗುಡುಗಿದ್ದಾರೆ.

ಈಗ ಮುಂಗಾರು ಮಳೆ ಬಂದಿದೆ ಸಹಜವಾಗಿ ಬಿತ್ತನೆ ಬೀಜ ಖರೀದಿಸಲು, ರೈತರು ಅಲ್ಲಿ ಸೇರಿದ್ದಾರೆ. ಹೆಚ್ಚಿನ ಜನರು ಬರುವುದನ್ನು ಗಮನಿಸಿ ಮಾರಾಟಕ್ಕೆ ಎರಡೋ ಮೂರೋ ಕಿಟಕಿಗಳನ್ನು ಮಾಡಿದ್ದರೆ ಸಾಕಿತ್ತು, ಜನದಟ್ಟಣೆ ತಡೆಯಬಹುದಾಗಿತ್ತು. ಈ ಕೆಲಸವನ್ನು ತಾಲ್ಲೂಕಿನ ದಂಡಾಧಿಕಾರಿಗಳೇ ಮಾಡಬಹುದಿತ್ತು. ಅದು ಬಿಟ್ಟು ಭಲ ಪ್ರಯೋಗ ಮಾಡಿರುವುದು ಸರಿಯಲ್ಲ.
ಇದು ಸರ್ಕಾರ ಕ್ಕೆ ಗೌರವ ತರುವುದಿಲ್ಲ
"ರೈತರು ತಮಗೆ ಬೇಕಾದ ಬಿತ್ತನೆ ಬೀಜವನ್ನು ಹಣ ಕೊಟ್ಟು ಕೊಳ್ಳಲು ಹೋದರೆ ಏಟು ತಿಂದು ಬರಬೇಕೆ? ಸರ್ಕಾರಕ್ಕೆ ನಾಚಿಕೆ ಆಗುವುದಿಲ್ಲವೇ? ಹಳ್ಳಿಯಲ್ಲೇ ಇರಬೇಕಾದ ರೈತ ಸಂಪರ್ಕ ಕೇಂದ್ರ ತಾಲ್ಲೂಕು ಕಚೇರಿಯಲ್ಲೇಕೆ ತೆರೆದಿರಿ? ತಾಲ್ಲೂಕು ಕಚೇರಿಗೆ ಬೇರೆ ಬೇರೆ ಕೆಲಸಗಳಿಗೂ ಜನ ಬರುತ್ತಾರೆ. ಎಲ್ಲವೂ ಸೇರಿ ದಟ್ಟಣೆ ಉಂಟಾದಾಗ ನಿಭಾಯಿಸುವ ಜಾಣ್ಮೆ ಆಡಳಿತಕ್ಕಿರಬೇಕು. ಅದು ಬಿಟ್ಟು ದಂಡ ಎತ್ತುವುದಲ್ಲ.''

ಕೃಷಿ ಮಂತ್ರಿ ಏನು ಮಾಡುತಿದ್ದಾರೆ?
"ರಾಜ್ಯದ ಇತರ ಕಡೆಗೆ ಇದೇ ಜಾಡ್ಯ ಅಂಟದಂತೆ ಕ್ರಮವಹಿಸಿ ಕೂಡಲೆ ಭತ್ತ, ರಾಗಿ, ಜೋಳ, ತೊಗರಿ, ಹೆಸರು, ಅಲಸಂದೆ ಹೀಗೆ ಎಲ್ಲಾ ಬಿತ್ತನೆ ಬೀಜಗಳು ಸುಲಭವಾಗಿ ರೈತರಿಗೆ ಸಿಗುವಂತೆ ಮಾಡಬೇಕಾದ್ದು ಮಾನ್ಯ ಕೃಷಿ ಸಚಿವರ ಕರ್ತವ್ಯ. ಅವರು ಮುಂದೆ ನಿಂತು ಅನವಶ್ಯಕ ಗಲಾಟೆಗಳನ್ನು ತಪ್ಪಿಸಬೇಕೆಂದು,'' ರೈತ ಮುಖಂಡ ಗಂಗಾಧರ್ ಹೇಳಿದ್ದಾರೆ.












Click it and Unblock the Notifications