ರಾಹುಲ್ ಗಾಂಧಿಗೆ ಚುನಾವಣಾ ಪ್ರಣಾಳಿಕೆ ನೆನಪಿಸಿದ ಹಣಕಾಸು ಸಚಿವೆ
ನವದೆಹಲಿ, ಡಿಸೆಂಬರ್ 25: ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳಿಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಾಯ್ದೆ ಕುರಿತು ಪ್ರಶ್ನೆ ಮಾಡಿದ್ದಾರೆ.
"ಕಳೆದ ವರ್ಷ ನಡೆದ ಸಂಸತ್ ಚುನಾವಣೆ ಸಂದರ್ಭ ನಿಮ್ಮ ಪಕ್ಷವೇ ಭರವಸೆ ನೀಡಿದ್ದ ಸುಧಾರಣೆಗೆ ಏಕೆ ಈಗ ನೀವು ಬೆಂಬಲ ನೀಡುತ್ತಿಲ್ಲ, ಏಕೆ ವಿರೋಧ ವ್ಯಕ್ತಪಡಿಸುತ್ತಿದ್ದೀರ" ಎಂದು ಪ್ರಶ್ನಿಸಿದ್ದಾರೆ.
"ರಾಹುಲ್ ಗಾಂಧಿಯವರೇ, ಈ ರೈತಪರ ಕಾಯ್ದೆಗಳ ಕುರಿತು 2019ರ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಉಲ್ಲೇಖಿಸಿಲ್ಲವೇ?" ಎಂದು ಕೇಳಿದ್ದು, ಈ ಕಾಯ್ದೆ, ಸುಧಾರಣೆಗಳು ಪ್ರಧಾನಿ ಮೋದಿ ಅವರಿಂದ ಜಾರಿಯಾದವು ಎಂಬ ಒಂದೇ ಕಾರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ" ಎಂದು ದೂರಿದರು.

ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ, ತಾನು ಸರ್ಕಾರ ರಚಿಸಿದರೆ ಕೃಷಿ ಕ್ಷೇತ್ರದ ಸುಧಾರಣೆಗಳ ಅಡಿಯಲ್ಲಿ ಎಪಿಎಂಸಿ ಕಾಯ್ದೆ ರದ್ದುಪಡಿಸಲಾಗುವುದು ಹಾಗೂ ಕೃಷಿ ಉತ್ಪನ್ನಗಳ ರಫ್ತು, ಅಂತರರಾಜ್ಯ ವ್ಯಾಪಾರಗಳಿಗಿರುವ ಎಲ್ಲಾ ನಿರ್ಬಂಧಗಳು ಮುಕ್ತವಾಗುತ್ತವೆ" ಎಂದು ತಿಳಿಸಿತ್ತು. ಇದೇ ಪ್ರಣಾಳಿಕೆಯಲ್ಲಿ ಅಗತ್ಯ ಸರಕುಗಳ ಕಾಯ್ದೆ 1995ರ ಬಗ್ಗೆಯೂ ಕಾಂಗ್ರೆಸ್ ಭರವಸೆ ನೀಡಿತ್ತು ಎಂದು ಹೇಳಿದ್ದಾರೆ.
ತನ್ನ ಹಿಂದಿನ ಯಾವುದೇ ಸರ್ಕಾರಗಳು ಈ ಕಠಿಣ ಕಾಯ್ದೆಗಳನ್ನು ಜಾರಿಗೊಳಿಸುವ ಗಟ್ಟಿನಿರ್ಧಾರ ತೆಗೆದುಕೊಂಡಿಲ್ಲ. ಯಥಾಸ್ಥಿತಿಯಲ್ಲಿ ನಂಬಿಕೆ ಇಟ್ಟವರಿಗೆ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ಯುಪಿಎ ಕೂಡ ಇದೇ ಸುಧಾರಣೆ ಮಾಡಬೇಕೆಂದಿತ್ತು. ಆದರೆ ಸಾಧ್ಯವಾಗಲಿಲ್ಲ ಎಂದು ಇದೇ ನವೆಂಬರ್ ನಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದನ್ನು ನೆನಪಿಸಿಕೊಳ್ಳಬಹುದು.
ಶುಕ್ರವಾರ ದೆಹಲಿಯಲ್ಲಿ ರೈತರ ಪ್ರತಿಭಟನೆ 30ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರಧಾನಿ ಮೋದಿ ರೈತರಿಗೆ ಮಾತುಕತೆಗೆ ಮುಂದಾಗಿ ಚರ್ಚೆ ನಡೆಸುವಂತೆ ತಿಳಿಸಿದ್ದಾರೆ. ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವ ಭರವಸೆಯನ್ನೂ ನೀಡಿದ್ದಾರೆ.












Click it and Unblock the Notifications