ಮುಂಗಾರು ಹಂಗಾಮು ಬೆಳೆ ವಿಮೆ, ರೈತರು ಎಷ್ಟು ಪಾವತಿಸಬೇಕು?
ಚಿತ್ರದುರ್ಗ, ಜೂನ್ 27: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನೈಋತ್ಯ ಮುಂಗಾರು ಮಳೆ ಆರಂಭವಾಗಿದೆ. ಕೃಷಿ ಚಟುವಟಿಕೆಗಳು ಸಹ ಆರಂಭವಾಗಿವೆ. 2023ರ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಕೃಷಿ ಇಲಾಖೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ 2023-24ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ನೋಂದಾಯಿಸಲು ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ತಮ್ಮ ಬೆಳೆಗಳಿಗೆ ಬ್ಯಾಂಕುಗಳಲ್ಲಿ ವಿಮೆ ಮಾಡಿಸಬೇಕು ಎಂದು ಕರೆ ನೀಡಿದೆ.

ಚಿತ್ರದುರ್ಗ ತಾಲ್ಲೂಕಿನಲ್ಲಿ ಮುಖ್ಯ ಬೆಳೆಯಾಗಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಮುಸುಕಿನ ಜೋಳ (ಮಳೆಯಾಶ್ರಿತ) ಬೆಳೆ ಅಧಿಸೂಚನೆ ಮಾಡಲಾಗಿದೆ. ಹೋಬಳಿ ಮಟ್ಟದಲ್ಲಿ ಮಳೆಯಾಶ್ರಿತ ಹಾಗೂ ನೀರಾವರಿ ಜೋಳ, ತೊಗರಿ, ಶೇಂಗಾ, ರಾಗಿ, ಸಜ್ಜೆ, ನವಣೆ, ಹತ್ತಿ, ಸೂರ್ಯಕಾಂತಿ, ಹುರುಳಿ, ಹೆಸರು, ಈರುಳ್ಳಿ ಹಾಗೂ ಟೊಮೇಟೊ ಬೆಳೆಗಳನ್ನು ಬೆಳೆ ವಿಮೆ ಯೋಜನೆಯಡಿ ನೋಂದಾಯಿಸಲು ಅವಕಾಶವಿದೆ.
ವಿಮಾ ಕಂತು ಪಾವತಿಸಿ; ಈ ಯೋಜನೆಯಡಿ ಪ್ರಸ್ತುತ ಸಾಲು ಹಾಗೂ ಹಂಗಾಮಿನಲ್ಲಿ ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ ಇಚ್ಛೆಯುಳ್ಳ ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ಸರ್ಕಾರದಿಂದ ನಿಗದಿಪಡಿಸಿದ ವಿಮಾ ಕಂತನ್ನು ಪಾವತಿಸಿ ಯೋಜನೆ ಫಲಾನುಭವಿಯಾಗಬಹುದು.
ಈ ಯೋಜನೆಯಡಿ ಮುಸುಕಿನ ಜೋಳ (ಮಳೆಯಾಶ್ರಿತ), ಮಳೆಯಾಶ್ರಿತ ಹಾಗೂ ನೀರಾವರಿ ಜೋಳ, ತೊಗರಿ, ಶೇಂಗಾ, ಹತ್ತಿ, ಸೂರ್ಯಕಾಂತಿ, ಹುರುಳಿ, ಹೆಸರು, ಈರುಳ್ಳಿ ಹಾಗೂ ಟೊಮೇಟೊ ಬೆಳೆಗಳಿಗೆ ದಿನಾಂಕ 31/07/2023ರೊಳಗಾಗಿ ಹಾಗೂ ರಾಗಿ, ನವಣೆ ಬೆಳೆಗಳಿಗೆ ಹೆಸರು ನೋಂದಾಯಿಸಲು 16/08/2023ರ ತನಕ ಅವಕಾಶವಿದೆ.
ವಿಮಾ ಕಂತು ರೂ. (ಪ್ರತಿ ಹೆಕ್ಟೇರ್) ಮುಸುಕಿನ ಜೋಳ (ಮಳೆಯಾಶ್ರಿತ) 1130 ರೂ., ಮುಸುಕಿನ ಜೋಳ (ನೀರಾವರಿ) 1290 ರೂ., ಶೇಂಗಾ (ನೀರಾವರಿ) 3945 ರೂ., ಶೇಂಗಾ (ಮಳೆಯಾಶ್ರಿತ)1090 ರೂ., ತೊಗರಿ (ಮಳೆಯಾಶ್ರಿತ) 960 ರೂ., ರಾಗಿ (ನೀರಾವರಿ) 1015 ರೂ. ವಿಮಾ ಕಂತು ನಿಗದಿ ಮಾಡಲಾಗಿದೆ.
ಉಳಿದಂತೆ ರಾಗಿ (ಮಳೆಯಾಶ್ರಿತ) 850 ರೂ., ಜೋಳ (ನೀರಾವರಿ) 905 ರೂ., ಜೋಳ (ಮಳೆಯಾಶ್ರಿತ) 3060 ರೂ., ಸೂರ್ಯಕಾಂತಿ (ನೀರಾವರಿ) 975 ರೂ., ಸೂರ್ಯಕಾಂತಿ (ಮಳೆಯಾಶ್ರಿತ) 815 ರೂ. ನಿಗದಿಪಡಿಸಲಾಗಿದೆ.
ನಿಗದಿಪಡಿಸಿದ ಅಂತಿಮ ದಿನಾಂಕದೊಳಗೆ ರೈತರು ಬ್ಯಾಂಕುಗಳಲ್ಲಿ ಬೆಳೆ ವಿಮೆ ಮಾಡಿಸಿಕೊಳ್ಳಲು ಮನವಿ ಮಾಡಲಾಗಿದೆ. ಈ ಯೋಜನೆಯ ಲಾಭ ಪಡೆಯಲು ಯಾವುದೇ ಸ್ಥಳೀಯ ಬ್ಯಾಂಕ್ಗಳು/ ಸಾರ್ವಜನಿಕ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು. ರೈತರು ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ, ಕೃಷಿ ಇಲಾಖೆಯ ಕಚೇರಿಗೆ ಭೇಟಿ ನೀಡಬಹುದಾಗಿದೆ.
ಬೆಳೆ ಸಾಲ ಪಡೆದ ರೈತರು ಇಚ್ಛೆ ಪಡದೇ ಇದ್ದಲ್ಲಿ ತಮ್ಮ ವ್ಯಾಪ್ತಿಯ ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳ ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಬೇಕು. ಇಲ್ಲವಾದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುತ್ತದೆ.
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೇರೆ ಬೇರೆ ವಿವಿಧ ಜಿಲ್ಲೆಗಳಲ್ಲಿ ವಿವಿಧ ಬೆಳೆಗಳನ್ನು ಗುರುತಿಸಲಾಗಿದೆ. ಆದ್ದರಿಂದ ನೋಂದಣಿ ಮಾಡಿಸುವಾಗ ರೈತರು ತಮ್ಮ ಬೆಳೆ ವಿಮೆ ವ್ಯಾಪ್ತಿಗೆ ಒಳಪಡಲಿದೆಯೇ? ಎಂದು ಅಧಿಕಾರಿಗಳ ಬಳಿ ಖಚಿತ ಮಾಹಿತಿ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.












Click it and Unblock the Notifications