ಹೆಚ್ಚು ಇಳುವರಿ ಪಡೆಯುವ ಕೃಷಿ ಪ್ರಗತಿಯಾಗಬೇಕು: ಪ್ರಲ್ಹಾದ ಜೋಶಿ
ಧಾರವಾಡ, ನ.28: "ಇಂದು ಭಾರತದಲ್ಲಿ ಶೇ 77ರಷ್ಟು ಭೂಭಾಗದಲ್ಲಿ ಧಾನ್ಯಗಳು ಹಾಗೂ ತೈಲ ಬೀಜಗಳಿಗೆ ಸಂಬಂಧಿಸಿದ ಬೆಳೆಗಳನ್ನು ಬೆಳೆಯಲಾಗುತ್ತದೆ ಆದರೆ ಇದರ ಇಳುವರಿ ಕೇವಲ ಶೇ 41 ಆಗಿದೆ. ಈ ವಿಷಯದಲ್ಲಿ ಬದಲಾವಣೆಯ ಅಗತ್ಯವಿದೆ" ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಧಾರವಾಡದ ಕೃಷಿ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಜರುಗಿದ 36ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಮಾತನಾಡುತ್ತಿದ್ದರು.
ದೇಶದ ಆರ್ಥಿಕತೆಯ ಅಭಿವೃದ್ಧಿಗೆ ಕೃಷಿಯ ಕೊಡುಗೆ ಅಮೂಲಾಗ್ರವಾಗಿದ್ದು, ಆಧುನಿಕ ವಿಜ್ಞಾನ ತಂತ್ರಜ್ಞಾನಗಳ ಇಂದಿನ ದಿನಮಾನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಅಗತ್ಯ ಬದಲಾವಣೆಗಳು ಆಗಬೇಕಿವೆ ಎಂದರು.
"ಕಡಿಮೆ ಭೂಭಾಗವನ್ನು ಬಳಸಿ ಅತೀ ಹೆಚ್ಚು ಇಳುವರಿ ಪಡೆಯುವಂತ ಕೃಷಿ ಪ್ರಗತಿ ಕಾಣಬೇಕಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಶಯವೂ ಕೂಡ ಇದೇ ಆಗಿದ್ದು, ಸರ್ಕಾರದ ಮಟ್ಟದಲ್ಲಿ ಹಲವು ಕ್ರಮಗಳನ್ನು ಈ ಕುರಿತಂತೆ ಕೈಗೊಳ್ಳಲಾಗುತ್ತಿದೆ" ಎಂದು ಮಾಹಿತಿ ನೀಡಿದ್ದಾರೆ.

ಯುವ ಜನಾಂಗವೇ ಈ ದೇಶದ ಸಂಪನ್ಮೂಲ
ಕೃಷಿ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಜರುಗಿದ 36ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿರುವ ಸಚಿವ ಪ್ರಲ್ಹಾದ ಜೋಶಿ, "ಭಾರತವು ಯುವಜನಾಂಗದ ದೇಶವಾಗಿದೆ. ಈ ಯುವ ಜನಾಂಗವೇ ಈ ದೇಶದ ಸಂಪನ್ಮೂಲವಾಗಿದೆ. ಕೃಷಿ ಪದವಿಧರರು ಕೌಶಲ್ಯ ಆಧಾರಿತ ನೂತನ ಕೃಷಿ ಉತ್ಪನ್ನಗಳನ್ನು ಬಳಸಿ ಉದ್ಯಮಿಗಳಾಗಬೇಕು ಎಂದು ಕರೆ ನೀಡಿದ್ದಾರೆ.
"ಕೃಷಿ ವಿದ್ಯಾಲಯಗಳಲ್ಲಿ ನಡೆಯುತ್ತಿರುವ ಪ್ರಯೋಗದ ಫಲಿತಾಂಶಗಳು ಕ್ಷೇತ್ರಮಟ್ಟಕ್ಕೆ ತಲುಪಬೇಕಿದೆ. ಲ್ಯಾಬ್ ಟೂ ಲ್ಯಾಂಡ್ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ" ಎಂದು ಅಭಿಪ್ರಾಯ ಪಟ್ಟಿದ್ದಾರೆ.

ನಮ್ಮ ಆಹಾರ ಪದ್ಧತಿ, ಆಚಾರ, ವಿಚಾರಗಳನ್ನು ಜಗತ್ತು ಒಪ್ಪಿಕೊಂಡಿದೆ
ಮುಂದುವರಿದು, "ಜಗತ್ತಿನ ಆಹಾರ ಭದ್ರತೆಗೆ ಭಾರತದ ಕೊಡುಗೆ ಅಪಾರವಿದೆ. ಇಡೀ ಜಗತ್ತೇ ಇಂದು ಭಾರತದತ್ತ ನೋಡುತ್ತಿದೆ. ಭಾರತದ ರೀತಿ-ನೀತಿ, ಆಹಾರ ಪದ್ಧತಿ, ಜೀವನ ಪದ್ಧತಿ, ಯೋಗ, ಆಚಾರ, ವಿಚಾರಗಳನ್ನು ಇಡೀ ಜಗತ್ತು ಒಪ್ಪಿಕೊಂಡಿದೆ" ಎಂದು ಹೇಳಿದ್ದಾರೆ.
"ಮುಂಬರುವ ದಿನಗಳಲ್ಲಿ ಭಾರತವು 3ನೇ ದೊಡ್ಡ ಆರ್ಥಿಕ ದೇಶವಾಗಲಿದೆ. ಈ ಹಿನ್ನೆಲೆಯಲ್ಲಿ ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಪದವಿಧರರು ಹೊಸ ಉದ್ಯಮಗಳನ್ನು ಸ್ಥಾಪಿಸಲು ಮುಂದಾಗಬೇಕು. ರೈತರಿಗೆ ಕಡಿಮೆ ಖರ್ಚಿನಲ್ಲಿ ಕಡಿಮೆ ನೀರಿನಲ್ಲಿ ಹೆಚ್ಚು ಉತ್ಪಾದನೆ ನೀಡುವ ತಳಿಗಳನ್ನು ವಿಜ್ಞಾನಿಗಳು ಹೆಚ್ಚು ಹೊರ ತರಬೇಕಿದೆ. ಈ ಮೂಲಕ ರೈತಿಗೆ ನೇರವಾಗಬೇಕು" ಎಂದಿದ್ದಾರೆ.

ವಿವಿಯಿಂದ 40 ಬೇಸಾಯ ತಂತ್ರಜ್ಞಾನಗಳ ಬಿಡುಗಡೆ
"ಆರ್ಥಿಕ ಇಳುವರಿ ಪಡೆಯಲು ಅಭಿವೃದ್ಧಿಪಡಿಸಿದ 40 ಬೇಸಾಯ ತಂತ್ರಜ್ಞಾನಗಳನ್ನು ರೈತರಿಗೆ ಬಿಡುಗಡೆ ಮಾಡಲಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯದ ನೂತನ ಕುಲಪತಿ ಡಾ. ಪಿ.ಎಲ್. ಪಾಟೀಲ ಮಾಹಿತಿ ನೀಡಿದ್ದಾರೆ.
"ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 5 ಹೊಸ ಸಂಶೋಧನಾ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಿಗೆ 274 ಕೋಟಿ ಅನುದಾನದ ಯೋಜನೆಗಳು ಪ್ರಗತಿಯಲ್ಲಿವೆ. ರಾಜ್ಯ ಸರ್ಕಾರದಿಂದ 332 ಕೋಟಿ ರೂ.ಗಳ 3 ಹೊಸ ಸಂಶೋಧನಾ ಕಾರ್ಯಕ್ರಮಗಳು ಪ್ರಗತಿಯಲ್ಲಿವೆ. ವಿಶ್ವಬ್ಯಾಂಕ್ ನೆರವಿನ ಜಲಾನಯ ಅಭಿವೃದ್ಧಿ ಇಲಾಖೆಯ ರಿವಾರ್ಡ್ ಯೋಜನೆಯಡಿ ಒಟ್ಟು 272 ಕೋಟಿ ರೂ.ಗಳ ಯೋಜನೆ ಪ್ರಗತಿಯಲ್ಲಿದೆ" ಎಂದು ತಿಳಿಸಿದ್ದಾರೆ.

ಮಳೆಯಾಶ್ರಿತ ಪ್ರದೇಶದ ಯೋಜನೆಗಳು ಇಡೀ ರಾಜ್ಯಕ್ಕೆ ಮಾದರಿ
ದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಮಹಾನಿರ್ದೇಶಕರಾದ ಡಾ.ಸುರೇಶಕುಮಾರ ಚೌಧರಿ ಮಾತನಾಡಿ, ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕೊಡುಗೆ, ಸ್ಥಾನಮಾನ ಸಂಶೋಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿವಿಧ ಹೊಸ ಸಂಶೋಧನೆಗಳು, ಮಳೆಯಾಶ್ರಿತ ಪ್ರದೇಶದ ರಿವಾರ್ಡ್ ಯೋಜನೆಗಳು ಇಡೀ ರಾಜ್ಯಕ್ಕೆ ಮಾದರಿಯಾಗಲಿವೆ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಮಹಾಪೌರರಾದ ಈರೇಶ ಅಂಚಟಗೇರಿ, ಶಾಸಕರಾದ ಶಂತಾರಾಮ ಸಿದ್ಧಿ, ಬಯಲು ಸೀಮೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ತವನಪ್ಪ ಅಷ್ಟಗಿ ಇತರರು ಉಪಸ್ಥಿತರಿದ್ದರು.












Click it and Unblock the Notifications