ಪಿಎಂ ಕಿಸಾಸ್ ಸಮ್ಮಾನ್; ಇ-ಕೆವೈಸಿ ಈಗ ಮತ್ತಷ್ಟು ಸುಲಭ
ಬೆಂಗಳೂರು, ಜೂನ್ 23: ಕೇಂದ್ರ ಸರ್ಕಾರ ರೈತರಿಗೆ ಸಿಹಿಸುದ್ದಿ ನೀಡಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ ಫಲಾನುಭವಿಗಳು ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದೆ. ಈಗ ಫೇಸ್ ಸ್ಕ್ಯಾನ್ ಮೂಲಕವೂ ಕೆವೈಸಿ ಅಪ್ಡೇಟ್ ಮಾಡುವ ವ್ಯವಸ್ಥೆ ಮಾಡಲಾಗಿದೆ.
ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್ ಗುರುವಾರ ಹೊಸ ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ. ಪಿಎಂ ಕಿಸಾನ್ ಅಪ್ಲಿಕೇಶನ್ ಅನ್ನು ಇದಕ್ಕಾಗಿಯೇ ಬಿಡುಗಡೆ ಮಾಡಲಾಗಿದೆ. ಜನರು ಒಟಿಪಿ, ಬೆರಳಚ್ಚು ಇಲ್ಲದೇ ಫೇಸ್ ಸ್ಕ್ಯಾನ್ ಮೂಲಕ ಈ ವ್ಯವಸ್ಥೆಯಲ್ಲಿ ಅಪ್ಡೇಟ್ ಮಾಡಬಹುದಾಗಿದೆ.

ಫೇಸ್ ಸ್ಕ್ಯಾನ್ (ಮುಖದ ಚಿತ್ರದೊಂದಿಗೆ ದೃಢೀಕರಣ) ವ್ಯವಸ್ಥೆಯಿಂದ ರೈತರಿಗೆ ಅನುಕೂಲವಾಗಲಿದೆ. ಸುಲಭವಾಗಿ ಪಿಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆ ಇ-ಕೆವೈಸಿ ಮಾಡಿಸಿಕೊಂಡು ಸರ್ಕಾರದಿಂದ ಸಿಗುವ ಸಹಾಯಧನ ಪಡೆಯಬಹುದಾಗಿದೆ.
ಜೂನ್ 30 ಕೊನೆಯ ದಿನ; ಪಿಎಂ-ಕಿಸಾನ್ ಸಮ್ಮಾನ್ ಯೋಜನೆಯಡಿ ನೋಂದಾಯಿತ ಅರ್ಹ ಫಲಾನುಭವಿಗಳು ಕಡ್ಡಾಯವಾಗಿ ಜೂನ್ 30ರೊಳಗೆ ಇ-ಕೆವೈಸಿ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ಕಂತಿನ ಹಣ ಅವರ ಬ್ಯಾಂಕ್ ಖಾತೆಗೆ ಬರುವುದಿಲ್ಲ.
ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಆದಾಯ ವೃದ್ಧಿಸಲು ರೈತ ಕುಟುಂಬಗಳಿಗೆ ಪ್ರತಿ ವರ್ಷ 6 ಸಾವಿರ ರೂ. ಗಳನ್ನು ಒಟ್ಟು 3 ಸಮಾನ ಕಂತುಗಳಲ್ಲಿ ರೈತರ ಖಾತೆಗೆ ಜಮೆ ಮಾಡಲಾಗುತ್ತದೆ. ಈಗಾಗಲೇ ಕೃಷಿ ಇಲಾಖೆಯು ರೈತರು ಜೂನ್ 30ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದೆ.
ಇಷ್ಟು ದಿನಗಳ ಕಾಲ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಫಲಾನುಭವಿ ರೈತರು https://pmkisan.gov.in ವೆಬ್ಸೈಟ್ಗೆ ಭೇಟಿ ನೀಡಿ ಇ-ಕೆವೈಸಿ ಆಧಾರ್ ಸಂಖ್ಯೆ ನಮೂದಿಸಿ, ಬಳಿಕ ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ನಮೂದಿಸಬೇಕಿತ್ತು. ಆಗ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕಿತ್ತು.
ಇದು ಅಷ್ಟು ಸುಲಭವಾದ ಪ್ರಕ್ರಿಯೆ ಆಗಿರಲಿಲ್ಲ. ಅಲ್ಲದೇ ರೈತರು ವೆಬ್ಸೈಟ್ಗಾಗಿ ಪಟ್ಟಣದಲ್ಲಿರುವ ಸೈಬರ್ ಸೆಂಟರ್ಗೆ ಬರಬೇಕಿತ್ತು. ಆದ್ದರಿಂದ ಈಗ ಫೇಸ್ ಸ್ಕ್ಯಾನ್ ಮೂಲಕ ಇ-ಕೆವೈಸಿ ಅಪ್ಡೇಟ್ ಮಾಡುವ ವ್ಯವಸ್ಥೆ ಪರಿಚಯಿಸಲಾಗಿದೆ.
ಹೊಸ ವ್ಯವಸ್ಥೆ ಬಿಡುಗಡೆ ಮಾಡಿ ಮಾತನಾಡಿದ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್, "ಯೋಜನೆಯ ಸುಧಾರಣೆಯಿಂದ ತಂತ್ರಜ್ಞಾನದ ಬಳಕೆಯೂ ಮತ್ತಷ್ಟು ಸುಲಭವಾಗಲಿದೆ. ಈ ಯೋಜನೆಯಡಿ ರೈತರಿಗೆ ವಾರ್ಷಿಕ ಮೂರು ಕಂತುಗಳಲ್ಲಿ 2000 ರೂ.ಗಳನ್ನು ನೀಡಲಾಗುತ್ತದೆ" ಎಂದರು.
ಇ-ಕೆವೈಸಿ ಕಡ್ಡಾಯ; ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳು ಹಣ ಪಡೆಯಲು ಇ-ಕೆವೈಸಿ ಕಡ್ಡಾಯವಾಗಿದೆ. ರೈತರು https://pmkisan.gov.in ವೆಬ್ಸೈಟ್ಗೆ ಭೇಟಿ ನೀಡಬೇಕು. ವೆಬ್ಸೈಟ್ನ ಫಾರ್ಮರ್ಸ್ ಕಾರ್ನರ್ಗೆ ಭೇಟಿ ಕೊಟ್ಟು ಇ-ಕೆವೈಸಿ ಅವಕಾಶದಡಿ ರೈತನ (ಈಗಾಗಲೇ ಪಿಎಂಕಿಸಾನ್ ಯೋಜನೆಯಡಿ ಫಲಾನುಭವಿಗಳಾಗಿರುವ ಪ್ರತಿಯೊಬ್ಬ) ಆಧಾರ್ ಸಂಖ್ಯೆಯನ್ನು ನಂತರ ಆಧಾರ್ ಸಂಖ್ಯೆಯೊಂದಿಗೆ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಯನ್ನು ದಾಖಲಿಸಬೇಕು. ನಂತರ ಮೊಬೈಲ್ಗೆ ಒಟಿಪಿ ಬರುತ್ತದೆ.
ಹೀಗೆ ಸ್ವೀಕರಿಸಿದ ಒಟಿಪಿಯನ್ನು ಪೋರ್ಟಲ್ನಲ್ಲಿ ದಾಖಲಿಸಿ ಸಬ್ಮಿಟ್ ಫಾರ್ ಆಥ್ (SUBMIT FOR AUTH) ಎಂಬ ಬಟನ್ ಒತ್ತಬೇಕು. ಆಗ ತಂತ್ರಾಂಶ ಆಧಾರಿತ ಪರಿಶೀಲನೆ ನಡೆದು e-KYC is 'successfully submitted' ಎಂಬ ವಾಕ್ಯ ಕಾಣಿಸುತ್ತದೆ. ಹೀಗೆ ಮೊಬೈಲ್ ಒಟಿಪಿ ಆಧಾರಿತವಾಗಿ ಫಲಾನುಭವಿಯು ಖುದ್ದಾಗಿ ಇ-ಕೆವೈಸಿ ಮಾಡಬಹುದಾಗಿದೆ. ಈಗಾಗಲೇ ಇ-ಕೆವೈಸಿ ಆಗಿದ್ದರೆ, e-KYC already done ಎಂದು ತೋರಿಸುತ್ತದೆ.
ಫಲಾನುಭವಿ ರೈತನ ಮೊಬೈಲ್ ಸಂಖ್ಯೆ ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಆಗಿಲ್ಲ ಎಂದರೆ ಅಥವಾ ಯಾರ ಮೊಬೈಲ್ ಸಂಖ್ಯೆಗೆ ಇ-ಕೆವೈಸಿಗಾಗಿ ಕಳುಹಿಸಿದ ಒಟಿಪಿಯು ಸ್ವೀಕೃತವಾಗುದಿಲ್ಲವೋ ಅವರು ಸಿಎಸ್ಸಿ (ಸಿಟಿಜನ್ ಸರ್ವಿಸ್ ಸೆಂಟರ್ಸ್) ನಾಗರಿಕ ಸೇವಾ ಕೇಂದ್ರಗಳಿಗೆ ತೆರಳಿ ಅಲ್ಲಿ ಬಯೋಮೆಟ್ರಿಕ್ ಆಧಾರಿತವಾಗಿ ಇ-ಕೆವೈಸಿ ಮಾಡಬಹುದಾಗಿದೆ. ಅಲ್ಲಿ ಕೈಬೆರಳಿನ ಗುರುತು ಆಧಾರದ ಮೇಲೆ ಇ-ಕೆವೈಸಿ ಮಾಡಬೇಕಿದೆ.












Click it and Unblock the Notifications