ಜಿಲ್ಲೆಯಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜಕ್ಕೆ ಕೊರತೆಯಿಲ್ಲ: ಚಿಕ್ಕಮಗಳೂರು ಜಿಲ್ಲಾಧಿಕಾರಿ
ಚಿಕ್ಕಮಗಳೂರು, ಆಗಸ್ಟ್, 07: ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಯಾವುದೇ ಕೊರತೆಯಿಲ್ಲ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇಂದು ನಡೆದ ರಸಗೊಬ್ಬರಗಳ ಸಮರ್ಪಕ ನಿರ್ವಹಣೆ ಹಾಗೂ ಶೀತಲ ಘಟಕ ನಿರ್ಮಾಣ ಕುರಿತ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಅವರು, ಜಿಲ್ಲೆಗೆ ಸರಬರಾಜು ಮಾಡುತ್ತಿರುವ ವಿವಿಧ ರಸಗೊಬ್ಬರ ಕಂಪನಿಗಳು ಹಾಗೂ ಸಗಟು ಮಾರಾಟಗಾರರು ಹಾಗೂ ಸಹಕಾರ ಸಂಘಗಳ ಸೊಸೈಟಿಗಳು ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರಗಳನ್ನು ನೀಡಬೇಕು ಹಾಗೂ ನೀಡುವಾಗ ಕಡ್ಡಾಯವಾಗಿ ಬಿಲ್ಲುಗಳನ್ನು ನೀಡಬೇಕು ಎಂದು ಸೂಚಿಸಿದರು.

ರೈತರಿಗೆ ಕಾಲಕಾಲಕ್ಕೆ ಬೇಕಾಗುವಂತೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆ ಮಾಡಬೇಕು. ಇದರ ಜೊತೆ ಲಘು ಪೋಷಕಾಂಶಗಳ ಲಿಂಕ್ ಅನ್ನು ಮಾರಾಟ ಮಾಡಲು ರೈತರಿಗೆ ಒತ್ತಾಯ ಮಾಡಬಾರದು. ಮಾರಾಟಗಾರರು ದಾಸ್ತಾನು ಇರುವ ಮಾಹಿತಿಯನ್ನು ಹಾಗೂ ದರ ಪಟ್ಟಿಯನ್ನು ರೈತರಿಗೆ ಕಾಣುವ ರೀತಿಯಲ್ಲಿ ಪ್ರಕಟಣೆ ಫಲಕವನ್ನು ಹಾಕಬೇಕು. ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ತಮ್ಮ ತಮ್ಮ ಅಂಗಡಿ ಗೋಧಾಮುಗಳಲ್ಲಿ ಸಿ.ಸಿ. ಕ್ಯಾಮೆರಾಗಳನ್ನು ಆಳವಡಿಸಿಕೊಳ್ಳಬೇಕು ಎಂದರು.
ಮುಂದಿನ ದಿನಗಳಲ್ಲಿ ವಿಜಯಲೆನ್ಸ್ ತಂಡ ಹೆಚ್ಚು ಹೆಚ್ಚು ಅಂಗಡಿಗಳಿಗೆ ಭೇಟಿ ನೀಡಿ ದಾಸ್ತಾನು ಮತ್ತಿತರ ರೈತರ ಸಮಸ್ಯೆಗಳಿದ್ದರೆ, ಅವುಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತರಬೇಕು. ಹಾಗೂ ಜಿಲ್ಲೆಯಲ್ಲಿ ನ್ಯಾನೋ ಯೂರಿಯಾ ಬಗ್ಗೆ ರೈತರಿಗೆ ತಿಳುವಳಿಕೆ ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ನ್ಯಾನೋ ಯೂರಿಯ ಬಳಸಲು ಡ್ರೋಣ್ನಂತಹ ತಂತ್ರಜ್ಞಾನ ಬಳಸಿಕೊಳ್ಳುವ ಪ್ರಾತ್ಯಕ್ಷತೆಗಳನ್ನು ನಡೆಸಿ ರೈತರಿಗೆ ಮನವರಿಕೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಮಳೆ ಹಾಗೂ ಪ್ರಕೃತಿ ವೈಪರೀತ್ಯಗಳಿಂದ ಬೆಳೆಗಳಿಗೆ ಹಾನಿಯಂತಹ ಸಂದರ್ಭದಲ್ಲಿ ಪರ್ಯಾಯವಾಗಿ ಇತರೆ ಬೆಳೆಗಳನ್ನು ಬೆಳೆಯಲು ಹಾಗೂ ಅವಮಾನಕ್ಕೆ ತಕ್ಕಂತ ಬೆಳೆಗಳನ್ನು ಬೆಳೆಯಲು ರೈತರಿಗೆ ಪ್ರೇರೆಪಿಸಬೇಕು. ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿ ಇಟ್ಟುಕೊಳ್ಳಬೇಕು. ಜಿಲ್ಲೆಗೆ ಬೇಡಿಕೆ ಅನುಸಾರ ಪೂರೈಕೆಯಾಗಬೇಕಾದ ರಸಗೊಬ್ಬರವನ್ನು ದಾಸ್ತಾನು ಮಾಡಲು ಗೋಡಾನ್ಗಳನ್ನು ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಮುಖ್ಯ ಗೋಡಾನ್ಗಳಿಂದ ತಾಲೂಕು ಗೋಡಾನ್ಗಳಿಗೆ ಸಾಗಣಿಕೆ ವೆಚ್ಚ ಹೆಚ್ಚಳದಿಂದ ಎಂ.ಆರ್.ಪಿ. ದರ ವ್ಯತ್ಯಾಸ ಹಣವನ್ನು ಸರ್ಕಾರದಿಂದ ಭರಿಸಲು ಸರ್ಕಾರದ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದು ನಿವಾರಿಸಲು ಕ್ರಮಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಕಂಪನಿ ಮಾರಾಟಗಾರರು ನಮ್ಮ ಜಿಲ್ಲೆಗೆ ನೀಡಿರುವ ರಸಗೊಬ್ಬರವನ್ನು ಅಕ್ಕಪಕ್ಕ ಜಿಲ್ಲೆಗೆ ಕೊಂಡೊಯ್ಯುವ ಪ್ರಕ್ರಿಯೆ ಕಂಡುಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಕಳಪೆ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಮಾರಾಟ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು.
ಕೃಷಿ ಶಾಖೆಯ ಜಂಟಿ ನಿರ್ದೇಶಕರಾದ ತಿರುಮಲೇಶ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಮಳೆ ಹಾಗೂ ಈಗ ಬಿತ್ತನೆಯಾಗಿರುವ ಬೆಳೆಗಳ ಮಾಹಿತಿಯನ್ನು ಒದಗಿಸಿ. ಸರ್ಕಾರಗಳ ಸೂಚನೆಯಂತೆ ರಸಗೊಬ್ಬರ ಮಾರಾಟ ಮಾಡುವವರ ಹಾಗೂ ಕಂಪನಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ತಾಲೂಕು ಅಧಿಕಾರಿಗಳಿಗೆ ಜವಾಬ್ದಾರಿಯನ್ನು ನೀಡಿ ಮಾರ್ಗದರ್ಶನ ಮಾಡಲಾಗುತ್ತಿದೆ ಎಂದರು.
ತರೀಕೆರೆ ತಾಲೂಕಿನ ಲಿಂಗದಹಳ್ಳಿ ಬಳಿ ಶೀತಲ ಕೇಂದ್ರ ಪ್ರಗತಿಯಲ್ಲಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಿಸಿದವರಿಗೆ ಹಾಗೂ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಈ ವೇಳೆ ಜಿಲ್ಲೆಯ ವಿವಿಧ ರಸಗೊಬ್ಬರ ಪೂರೈಕೆ ಕಂಪನಿಗಳ ಪ್ರತಿನಿಧಿಗಳು, ದಾಸ್ತಾನು ಮಾರಾಟಗಾರರು ಹಾಗೂ ಸೊಸೈಟಿಯ ಅಧಿಕಾರಿಗಳು, ಜಿಲ್ಲೆಯ ಅನುಷ್ಠಾನಾಧಿಕಾರಿಗಳು ಫೇಡರೇಷನ್ ಮತ್ತು ಡೀಲರ್ಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications