ರೈತರ ಮಾವಿನ ತೋಟಕ್ಕೆ ತಜ್ಞರ ಭೇಟಿ; ರೈತರಿಗೆ ಸಲಹೆಗಳು
ಕೊಪ್ಫಳ, ಮಾರ್ಚ್ 17; ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಮಾವಿನ ಗಿಡಗಳಲ್ಲಿ ಯಥೇಚ್ಛ ಹೂವು ಆಗಿತ್ತು. ಇದರಿಂದಾಗಿ ರೈತರು ಸಹ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ವರ್ಷ ಕೋವಿಡ್ ಕಾರಣದಿಂದಾಗಿ ಸರಿಯಾಗಿ ಮಾರುಕಟ್ಟೆ ವ್ಯವಸ್ಥೆಇಲ್ಲದೇ ಹಲವು ರೈತರು ನಷ್ಟ ಅನುಭವಿಸಿದ್ದರು.
ಕೊಪ್ಪಳ ಜಿಲ್ಲೆಯ ಮಾವು ಬೆಳೆಗಾರರಿಗೆ ತೋಟಗಾರಿಕೆ ಇಲಾಖೆ ವತಿಯಿಂದ ಕೆಲವು ಸಲಹೆಗಳನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಈ ಬಾರಿ ಸುರಿದ ಅಕಾಲಿಕ ಮಳೆ ಪರಿಣಾಮ ಮಾವು ಬೆಳೆ 45 ರಿಂದ 60 ದಿನಗಳ ವಿಳಂಬದ ನಂತರ ಹೂ ಕಚ್ಚಿದೆ.
ತಡವಾಗಿ ಹೂವು ಆಗಿರುವುದರಿಂದ ಮಾವಿನ ಇಳುವರಿ ಮೇಲೆ ಸ್ವಲ್ಪ ದುಷ್ಪರಿಣಾಮ ಆಗಬಹುದು ಎಂದು ಅಂದಾಜಿಸಲಾಗಿದೆ. ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮುಂಜಾಗ್ರತ ಕ್ರಮಗಳನ್ನು ಅನುಸರಿಸಲು ರೈತರಿಗೆ ಸಲಹೆ ನೀಡಿದ್ದಾರೆ.

ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಹಾಗೂ ತಜ್ಞರ ತಂಡ ಹಲವಾರು ಮಾವಿನ ತೋಟಗಳಿಗೆ ಭೇಟಿ ನೀಡಿ ರೈತರ ಫಸಲು ವೀಕ್ಷಣೆ ಮಾಡಿ, ಮಾವು ಬೆಳೆಗಾರರಿಗೆ ಸಲಹೆಗಳನ್ನು ನೀಡುತ್ತಿದ್ದಾರೆ. ಪ್ರಸ್ತುತ ಶುಷ್ಕ ವಾತಾವರಣ ಹಾಗೂ ಹೆಚ್ಚಿದ ತಾಪಮಾನದಿಂದಾಗಿ ಕೀಟ, ರೋಗಗಳ ಬಾಧೆ ಹೆಚ್ಚಾಗಿ ಕಂಡುಬಂದಿದೆಯಲ್ಲದೇ ಹೀಚು, ಕಾಯಿ ಉದುರುವಿಕೆ ಹೆಚ್ಚಾಗಿದೆ ಎಂದು ತಜ್ಞರು ಗಮನಿಸಿದ್ದಾರೆ.
ಜಿಗಿ ಹುಳುವಿನ ಬಾಧೆ ಜೊತೆಗೆ ಅಂಗಮಾರಿ ರೋಗ ಕಾಣಿಸಿಕೊಂಡಿದೆ. ಜೊತೆಗೆ ಕೀಟದ ಬಾಧೆಯೂ ಕಂಡುಬಂದಿರುತ್ತದೆ. ರೈತರು ಮುಂಜಾಗ್ರತ ಕ್ರಮವಾಗಿ ಮತ್ತು ಕೀಟ ರೋಗಗಳ ಹತೋಟಿಗಾಗಿ ಲ್ಯಾಂಬ್ಡಾ ಸಿಮಾಲೋಥ್ರೀನ್ ಶೇ 5, 1 ಮೀ. ಅಥವಾ ಬೇವಿನ ಕಷಾಯವನ್ನು 2 ಮಿ.ಲೀ. ಅಥವಾ ಅಸಿಫೇಟ್ 75 ಎಸ್.ಪಿ 2 ಗ್ರಾಂ ಅಲ್ಲದೇ ಬಿಪ್ರೊಫೆಜಿನ್-25 ಎಸ್.ಸಿ. 1 ಮಿ.ಲೀ. ಜೊತೆಗೆ ಶಿಲೀಂಧ್ರನಾಶಕಗಳಾದ ಥಯೋಫಿನೈಟ್ ಮಿಥೈಲ್ 1 ಗ್ರಾಂ ಅಥವಾ ಟಿಬುಕೋನಾಜೋಲ್ 1 ಮಿ.ಲೀ., 1 ಲೀ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಬುಡದಿಂದ 2.5 ರಿಂದ 3 ಅಡಿ ವರೆಗೂ ಸಿ.ಓ.ಸಿ. + ಕ್ಲೋರೋ ಬೆರೆಸಿದ ದ್ರಾವಣವನ್ನು ಲೇಪಿಸಬೇಕು. ಹನಿ ನೀರಾವರಿ ಮೂಲಕ ನೀರು ಕೊಡಬೇಕು. ಸಾಧ್ಯವಾದಲ್ಲಿ ಮಡಿ ಮಾಡಿ ಒಣಹುಲ್ಲು ಕಸಕಡ್ಡಿ ಹೊದಿಕೆ ಮಾಡಬೇಕು. ಹೊಲವನ್ನು ಕಸಮುಕ್ತವಾಗಿಡಬೇಕು ಎಂದು ಸಲಹೆ ಕೊಟ್ಟಿದ್ದಾರೆ.
ಸಾವಯವ ಪದ್ಧತಿಯಲ್ಲಿ ಬೇಸಾಯ ಮಾಡುವವರು ಕೀಟ/ ರೋಗಗಳ ಬಾಧೆಗೆ ಅಂಟು ಕಾರ್ಡುಗಳ ಬಳಕೆ ಅಲ್ಲದೇ ಮೋಹಕ ಬಲೆಗಳನ್ನು ಅಳವಡಿಸಬೇಕು ಮತ್ತು ಗೋಕೃಪಾಮೃತ ಮತ್ತು ಜೀವಾಮೃತ ಅಲ್ಲದೇ ನಿಡಶೇಸಿ ತೋಟಗಾರಿಕೆ ಕ್ಷೇತ್ರದಲ್ಲಿ ದೊರೆಯುವ ಎರೆಜಲವನ್ನು ತಜ್ಞರ ಸಲಹೆಯಂತೆ ಬಳಸಬೇಕು. ಒಣಗಿದ, ರೋಗಗ್ರಸ್ಥ ರೆಂಬೆ ಕೊಂಬೆಗಳನ್ನು ತೆಗೆದು ಹಾಕಿ ನೀರಿನಲ್ಲಿ ಕರಗುವ ಗೊಬ್ಬರಗಳನ್ನು ನಿಯಮಿತವಾಗಿ ಸಿಂಪಡಿಸಬೇಕು ಎಂದು ರೈತರಿಗೆ ಮಾಹಿತಿ ನೀಡಲಾಗಿದೆ.
ರೈತರು ಮಾವಿನ ಬೆಳೆ ಸಂರಕ್ಷಣೆ ಕುರಿತು ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರ ಕಛೇರಿ ಕೊಪ್ಪಳ ಇವರನ್ನು ಭೇಟಿ ಮಾಡಬಹುದಾಗಿದೆ. ದೂರವಾಣಿ ಸಂಖ್ಯೆಗಳು 08539-230530. ವಿಷಯ ತಜ್ಞರು, ಹಾರ್ಟಿಕ್ಲಿನಿಕ್ ಕೊಪ್ಪಳ 9482672039. ರೈತರು ತಾಲೂಕು ಕಛೇರಿಗಳನ್ನು ಸಂಪರ್ಕಿಸಬಹುದಾಗಿದೆ.
ಕುರಿ ಹಾಗೂ ಆಡು ಸಾಕಾಣಿಕೆ ತರಬೇತಿಗೆ ಅರ್ಜಿ ಹಾಕಿ; ಕಲಬುರಗಿಯ ಎಸ್ಬಿಐ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಕಲಬುರಗಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ 2022ರ ಏಪ್ರಿಲ್ 4 ರಿಂದ 13ರವರೆಗೆ ಉಚಿತವಾಗಿ ಹತ್ತು ದಿನಗಳ ಕಾಲ ಕುರಿ ಮತ್ತು ಆಡು ಸಾಕಾಣಿಕೆ ತರಬೇತಿ ಕಾರ್ಯಕ್ರಮ ಆಯೋಜಿಸಿದೆ.
ತರಬೇತಿಯಲ್ಲಿ ಪಾಲ್ಗೊಳ್ಳಲು ಬಯಸುವವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ತರಬೇತಿ ಸಂದರ್ಭದಲ್ಲಿ ಉಚಿತ ಊಟ ಹಾಗೂ ವಸತಿ ಸೌಲಭ್ಯ ನೀಡಲಾಗುತ್ತದೆ. ತರಬೇತಿಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ಕನ್ನಡ ಓದಲು ಮತ್ತು ಬರೆಯಲು ಬರಬೇಕು. ವಯೋಮಿತಿ 18 ರಿಂದ 45 ವರ್ಷಗಳು.
ಬಿಪಿಎಲ್, ಅಂತ್ಯೋದಯ ರೇಷನ್, ಎಮ್ಜಿಎನ್ಆರ್ಇಜಿಎ ಕಾರ್ಡ್ ಹೊಂದಿದ ಕುಟುಂಬದ ನಿರುದ್ಯೋಗಿ ಅಭ್ಯರ್ಥಿಗಳು ಸಂಸ್ಥೆಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲಾತಿಗಳ ಜೊತೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
2022ರ ಮಾರ್ಚ್ 31 ರೊಳಗಾಗಿ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತರಬೇತಿ ಸಂಸ್ಥೆಯಲ್ಲಿ 2022ರ ಏಪ್ರಿಲ್ 1 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3.30 ಗಂಟೆಯವರೆಗೆ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ 9243602888, 9886781239 ಹಾಗೂ 9900135705 ಸಂಖ್ಯೆಗೆ ಕರೆ ಮಾಡಬಹುದಾಗಿದೆ.












Click it and Unblock the Notifications