ಕೊಟ್ಟ ಮಾತು ಉಳಿಸಿಕೊಳ್ಳುವಂತೆ ಸರ್ಕಾರಕ್ಕೆ ನಂಜಾವಧೂತ ಶ್ರೀಗಳ ಆಗ್ರಹ
ಚಿತ್ರದುರ್ಗ, ಅಕ್ಟೋಬರ್ 28: "ಭದ್ರಾ ಮೇಲ್ದಂಡೆ ಕಾಮಗಾರಿ ಕುರಿತಂತೆ ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಅಂದು ಭದ್ರಾದಿಂದ ವಿವಿ ಸಾಗರಕ್ಕೆ 5 ಟಿಎಂಸಿ ನೀರು ಬಿಡುತ್ತೇವೆ ಎಂದು ಹೇಳಿದ್ದರು, ಈಗ ಅದು ಎರಡು ಟಿಎಂಸಿಗೆ ಬಂದಿದೆ. ಅಂದು ಯಡಿಯೂರಪ್ಪ ಸರ್ಕಾರ ಮಾತು ಕೊಟ್ಟಿತ್ತು. ಈಗಲೂ ಅವರದ್ದೇ ಸರ್ಕಾರ ಇದೆ. ಆ ಮಾತನ್ನು ಅವರು ಉಳಿಸಿಕೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ ಪಟ್ಟನಾಯಕನಹಳ್ಳಿ ನಂಜಾವಧೂತ ಶ್ರೀಗಳು.
ಭದ್ರಾ ಕಾಮಗಾರಿ ವಿಳಂಬಕ್ಕೆ ಸರ್ಕಾರದ ವಿರುದ್ಧ ಮಾಜಿ ಸಂಸದ ಉಗ್ರಪ್ಪ ಕಿಡಿ ಕಿಡಿ
ಹಿರಿಯೂರಿನಲ್ಲಿ ರೈತರೊಂದಿಗೆ ಸಭೆ ನಡೆಸಿದ ಶ್ರೀಗಳು, "10 ವರ್ಷಗಳ ಹಿಂದೆ ನಮ್ಮ ರೈತ ಸಂಘದ ನೇತೃತ್ವದಲ್ಲಿ ಹಿರಿಯೂರಿನಲ್ಲಿ ನಿರಂತರ ಹೋರಾಟ ಮಾಡಿದ್ದೆವು. ಹೋರಾಟಕ್ಕೆ ಮಣಿದ ಅಂದಿನ ಸರ್ಕಾರ ವಾಣಿವಿಲಾಸ ಜಲಾಶಯಕ್ಕೆ 5 ಟಿಎಂಸಿ ನೀರು ಕೊಡುವುದಾಗಿ ಘೋಷಿಸಿತ್ತು. ಆಗಿನ ನೀರಾವರಿ ಮಂತ್ರಿಯಾದ ಬಸವರಾಜ್ ಬೊಮ್ಮಾಯಿ ಅವರು ಮಂಜೂರು ಮಾಡಿದ್ದರು. ಆದರೆ ಈಗ ಐದು ಟಿಎಂಸಿ ನೀರು 2 ಟಿಎಂಸಿ ನೀರಿಗೆ ಇಳಿದಿದೆ. ಈಗ ನೀರಾವರಿ ಅನುಷ್ಠಾನ ಮಾಡುವುದಕ್ಕೆ ಸರ್ಕಾರ ಹೊರಟಿದೆ. 3000 ಕೋಟಿಯಿಂದ ಸುಮಾರು 18000 ಕೋಟಿಗೆ ಯೋಜನೆಯನ್ನು ತಂದು ನಿಲ್ಲಿಸಿದ್ದಾರೆ, ಇವರು ನೀರು ಹರಿಸುತ್ತಿದ್ದಾರಾ, ದುಡ್ಡ ಹರಿಸುತ್ತಿದ್ದಾರಾ" ಎಂದು ದೂರಿದರು.
ಇದುವರಿಗೂ ಯೋಜನೆ ಪೂರ್ಣಗೊಳಿಸಿಲ್ಲ, ಏಳೆಂಟು ವರ್ಷಗಳ ಹಿಂದೆ ಖರೀದಿಸಿದ ವಸ್ತುಗಳು ತುಕ್ಕು ಹಿಡಿದಿವೆ. ನಾಲ್ಕು ನಾಲ್ಕು ಜನ ಮುಖ್ಯಮಂತ್ರಿಗಳು ಬಂದು ಶಿಲಾನ್ಯಾಸ ಮಾಡುವಂತಹ ಕೆಲಸ ಮಾಡಿದ್ದೀರಾ. ಸ್ವಾತಂತ್ರ್ಯ ಪೂರ್ವದಿಂದ ನಮಗೆ ನೀರಿನ ವಿಚಾರದಲ್ಲಿ ಅನ್ಯಾಯ ಮಾಡುತ್ತಾ ಬಂದಿದ್ದೀರಿ. ಕೊಟ್ಟ ಮಾತನ್ನು ಮೊದಲು ಉಳಿಸಿಕೊಳ್ಳಿ ಎಂದು ನಂಜವಧೂತ ಶ್ರೀಗಳು ಆಗ್ರಹಿಸಿದರು.
ನೀರೇ ಮಾಯವಾಗಿದ್ದ ಚಿತ್ರದುರ್ಗದಲ್ಲೀಗ ಭರ್ಜರಿ ಮಳೆ; 81 ಅಡಿ ಮುಟ್ಟಿದ ವಿವಿ ಸಾಗರ
ಕೊಟ್ಟ ಮಾತನ್ನು ಉಳಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅನಿವಾರ್ಯವಾಗಿ ರೈತ ಸಂಘ ದೊಂದಿಗೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.