ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಖರೀದಿ: ಚಿಕ್ಕಮಗಳೂರು ಜಿಲ್ಲಾಧಿಕಾರಿ
ಚಿಕ್ಕಮಗಳೂರು, ಡಿಸೆಂಬರ್, 16: 2022-23ನೇ ಸಾಲಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಮತ್ತು ರಾಗಿ ಖರೀದಿಸಲಾಗುವುದು. ಜಿಲ್ಲಾಡಳಿತ ನಿಗಧಿಪಡಿಸಿರುವ ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಂಡು ರೈತರು ಕನಿಷ್ಟ ಬೆಂಬಲ ಬೆಲೆ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಿನ್ನೆ 2022-23ನೇ ಸಾಲಿನ ಕನಿಷ್ಟ ಬೆಂಬಲ ಬೇಲೆ ಯೋಜನೆಯಡಿ ಭತ್ತ ಮತ್ತು ರಾಗಿ ಖರೀದಿ ಕೇಂದ್ರ ತೆರೆಯುವ ಕುರಿತು ಅಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಪ್ರತಿ ರೈತರಿಂದ ಭತ್ತವನ್ನು ಉತ್ಪಾದನೆಗೆ ಅನುಗುಣವಾಗಿ ಪ್ರತಿ ಹೆಕ್ಟೇರ್ಗೆ 25 ಕ್ಟಿಂಟಲ್ನಂತೆ ಗರಿಷ್ಠ 40 ಕ್ವಿಂಟಲ್ ಮೀರದಂತೆ ಖರೀದಿ ಮಾಡಬೇಕು. ಜಿಲ್ಲೆಯಲ್ಲಿ ಮೂಡಿಗೆರೆ, ಕೊಪ್ಪ, ಎನ್. ಆರ್. ಪುರ ಮತ್ತು ಲಕ್ಕವಳ್ಳಿಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಭತ್ತ ಸಾಮಾನ್ಯ ಪ್ರತಿ ಕ್ವಿಂಟಲ್ಗೆ 2040 ರೂಪಾಯಿ, ಎ ಗ್ರೇಡ್ಗೆ ಪ್ರತಿ ಕ್ವಿಂಟಲ್ಗೆ 2060ರಂತೆ ಖರೀದಿಸಬೇಕು ಎಂದರು.

ಆನ್ಲೈನ್ನಲ್ಲಿ ಮಾಹಿತಿ ಅಳವಡಿಸಬೇಕು
ಕೇಂದ್ರ ಸರ್ಕಾರವು ಅಕ್ಕಿಯನ್ನು ಕಡ್ಡಾಯವಾಗಿ ಸಾರವರ್ಧಿತಗೊಳಿಸುವಂತೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಬ್ಲೆಂಡರ್ ಯಂತ್ರವನ್ನು ಅಳವಡಿಸಿಕೊಂಡಿರುವ ಅಕ್ಕಿ ಗಿರಣಿಗಳನ್ನು ಮಾತ್ರ ಕನಿಷ್ಠ ಬೆಂಬಲ ಯೋಜನೆಯಡಿ ಭತ್ತವನ್ನು ಖರೀದಿಸಲಾಗುತ್ತದೆ. ಹಲ್ಲಿಂಗ್ಗಾಗಿ ನೋಂದಾಹಿಸಿಕೊಂಡು 1:100ರ ಅನುಪಾತದಲ್ಲಿ ಮಿಶ್ರಣಗೊಳಿಸುವುದನ್ನು ಕೆ.ಎಫ್.ಸಿ.ಎಸ್.ಸಿ ಅವರು ಖಚಿತಪಡಿಸಿಕೊಳ್ಳಬೇಕು ಎಂದರು.
ರೈತರಿಂದ ಭತ್ತವನ್ನು ಪಡೆದ ನಂತರ ಅಕ್ಕಿ ಗಿರಿಣಿ ಮಾಲೀಕರು ಮಾಹಿತಿಯನ್ನು ಆನ್ಲೈನ್ನಲ್ಲಿ ನಮೂದಿಸಬೇಕಾಗುತ್ತದೆ. ಗುಣಮಟ್ಟ ಪರಿಶೀಲನಾ ಅಧಿಕಾರಿ ನೀಡಿರುವ ಒಪ್ಪಿಗೆ ಪತ್ರವನ್ನು ಆನ್ ಲೈನ್ನಲ್ಲಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಬೇಕು ಎಂದು ತಿಳಿಸಿದರು.

ಪ್ರತಿ ಕ್ವಿಂಟಲ್ ರಾಗಿಗೆ ನಿಗದಿ ಬೆಲೆ ಎಷ್ಟು?
ರಾಗಿಯನ್ನು ಪ್ರತಿ ರೈತರಿಂದ 10 ಕ್ವಿಂಟಲ್ನಂತೆ ಗರಿಷ್ಠ 20 ಕ್ವಿಂಟಲ್ ಖರೀದಿಸಲಾಗುವುದು. ಪ್ರತಿ ಕ್ವಿಂಟಲ್ ರಾಗಿಗೆ 3,578 ರೂಪಾಯಿನಂತೆ ದರ ನಿಗಧಿಪಡಿಸಲಾಗಿದೆ. ಚಿಕ್ಕಮಗಳೂರು, ಕಡೂರು, ಪಂಚನಹಳ್ಳಿ, ಅಜ್ಜಂಪುರ, ತರೀಕೆರೆಗಳಲ್ಲಿ ಕಳೆದ ಬಾರಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಬಾರಿ ಅಗತ್ಯತೆಗೆ ಅನುಗುಣವಾಗಿ ರಾಗಿ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಸೂಚಿಸಿದರು. ರೈತರಿಂದ ಖರೀದಿಸುವ ರಾಗಿ ಮತ್ತು ಭತ್ತ ಸಂಗ್ರಹಣೆಗೆ ಅಗತ್ಯವಿರುವ ಹೊಸ ಗೋಣಿ ಚೀಲಗಳನ್ನು ಕೆ.ಎಫ್.ಸಿ.ಎಸ್.ಸಿ ಸಂಸ್ಥೆಯ ಮೂಲಕ ಏಜೆನ್ಸಿಗಳು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.












Click it and Unblock the Notifications