ರೈತರ ಸಮಸ್ಯೆ ಪರಿಹಾರಕ್ಕೆ ಹೊಸ ಆಂದೋಲನ: ಆರ್. ಅಶೋಕ್ ನೀಡಿದ ಭರವಸೆಗಳಿವು
ರೈತರ ಪೌತಿ ಖಾತೆ ಸಮಸ್ಯೆ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಹೊಸ ಆಂದೋಲನ ನಡೆಸಲಾಗುತ್ತಿದೆ ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಹಾಗಾದರೆ "ಆ" ಆಂದೋಲನ ಯಾವುದೆಂದು ತಿಳಿಯಿರಿ.
ಚಿಕ್ಕಮಗಳೂರು, ಫೆಬ್ರವರಿ, 06: ಪೌತಿ ಖಾತೆ ಸಮಸ್ಯೆಯಿಂದ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಪೌತಿ ಖಾತೆ ಸಮಸ್ಯೆ ಇತ್ಯಾರ್ಥ ಪಡಿಸುವ ನಿಟ್ಟಿನಲ್ಲಿ ಪೌತಿ ಖಾತೆ ಆಂದೋಲನ ನಡೆಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಚಿಕ್ಕಮಗಳೂರಿನಲ್ಲಿ ತಿಳಿಸಿದರು.
ಕಡೂರು ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಶನಿವಾರ ರಾತ್ರಿ ಗ್ರಾಮ ವಾಸ್ತವ್ಯ ಮಾಡಿ, ಭಾನುವಾರ ಬೆಳಗ್ಗೆ ನಡೆದ ಪೌತಿ ಖಾತೆ ಆಂದೋಲನಾ ಮತ್ತು ಗ್ರಾಮಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರೈತರ ಕಲ್ಯಾಣಕ್ಕಾಗಿ ಐದು ಹೆಕ್ಟೇರ್ಗಿಂತ ಕಡಿಮೆ ಜಮೀನು ಹೊಂದಿರುವ ರೈತ ಕುಟುಂಬಗಳಿಗೆ ಕೇಂದ್ರ ಸರ್ಕಾರ ಆರು ಸಾವಿರ ಸಹಾಯಧನ, ರಾಜ್ಯ ಸರ್ಕಾರ ನಾಲ್ಕು ಸಾವಿರ ಸಹಾಯಧನ ಸೇರಿ ಹತ್ತು ಸಾವಿರ ರೂಪಾಯಿ ಹಾಕುತ್ತಿದೆ. ರೈತ ಕುಟುಂಬಗಳು ಪೌತಿ ಖಾತೆ ಸಮಸ್ಯೆಯಿಂದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಯೋಜನೆಗಳಿಂದ ವಂಚಿತರಾಗುತ್ತಿದ್ದು, ಪೌತಿ ಖಾತೆ ಆಂದೋಲನದಲ್ಲಿ ಸರಿಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ರಾಜ್ಯದಲ್ಲಿ 2770 "ಗ್ರಾಮ ವಾಸ್ತವ್ಯ", ನಾಲ್ಕು ಲಕ್ಷ ಕುಟುಂಬಗಳಿಗೆ ಮೂಲಸೌಲಭ್ಯಗಳ ವ್ಯವಸ್ಥೆ: ಆರ್.ಅಶೋಕ್
12 ಸಾವಿರ ಪೌತಿ ಖಾತೆಗಳನ್ನು ಮಾಡಿಸಲಾಗಿದೆ
ಕಡೂರು ತಾಲೂಕಿನಲ್ಲಿ 12 ಸಾವಿರ ಪೌತಿಖಾತೆಗಳನ್ನು ಮಾಡಿಸಲಾಗಿದೆ. ಗ್ರಾಮ ವಾಸ್ತವ್ಯದಲ್ಲಿ ಪೌತಿ ಖಾತೆ ಆಂದೋಲನಾ ಹಮ್ಮಿಕೊಂಡಿರುವ ಉದ್ದೇಶ ರೈತರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಬಾರದು ಎಂಬ ಕಾರಣದಿಂದ. ರಾಜ್ಯದಲ್ಲಿ ಪೌತಿ ಖಾತೆ ಸಮಸ್ಯೆ ನಿವಾರಣೆಯಾದಲ್ಲಿ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಬರಲಿದೆ. ಈ ನಿಟ್ಟಿನಲ್ಲಿ ಆಂದೋಲನದ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಗ್ರಾಮಕ್ಕೆ ಒಂದು ಕೋಟಿ ರೂ. ಅನುದಾನ
ಹುಲಿಕೆರೆ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದು, ಗ್ರಾಮಕ್ಕೆ ಒಂದು ಕೋಟಿ ರೂಪಾಯಿ ಅನುದಾನ ನೀಡಿದ್ದೇನೆ. ಗ್ರಾಮದ ರಸ್ತೆ, ದೇವಸ್ಥಾನ, ಶಾಲೆ, ನಿವೇಶನ ಹೀಗೆ ಯಾವ ಅಭಿವೃದ್ಧಿ ಕಾರ್ಯಕ್ಕೆ ವಿನಿಯೋಗಿಸಬೇಕೆಂದು ಗ್ರಾಮದ ಹಿರಿಯರೊಂದಿಗೆ ಚರ್ಚಿಸಿ ತೀರ್ಮಾನ ಮಾಡುವಂತೆ ಹೇಳಿದರು. ಹಾಗೆಯೇ ಪರಿಶಿಷ್ಟ ಪಂಗಡ ಸಮುದಾಯ ಬಡಾವಣೆಯಲ್ಲಿರುವ ದೇವಸ್ಥಾನದ ಅಭಿವೃದ್ಧಿಗೆ 5 ಲಕ್ಷ ರೂಪಾಯಿ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಗ್ರಾಮದ ಮುಖಂಡರ ಮನವಿ ಏನು?
ಗ್ರಾಮದ ಮುಖಂಡ ಶಿವಮೂರ್ತಿ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಒಂದು ಕೋಟಿ ರೂಪಾಯಿ ನೀಡಿರುವುದು ಸಂತೋಷ ತಂದಿದೆ. ಗ್ರಾಮದಲ್ಲಿ ಸರ್ಕಾರಿ ಕಚೇರಿ ಕಟ್ಟಡಗಳು ಇಲ್ಲದಿರುವುದರಿಂದ ಸರ್ಕಾರಿ ಕೆಲಸ, ಕಾರ್ಯಗಳಿಗೆ ಅನಾನುಕೂಲವಾಗಿದೆ. ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಗ್ರಾಮದ ಪರಿಶಿಷ್ಟ ಪಂಗಡ ಬಡಾವಣೆ ಸರ್ಕಾರಿ ದಾಖಲೆಯಲ್ಲಿ ಗೋಕಟ್ಟೆ ಎಂದು ನಮೂದಾಗಿದೆ. ಅದನ್ನು ಸರ್ಕಾರಿ ಭೂಮಿ ಎಂದು ಮಾರ್ಪಡಿಸಿ ನಿವೇಶನ ಹಂಚಿ, ಈಸ್ವತ್ತು ನೀಡಬೇಕು ಎಂದು ಮನವಿ ಮಾಡಿದರು.












Click it and Unblock the Notifications