ದಕ್ಷಿಣ ಕನ್ನಡದಲ್ಲಿ ಮಳೆ ಅಭಾವದ ನಡುವೆಯೂ ನಾಟಿ ಕಾರ್ಯ ಆರಂಭ
ಮಂಗಳೂರು, ಜೂನ್ 26: ದಕ್ಷಿಣ ಕನ್ನಡದ ಬಾಕಿಮಾರು ಗದ್ದೆಗಳಲ್ಲಿ ಪಾಡ್ದನಗಳು ಕೇಳಲಾರಂಭಿಸಿವೆ. ಗದ್ದೆಗಳಲ್ಲಿ ನಾಟಿ ಆರಂಭವಾಗುತ್ತಿದ್ದಂತೆ ಮಹಿಳೆಯರ ಪಾಡ್ದನಗಳ ಹಾಡು ತುಳುನಾಡ ಗದ್ದೆಗಳಲ್ಲಿ ಪ್ರತಿಧ್ವನಿಸುತ್ತಿದೆ. ಮುಂಗಾರು ಮಳೆ ಕೈಕೊಟ್ಟರೂ, ಬಂದಿರುವ ಮಳೆ ಹಾಗೂ ಬಾವಿಯಲ್ಲಿದ್ದ ನೀರು ಸೇರಿಸಿ ಕೃಷಿಕರು ಕೃಷಿ ಕಾರ್ಯ ಆರಂಭಿಸಿದ್ದಾರೆ. ಮುಂದೆ ಒಳ್ಳೆ ಮಳೆಯಾಗುವ ನಿರೀಕ್ಷೆಯಲ್ಲಿ ಗದ್ದೆಗಿಳಿದಿದ್ದಾರೆ.
ಜಿಲ್ಲೆಯಲ್ಲಿ ಸಾಂಪ್ರದಾಯಿಕ ನೇಜಿ ನೆಡುವ ಕಾರ್ಯ ನಡೆಯುತ್ತಿದ್ದರೆ, ಕೆಲವೆಡೆ ನೇಜಿ ನೆಡುವ ಯಂತ್ರಗಳೂ ಗದ್ದೆಗೆ ಇಳಿದಿವೆ. ಸುಮಾರು 20 ಜನ ದಿನವಿಡೀ ಮಾಡುವ ಕಾರ್ಯವನ್ನು ಕೆಲವೇ ಗಂಟೆಗಳಲ್ಲಿ ಒಂದೇ ಯಂತ್ರ ಮಾಡಿ ಮುಗಿಸುತ್ತದೆ. ಮಳೆ ವಿಳಂಬವಾದ ಕಾರಣ ರೈತರಿಗೆ ನೇಜಿ ಸಮಸ್ಯೆ ಎದುರಾಗಿದೆ. ಪ್ರಥಮ ಮಳೆಗೆ ನೀರಾದಾಗ ಗದ್ದೆ ಹುಡಿ ಮಾಡಿ ಭತ್ತ ಬಿತ್ತಿ ನೇಜಿ ಬೆಳೆದ ಬಳಿಕ ನಾಟಿ ಕಾರ್ಯ ನಡೆಯಬೇಕಾಗಿದೆ. ಆದರೆ ಮಾನವ ಸಂಪನ್ಮೂಲವಿದ್ದರೂ ನೇಜಿ ಇಲ್ಲದೆ ರೈತರು ಸಮಸ್ಯೆ ಎದುರಿಸುವಂತಾಗಿದೆ.

ಕೃಷಿಗೂ ಕಾಂಟ್ರಾಕ್ಟ್ ವ್ಯವಸ್ಥೆ ಬಂದಿದೆ. ಗದ್ದೆ ಎಷ್ಟು ಎಕರೆ ಇದೆ ಎಂದು ತಿಳಿದು ಗುತ್ತಿಗೆದಾರರಿಗೆ ಹೇಳಿದರೆ ಸಾಕು, ಅವರು ನೇಜಿ ಹಾಗೂ ನೆಡಲು ಜನರನ್ನು ಕರೆದುಕೊಂಡು ಬಂದು ನೇಜಿ ನೆಟ್ಟು ಒಂದು ಅಥವಾ ಎರಡು ದಿನದೊಳಗೆ ಸಂಪೂರ್ಣ ನಾಟಿ ಮುಗಿಸಿ ಹೋಗುತ್ತಾರೆ. ಯಂತ್ರೋಪಕರಣಗಳ ನೇಜಿ ನೆಡುವ ಕಾರ್ಯವು ಹಲವು ಸಮಸ್ಯೆಗಳಿಂದ ರೈತರನ್ನು ರಕ್ಷಿಸಿದೆ ಎಂಬುವುದು ಕೆಲ ಕೃಷಿಕರ ಅಭಿಪ್ರಾಯ.












Click it and Unblock the Notifications