ಬೆಳೆ ವಿಮೆ ನೋಂದಣಿ ಸಂದರ್ಭದಲ್ಲಿಯೇ ನಾಮಿನಿ ಹೆಸರು ಸೇರಿಸಬೇಕು: ಕೃಷಿ ಸಚಿವ
ಬೆಂಗಳೂರು,ಫೆ.4: ಬೆಳೆ ವಿಮೆಗೆ ನೋಂದಾಯಿತ ಅರ್ಹ ಫಲಾನುಭವಿಗಳು ಮರಣ ಹೊಂದಿದಲ್ಲಿ ಆ ರೈತರುಗಳ ಬೆಳೆವಿಮೆ ಪರಿಹಾರವನ್ನು ಸರಿಯಾದ ವಾರಸುದಾರರಿಗೆ (ನಾಮಿನಿ)ಪಾವತಿಸಬೇಕು. ಇದಕ್ಕಾಗಿ ಬೆಳೆವಿಮೆ ನೋಂದಣಿ ಸಮಯದಲ್ಲಿಯೇ ನಾಮಿನಿಯ ಹೆಸರನ್ನು ತಂತ್ರಾಂಶದ ಮೂಲಕವೇ ಸೇರಿಸಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚಿಸಿದರು.
ಹೆಬ್ಬಾಳದ ಬೀಜ ನಿಗಮ ಕಚೇರಿಯ ಪ್ರಾಂಗಣದಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಬಳಿಕ ಅವರು ಮಾತನಾಡಿದ್ದಾರೆ.
ವಿಮಾ ಸಂಸ್ಥೆಗಳು ಜಿಲ್ಲಾ ಮಟ್ಟದಲ್ಲಿ ಸ್ವಂತ ಕಚೇರಿಯಲ್ಲಿ ಕಾರ್ಯನಿರ್ವಹಿಸಬೇಕು. ಎಲ್ಲಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಕಡ್ಡಾಯವಾಗಿ ಸಹಾಯವಾಣಿ (Help Desk ) ಸ್ಥಾಪಿಸಿ, ರೈತರಿಗೆ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸಂಖ್ಯೆಯ ಜೋಡಣೆ ಕುರಿತು ಜಾಗೃತಿ ಮೂಡಿಸಬೇಕು. ವಿಮಾ ಪರಿಹಾರ ಇತ್ಯರ್ಥಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನೀಡಬೇಕೆಂದು ವಿಮಾ ಕಂಪೆನಿಗಳಿಗೆ ಸಭೆಯಲ್ಲಿ ಸಚಿವರು ಸೂಚನೆ ನೀಡಿದರು.

ಅಲ್ಲದೇ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸಂಖ್ಯೆಯ ಜೋಡಣೆ ಹಾಗೂ NPCI Active ಇರುವುದನ್ನು ಖಚತಪಡಿಸಿಕೊಂಡು ಅರ್ಜಿಯನ್ನು ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬೇಕು ಎಂದು ಎಲ್ಲಾ ಬಾಂಕುಗಳಿಗೆ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಿಗೆ ( CSC ) ಸಭೆಯಲ್ಲಿ ಸೂಚಿಸಿದರು.
ನಿಗದಿಯಾಗಿರುವ ಎಸ್.ಎಲ್.ಬಿ.ಎಸ್ (SLBC ) ಬ್ಯಾಂಕರ್ಗಳ ಸಭೆಯಲಿ NPCI ನಿಂದ ವಿಫಲವಾದ ಬೆಳೆ ವಿಮೆಯ ಪರಿಹಾರ ಮೊತ್ತ ಇತ್ಯರ್ಥ ಪ್ರಕರಣಗಳ ಕುರಿತು ಹಾಗೂ ಬೆಳೆ ಸಮೀಕ್ಷೆಯ ತಾಳೆಯಾಗದ ಪ್ರಕರಣಗಳ ಪರಿಶೀಲನಾ ಕಾರ್ಯವನ್ನು ಅತೀ ಶೀಘ್ರವಾಗಿ ಕೈಗೊಳ್ಳಲು ಸೂಕ್ತ ಸಲಹೆಗಳನ್ನು ಎಲ್ಲಾ ಕೆಳಹಂತದ ಬ್ಯಾಂಕ್ ಶಾಖೆಗಳಿಗೆ ನಿರ್ದೇಶನ ನೀಡಬೇಕು. NPCI ನಿಂದ ಬೆಳೆ ವಿಮೆ ಪರಿಹಾರ ಮೊತ್ತ ಇತ್ಯರ್ಥ ವಿಳಂಬವಿಲ್ಲದೇ ಪಾವತಿಸಲು ಬೇಕಾದ ಸೂಕ್ತ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು SLBC ರವರಿಗೆ ಬಿ.ಸಿ.ಪಾಟೀಲ್ ಹೇಳಿದರು.
2022-23 ರ ಮುಂಗಾರು ಹಂಗಾಮಿನಿಂದ ಕಡ್ಡಾಯವಾಗಿ ಬೆಳೆ ಸಮೀಕ್ಷೆಯನ್ನು ರೈತರೇ ಸ್ವತಃ ಮಾಡಲು ಮುಂದಾಗಬೇಕೆಂದು ಮನವಿ ಮಾಡಿದ ಬಿ.ಸಿ.ಪಾಟೀಲ್ , NPCI ನಿಂದ ಬೆಳೆ ವಿಮೆ ಪರಿಹಾರ ಪಾವತಿಸಲು ಬಾಕಿ ಇರುವ ಪ್ರಕರಣಗಳ ಇತ್ಯರ್ಥ ಕುರಿತು ವಿಮಾ ಸಂಸ್ಥೆಗಳು ತಾಲೂಕು ಸಂಯೋಜಕರುಗಳ ಮೂಲಕ ಫಲಾನುಭವಿಗಳಿಗೆ ಮುಂದಿನ ಕ್ರಮ ಕುರಿತು ಮಾಹಿತಿ ನೀಡಬೇಕು. ಹಂಗಾಮು ವಾರು ಬೆಳೆ ವಿಮೆ ಪರಿಹಾರ ಮೊತ್ತವನ್ನು ಯಾವುದೇ ವಿಳಂಬ ಮಾಡದೇ ಕಾಲಕಾಲಕ್ಕೆ ಸರಿಯಾಗಿ ಪಾವತಿಸಬೇಕೆಂದು ವಿಮಾ ಸಂಸ್ಥೆಗಳಿಗೆ ಸೂಚಿಸಿದರು.
Recommended Video
ಸಭೆಯಲ್ಲಿ ಕೃಷಿ ಇಲಾಖೆಯ ಆಯುಕ್ತರಾದ ಬ್ರಿಜೇಶ್ ಕುಮಾರ್ ದೀಕ್ಷಿತ್, ನಿರ್ದೇಶಕಿ ನಂದಿನಿಕುಮಾರಿ ಸೇರಿದಂತೆ ಕೃಷಿ ಇಲಾಖೆಯ ವಿಮಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.












Click it and Unblock the Notifications