ಕೃಷಿ ಅಭಿವೃದ್ಧಿ ಪ್ರಚಾರಾಂದೋಲನದ ಬಗ್ಗೆ ತಿಳಿಯಿರಿ
ಬೆಂಗಳೂರು, ಜೂನ್ 07 : ಕರ್ನಾಟಕ ಸರ್ಕಾರ 'ಕೃಷಿ ಅಭಿವೃದ್ಧಿ ಪ್ರಚಾರಾಂದೋಲನ' ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. 30 ಜಿಲ್ಲೆಗಳಲ್ಲಿ ಏಕಕಾಲಕ್ಕೆ ಪ್ರತಿದಿನ ಎರಡು ಕಾರ್ಯಕ್ರಮಗಳಂತೆ 20 ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ.
ವಿಧಾನಸೌಧದ ಮುಂಭಾಗದಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರಚಾರಾಂದೋಲನಕ್ಕೆ ಚಾಲನೆ ನೀಡಿದ್ದಾರೆ. ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕೃಷಿ ಇಲಾಖೆ ಸಹಯೋಗದಲ್ಲಿ ಕೃಷಿ ಅಭಿಯಾನ ಪ್ರಚಾರಾಂದೋಲ ಆಯೋಜಿಸಿದೆ. [ರಜೆ ಕಳೆಯಲು ಬಂದ ಇಂಜಿನಿಯರ್ ಕಲ್ಲಂಗಡಿ ಬೆಳೆದರು!]

ಅಭಿಯಾನದಡಿ ಹಳ್ಳಿ-ಹಳ್ಳಿಗೂ ಭೇಟಿ ನೀಡಲಿರುವ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ರೈತನ ಭೂಮಿಯ ಮಣ್ಣು ಪರೀಕ್ಷೆ ಮಾಡಿ, ಮಣ್ಣು ಫಲವತ್ತತೆಯನ್ನು ಉತ್ತಮಪಡಿಸಲು ರಾಸಾಯನಿಕ ಹಾಗೂ ರಸಗೊಬ್ಬರದ ಬಳಕೆ ಕುರಿತಂತೆ ಮಾಹಿತಿ ನೀಡಲಿದ್ದಾರೆ. ಅಲ್ಲದೆ, ಅಂತಹ ಭೂಮಿಯಲ್ಲಿ ಬೆಳೆಯಬಹುದಾದ ಬೆಳೆಗಳ ಬಗ್ಗೆ ರೈತರಿಗೆ ಮಾರ್ಗದರ್ಶನ ಮಾಡಲಿದ್ದಾರೆ. [ಬಿಸಿಲ ನಾಡಲ್ಲಿ ಅರಳುತ್ತಿರುವ ಜರ್ಬೆರಾ ಹೂಗಳು!]
ಮಳೆಯಾಶ್ರಿತ ಬೆಳೆಗಳು ಹಾಗೂ ನೀರಾವರಿ ಆಶ್ರಿತ ಬೆಳೆಗಳ ಬಗ್ಗೆ ವಿವರಣೆ ನೀಡಲಿದ್ದಾರೆ. ಬೆಳೆಗಳಿಗೆ ತಗುಲುವ ರೋಗದ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ತಿಳಿಸುತ್ತಾರೆ. ರೋಗ ನಿಯಂತ್ರಣಕ್ಕೆ ಬಳಸಬೇಕಾದ ಕ್ರಿಮಿನಾಶಕ ಹಾಗೂ ಕೀಟನಾಶಕಗಳನ್ನು ಉಪಯೋಗಿಸುವ ಬಗ್ಗೆ ಸಲಹೆ ನೀಡುತ್ತಾರೆ. ಹೊಸ ತಳಿ, ಹೊಸ ತಂತ್ರಜ್ಞಾನ ಹಾಗೂ ಹೊಸ ಪರಿಕರಗಳ ಬಳಕೆಯನ್ನು ಪರಿಚಯಿಸುತ್ತಾರೆ. ಬೆಳೆ ವಿಮೆಯ ಮಹತ್ವವನ್ನು ಮನವರಿಕೆ ಮಾಡಿಕೊಡಲಿದ್ದಾರೆ. [ಕೃಷಿಕರಿಗೆ ನೆಮ್ಮದಿ ತಂದ 'ಕೃಷಿ ಭಾಗ್ಯ' ಯೋಜನೆ!]
ಕೃಷಿ ಅಭಿಯಾನದ ಉದ್ದೇಶ : ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸುವುದು, ಉತ್ಪಾದಕತೆ ಹೆಚ್ಚಿಸುವ ತಾಂತ್ರಿಕತೆಗಳ ಮನವರಿಕೆ ಮಾಡಿಕೊಡುವುದು, ವಿಜ್ಞಾನಿಗಳೊಂದಿಗೆ ರೈತರು ಸಂವಾದ ನಡೆಸಲು ವೇದಿಕೆ ಒದಗಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. [ಕೃಷಿಯ ಬಗ್ಗೆ ಮಂಡ್ಯ ರೈತರಿಗೆ ವಿದ್ಯಾರ್ಥಿಗಳ ಪಾಠ]
ಒಟ್ಟು ಮೂರು ಹಂತದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಮಗ್ರ ಕೃಷಿ ಮಾಹಿತಿ ಘಟಕ, ಕೃಷಿ ವಸ್ತು ಪ್ರದರ್ಶನ ಮತ್ತು ರೈತ ಸಂವಾದಗಳು ನಡೆಯಲಿವೆ. ಜಿಲ್ಲಾ ಮತ್ತು ತಾಲೂಕು, ಹೋಬಳಿ ಮಟ್ಟದಲ್ಲಿ ಈ ಕಾರ್ಯಕ್ರಮ ಆಯೋಜಿಸಲು ತಂಡಗಳನ್ನು ರಚನೆ ಮಾಡಲಾಗಿದೆ. ಕೃಷಿ ಅಭಿಯಾನ ಕಾರ್ಯಕ್ರಮವನ್ನು ಹೋಬಳಿ ಮಟ್ಟದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗುತ್ತದೆ. [ಕೊಡಗಿನ ಕಿತ್ತಳೆ ಬೆಳೆದ ಸುರೇಶ್ ಸುಬ್ಬಯ್ಯ ಸಾಧನೆ ಕಥೆ]
ವಿವಿಧ ಇಲಾಖೆಗಳ ಸಹಯೋಗ : ಈ ಕಾರ್ಯಕ್ರಮದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಪಶುಪಾಲನೆ, ಸಹಕಾರ, ಕಂದಾಯ ಇಲಾಖೆಗಳು ಪಾಲ್ಗೊಳ್ಳಲಿವೆ. ಕೃಷಿ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು, ಸಾಲ ಸೌಲಭ್ಯ ನೀಡುವ ಸಂಸ್ಥೆಗಳು, ಪ್ರಗತಿಪರ ರೈತರು, ಜನ ಪ್ರತಿನಿಧಿಗಳು, ಕೃಷಿ ಪರಿಕರ ಸರಬರಾಜುದಾರರು, ಸಾವಯವ ಕೃಷಿ ಸಂಘಗಳು, ಸ್ವಸಹಾಯ ಗುಂಪುಗಳು, ಸರ್ಕಾರೇತರ ಸಂಸ್ಥೆಗಳು ಅಭಿಯಾನಕ್ಕೆ ಕೈ ಜೋಡಿಸಿವೆ.
ಮೂರು ದಿನದ ಕಾರ್ಯಕ್ರಮಗಳು : ಮೊದಲ ಮತ್ತು ಎರಡನೇ ದಿನ ಹೋಬಳಿ ಮಟ್ಟದಲ್ಲಿ ಗ್ರಾಮ ಪಂಚಾಯಿತಿವಾರು ವಿಜ್ಞಾನಿಗಳು ಹಾಗೂ ಅಧಿಕಾರಿಗಳನ್ನೊಳಗೊಂಡ ತಂಡಗಳಿಂದ ವಿವಿಧ ಇಲಾಖಾ ಯೋಜನೆಗಳ ಬಗ್ಗೆ ಪ್ರಚಾರ ಹಾಗೂ ರೈತರೊಂದಿಗೆ ಸಂವಾದ ನಡೆಯುತ್ತದೆ.
ಮೂರನೇ ದಿನ ಹೋಬಳಿ ಕೇಂದ್ರ ಸ್ಥಾನದಲ್ಲಿ ಕೃಷಿ ವಸ್ತು ಪ್ರದರ್ಶನ, ಬೆಳೆವಾರು ಸಮಸ್ಯೆಗಳ ಚರ್ಚೆ ಹಾಗೂ ಪರಿಹಾರೋಪಾಯ ಸೂಚಿಸುವುದು, ವಿವಿಧ ಇಲಾಖೆಗಳ ಯೋಜನೆಗಳನ್ನು ಬಿಂಬಿಸುವ ಮಾದರಿಗಳು, ಪ್ರಾತ್ಯಕ್ಷಿಕೆಗಳು, ಕಿರುಚಿತ್ರ ಪ್ರದರ್ಶನ ಇತ್ಯಾದಿ ನಡೆಯಲಿವೆ.
ಯಾವ ಮಾಹಿತಿ ನೀಡಲಾಗುತ್ತದೆ : ಈ ಅಭಿಯಾನದಡಿ ವಿವಿಧ ಇಲಾಖೆಗಳಲ್ಲಿ ರೈತರಿಗೆ ದೊರೆಯುವ ಸೌಲಭ್ಯಗಳ ಮಾಹಿತಿ, ತಜ್ಞರೊಂದಿಗೆ ರೈತರ ಸಂವಾದ, ತಾಂತ್ರಿಕ ಕಿರುಚಿತ್ರ ಪ್ರದರ್ಶನ, ಹೊಸ ತಂತ್ರಜ್ಞಾನ ಪರಿಚಯ. ಪ್ರಗತಿಪರ ರೈತರ ಅನುಭವ ಹಂಚಿಕೆ, ವಿಷಯ ತಜ್ಞರಿಂದ ಕಿರು ಉಪನ್ಯಾಸ ಮುಂತಾದ ಮಾಹಿತಿಯನ್ನು ರೈತರಿಗೆ ನೀಡಲಾಗುತ್ತದೆ.












Click it and Unblock the Notifications